ಕರ್ನಾಟಕ

karnataka

ವಿಶ್ವಕ್ಕೆ ಪ್ರೇರಣೆ ಶಕ್ತಿಯಾಗಿದ್ದ ಮಹಾತ್ಮಗಾಂಧಿ ಹೆಸರು ಶಾಶ್ವತವಾಗಿ ಉಳಿದಿದೆ: ಡಿಕೆಶಿ

By

Published : Jan 30, 2022, 5:47 PM IST

ಗಾಂಧೀಜಿ ಅವರು ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಜವಾಬ್ದಾರಿ ಹೊತ್ತಿದ್ದರು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವರು ಇಡೀ ವಿಶ್ವದ ನಾಯಕರಿಗೆ ಪ್ರೇರಣಾಶಕ್ತಿಯಾಗಿದ್ದು, ಅವರ ಹೆಸರು ಶಾಶ್ವತವಾಗಿ ಉಳಿದುಕೊಂಡಿದೆ. ಈ ದಿನ ನಾವೆಲ್ಲ ಅವರಿಗೆ ಗೌರವ ಸೂಚಿಸಲು ಇಲ್ಲಿ ಸೇರಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ.

d-k-shivakumar
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್

ಬೆಂಗಳೂರು:ಇಡೀ ವಿಶ್ವಕ್ಕೆ ಪ್ರೇರಣಾ ಶಕ್ತಿಯಾಗಿದ್ದ ಮಹಾತ್ಮಗಾಂಧಿ ಅವರ ಹೆಸರು ಈ ಭೂಮಿ ಮೇಲೆ ಶಾಶ್ವತವಾಗಿ ಉಳಿದುಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಶ್ಲಾಘಿಸಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕ ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನ ಇಂದು. ಗಾಂಧೀಜಿ ಅವರು ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಜವಾಬ್ದಾರಿ ಹೊತ್ತಿದ್ದರು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವರು ಇಡೀ ವಿಶ್ವದ ನಾಯಕರಿಗೆ ಪ್ರೇರಣಾಶಕ್ತಿಯಾಗಿದ್ದು, ಅವರ ಹೆಸರು ಶಾಶ್ವತವಾಗಿ ಉಳಿದುಕೊಂಡಿದೆ. ಈ ದಿನ ನಾವೆಲ್ಲ ಅವರಿಗೆ ಗೌರವ ಸೂಚಿಸಲು ಇಲ್ಲಿ ಸೇರಿದ್ದೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಮಾತನಾಡಿದರು

ಯಾರೂ ಏನೇ ರಾಜಕೀಯ ಮಾಡಿದರೂ ಕೂಡ ಮಹಾತ್ಮ ಗಾಂಧೀಜಿ ಅವರ ತತ್ವ, ಸಿದ್ಧಾಂತವನ್ನು ಇಡೀ ವಿಶ್ವವೇ ಒಪ್ಪಿದೆ. ಅವರು ತಮ್ಮ ಕೊನೆಯುಸಿರೆಳೆಯುವಾಗ 'ಹೇ ರಾಮ್' ಎಂದರು. 'ರಘುಪತಿ ರಾಘವ ರಾಜಾರಾಂ' ಎಂಬ ಹಾಡಿನ ಸಾಲುಗಳಲ್ಲಿ ಎಲ್ಲ ಧರ್ಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮಾರ್ಗದರ್ಶನ ನೀಡಿದ್ದಾರೆ ಎಂದು ಸ್ಮರಿಸಿದರು.

ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ. ಈ ಕಾಂಗ್ರೆಸ್ ಧ್ವಜದಲ್ಲಿ ಗಾಂಧೀಜಿ ಅವರ ಚರಕದ ಗುರುತು ಅಡಗಿದೆ. ಈ ಕಾಂಗ್ರೆಸ್ ಬಾವುಟ ಹಿಡಿಯುವ ನಿಮಗೆ ಮಾತ್ರ ಗಾಂಧೀಜಿ ಅವರ ಜತೆ ಭಾವನಾತ್ಮಕ ಸಂಬಂಧ ಹೊಂದುವ ಅವಕಾಶವಿದೆ. ಈ ಭಾಗ್ಯ ನಿಮಗೆ ಮಾತ್ರವೇ ಹೊರತು ಬೇರೆಯವರಿಗೆ ಸಿಗುವುದಿಲ್ಲ ಎಂದು ಹೇಳಿದರು.

ನಾವು, ನೀವುಗಳು ಅವರನ್ನು ನೋಡಿಲ್ಲದೆ ಇರಬಹುದು. ಆದರೆ, ಅವರ ಆಚಾರ, ವಿಚಾರ, ತತ್ವಗಳನ್ನು ಕಂಡಿದ್ದೇವೆ ಹಾಗು ಪಾಲಿಸುತ್ತಿದ್ದೇವೆ. ನಮ್ಮ ನಾಯಕರ ತ್ಯಾಗ ಬಲಿದಾನದ ಇತಿಹಾಸ ಬೇರೆ ಪಕ್ಷದವರಿಗೆ ಇಲ್ಲ ಎದು ಡಿಕೆಶಿ ತಿಳಿಸಿದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ದಿನದಿಂದ ಅವರು ತಮ್ಮ ಕೊನೆಯುಸಿರು ಇರುವ ದಿನದವರೆಗೂ ಪ್ರತಿನಿತ್ಯ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾ ಬಂದರು. ಅವರ ಚರಕವು ನಮಗೆ ಒಂದು ಸಂದೇಶ ನೀಡುತ್ತದೆ. ವಿದೇಶದವರ ಮೇಲೆ ಅವಲಂಬನೆ ಬೇಡ. ನಮ್ಮ ಬಟ್ಟೆಯನ್ನು ನಾವೇ ತಯಾರಿಸಿಕೊಳ್ಳೋಣ ಎಂಬ ಸ್ವಂತ ಉದ್ಯೋಗ, ಸ್ವಾವಲಂಬನೆಯ ಸಂಕೇತ ಅದಾಗಿದೆ ಎಂದು ವಿವರಿಸಿದರು.

ಪ್ರತಿ ಹಳ್ಳಿಯಲ್ಲಿ ಪಂಚಾಯ್ತಿ ಇರಬೇಕು. ಸಹಕಾರ ಸಂಘ ಇರಬೇಕು ಎಂಬ ಅವರ ದೂರದೃಷ್ಟಿ ಇಂದಿಗೂ ಪ್ರಸ್ತುತವಾಗಿವೆ. ಬ್ಯಾಂಕ್ ಗಳು ರಾಷ್ಟೀಕರಣವಾದರೂ ಸಹಕಾರ ತತ್ವದ ಮೇಲೆ ಉಳಿದುಕೊಂಡ ಸಂಸ್ಥೆಗಳು ಸಮಾಜವನ್ನು ಸಮತೋಲನದಲ್ಲಿಡಲು ನೆರವಾಗಿವೆ. My religion is based on truth and non violence ಅಂದರೆ, 'ಸತ್ಯ ಹಾಗು ಅಹಿಂಸೆ ಆಧಾರದ ಮೇಲೆ ನನ್ನ ಧರ್ಮ ನಿಂತಿದೆ' ಎಂದು ಗಾಂಧಿ ಅವರು ಹೇಳಿದ್ದರು. ಅವರ ಸತ್ಯ ಹಾಗೂ ಅಹಿಂಸೆಯನ್ನು ನಾವು ಅಳವಡಿಸಿಕೊಂಡು ಬಂದಿದ್ದೇವೆ ಎಂದು ವಿವರಿಸಿದರು.

ನಾವು ಇತ್ತೀಚೆಗೆ ಮೇಕೆದಾಟು ನಮ್ಮ ನೀರು, ನಮ್ಮ ಹಕ್ಕು ಎಂಬ ಪಾದಯಾತ್ರೆ ಮಾಡಿದೆವು. ನಮಗೆ ಪಾದಯಾತ್ರೆ, ಹೋರಾಟವನ್ನು ಹೇಳಿಕೊಟ್ಟವರು ಯಾರು?. ಅದೇ ಮಹಾತ್ಮ ಗಾಂಧೀಜಿ. ಕಾಂಗ್ರೆಸ್ಸಿಗರು ಮಾತ್ರ ಇದರ ಬಗ್ಗೆ ಯೋಚಿಸಲು ಸಾಧ್ಯ. ನಾವು ಲಾಠಿ, ಬಂದೂಕು ಹಿಡಿದುಕೊಂಡು ಬೇರೆಯವರ ಮೇಲೆ ಯುದ್ಧ ಮಾಡಲು ಹೋಗಿರಲಿಲ್ಲ. ಗಾಂಧೀಜಿ ಅವರು ಹೇಳಿಕೊಟ್ಟ ನಡಿಗೆ, ಮಾರ್ಗದರ್ಶನವನ್ನು ಪಾಲನೆ ಮಾಡುತ್ತಿದ್ದೇವೆ. ಆದರೆ, ಇದನ್ನು ಕೆಲವರು ಒಪ್ಪಲು ತಯಾರಿಲ್ಲ. ನಮ್ಮ ಹೋರಾಟ ಹಿಂಸೆಯ ಮಾರ್ಗದಲ್ಲಿ ಹೋಗಬಾರದು ಎಂಬ ಕಾರಣಕ್ಕೆ ನಾವು ಗಾಂಧೀಜಿ ಅವರ ಪ್ರತಿಮೆ ಮುಂದೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಈ ದೇಶಕ್ಕೆ, ಪ್ರಪಂಚಕ್ಕೆ ಅವರ ಮಾರ್ಗದರ್ಶನದ ಅಗತ್ಯವಿದೆ. ನಾವು ಅವರ ಮಾರ್ಗರ್ಶನ ಒಪ್ಪಿದ್ದೇವೆ. ಕಾಂಗ್ರೆಸ್ಸಿಗರಾಗಿ ಅವರ ಹಾಗು ಅವರ ಜತೆಗಿನ ಗಣ್ಯರ ನಾಯಕತ್ವವೇ ನಮಗಿರುವ ಶಕ್ತಿ. ಅವರ ಆದರ್ಶ, ಮಾರ್ಗದರ್ಶನ, ಆಲೋಚನೆ, ಸತ್ಯ ಮತ್ತು ಕಾಯಕದ ಮೇಲೆ ನಂಬಿಕೆ ಇಟ್ಟು ನಾವು ಮುನ್ನಡೆಯಬೇಕಿದೆ.

ಮತ್ತೊಂದು ಕಡೆ ಗಾಂಧೀಜಿ ಅವರು ದೇವರೇ, ನಾನು ಯಾರಿಗಾದರೂ ನೋವು ಮಾಡಿದ್ದರೆ, ನಾನು ಅವರಿಗೆ ಕ್ಷಮೆ ಕೋರುವ ಶಕ್ತಿ ಕೊಡು. ಬೇರೆಯವರು ನನಗೆ ನೋಯಿಸಿದರೆ ಅವರನ್ನು ಕ್ಷಮಿಸುವ ಶಕ್ತಿ ನೀಡು ಎಂದಿದ್ದಾರೆ. ಬೇರೆಯವರ ವಿಶ್ವಾಸ ಹೇಗೆ ಗಳಿಸಬೇಕು ಎಂಬುದಕ್ಕೆ ಗಾಂಧೀಜಿ ಅವರು 'ನೀನು ನಿನ್ನನ್ನು ಗೆಲ್ಲಬೇಕಾದರೆ, ನಿನ್ನ ಮೆದುಳು ಪ್ರಯೋಗಿಸು, ನೀನು ಬೇರೆಯವರನ್ನು ಗೆಲ್ಲಬೇಕಾದರೆ ನಿನ್ನ ಹೃದಯ ಪ್ರಯೋಗಿಸು' ಎಂದು ಹೇಳಿದ್ದಾರೆ.

ಇದು ಗಾಂಧೀಜಿ ಅವರು ನಮಗೆ ಕೊಟ್ಟ ಮಾರ್ಗದರ್ಶನ. ನಾವು ಕೂಡ ಇದನ್ನು ಅಳವಡಿಸಿಕೊಂಡು ನಮ್ಮ ಸ್ನೇಹಿತರು, ಕಾರ್ಯಕರ್ತರನ್ನು, ಜನರನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲಬೇಕು. ಇದು ನಮ್ಮ ಪಕ್ಷದ ಮೂಲಮಂತ್ರವಾಗಬೇಕು. ಈಗ ವಿವಿಧ ವಿಚಾರಗಳಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿದೆ.

ದೇಶದಲ್ಲಿ ಈಗ ತುರ್ತುಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ನಾವು ಅಹಿಂಸೆ ಮಾರ್ಗದಲ್ಲಿ ಹೋರಾಡಬೇಕು. ಈ ದೇಶದ ರೈತರು 400 ಸಂಸತ್ ಸದಸ್ಯರಿರುವ ಬಲಿಷ್ಠ ಸರ್ಕಾರದ ವಿರುದ್ಧ ಬೀದಿಗಿಳಿದು ಒಂದು ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದ್ದಾರೆ. ರೈತರು ಗಾಂಧೀಜಿ ಅವರ ತತ್ವದಂತೆ ಅಹಿಂಸೆ ಮಾರ್ಗದ ಮೂಲಕ ಸತ್ಯಾಗ್ರಹ ಮಾಡಿ ಪ್ರಧಾನಿ ಅವರು ಕರಾಳ ಕಾಯ್ದೆಗಳನ್ನು ಹಿಂಪಡೆದು ಕೈಮುಗಿದು ಕ್ಷಮೆ ಕೇಳುವಂತೆ ಮಾಡಿದ್ದಾರೆ ಎಂದರು.

ಅಧಿಕಾರ, ಮತ, ದರ್ಪ ಇದ್ಯಾವುದೂ ಹೋರಾಟದ ಮುಂದೆ ಶಾಶ್ವತವಲ್ಲ. ಹೀಗಾಗಿ, ನಾವು ನೀವೆಲ್ಲ ಅವರ ಮಾರ್ಗದರ್ಶನ ಅಳವಡಿಸಿಕೊಂಡು ದೇಶದ ಐಕ್ಯತೆ, ಸಮಗ್ರತೆ ಕಾಯ್ದುಕೊಂಡು ದೇಶವನ್ನು ಅಭಿವೃದ್ಧಿಶೀಲ ಮಾಡಬೇಕಿದೆ. ಈ ದೇಶದಲ್ಲಿ ಅನೇಕ ನ್ಯಾಯಾಲಯಗಳಿವೆ. ಎಲ್ಲದಕ್ಕಿಂತ ಶ್ರೇಷ್ಠವಾದ ನ್ಯಾಯಾಲಯ ನಿಮ್ಮೊಳಗಿನ ಆತ್ಮಸಾಕ್ಷಿ. ನಮ್ಮ ಆತ್ಮಸಾಕ್ಷಿ ಒಪ್ಪಿದರೆ ಅದಕ್ಕಿಂತ ದೊಡ್ಡ ತೀರ್ಪಿಲ್ಲ. ನಮ್ಮ ವಿಚಾರ, ನಡೆಗಳು ನಮ್ಮ ಆತ್ಮಸಾಕ್ಷಿಗೆ ಮೆಚ್ಚುಗೆಯಾಗಬೇಕು.

ಕಾಂಗ್ರೆಸ್​ನ ಎಲ್ಲ ಸದಸ್ಯರು ಅಹಿಂಸೆ ಮೂಲಕ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ಈ ದೇಶ, ಪ್ರಜಾಪ್ರಭುತ್ವ, ನಮ್ಮ ನಾಯಕರು ಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು. ನಮ್ಮ ನಾಯಕರ ತ್ಯಾಗ, ಬಲಿದಾನ ನಮ್ಮ ಶಕ್ತಿ. ಅಹಿಂಸೆ, ತ್ಯಾಗ, ಬಲಿದಾನ ಇವೆಲ್ಲವೂ ಒಂದೊಂದು ಅಸ್ತ್ರ.

ಈ ಪಕ್ಷದ ಸದಸ್ಯರಾಗಿರುವುದು ನಮ್ಮ ಭಾಗ್ಯ. ಇಂದು ಗಾಂಧೀಜಿ ಅವರನ್ನು ಕಳೆದುಕೊಂಡು ಹುತಾತ್ಮರ ದಿನ ಆಚರಿಸುತ್ತಿದ್ದೇವೆ. ಇಡೀ ದೇಶದೆಲ್ಲೆಡೆ ಮೌನಾಚರಣೆ ಮಾಡಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಿಕೊಂಡು ಬಂದಿದ್ದೇವೆ. ಗಾಂಧೀಜಿ ಅವರ ತತ್ವ ಸಿದ್ಧಾಂತಗಳನ್ನು ಕಾಂಗ್ರೆಸ್ ಸದಸ್ಯರಾಗಿ ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಓದಿ:ಪಂಚ ರಾಜ್ಯ ಚುನಾವಣೆ ಬಳಿಕ ಕಾಂಗ್ರೆಸ್ ಅಡ್ರೆಸ್​ ಇಲ್ಲದಂಗೆ ಹೋಗುತ್ತೆ : ಜಗದೀಶ್​ ಶೆಟ್ಟರ್

For All Latest Updates

TAGGED:

ABOUT THE AUTHOR

...view details