ಬೆಂಗಳೂರು:ಐದು ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಸಂಬಂಧ ರಚಿಸಲಾಗಿರುವ ‘ಯುವ ಸಮೃದ್ಧಿ ಮಿಷನ್’ ಕಾರ್ಯಪಡೆಯು ನಿನ್ನೆ ಸರ್ಕಾರಕ್ಕೆ ಮಧ್ಯಾಂತರ ವರದಿ ಸಲ್ಲಿಸಿದ್ದು, ‘ಕರ್ನಾಟಕ ವೃತ್ತಿ ಮಾರ್ಗದರ್ಶನ ಉತ್ಕೃಷ್ಟತಾ ಕೇಂದ್ರ’ವನ್ನು ಸ್ಥಾಪಿಸಲು ಶಿಫಾರಸು ಮಾಡಿದೆ.
ವಿಕಾಸಸೌಧದಲ್ಲಿ ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯುವ ಸಮೃದ್ಧಿ ಮಿಷನ್ ತಂಡದ ಅಧಿಕಾರಿಗಳು ಮಧ್ಯಂತರ ವರದಿ ಸಲ್ಲಿಸಿ, ಇನ್ನು 10 ದಿನಗಳಲ್ಲಿ ಅಂತಿಮ ವರದಿ ಸಿದ್ಧವಾಗಲಿದೆ ಎಂದು ತಿಳಿಸಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮಾದರಿಯಲ್ಲೇ ಈ ವೃತ್ತಿ ಮಾರ್ಗದರ್ಶನ ಉತ್ಕೃಷ್ಟತಾ ಕೇಂದ್ರ ಕೂಡ ಸರ್ಕಾರಿ-ಖಾಸಗಿ ಪಾಲುದಾರಿಕೆಯಲ್ಲಿ ಅಸ್ತಿತ್ವಕ್ಕೆ ಬಂದು ಸೆಕ್ಷನ್ 8 ಕಂಪನಿಯಾಗಿರಬೇಕು ಎಂದು ಕಾರ್ಯಪಡೆ ಅಭಿಪ್ರಾಯಪಟ್ಟಿದೆ. “ಪ್ರಸ್ತುತ ರಾಜ್ಯದಲ್ಲಿ ಯಾವುದೇ ಏಕೀಕೃತ ವೃತ್ತಿ ಮಾರ್ಗದರ್ಶನ ಕೇಂದ್ರ ಇಲ್ಲವಾಗಿದೆ. ಇರುವ ಕೇಂದ್ರಗಳು ಪ್ರತ್ಯೇಕ ಘಟಕಗಳಂತೆ ಬಿಡಿಬಿಡಿಯಾಗಿ ಕೆಲಸ ಮಾಡುತ್ತಿವೆ. ಆದರೆ ಶಾಲಾ ಹಂತದಿಂದ ಶುರುವಾಗಿ ಕಾಲೇಜು ಹಂತ, ಮುಂದುವರೆದು ಉದ್ಯೋಗ ಗಳಿಸುವ ಹಂತದವರೆಗೆ ಮಾರ್ಗದರ್ಶನ ನೀಡುವುದಕ್ಕಾಗಿ ಸಾಮಾನ್ಯ ರೂಪುರೇಷೆ ಸಿದ್ಧಪಡಿಸುವ ಅಗತ್ಯವಿದೆ ಎಂದು ಕಾರ್ಯಪಡೆ ಪ್ರತಿಪಾದಿಸಿದೆ.
ಇದನ್ನೂ ಓದಿ:ಅಮೆರಿಕಾದಲ್ಲಿ ಮೊದಲ 'ಒಮಿಕ್ರೋನ್' ಪ್ರಕರಣ ಪತ್ತೆ
ಡಿಜಿಟಲ್ ಕೌಶಲಗಳನ್ನು ಮೈಗೂಡಿಸಿ ಉದ್ಯಮಶೀಲತಾ ಧೋರಣೆ ಬೆಳೆಸುವುದು, ವೃತ್ತಿ ಮಾಹಿತಿ ನೀಡುವುದು ಹಾಗೂ ಮಾರ್ಗದರ್ಶನ, ಜಿಲ್ಲೆಗಳಲ್ಲಿ ಉದ್ಯಮಶೀಲ ಪರಿಸರ ನಿರ್ಮಾಣ, ಕೃಷಿ ಹಾಗೂ ಕೃಷಿ ತಾಂತ್ರಿಕತೆಗೆ ಉತ್ತೇಜನ, ಈ ಅಂಶಗಳ ಬಗ್ಗೆ ಗಮನ ಕೇಂದ್ರೀಕರಿಸಲು ಕಾರ್ಯಪಡೆಯು ಸಲಹೆ ನೀಡಿದೆ.
6ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲಗಳನ್ನು ಹಾಗೂ 21ನೇ ಶತಮಾನದ ಕೌಶಲಗಳನ್ನು ಕಲಿಸುವುದಕ್ಕಾಗಿ ರಾಜ್ಯದಾದ್ಯಂತ ‘ವೈಡಬ್ಲು ಎನ್ ಎಕ್ಸ್ ಟಿ ಹಾಗೂ ಯುವ್ಹಾ’ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕೆಂದು ಸಲಹೆ ಕೊಡಲಾಗಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ/ ಪಿಯು ಮಂಡಳಿ/ ಐಟಿಐಗಳು ಯುನಿಸೆಫ್ ಜೊತೆ ಒಡಂಬಡಿಕೆಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವ ಅಶ್ವತ್ಥ ನಾರಾಯಣ ವಿವರಿಸಿದರು.