ಕರ್ನಾಟಕ

karnataka

By

Published : Jul 24, 2023, 3:46 PM IST

Updated : Jul 24, 2023, 9:20 PM IST

ETV Bharat / state

ಹೈಕೋರ್ಟ್​ ಜಡ್ಜ್​​ಗಳನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ.. ವಾಟ್ಸಾಪ್ ಮೂಲಕ ಬೆದರಿಕೆ ಹಾಕಿದ್ದ ಅಪರಿಚಿತನ ವಿರುದ್ಧ ಪ್ರಕರಣ

Bengaluru crime: ಹೈಕೋರ್ಟ್ ಸಾರ್ವಜನಿಕ ಸಂಪರ್ಕಾಧಿಕಾರಿಗೆ ನ್ಯಾಯಮೂರ್ತಿಗಳನ್ನ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

files-case-against-the-stranger-for-threatening-to-kill-judges-in-bengaluru
ಜಡ್ಜ್​​ಗಳನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ: ವಾಟ್ಸಾಪ್ ಮೂಲಕ ಬೆದರಿಕೆ ಹಾಕಿದ್ದ ಅಪರಿಚಿತನ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: 50 ಲಕ್ಷ ಹಣ ಕಳಿಸದಿದ್ದರೆ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಕೊಲೆ ಮಾಡಿಸುವುದಾಗಿ ಹೈಕೋರ್ಟ್​ನ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ವಾಟ್ಸಾಪ್ ಮೂಲಕ ಬೆದರಿಕೆ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೈಕೋರ್ಟ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಸಂಪರ್ಕಾಧಿಕಾರಿ ಮುರುಳಿ ಎಂಬುವರಿಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಬೆದರಿಕೆ ಹಾಕಿದ ಆರೋಪದಡಿ ನೀಡಿದ ದೂರನ್ನು ಆಧರಿಸಿ ಐಟಿ ಕಾಯ್ದೆ ಹಾಗೂ ಅಪರಾಧ ಸಂಚು ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್​ಗಳಡಿ ಪೊಲೀಸರು ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಇದೇ ತಿಂಗಳು 12 ರಂದು ಸಂಜೆ 7 ಗಂಟೆ ಸುಮಾರಿಗೆ ಅನಾಮಧೇಯ ವ್ಯಕ್ತಿಯೊಬ್ಬ, ಮುರುಳಿ ಅವರ ವಾಟ್ಸಾಪ್​ಗೆ ಸಂದೇಶ ಕಳುಹಿಸಿದ್ದು, ಇದರಲ್ಲಿ ಎಬಿಎಲ್ ಆಲೈಡ್ ಲಿಮಿಟೆಡ್ ಪಾಕಿಸ್ತಾನ ಬ್ಯಾಂಕ್ ಅಕೌಂಟ್ ನಂಬರ್ ಕಳುಹಿಸಿ 50 ಲಕ್ಷ ಹಣ ಕಳುಹಿಸಬೇಕು. ಒಂದು ವೇಳೆ ಹಣ ಹಾಕದಿದ್ದರೆ ಹೈಕೋರ್ಟ್ ಜಡ್ಜ್​ಗಳಾದ ಮೊಹಮ್ಮದ್ ನವಾಜ್, ಎಚ್. ಟಿ. ನರೇಂದ್ರ ಪ್ರಸಾದ್, ಅಶೋಕ ಜಿ. ನಿಜಗಣ್ಣನವರ್, ಎಚ್‌. ಪಿ. ಸಂದೇಶ್, ಕೆ. ನಟರಾಜನ್ ಹಾಗೂ ವೀರಪ್ಪ ಅವರನ್ನು ದುಬೈ ಗ್ಯಾಂಗ್ ನಿಂದ ಹತ್ಯೆ ಮಾಡಿಸುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದ. ಅಲ್ಲದೇ ಹೈ ಇಂಡಿಯನ್ ಹಮಾರಾ ಆಪ್ ಕೇ ಶೂಟರ್ ಹೈ ಎಂದು ಹಿಂದಿ, ಇಂಗ್ಲಿಷ್ ಹಾಗೂ ಉರ್ದುವಿನಲ್ಲಿ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಸದ್ಯ ಸೆಂಟ್ರಲ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸುಮೋಟೋ ಪ್ರಕರಣ ದಾಖಲಿಸಲು ವಕೀಲರ ಸಂಘ ಆಗ್ರಹ:ನ್ಯಾಯಮೂರ್ತಿಗಳ ಕೊಲೆ ಬೆದರಿಕೆಯು ಸಾರ್ವಜನಿಕರು ಮತ್ತು ವಕೀಲರ ವಲಯದಲ್ಲಿ ಆಘಾತಕ್ಕೆ ಕಾರಣವಾಗಿದ್ದು, ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೊಳಪಡಿಸಬೇಕು ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಬೆಂಗಳೂರು ವಕೀಲರ ಸಂಘ ಬರೆದಿದೆ.

ನ್ಯಾಯಾಂಗದಿಂದ ದಿಟ್ಟ ಮತ್ತು ನಿರ್ಭೀತ ತೀರ್ಪುಗಳು ಬರಬೇಕಾಗಿದ್ದು, ಸ್ವತಂತ್ರ ಸಂಸ್ಥೆಯಾಗಿ ಮುಂದುವರೆಯಬೇಕಾಗಿದೆ. ಆದರೆ, 6 ಮಂದಿ ನ್ಯಾಯಾಮೂರ್ತಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಜೊತೆಗೆ, ದೊಡ್ಡ ಮೊತ್ತದ ಹಣಕ್ಕಾಗಿ ವಾಟ್ಸ್​ಆ್ಯಪ್​ ಮೂಲಕ ಸಂದೇಶ ರವಾನಿಸಿ ಬೇಡಿಕೆ ಇಟ್ಟಿದ್ದಾರೆ. ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಹೊರಗಿನ ಶಕ್ತಿಗಳು ನ್ಯಾಯಾಂಗ ವಲಯದಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಅವಕಾಶ ನೀಡಿದಂತಾಗಲಿದೆ ಎಂದು ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

ಅಲ್ಲದೇ, ಪ್ರಸ್ತುತ ಸಂದರ್ಭದಲ್ಲಿ ನ್ಯಾಯಮೂರ್ತಿಗಳಿಗೆ ಒದಗಿಸಿರುವ ರಕ್ಷಣೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ ಪರಿಶೀಲಿಸುವ ಅಗತ್ಯತೆ ಎದುರಾಗಿದೆ. ಆಧುನಿಕ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಸವಾಲುಗಳನ್ನು ಎದುರಿಸಲಾಗುತ್ತಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕಾಗಿದೆ ಎಂದು ಪತ್ರದಲ್ಲಿ ಕೋರಿದ್ದಾರೆ.

ನ್ಯಾಯಾಂಗ ಕ್ಷೇತ್ರದ ಮೇಲೆ ಈ ರೀತಿಯಲ್ಲಿ ಬೆದರಿಕೆ ಹಾಕಿದಲ್ಲಿ ಜನತೆ ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಗಲಿದೆ. ಆದ್ದರಿಂದ ಅಪರಾಧಿಗಳನ್ನು ವಿಚಾರಣೆಗೊಳ್ಳಪಡಿಸಬೇಕಾದ ಅಗತ್ಯವಿದೆ ಮತ್ತು ನ್ಯಾಯಾಧೀಶರಿಗೆ ರಕ್ಷಣೆ ಖಚಿತಪಡಿಸಿಕೊಳ್ಳಲು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಪ್ರಕರಣ ವಿಚಾರಣೆಗೊಳಪಡಿಸಬೇಕು ಎಂದು ವಕೀಲರ ಸಂಘವು ಆಗ್ರಹಿಸಿದೆ.

ಇದನ್ನೂ ಓದಿ:ಬೆಂಗಳೂರು: ಪೊಲೀಸರ ಸೋಗಿನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯ ಸುಲಿಗೆ ಮಾಡಿದ್ದ ಆರೋಪಿಗಳ ಬಂಧನ

Last Updated : Jul 24, 2023, 9:20 PM IST

ABOUT THE AUTHOR

...view details