ಕರ್ನಾಟಕ

karnataka

ETV Bharat / state

ಡಿಕೆಶಿ ಬಳಿ ನಾನು ಹೋಗಿಲ್ಲ, ಅವರೇ ನನ್ನ ಕಾಲಿಗೆ ಬಿದ್ದಿರುವ ವಿಡಿಯೋ ಪ್ರದರ್ಶಿಸಲು ಸಿದ್ದ: ಸಿ.ಪಿ ಯೋಗೇಶ್ವರ್ ಸವಾಲು

ಡಿ.ಕೆ. ಶಿವಕುಮಾರ್ ಬಳಿ ನಾನು ಹೋಗಿಲ್ಲ. ಬದಲಾಗಿ ಅವರೇ ಹಲವು ಬಾರಿ ನನ್ನ ಕಾಲಿಗೆ ಬಿದ್ದಿರುವ ವಿಡಿಯೋ ಪ್ರದರ್ಶಿಸಲು ನಾನು ಸಿದ್ದ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿಪಿ ಯೋಗೇಶ್ವರ್ ಹೊಸ ಬಾಂಬ್​ ಸಿಡಿಸಿದ್ದಾರೆ.

By

Published : Jul 31, 2020, 9:59 AM IST

cp yogeshwar
cp yogeshwar

ಬೆಂಗಳೂರು:ನಾನು ಡಿ.ಕೆ ಶಿವಕುಮಾರ್ ಮನೆ ಬಾಗಿಲಿಗೆ ಹೋಗಿಲ್ಲ, ಆರೋಪ ಮಾಡುವವರು ಅದನ್ನು ಸಾಬೀತುಪಡಿಸಬೇಕು. ನಾನು ಬೇಕಿದ್ದರೆ ವಿವಿಧ ರೀತಿಯ ಅನುಕೂಲಗಳಿಗಾಗಿ ಶಿವಕುಮಾರ್ ಅವರು ನನ್ನ ಕಾಲಿಗೆ ಹಲವಾರು ಬಾರಿ ಬಿದ್ದಿರುವ ವಿಡಿಯೋ ದೃಶ್ಯಗಳನ್ನು ರಾಜ್ಯದ ಜನತೆ ಮುಂದೆ ಪ್ರದರ್ಶಿಸಲು ಸಿದ್ದ ಎಂದು ಸಿ.ಪಿಯೋಗೇಶ್ವರ್ ಸವಾಲು ಹಾಕಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪಕ್ಕೆ ಸ್ಪಷ್ಟೀಕರಣ ನೀಡಿರುವ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿಪಿ ಯೋಗೇಶ್ವರ್, ಬಿಜೆಪಿ ಪಕ್ಷ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ತಮಗೆ ವಿಧಾನ ಪರಿಷತ್ ಸ್ಥಾನ ಹಾಗೂ ಸಚಿವ ಸ್ಥಾನ ನೀಡುವ ಬಗ್ಗೆ ಆರು ತಿಂಗಳ ಹಿಂದೆಯೇ ದೆಹಲಿ ಹಾಗೂ ರಾಜ್ಯದ ವರಿಷ್ಠರು ಸ್ಪಷ್ಟ ಭರವಸೆ ನೀಡಿದ್ದರು ಎಂದಿದ್ದಾರೆ.

ಡಿಕೆಶಿ ಬಳಿ ನಾನು ಹೋಗಿಲ್ಲ ಎಂದ ಸಿ.ಪಿ ಯೋಗೇಶ್ವರ್

ಮೂರು ತಿಂಗಳ ಹಿಂದೆಯೇ ವಿಧಾನಪರಿಷತ್ತಿಗೆ ನಾಮ ನಿರ್ದೇಶನ ಮಾಡುವ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮನೆಗೆ ಕರೆದು ಹೇಳಿದ್ದರು. ನಾನು ಕಳೆದ ಬಾರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿ ಪರಾಜಿತ ನಾಗಿದ್ದೇನೆ. ನಾನು ಬಿಜೆಪಿ ತತ್ವಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದೇನೆ. ಆದರೆ, ಡಿ.ಕೆ ಶಿವಕುಮಾರ್ ಸಹೋದರರು ಭಾರತೀಯ ಜನತಾ ಪಕ್ಷ, ರಾಜ್ಯ ಸರ್ಕಾರ ಹಾಗೂ ನನ್ನ ನಡುವೆ ವಿಷ ಬೀಜ ಬಿತ್ತುವ ವಿಫಲ ಪ್ರಯತ್ನ ಮಾಡುತ್ತಿದ್ದಾರೆ, ಅವರು ಅದರಲ್ಲಿ ಯಶಸ್ವಿಯಾಗುವುದಿಲ್ಲ ಎಂದು ತಿರುಗೇಟು ನೀಡಿದರು.

ವಿಧಾನಸಭೆ ಉಪ ಚುನಾವಣೆ ಮತ್ತು ಲೋಕಸಭಾ ಚುನಾವಣಾ ಕಾರ್ಯತಂತ್ರಗಳಲ್ಲಿ ಹಾಗೂ ಪಕ್ಷ ಸಂಘಟನೆಯಲ್ಲಿ ನನ್ನದೇ ಕೊಡುಗೆಯನ್ನು ಪಕ್ಷಕ್ಕೆ ನೀಡುತ್ತಾ ಬಂದಿದ್ದೇನೆ. ಆದರೆ, ನಾನು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಮಾಧ್ಯಮಗಳ ಮುಂದೆ ಬರುತ್ತಿರಲಿಲ್ಲ. ಇಷ್ಟೆಲ್ಲ ಇರುವಾಗ 30 ತಿಂಗಳ ನಂತರ ಬರಲಿರುವ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವಂತೆ ನಾನು ಈಗಲೇ ಏಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನೆಗೆ ಹೋಗಿ ಟಿಕೆಟ್ ಕೇಳಲಿ ಎಂದು ಪ್ರಶ್ನಿಸಿದ್ದಾರೆ.

ವಿಡಿಯೋ ದೃಶ್ಯಗಳನ್ನ ಬಿಡುಗಡೆ ಮಾಡಲಿ!

ಶಿವಕುಮಾರ್ ಅವರ ಹಸಿ ಸುಳ್ಳನ್ನು ಮೂರ್ಖರೂ ನಂಬುವುದಿಲ್ಲ, ಇನ್ನು ಜನಸಾಮಾನ್ಯರು ನಂಬುವ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಒಂದು ವೇಳೆ, ಶಿವಕುಮಾರ್ ಮಾಧ್ಯಮಗಳ ಎದುರು ಹೇಳಿರುವುದು ನಿಜವಾದರೆ ಅದನ್ನು ಸಾಬೀತು ಮಾಡಲು ಅವರ ಮನೆ ತುಂಬಾ ಹಾಗೂ ರಸ್ತೆಯಲ್ಲಿ ಕ್ಯಾಮರಾಗಳನ್ನು ಹಾಕಲಾಗಿದೆ ದಯವಿಟ್ಟು ಅವರು ಸಾಕ್ಷಿಯನ್ನು ರಾಜ್ಯದ ಜನತೆ ಮುಂದೆ ಇಡಲಿ ಎಂದು ಒತ್ತಾಯಿಸಿದರು.

ಡಿಕೆಶಿಗೆ ಯೋಗೇಶ್ವರ್​ ಸವಾಲು

ಈ ಹಿಂದೆ ಹಲವಾರು ಬಾರಿ ಹಣ, ಆಸ್ತಿ, ಅಧಿಕಾರ, ಪಕ್ಷ ಸಂಘಟನೆ ಸೇರಿದಂತೆ ವಿವಿಧ ರೀತಿಯ ಅನುಕೂಲಗಳಿಗಾಗಿ ಶಿವಕುಮಾರ್ ಅವರು ನನ್ನ ಕಾಲಿಗೆ ಹಲವಾರು ಬಾರಿ ಬಿದ್ದಿರುವ ವಿಡಿಯೋ ದೃಶ್ಯಗಳು ಇವೆ. ಅವರು ಬೇಕೆಂದರೆ ರಾಜ್ಯದ ಜನತೆ ಮುಂದೆ ವಿಡಿಯೋ ದೃಶ್ಯಗಳನ್ನು ಪ್ರದರ್ಶಿಸುವೆ ಎಂದು ಯೋಗೇಶ್ವರ್ ಸವಾಲು ಹಾಕಿದರು.

ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಸಂಪುಟವನ್ನು ವಿಸ್ತರಣೆ ಮಾಡಲಿದ್ದಾರೆ ಎಂಬ ಸುಳಿವನ್ನು ಅರಿತಿರುವ ಡಿಕೆ ಶಿವಕುಮಾರ್ ಬಿಜೆಪಿ ಮುಖಂಡರು ನನಗೆ ಸಚಿವ ಪದವಿ ನೀಡುವುದನ್ನು ತಪ್ಪಿಸಲು ದುರುದ್ದೇಶದಿಂದ ಈ ರೀತಿಯ ನಿರಾಧಾರ ಆರೋಪ ಮಾಡಿದ್ದಾರೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿರುವ ಡಿ.ಕೆ ಶಿವಕುಮಾರ್ ಇಂತಹ ನಿರಾಧಾರ ಆರೋಪಗಳನ್ನು ಮಾಡಿರುವುದರಿಂದ ಆ ಸ್ಥಾನಕ್ಕೆ ಹಾಗೂ ಕುರ್ಚಿಗೆ ಕಳಂಕ ಬಂದಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗೌರವವನ್ನೇ ಅವರು ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹೊಟ್ಟೆಕಿಚ್ಚು ಹಾಗೂ ಅಸಹನೆ ಇರುವವರಿಗೆ ಇತರರು ಬೆಳೆಯುವುದನ್ನು ನೋಡುವ ವ್ಯವಧಾನವಿರುವುದಿಲ್ಲ. ತಮ್ಮ ನೀಚತನವನ್ನು ಮತ್ತೆ ಮತ್ತೆ ಪ್ರದರ್ಶಿಸುವ ಮೂಲಕ ತಾವು ಈ ಹಿಂದಿನ ಶಿವಕುಮಾರ್ ಎಂಬುದನ್ನು ಅವರೇ ಪದೇಪದೇ ಸಾಬೀತುಪಡಿಸಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಇಂತಹದೇ ಆರೋಪಗಳನ್ನು ಮಾಡುವುದು ಮುಂದುವರಿಸಿದರೆ ಬೆಂಗಳೂರು ಹಾಗೂ ರಾಮನಗರದಲ್ಲಿ ಸುದ್ದಿಗೋಷ್ಠಿ ಕರೆದು ಅವರ ರಾಜಕೀಯ ಜೀವನದ ಬಗ್ಗೆ ರಾಜ್ಯದ ಜನತೆ ಮುಂದೆ ಹೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಕಚೇರಿಯಲ್ಲಿ ನನ್ನ ಮೇಲೆ ಆರೋಪ ಮಾಡಿ ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಸ್ಪಷ್ಟೀಕರಣ ಹಾಗೂ ಉತ್ತರ ನೀಡದೇ ಶಿವಕುಮಾರ್ ಪಲಾಯನ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರ ಸಹೋದರ ಡಿ.ಕೆ ಸುರೇಶ್ ಮಾಡಿರುವ ಎಲ್ಲಾ ರಾಜಕೀಯ ಆರೋಪಗಳು ಸುಳ್ಳು. ನಾನು ಸಿ.ಎಂ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸುವ ಪ್ರಯತ್ನ ಮಾಡಿಲ್ಲ. ಶಿವಕುಮಾರ್ ಪರ ಬ್ಯಾಟಿಂಗ್ ಮಾಡುವ ಭರದಲ್ಲಿ ನನ್ನ ಮೇಲೆ ಇಲ್ಲ ಸಲ್ಲದ ಹೇಳಿಕೆಯನ್ನು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ನೀಡಿದ್ದಾರೆ ಎಂದು ಅವರ ಆರೋಪವನ್ನು ತಳ್ಳಿಹಾಕಿದರು.

ABOUT THE AUTHOR

...view details