ಕರ್ನಾಟಕ

karnataka

By

Published : Nov 20, 2020, 3:37 PM IST

ETV Bharat / state

ಗೋಹತ್ಯೆ ನಿಷೇಧ, ಲವ್ ಜಿಹಾದ್ ಸಂಬಂಧ ಕಾನೂನು ಜಾರಿಗೊಳಿಸಿ: ಸರ್ಕಾರಕ್ಕೆ‌ ಸಿ.ಟಿ.ರವಿ ಒತ್ತಾಯ

ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ‌ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಮಿಳುನಾಡಿಗೆ ಬರುತ್ತಿದ್ದಾರೆ. ಆ ರಾಜ್ಯದ ವರಿಷ್ಠರ ಜೊತೆ ಸಮಾಲೋಚನೆ ನಡೆಸುತ್ತಾರೆ. 2021ರಲ್ಲಿ ಚುನಾವಣೆ ಇದ್ದು, ಇದರ ಕಾರ್ಯತಂತ್ರ ಕುರಿತು ನಾಳೆ ಸಭೆ ನಡೆಸಲಿದ್ದೇವೆ ಎಂದು ಸಿ.ಟಿ.ರವಿ ತಿಳಿಸಿದರು.

CT Ravi demands government
ಸರ್ಕಾರಕ್ಕೆ‌ ಸಿ.ಟಿ ರವಿ ಒತ್ತಾಯ

ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಲವ್ ಜಿಹಾದ್​ಗೆ ಕಾನೂನು ರೂಪಿಸುವ ಮೂಲಕ‌ ನಿಯಂತ್ರಣ ಹೇರುವ ಕಾಯ್ದೆಗಳ ಜಾರಿ ಅಗತ್ಯವಿದ್ದು, ಮುಂಬರಲಿರುವ ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ಜಾರಿಗೆ ತರಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸರ್ಕಾರಕ್ಕೆ‌ ಸಿ.ಟಿ.ರವಿ ಒತ್ತಾಯ

ಸೆವೆನ್ ಮಿನಿಸ್ಟರ್ ಕ್ವಾಟ್ರಸ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರೀತಿಯ ಮೂಲಕ ಮತಾಂತರ ಮಾಡುವ ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ಕೋರ್ ಕಮಿಟಿ ಸಹಮತ ವ್ಯಕ್ತಪಡಿಸಿದೆ. ‌ಗೋಹತ್ಯೆ ನಿಷೇಧ ಕಾಯ್ದೆಯನ್ನ ತರಬೇಕು ಎನ್ನುವ ಕೂಗು ಜೋರಾಗಿದೆ. ಹಾಗಾಗಿ ಕಠಿಣವಾದ ಕಾಯ್ದೆ ತರುವ ಬಗ್ಗೆ ಚಿಂತನೆ ಇದೆ. ಇದಕ್ಕೂ ಕೋರ್ ಕಮಿಟಿ ಸಮ್ಮತಿ‌ ಇದೆ. ನಾನು‌ ಪಶು ಸಂಗೋಪನಾ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಮುಂಬರುವ ಅಧಿವೇಶನದಲ್ಲಿ ಈ ಎರಡು ಕಾಯ್ದೆಗಳನ್ನು ತರಬೇಕು. ರಾಜಕೀಯ ಕಾರಣಕ್ಕೆ ಗೋಹತ್ಯೆ ಕಾಯ್ದೆಯನ್ನು ಕಳೆದ ಸರ್ಕಾರದ ಅವಧಿಯಲ್ಲಿ ತಂದಿರಲಿಲ್ಲ.

ನೀವ್ಯಾಕೆ ಕಾಯ್ದೆಯನ್ನ‌ ವಿರೋಧಿಸುತ್ತೀರಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಸಿ.ಟಿ.ರವಿ ಪ್ರಶ್ನಿಸಿದರು. ನಾನು ಎಮ್ಮೆ, ಹಸು ಕಾಯುತ್ತಿದ್ದೆ ಅಂತಾ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಹಸು-ಎಮ್ಮೆ ಮೇಯಿಸಿದವರು ಅವುಗಳ ಹತ್ಯೆಯನ್ನು ಸಹಿಸಲ್ಲ ಎಂದು ಟಾಂಗ್ ನೀಡಿದರು. ಅದೇ ರೀತಿ ಮೋಸದ ಮತಾಂತರಕ್ಕಾಗಿ‌ ಮಾಡಿದ ಲವ್ ಜಿಹಾದ್ ಬೇಡ. ಕಾನೂನಿನ ಮೂಲಕ‌ ಇದನ್ನು ನಿಯಂತ್ರಣ ಮಾಡುವ ಕೆಲಸವಾಗಬೇಕಿದೆ ಎಂದರು.

ತಮಿಳುನಾಡಿಗೆ ನಡ್ಡಾ-ಶಾ ಭೇಟಿ, ರಜನಿಕಾಂತ್ ಭೇಟಿ ನಿಗದಿಯಿಲ್ಲ:

ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ‌ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಮಿಳುನಾಡಿಗೆ ಬರುತ್ತಿದ್ದಾರೆ. ಆ ರಾಜ್ಯದ ವರಿಷ್ಠರ ಜೊತೆ ಸಮಾಲೋಚನೆ ನಡೆಸುತ್ತಾರೆ. 2021ರಲ್ಲಿ ಚುನಾವಣೆ ಇದೆ. ಇದರ ಕಾರ್ಯತಂತ್ರ ಕುರಿತು ನಾಳೆ ಸಭೆ ಮಾಡಲಿದ್ದೇವೆ ಎಂದರು.

ಅಮಿತ್ ಶಾ ಹಾಗೂ ರಜನಿಕಾಂತ್ ಭೇಟಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಈವರೆಗಿನ ಅಮಿತ್ ಶಾ ಅವರ ಕಾರ್ಯಕ್ರಮ ಪಟ್ಟಿಯಲ್ಲಿ ರಜನಿಕಾಂತ್ ಭೇಟಿ ನಿಗದಿ ಆಗಿಲ್ಲ. ರಜನಿಕಾಂತ್ ಪಕ್ಷಕ್ಕೆ ಬರ್ತಾರೆ ಅಂತ ಒಂದು ವರ್ಷದಿಂದ ಹೇಳಲಾಗುತ್ತಿದೆ. ಆದರೆ ಅಮಿತ್ ಶಾ ಪಕ್ಷದ ಕಾರ್ಯಕ್ರಮ ಮತ್ತು ಸರ್ಕಾರಿ‌ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಯಾವುದೇ ಭೇಟಿಯ ಬಗ್ಗೆ ನಿರ್ಧಾರವಾಗಿಲ್ಲ. ಕಾರ್ಯಕ್ರಮ ಪಟ್ಟಿ ಬದಲಾದರೆ ಮಾತ್ರ ಆ ಸಾಧ್ಯತೆ ಇದೆ ಎಂದರು.

ಸಿಎಂ ಸಮರ್ಥರಿದ್ದಾರೆ:

ಸಂಪುಟ‌ ವಿಸ್ತರಣೆ, ಪುನಾರಚನೆ ಕುರಿತು ವರಿಷ್ಠರ ಜೊತೆ ಸಿಎಂ‌ ಬಿ.ಎಸ್.ಯಡಿಯೂರಪ್ಪ ಮಾತನಾಡುತ್ತಾರೆ, ಅವರು ಸಮರ್ಥರಿದ್ದಾರೆ ಎಂದರು. ಶಾಸಕರ‌ ಸಭೆ ಮಾಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದು ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಬೇಕು. ಆದರೆ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಿದರೆ ಪಕ್ಷ ಅದನ್ನು ಸಹಿಸಲ್ಲ. ಕೆಲವರು ಗುಂಪುಗಾರಿಕೆ ಮಾಡೋದು ಮೆರಿಟ್ ಅಂದುಕೊಂಡಿದ್ದಾರೆ. ಆದರೆ ಅದು ಮೆರಿಟ್ ಅಲ್ಲ ಎಂದು ಪರೋಕ್ಷವಾಗಿ ಗುಂಪುಗಾರಿಕೆ ಮಾಡಲು ಹೊರಟಿರುವ ಶಾಸಕರಿಗೆ ಎಚ್ಚರಿಕೆ ನೀಡಿದರು.

ಆರ್​​ಎಸ್​​ಎಸ್ ಶಾಖೆಗೆ ಭೇಟಿ ನೀಡಿ ಸಿದ್ದು ತಿಳಿಯಲಿ:

ಆರ್​ಎಸ್​​ಎಸ್ ಬಗ್ಗೆ ತಿಳುವಳಿಕೆ‌ ಇಲ್ಲದ ಕಾರಣ ಸಿದ್ದರಾಮಯ್ಯ ಜಾತಿ ಸಂಘಟನೆ ಎಂದು ಮಾತನಾಡುತ್ತಿದ್ದಾರೆ. ದೇಶಕ್ಕಾಗಿ ಕೆಲಸ ಮಾಡಿದ‌ ಎಲ್ಲಾ ಸಮುದಾಯದವರನ್ನು ಸಂಘ ಗೌರವಿಸುತ್ತದೆ. ಇದರ ಅರಿವಿಲ್ಲದ ಸಿದ್ದರಾಮಯ್ಯ ಹೀಗೆ ಮಾತನಾಡುತ್ತಾರೆ. ಅವರಿಗೆ ಸರಿಯಾಗಿ ಗೊತ್ತಿಲ್ಲದಿದ್ದರೆ ಸಂಘದ ಶಾಖಾ ಕಚೇರಿಗಳಿಗೆ ಭೇಟಿ‌ ನೀಡಿ ತಿಳಿದುಕೊಳ್ಳಲಿ. ಅವರಿಗಂತೂ ವಯಸ್ಸಾಯಿತು. ಅವರ ಮೊಮ್ಮಕ್ಕಳನ್ನಾದರೂ ಶಾಖೆಗಳಿಗೆ ಕಳುಹಿಸಿ ಅವರಾದರೂ ತಿಳಿದುಕೊಳ್ಳಲಿ. ತಿಳಿಯದೇ ಮಾತಾಡಿದರೆ ಕುರುಡರು ಆನೆ ಮುಟ್ಟಿದಂತಾಗಲಿದೆ ಎಂದು ಆರ್​​ಎಸ್​​ಎಸ್ ಬಗ್ಗೆ ಮಾತಾಡಿದ ಸಿದ್ದರಾಮಯ್ಯಗೆ ಸಿ.ಟಿ.ರವಿ ತಿರುಗೇಟು ನೀಡಿದರು.

ಎಸ್​​ಡಿಪಿಐ ನಿಷೇಧಕ್ಕೆ ಬಿಜೆಪಿ ಬದ್ಧ:

ಎಸ್​​ಡಿಪಿಐ ನಿಷೇಧಕ್ಕೆ ಬಿಜೆಪಿ ಬದ್ಧವಾಗಿದ್ದು, ಕಾನೂನಿನ ಅಂಶ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಮುಂಚಿನಿಂದಲೂ ಎಸ್​​ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ನಿಷೇಧದ ಬಗ್ಗೆ ಬಿಜೆಪಿ ಹೋರಾಟ ಮಾಡುತ್ತಲೇ ಬಂದಿದೆ. ನಮ್ಮ‌ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಸೂಕ್ತ ಆಧಾರಗಳ ಸಮೇತ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದರು. ಬಿಜೆಪಿ ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಇದೇ ವೇಳೆ ತಿರುಗೇಟು ನೀಡಿದರು.

ರಾಜ್ಯಕ್ಕಿಲ್ಲ ನಡ್ಡಾ-ಶಾ ಭೇಟಿ:

ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಭೇಟಿಗೆ ಇನ್ನೂ ಸಮಯ ನಿಗದಿಯಾಗಿಲ್ಲ. ಸದ್ಯ ತಮಿಳುನಾಡಿಗೆ ಮಾತ್ರ ಭೇಟಿ ನೀಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details