ಬೆಂಗಳೂರು : ನಮ್ಮೆಲ್ಲರ ಬದುಕಿನ ಜೀವಂತ ಪವಾಡ ಅಂದರೆ ಅದು ಎರಡಕ್ಷರದ ಅಮ್ಮ. ಸಾಟಿಗೆ ಸಿಗದ ಅತೀವ ಪ್ರೀತಿ, ಕಾಳಜಿ ತೋರುವ ಅಮ್ಮಂದಿರಿಗೆ ಇಂದು ಅವರದ್ದೇ ದಿನ. ಇಂದು ವಿಶ್ವ ತಾಯಂದಿರ ದಿನ. ಎಲ್ಲವೂ ಸಹಜ ಸ್ಥಿತಿಯಲ್ಲಿ ಇದ್ದಿದ್ರೆ ಅದೆಷ್ಟೋ ಮಂದಿ ಸಂಭ್ರಮದ ದಿನವನ್ನಾಗಿ ಆಚರಿಸುತ್ತಿದರು. ಆದರೆ, ಕೊರೊನಾ ಕರಾಳ ದಿನದಿಂದಾಗಿ ಇಂದು ಎಲ್ಲ ಸಂತಸ ಮಂಕಾಗಿದೆ.
ಇದರ ನಡುವೆ ತಾಯಂದಿರ ಋಣ ತೀರಿಸಲು ಬೆಂಗಳೂರಿನ ನಿವಾಸಿ ಜಯರಾಜ್ ನಾಯ್ಡು ಮತ್ತು ಮಂಜಳಾ ಜಯರಾಜ್ ನಾಯ್ಡು ದಂಪತಿ ನಿರ್ಗತಿಕರಲ್ಲಿ ತಾಯಿ ಪ್ರೀತಿ ಕಂಡರು. ಇದಕ್ಕಾಗಿ ಇವರು ಮಾಡಿದ್ದು ನಿರ್ಗತಿಕರಿಗೆ ಹಾಗೂ ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ಗೆ ಸೀರೆ ಹಂಚಿ ಸಂಭ್ರಮಿಸಿದರು. ಸುಮಾರು 50ಕ್ಕೂ ಹೆಚ್ಚು ಮಹಿಳೆಯರಿಗೆ ಹೊಸ ಸೀರೆ ಖರೀದಿಸಿ, ನಗರದ ವಿವಿಧೆಡೆ ಹಂಚಿದರು. ಜೊತೆಗೆ ಹಸಿವಿನಿಂದ ಕಂಗಾಲಾಗಿದ್ದ ಬಡವರಿಗೆ, ನಿರ್ಗತಿಕರಿಗೆ ಹೊತ್ತಿನ ಊಟ ನೀಡಿದರು.