ಕರ್ನಾಟಕ

karnataka

ಕೊರೊನಾ ಎಫೆಕ್ಟ್​:​ ಗಾಜಿನ ಬಾಟಲ್​ ಜಾಗಕ್ಕೆ ಬರ್ತಿವೆ ಪ್ಲಾಸ್ಟಿಕ್ ವಾಟರ್ ಬಾಟಲ್​​ಗಳು!

By

Published : May 17, 2020, 4:36 PM IST

ಕೊರೊನಾ ಸೋಂಕು ಇಷ್ಟು ದಿನ ಬಂದ್​ ಆಗಿದ್ದ ಪ್ಲಾಸ್ಟಿಕ್ ವಾಟರ್ ಬಾಟಲ್ ಬಳಕೆ ನಿರ್ಬಂಧವನ್ನೇ ಸಡಿಲಿಕೆಯಾಗುವಂತೆ ಮಾಡಿದೆ. ಸಿಎಂ ಕಚೇರಿ ವಿಧಾನದಲ್ಲಿ ನಡೆಯುವ ಸಭೆಗಳಲ್ಲಿ ಟೇಬಲ್ ಮೇಲೆ ಇರುತ್ತಿದ್ದ ಗಾಜಿನ ನೀರಿನ ಬಾಟಲಿಗಳ ಜಾಗದಲ್ಲಿ ಮತ್ತೆ ಏಕ ಬಳಕೆಯ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಬಂದು ಕುಳಿತಿವೆ.

corona effect
ಗಾಜಿನ ನೀರಿನ ಬಾಟಲಿ ಜಾಗಕ್ಕೆ ಬರ್ತಿವೆ ಪ್ಲಾಸ್ಟಿಕ್ ವಾಟರ್ ಬಾಟಲ್​​ಗಳು

ಬೆಂಗಳೂರು:ಕೊರೊನಾ ವೈರಸ್​ ವಿರುದ್ಧದ ಹೋರಾಟ ಪರೋಕ್ಷವಾಗಿ ಪ್ಲಾಸ್ಟಿಕ್ ನಿರ್ಬಂಧದಂತಹ ನಿರ್ಧಾರವನ್ನೇ ಸರ್ಕಾರ ಸಡಿಲಿಕೆ ಮಾಡುವಂತೆ ಮಾಡಿದೆ. ಏಕ ಬಳಕೆಯ ವಾಟರ್ ಬಾಟಲ್ ಬಳಕೆ ನಿರ್ಧಾರವನ್ನು ಸರ್ಕಾರವೇ ಬದಲಿಸಿಕೊಂಡಿದ್ದು, ಗಾಜಿನ ನೀರಿನ ಬಾಟಲಿ ಜಾಗಕ್ಕೆ ಮತ್ತೆ ಪ್ಲಾಸ್ಟಿಕ್ ವಾಟರ್ ಬಾಟಲ್ ಎಂಟ್ರಿ ಕೊಟ್ಟಿದೆ.

ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆಗೆ ಬ್ರೇಕ್ ಹಾಕುವ ಭಾಗವಾಗಿ ವಿಧಾನಸೌಧ ಹಾಗೂ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ, ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ಬಾಟಲ್​​​​​​​​ನಲ್ಲಿನ ಮಿನರಲ್ ವಾಟರ್ ಬದಲು ಗಾಜಿನ ಬಾಟಲಿಯಲ್ಲಿ ಖನಿಜಯುಕ್ತ ಕುಡಿಯುವ ನೀರನ್ನು ವಿತರಿಸುವ ಪರಿಪಾಠಕ್ಕೆ ನಾಂದಿ ಹಾಡಲಾಗಿತ್ತು. ಸಚಿವ ಸಂಪುಟ ಸಭೆ, ಸಮಿತಿಗಳ ಸಭೆ, ಸರ್ವ ಪಕ್ಷ ಸಭೆ, ಅಧಿಕಾರಿಗಳ ಸಭೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಬದಲು ಮರುಬಳಕೆಯ ಗಾಜಿನ ನೀರಿನ ಬಾಟಲಿಯಲ್ಲಿ ನೀರು ವಿತರಿಸಲಾಗುತ್ತಿತ್ತು. ಕೆಎಸ್ಆರ್​​​ಟಿಸಿ ಕೂಡ ಪ್ರಯಾಣಿಕರಿಗೆ ಉಚಿತವಾಗಿ ನೀಡುತ್ತಿದ್ದ ಪ್ಲಾಸ್ಟಿಕ್ ವಾಟರ್ ಬಾಟಲ್ ವಿತರಣೆ ಸ್ಥಗಿತಗೊಳಿಸಿ ಪ್ಲಾಸ್ಟಿಕ್ ವಾಟರ್ ಬಾಟಲ್ ವಿರುದ್ಧ ಜಾಗೃತಿ ಮೂಡಿಸಿತ್ತು.

ಆದರೆ, ಈಗ ಕೊರೊನಾ ಸೋಂಕು ಬಂದು ಇಷ್ಟು ದಿನ ಮಾಡಿದ್ದ ಪ್ಲಾಸ್ಟಿಕ್ ವಾಟರ್ ಬಾಟಲ್ ಬಳಕೆ ನಿರ್ಬಂಧವನ್ನೇ ಸಡಿಲಿಕೆಯಾಗುವಂತೆ ಮಾಡಿದೆ. ಸಿಎಂ ಕಚೇರಿ ವಿಧಾನದಲ್ಲಿ ನಡೆಯುವ ಸಭೆಗಳಲ್ಲಿ ಟೇಬಲ್ ಮೇಲೆ ಇರುತ್ತಿದ್ದ ಗಾಜಿನ ನೀರಿನ ಬಾಟಲಿಗಳ ಜಾಗದಲ್ಲಿ ಮತ್ತೆ ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಬಂದು ಕುಳಿತಿವೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡೆಸುವ ಸುದ್ದಿಗೋಷ್ಠಿಗಳಲ್ಲಿಯೂ ಈಗ ಮತ್ತೆ ಪ್ಲಾಸ್ಟಿಕ್ ನೀರಿನ ಬಾಟಲ್ ರಾರಾಜಿಸುತ್ತಿವೆ. ಪ್ಲಾಸ್ಟಿಕ್ ನಿಷೇಧಕ್ಕೆ ಮುನ್ನುಡಿ ಬರೆದಿದ್ದ ಜಾಗದಲ್ಲೇ ಈಗ ಮತ್ತೆ ಪ್ಲಾಸ್ಟಿಕ್ ಬಳಕೆ ಮರು ಆರಂಭ ಆಗಿದೆ.

ಗಾಜಿನ ನೀರಿನ ಬಾಟಲ್​​​​​ಗಳನ್ನು ಮರುಬಳಕೆ ಮಾಡುವ ಕಾರಣದಿಂದ ಕೊರೊನಾ ಸೋಂಕು ಪಸರಿಸುವ ಸಾಧ್ಯತೆಯಿದೆ. ಸೋಂಕಿತ ವ್ಯಕ್ತಿಯ ಗಂಟಲಿನಲ್ಲಿನ ವೈರಾಣು ಅಪ್ಪಿತಪ್ಪಿ ಬಾಟಲಿಗೆ ಸೋಕಿ ಅದನ್ನು ಬೇರೊಬ್ಬರು ಬಳಸಿದಲ್ಲಿ ವೈರಾಣು ಅವರಿಗೂ ತಗುಲುವ ಸಾಧ್ಯತೆ ಹೆಚ್ಚಾಗಿದೆ. ಸುಲಭವಾಗಿ ಗಾಜಿನ ನೀರಿನ ಬಾಟಲಿಗಳು ಕೊರೊನಾ ವೈರಾಣು ವಾಹಕವಾಗಲಿದೆ ಎನ್ನುವ ಕಾರಣಕ್ಕೆ ಸದ್ಯದ ಮಟ್ಟಿಗೆ ಗಾಜಿನ ನೀರಿನ ಬಾಟಲಿಗೆ ಬ್ರೇಕ್ ಹಾಕಿದೆ. ಪ್ಲಾಸ್ಟಿಕ್ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಪ್ಲಾಸ್ಟಿಕ್ ವಾಟರ್ ಬಾಟಲ್ ನಿರ್ಬಂಧಿಸಿದ್ದ ಸರ್ಕಾರ, ಇದೀಗ ಅದೇ ಆರೋಗ್ಯಕ್ಕಾಗಿ ಮತ್ತೆ ನಿರ್ಬಂಧಿತ ಪ್ಲಾಸ್ಟಿಕ್ ವಾಟರ್ ಬಾಟಲ್ ಗಳ ಬಳಕೆಯನ್ನು ಆರಂಭಿಸಿದೆ.

ಪಾರ್ಸಲ್ ಫುಡ್ ಜೊತೆಗೂ ವಾಟರ್ ಬಾಟಲ್ ಖರೀದಿ..!

ಇಷ್ಟು ಮಾತ್ರವಲ್ಲದೆ ಇದೀಗ ಪ್ಲಾಸ್ಟಿಕ್ ನೀರಿನ ಬಾಟಲ್ ಪ್ರಮಾಣ ಹೆಚ್ಚಾಗುತ್ತಿದೆ. ಹೋಟೆಲ್​​​ಗಳು, ದರ್ಶಿನಿಗಳು ಬಹುತೇಕ ಕಾರ್ಯಾರಂಭ ಮಾಡುತ್ತಿಲ್ಲ. ಕೆಲವೇ ಕೆಲವು ಹೋಟೆಲ್​​​​ಗಳಲ್ಲಿ ಪಾರ್ಸಲ್ ಸೇವೆ ನೀಡಲಾಗುತ್ತಿದೆ. ಇಂತಹ ಕಡೆ ಉಪಹಾರ, ಊಟವನ್ನು ಪಾರ್ಸೆಲ್ ತೆಗೆದುಕೊಳ್ಳುವ ಜೊತೆಗೆ ಮಿನರಲ್ ವಾಟರ್​​​​​ ಬಾಟಲ್ ಅನ್ನು ಗ್ರಾಹಕರು ಖರೀದಿಸುತ್ತಿದ್ದಾರೆ. ಕಚೇರಿ ಇತ್ಯಾದಿ ಕಡೆ ಕುಡಿಯುವ ನೀರನ್ನು ಸಾಮೂಹಿಕವಾಗಿ ಬಳಸುವುದಕ್ಕೆ ನಿರ್ಬಂಧವಿರುವ ಕಾರಣ, ಅನಿವಾರ್ಯವಾಗಿ ಊಟ, ತಿಂಡಿ ಜೊತೆ ನೀರಿನ ಬಾಟಲ್​​ಗಳನ್ನೂ ಖರೀದಿ ಮಾಡಲಾಗುತ್ತಿದೆ. ಇದರಿಂದಾಗಿ ಸದ್ದಿಲ್ಲದಂತೆ ಪ್ಲಾಸ್ಟಿಕ್ ವಾಟರ್ ಬಾಟಲ್ ಬಳಸುವ ಪರಿಪಾಠ ಶುರುವಾಗಿದೆ.

ABOUT THE AUTHOR

...view details