ಕರ್ನಾಟಕ

karnataka

ETV Bharat / state

ಕಾವೇರಿ: ದೆಹಲಿಯಲ್ಲಿ ಕಾನೂನು ತಜ್ಞರೊಂದಿಗೆ ಸಭೆ; 'ನೀರು ಬಿಡುಗಡೆ ಆದೇಶ ಕರ್ನಾಟಕಕ್ಕೆ ನೋವಿನದು'- ಡಿಕೆಶಿ - Tamil Nadu

D K Shivakumar meeting with experts on Kaveri issue in Delhi: ಕಾವೇರಿ ನದಿ ನೀರು ವಿಷಯವಾಗಿ ಕಾನೂನು ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಜಲ ಸಂಪನ್ಮೂಲ ಖಾತೆ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ದೆಹಲಿಯಲ್ಲಿ ಸಮಾಲೋಚನೆ ನಡೆಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಿರುವುದು ನೋವಿನ ವಿಷಯ ಎಂದು ಹೇಳಿದರು.

Kaveri Issue: Deputy CM DK Shivakumar meeting with legal experts and officials in Delhi
ದೆಹಲಿಯಲ್ಲಿ ಕಾನೂನು ತಜ್ಞರೊಂದಿಗೆ ಡಿಸಿಎಂ ಸಭೆ: ಕಾವೇರಿ ನೀರು ಬಿಡುವ ಆದೇಶ ಕರ್ನಾಟಕಕ್ಕೆ ನೋವಿನದು ಎಂದ ಡಿಕೆಶಿ

By ETV Bharat Karnataka Team

Published : Aug 31, 2023, 5:58 PM IST

Updated : Aug 31, 2023, 10:18 PM IST

ನವದೆಹಲಿ/ಬೆಂಗಳೂರು:ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಇದು ಕರ್ನಾಟಕಕ್ಕೆ ದೊಡ್ಡ ನೋವಿನ ಸಂಗತಿ. ಯಾಕೆಂದರೆ, ರಾಜ್ಯದಲ್ಲೇ ನೀರಿಲ್ಲ ಹಾಗೂ ಮಳೆಯೂ ಇಲ್ಲ. ಆದ್ದರಿಂದ ಪ್ರಾಧಿಕಾರದ ಅಧಿಕಾರಿಗಳು ಕರ್ನಾಟಕಕ್ಕೆ ಬಂದು ವಸ್ತುಸ್ಥಿತಿ ಪರಿಶೀಲನೆ ನಡೆಸಲಿ. ಬರವಿರುವ ಕಾರಣ ಕರ್ನಾಟಕ ಹೇಗೆ ಬಳಲುತ್ತಿದೆ ಎಂಬುದರ ವಾಸ್ತವ ಅರಿತುಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಕಾನೂನು ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಸಮಾಲೋಚಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಇಂದು ನಾವು ನಮ್ಮ ಎಲ್ಲ ಕಾನೂನು ತಜ್ಞರೊಂದಿಗೆ ಸಭೆ ನಡೆಸಿದ್ದೇವೆ. ನಮ್ಮ ತಂಡವು ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲರನ್ನು ಭೇಟಿ ಮಾಡಿ ಚರ್ಚಿಸಲಿದೆ'' ಎಂದು ಹೇಳಿದರು.

''24 ಸಾವಿರ ಕ್ಯೂಸೆಕ್​ ನೀರು ಬಿಡುಗಡೆಗೆ ತಮಿಳುನಾಡು ಮನವಿ ಮಾಡಿದೆ. ನಮ್ಮ ಅಧಿಕಾರಿಗಳು ವಾಸ್ತವ ಅಂಕಿ-ಅಂಶಗಳನ್ನು ಮಂಡಿಸಿದ್ದಾರೆ. ಆದರೂ, 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ನಮಗೆ ಆದೇಶ ನೀಡಲಾಗಿದೆ. ಆದರೆ, ಇದು ಕೂಡ ಕರ್ನಾಟಕಕ್ಕೆ ನೋವಿನ ವಿಷಯ. ಮಳೆ ಹಾಗೂ ನೀರಿದ್ದರೆ ನಾವು ಬಿಡುತ್ತಿದ್ದೆವು. ಈ ಹಿಂದೆ ಕೂಡ ನಮಗೆ ಕೊಟ್ಟ ಆದೇಶಕ್ಕೆ ಗೌರವ ಕೊಟ್ಟಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಕರ್ನಾಟಕಕ್ಕೆ ಬಂದು ಪರಿಶೀಲಿಸಿ ವಾಸ್ತವ ಅರಿತುಕೊಳ್ಳಲಿ ಎಂದು ಮನವಿ ಮಾಡಲಿದ್ದೇವೆ'' ಎಂದು ಮಾಹಿತಿ ನೀಡಿದರು.

ಮುಂದುವರೆದು ಮಾತನಾಡಿದ ಅವರು, "ಕರ್ನಾಟಕದ ಭಾವನೆಗಳು ಮತ್ತು ರೈತರನ್ನು ಅವರು (ತಮಿಳುನಾಡು) ಗೌರವಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾವೂ ಕೂಡ ತಮಿಳುನಾಡಿನ ರೈತರನ್ನು ಗೌರವಿಸುತ್ತೇವೆ. ಆದರೆ, ಕರ್ನಾಟಕ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದೆ. ನಮ್ಮ ಹಿರಿಯ ವಕೀಲರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಮುಂದಿನ ನಿರ್ಧಾರದ ಬಗ್ಗೆ ಪ್ರಕಟಿಸುತ್ತೇವೆ'' ಎಂದು ತಿಳಿಸಿದರು. ಇದೇ ವೇಳೆ, ''ಇದಕ್ಕೆ ಮೇಕೆದಾಟುವೊಂದೇ ಪರಿಹಾರ. ಮೇಕೆದಾಟು ಯೋಜನೆ ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡಿಗೂ ಉಪಯೋಗವಾಗಲಿದೆ" ಡಿಕೆಶಿ ಅಭಿಪ್ರಾಯಪಟ್ಟರು.

ತಮಿಳುನಾಡಿಗೆ ಹೇಗೆ ನೀರು ಬಿಡುವುದು?-ಗೃಹ ಸಚಿವ: ನಮಗೆ ಹಾಗೂ ಬೆಂಗಳೂರಿಗೆ ನೀರಿಲ್ಲ. ಈ ಸಂದರ್ಭದಲ್ಲಿ ತಮಿಳುನಾಡಿಗೆ ಹೇಗೆ ನೀರು ಬಿಡುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾಳೆ ಸುಪ್ರೀಂ ಕೋರ್ಟ್​ನಲ್ಲಿ ಕಾವೇರಿ ಅರ್ಜಿ ವಿಚಾರಣೆ ವಿಷಯವಾಗಿ ಪ್ರತಿಕ್ರಿಯಿಸಿದ ಅವರು, ಮಳೆ ಬರಲಿಲ್ಲ, ಮುಂಗಾರು ವಿಫಲವಾಗಿದೆ. ನೀರಿಲ್ಲದಿದ್ರೂ ಕೋರ್ಟ್​ನಲ್ಲಿ ದಾವೆ ಹಾಕ್ತಾರಂದ್ರೆ ಹೇಗೆ?. ಇನ್ನೂ 25 ಟಿಎಂಸಿ ನೀರು ಬರಬೇಕಿತ್ತು. ಐದು ಸಾವಿರ ಕ್ಯುಸೆಕ್ ನೀರು ಬಿಡುವಂತೆ ಪ್ರಾಧಿಕಾರ ಹೇಳಿದೆ. ಅಷ್ಟು ಬಿಡಲು ಆಗಲ್ಲ ಅಂತಾ ಹೇಳಿದ್ದೇವೆ ಎಂದರು.

ಹೀಗೇ ಮುಂದುವರೆದರೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುತ್ತೇವೆ. ಈಗಾಗಲೇ ಸರ್ವಪಕ್ಷ ನಿಯೋಗ ಹೋಗುವ ಬಗ್ಗೆ ಮುಖ್ಯಮಂತ್ರಿ ಮಾತಾಡಿದ್ದಾರೆ. ಪ್ರಧಾನಿ ಭೇಟಿ ಬಗ್ಗೆಯೂ ತೀರ್ಮಾನ ಮಾಡುತ್ತೇವೆ ಎಂದು ಗೃಹ ಸಚಿವರು ತಿಳಿಸಿದರು.

Last Updated : Aug 31, 2023, 10:18 PM IST

ABOUT THE AUTHOR

...view details