ಬೆಂಗಳೂರು: ಬಿಜೆಪಿ ಹೈಕಮಾಂಡ್ ಸಾಕಷ್ಟು ಅಳೆದು ತೂಗಿ, ಲಾಭ ನಷ್ಟದ ಲೆಕ್ಕಾಚಾರ ಹಾಕಿ ಅಂತಿಮವಾಗಿ ಯಡಿಯೂರಪ್ಪನವರ ಮಾನಸಪುತ್ರನೆಂದೇ ಹೆಸರಾಗಿರುವ, ಹಿರಿಯ ಮುಖಂಡ ಲಿಂಗಾಯತ ಸಮುದಾಯಕ್ಕೇ ಸೇರಿದ ನಾಯಕ ಬಸವರಾಜ ಬೊಮ್ಮಾಯಿಗೆ ಮುಖ್ಯಮಂತ್ರಿ ಸ್ಥಾನ ನೀಡಿದೆ.
ಬಿಎಸ್ವೈ ಮಾನಸ ಪುತ್ರನಿಗೇ ''ಸಿಎಂ'' ಪಟ್ಟ ಮಾಸ್ ಲೀಡರ್ ಆಗಿದ್ದ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಿದ ನಂತರ ರಾಜಕೀಯವಾಗಿ ಪಕ್ಷಕ್ಕೆ ಭವಿಷ್ಯದಲ್ಲಿ ಉಂಟಾಗಬಹುದಾದ ಹಾನಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ, ಈ ಮೂಲಕ ಅಧಿಕಾರ ಕಳೆದುಕೊಂಡು ಬೇಸರದಲ್ಲಿರುವ ಯಡಿಯೂರಪ್ಪನವರನ್ನು ವಿಶ್ವಾಸಕ್ಕೆ ತಗೆದುಕೊಂಡು ಪಕ್ಷವನ್ನು ಬಲಪಡಿಸುವ ಹಾಗು ಸರಕಾರದಲ್ಲಿ ಸುಗಮ ಆಡಳಿತ ನೀಡುವ ದೂರದೃಷ್ಟಿಯಿಂದ ಬಸವರಾಜ ಬೊಮ್ಮಾಯಿಗೆ ಪಕ್ಷದ ನಾಯಕತ್ವ ನೀಡಲು ತೀರ್ಮಾನ ತಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಮೋದಿ ಜೊತೆ ಬೊಮ್ಮಾಯಿ ಲಿಂಗಾಯತ ಸಮುದಾಯದ ಮುಖಂಡರು ಮತ್ತು ಮಠಾಧೀಶರುಗಳು ಯಡಿಯೂರಪ್ಪನವರನ್ನು ಬದಲಾವಣೆ ಮಾಡದಂತೆ ಒತ್ತಡಗಳನ್ನು ಹೇರಿದ್ದರು. ಅಷ್ಟೇ ಅಲ್ಲ ಒಂದು ವೇಳೆ ಬದಲಾಯಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸಿದ್ದರು. ಈ ವಿದ್ಯಮಾನಗಳ ಪರಿಣಾಮಗಳನ್ನು ಬಹಳ ಸೂಕ್ಷ್ಮವಾಗಿ ಅಧ್ಯಯನ ನಡೆಸಿದ ಮತ್ತು ಲಾಭ ನಷ್ಟಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ ಹೈಕಮಾಂಡ್ ಹೆಚ್ಚಿನ ತೊಂದರೆಗಳನ್ನು ತಗೆದುಕೊಳ್ಳದೇ ಎಲ್ಲರೂ ಒಪ್ಪುವಂತಹ ಸರ್ವಸಮ್ಮತ ಅಭ್ಯರ್ಥಿಯಾಗಿ ಹೊರ ಹೊಮ್ಮುವ ಎಲ್ಲ ಲಕ್ಷಣಗಳಿರುವ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ತನ್ನ ರಾಜಕೀಯ ಜಾಣ್ಮೆ ಮೆರೆದಿದೆ.
ಬಿಎಸ್ವೈ ಮಾನಸ ಪುತ್ರನಿಗೇ ''ಸಿಎಂ'' ಪಟ್ಟ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಇದ್ದಾಗಲೂ ಬೊಮ್ಮಾಯಿ ಒಂದು ರೀತಿ '' ಸೂಪರ್ ಸಿಎಂ ''ಆಗಿಯೇ ಕಾರ್ಯ ನಿರ್ವಹಿಸಿದ್ದರು. ಯಡಿಯೂರಪ್ಪನವರ ವಯೋಸಹಜ ತೊಂದರೆಗಳಿಂದಾಗಿ ಆಡಳಿತದಲ್ಲಿ ಬೊಮ್ಮಾಯಿ ಹೆಚ್ಚಿನ ಗಮನ ನೀಡುತ್ತಿದ್ದರು.
ತಮ್ಮದಲ್ಲದ ಖಾತೆಗಳ ನಿರ್ವಹಣೆಯಲ್ಲಿಯೂ ಬೊಮ್ಮಾಯಿ ಯಡಿಯೂರಪ್ಪನವರಿಗೆ ಸಲಹೆಗಳನ್ನು ನೀಡುತ್ತಿದ್ದರು. ಇದರ ಅರಿವಿದ್ದ ಹೈಕಮಾಂಡ್ ಬೊಮ್ಮಾಯಿ ಆಯ್ಕೆಯಿಂದ ಯಡಿಯೂರಪ್ಪನವರ ವಿಶ್ವಾಸವನ್ನೂ ಗಳಿಸಿದಂತಾಗುತ್ತದೆ. ಲಿಂಗಾಯತರ ನಂಬಿಕೆಯನ್ನೂ ಉಳಿಸಿಕೊಂಡಂತಾಗುತ್ತದೆ. ಬೊಮ್ಮಾಯಿ ಮೂಲಕ ಉತ್ತಮ ಆಡಳಿತವನ್ನೂ ನೀಡಬಹುದಾಗಿದೆ ಎನ್ನುವ ಲೆಕ್ಕಾಚಾರಗಳಿಂದ ಬಿಎಸ್ವೈ ಮಾನಸಪುತ್ರನಿಗೆ ಮಣೆ ಹಾಕಿದೆ.
ಉಸ್ತುವಾರಿ ಅರುಣ್ ಸಿಂಗ್ ಜೊತೆ.. ಬೊಮ್ಮಾಯಿ ಪಕ್ಷ ನಿಷ್ಠೆ: ಬಸವರಾಜ ಬೊಮ್ಮಾಯಿ ಮೂಲ ಬಿಜೆಪಿಗರಲ್ಲದಿದ್ದರೂ ಬಿಜೆಪಿ ಬಗ್ಗೆ ಅಪಾರ ನಿಷ್ಠೆ ಹೊಂದಿದ ನಾಯಕ. ಹೈಕಮಾಂಡ್ ಹೇಳಿದಂತೆ ನಡೆಯುವ ಗುಣವುಳ್ಳವರಾಗಿರುವುದನ್ನು ಗಮನಿಸಿ ನಾಯಕತ್ವ ಅವರಿಗೆ ಅರಸಿ ಬಂದಿದೆ. ಈ ಹಿಂದೆ ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದಾಗಲೂ ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರಾಗಿದ್ದ ಬಸವರಾಜ ಬೊಮ್ಮಾಯಿ ಯಡಿಯೂರಪ್ಪನವರ ಜತೆ ಕೆಜೆಪಿಗೆ ಹೋಗದೇ ಬಿಜೆಪಿಯಲ್ಲೇ ಉಳಿದುಕೊಂಡು ಪಕ್ಷನಿಷ್ಟೆ ಮೆರೆದರು. ಸಿಎಂ ಪಟ್ಟ ಸಿಗಲು ಇದೂ ಸಹ ಕಾರಣವಾಗಿದೆ.
ಅಪಾರ ಅನುಭವಿ ಮತ್ತು ಬುದ್ಧಿವಂತ ರಾಜಕಾರಣಿ: ರಾಜಕೀಯದಲ್ಲಿ ಬೊಮ್ಮಾಯಿ ಮೂರು ಬಾರಿ ಶಾಸಕರಾಗಿದ್ದರೂ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. ತಂದೆ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿ ಯಾಗಿದ್ದಾಗ, ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಜನತಾ ಪರಿವಾರದ ಗರಡಿಯಲ್ಲಿ ಪಳಗಿದ ಬೊಮ್ಮಾಯಿ ಇಂಜನೀಯರ್ ಪದವೀಧರರೂ ಹೌದು.
ಮಾಜಿ ಪ್ರದಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿಯೂ ಅನುಭವ ಹೊಂದಿದ್ದಾರೆ. ತಂದೆಯಿಂದ, ಜನತಾ ಪರಿವಾರದ ಮುಖಂಡರಿಂದ ರಾಜಕೀಯ ಅನುಭವವನ್ನು ಪಡೆದವರಾಗಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ಗೊಂದಲಗಳನ್ನು ನಾಜೂಕಿನಿಂದ ಪರಿಹರಿಸಿ ಬುದ್ಧಿವಂತ ರಾಜಕಾರಣಿ ಎನ್ನುವ ಕೀರ್ತಿಗೂ ಪಾತ್ರರಾಗಿದ್ದಾರೆ.
ಭ್ರಷ್ಠಾಚಾರ ಮುಕ್ತ ರಾಜಕಾರಣಿ: ರಾಜಕಾರಣಿಗಳ ಮೇಲೆ ಭ್ರಷ್ಠಾಚಾರ ಆರೋಪಗಳು ಸಹಜ. ಆದರೆ ಬಸವರಾಜ ಬೊಮ್ಮಾಯಿ ಅವರ ಮೇಲೆ ಯಾವುದೇ ಗಂಭೀರ ಸ್ವರೂಪದ ಭ್ರಷ್ಟಾಚಾರ ಪ್ರಕರಣದ ಆರೋಪಗಳಿಲ್ಲ. ಜಲಸಂಪನ್ಮೂಲ, ಗೃಹ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿದರೂ ಲಂಚಾವತಾರಕ್ಕೆ ಹೆಚ್ಚಿನ ಅವಕಾಶ ನೀಡದೆ ಭ್ರಷ್ಟಚಾರರಹಿತ ರಾಜಕಾರಣಿಯೆಂದು ಹೆಸರು ಪಡೆದಿದ್ದಾರೆ.
ಸರ್ಕಾರ ರಚನೆಗೆ ಹಕ್ಕು ಮಂಡನೆ ಮಿತ ಭಾಷಿ, ವಿವಾದಗಳಿಂದ ದೂರ: ಬಸವರಾಜ ಬೊಮ್ಮಾಯಿ ಮಿತ ಭಾಷಿ, ಅಗತ್ಯಕ್ಕೆ ತಕ್ಕಷ್ಟು ಮಾತನಾಡುವ ರಾಜಕಾರಣಿ. ಯಾವುದೇ ಒಂದು ಹೇಳಿಕೆ ನೀಡುವಾಗ ಅದರ ಪರಿಣಾಮ ಅರಿತು ಮಾತನಾಡುವ ವ್ಯಕ್ತಿತ್ವ ಹೊಂದಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ವಿದಾನಸಭೆ ಅಧಿವೇಶನದಲ್ಲಿ ಸರಕಾರವನ್ನು ಸೊಗಸಾಗಿ ಸಮರ್ಥಿಸಿಕೊಳ್ಳುತ್ತಿದ್ದರು.
ಇತರ ನಾಯಕರಂತೆ ವಿವಾದಿತ ಹೇಳಿಕೆ ನೀಡದೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವವರಲ್ಲ. ಹಾಗೆಯೇ ಪಕ್ಷಕ್ಕೂ ಮುಜುಗರ ತಂದುಕೊಡುವ ರಾಜಕಾರಣಿಯಲ್ಲ. ಈ ಎಲ್ಲ ನಾಯಕತ್ವದ ಗುಣಗಳನ್ನು ಹೊಂದಿರುವ ಬಸವರಾಜ ಬೊಮ್ಮಾಯಿಯನ್ನು ರಾಜ್ಯದಲ್ಲಿ ಬಿಜೆಪಿಯ ಭವಿಷ್ಯದ ನಾಯಕನ್ನಾಗಿ ಹಾಗು ಯಡಿಯೂರಪ್ಪನವರಿಗೆ ಪರ್ಯಾಯ ನಾಯಕನ್ನಾಗಿ ಬೆಳೆಸಲು ಮುಖ್ಯಮಂತ್ರಿ ಪಟ್ಟ ನೀಡಿದೆ. ಬಿಜೆಪಿ ಹೈಕಮಾಂಡ್ ನ ಈ ಹೊಸ ಪ್ರಯೋಗ ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎನ್ನುವುದು ಚುನಾವಣೆಗಳಲ್ಲಿಯೇ ಗೊತ್ತಾಗಬೇಕಿದೆ.