ಕರ್ನಾಟಕ

karnataka

By

Published : Mar 8, 2022, 10:13 PM IST

ETV Bharat / state

ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳಕ್ಕೆ ಪರಿಷತ್ ಸದಸ್ಯರ ಒಕ್ಕೊರಳ ಒತ್ತಡ

ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಸದನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು ಸಹಮತ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿ ಸದಸ್ಯರ ವೇತನ ಹೆಚ್ಚಳ ಆಗಲೇಬೇಕು ಎಂದು ಸಭಾಪತಿಗಳ ಮೂಲಕ ರಾಜ್ಯಸರ್ಕಾರಕ್ಕೆ ಒತ್ತಡ ಹೇರಿದರು.

salem ahamad
ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್

ಬೆಂಗಳೂರು:ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳಕ್ಕೆ ವಿಧಾನಪರಿಷತ್​ನಲ್ಲಿ ಪಕ್ಷಾತೀತ ಬೆಂಬಲ ದೊರೆಯಿತು.

ಗ್ರಾಮ ಪಂಚಾಯಿತಿ ಸದಸ್ಯರ ಮೂಲಕ ಆಯ್ಕೆಯಾದ ವಿಧಾನಪರಿಷತ್ ಸದಸ್ಯರು ನಿಲುವಳಿ ಸೂಚನೆಯಡಿ ಗ್ರಾಮ ಪಂಚಾಯಿತಿ ಸದಸ್ಯರ ವೇತನ ಹೆಚ್ಚಳ ಪ್ರಸ್ತಾವನೆ ಮೇಲೆ ಚರ್ಚೆಗೆ ಅವಕಾಶ ನೀಡಬೇಕೆಂದು ಸಭಾಪತಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು. ಆದರೆ, ನಿಲುವಳಿ ಸೂಚನೆ ಬದಲು ನಿಯಮ 330ರಡಿ ಸಭಾಪತಿಗಳು ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಇಂದು ಗ್ರಾಮ ಪಂಚಾಯಿತಿ ಸದಸ್ಯರ ಪರ ವಿಧಾನಪರಿಷತ್​ನಲ್ಲಿ ಒಕ್ಕೊರಳಿನ ಧ್ವನಿ ಕೇಳಿಬಂತು.

ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಸದನದಲ್ಲಿ ವಿಚಾರವನ್ನು ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು ಸಹಮತ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿ ಸದಸ್ಯರ ವೇತನ ಹೆಚ್ಚಳ ಆಗಲೇಬೇಕು ಎಂದು ಸಭಾಪತಿಗಳ ಮೂಲಕ ರಾಜ್ಯಸರ್ಕಾರಕ್ಕೆ ಒತ್ತಡ ಹೇರಿದರು.

ಸದಸ್ಯರಿಗೆ ತಲಾ 1000 ಗೌರವಧನ:ವಿಷಯ ಮಂಡಿಸಿದ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್, ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುವ ಗೌರವಧನ ಅತ್ಯಂತ ಕಡಿಮೆ ಇದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ 3000, ಉಪಾಧ್ಯಕ್ಷರಿಗೆ 2000 ಹಾಗೂ ಸದಸ್ಯರಿಗೆ ತಲಾ 1000 ಗೌರವಧನ ನೀಡಲಾಗುತ್ತಿದೆ.

ಇದನ್ನು ಕೇರಳ ಮಾದರಿಯಲ್ಲಿ ಹೆಚ್ಚಳ ಮಾಡಬೇಕು. ಕೇರಳದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಸರ್ಕಾರಿ ಕಾರು ನೀಡುವ ಕಾರ್ಯ ಮಾಡುವ ಭರವಸೆ ಸಿಕ್ಕಿದೆ. ಇಲ್ಲಿ ಅಷ್ಟು ಅನುಕೂಲ ನೀಡದಿದ್ದರೂ ವೇತನದ ವಿಚಾರದಲ್ಲಿ ಉತ್ತಮ ಸೌಲಭ್ಯ ಒದಗಿಸಬೇಕು. ಕೇರಳ ಮಾದರಿ ಅಳವಡಿಸಿಕೊಂಡರೂ ತಪ್ಪಿಲ್ಲ ಎಂದರು.

ಕಾಂಗ್ರೆಸ್ ಸದಸ್ಯ ಚನ್ನರಾಜು ಹಟ್ಟಿಹೊಳಿ ಮಾತನಾಡಿ, ರಾಜ್ಯದ ಗ್ರಾಮ ಪಂಚಾಯಿತಿ ಸದಸ್ಯರ ವಿವರ ಹಾಗೂ ಅವರಿಗೆ ನೀಡುವ ವೇತನ ಹೆಚ್ಚಳದಿಂದಾಗಿ ಸರ್ಕಾರದ ಮೇಲೆ ಬರುವವರನ್ನು ಸಹ ಸವಿಸ್ತಾರವಾಗಿ ವಿವರಿಸಿದರು.

ಒಂದು ಮಾದರಿ ರಾಜ್ಯವಾಗಬೇಕೆಂದು ಸಲಹೆ:ಬಿಜೆಪಿ ಹಿರಿಯ ಸದಸ್ಯ ಪ್ರಾಣೇಶ್ ಮಾತನಾಡಿ, ಕೇರಳ ಮಾದರಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ವೇತನ ನೀಡುವ ಬದಲು ಅದಕ್ಕಿಂತಲೂ ಹೆಚ್ಚಿನ ವೇತನ ನೀಡುವ ಮೂಲಕ ಕರ್ನಾಟಕ ಒಂದು ಮಾದರಿ ರಾಜ್ಯವಾಗಬೇಕು ಎಂದು ಸಲಹೆಯಿತ್ತರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸಮ್ಮುಖದಲ್ಲಿ ನಡೆದ ಸುದೀರ್ಘ ಚರ್ಚೆ ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಮುಂದುವರಿಯಲಿದ್ದು, ಇತ್ತೀಚೆಗಷ್ಟೇ ಗ್ರಾಮ ಪಂಚಾಯಿತಿ ಸದಸ್ಯರುಗಳ ಮೂಲಕ ಆಯ್ಕೆಯಾಗಿರುವ 25 ಸದಸ್ಯರು ಮಾತನಾಡುವ ಕಾರ್ಯ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ 250 ರೂ. ಗೌರವ ಧನ ನೀಡುವ ಕಾರ್ಯವನ್ನು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆರಂಭಿಸಿದ್ದರು.

ಇದನ್ನು ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಎರಡು ಹಂತದಲ್ಲಿ ಗೌರವಧನ ಹೆಚ್ಚಿಸಿದ್ದರು. 2014ರಲ್ಲಿ 250ರಿಂದ 500 ರೂ.ಗೆ ಗೌರವಧನ ಹೆಚ್ಚಳ ಗೊಳಿಸಿದ್ದರೆ 2017ರಲ್ಲಿ ಇದನ್ನ 1000 ರೂಪಾಯಿಗೆ ಹೆಚ್ಚಿಸಿದ್ದಾರೆ. ಇದೀಗ ಕಳೆದ ಐದು ವರ್ಷದಿಂದ ಗ್ರಾಮ ಪಂಚಾಯತಿ ಸದಸ್ಯರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಗೌರವಧನ ಪರಿಷ್ಕರಣೆ ಆಗಿಲ್ಲ. ಈಗಲಾದರೂ ಈ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು ಎಂದು ಸದಸ್ಯರಿಂದ ಒತ್ತಾಯ ಕೇಳಿಬಂತು. ಭೋಜನ ವಿರಾಮದ ಬಳಿಕ ಇನ್ನಷ್ಟು ಸದಸ್ಯರು ಮಾತನಾಡಲಿದ್ದು, ಇದಕ್ಕೆ ಸಚಿವರು ಉತ್ತರ ನೀಡಲಿದ್ದಾರೆ.

ಇದನ್ನೂ ಓದಿ:ಬೊಮ್ಮಾಯಿಯವರದ್ದು ನಿರಾಶಾದಾಯಕ, ಅಭಿವೃದ್ಧಿ ವಿರುದ್ಧವಾದ ಬಜೆಟ್​: ಸಿದ್ದರಾಮಯ್ಯ

For All Latest Updates

TAGGED:

ABOUT THE AUTHOR

...view details