ಬೆಂಗಳೂರು : ಕೊರೊನಾ ಸೋಂಕು ನಿಯಂತ್ರಣ ಹಾಗೂ ವೈದ್ಯಕೀಯ ಉಪಕರಣಗಳ ಬಗ್ಗೆ ಸದನಕ್ಕೆ ಉತ್ತರ ನೀಡುತ್ತಿದ್ದ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹಾಗೂ ಕಾಂಗ್ರೆಸ್ ಶಾಸಕರ ಮಧ್ಯೆ ಪದೇ ಪದೆ ಮಾತಿನ ವಾಗ್ದಾಳಿ ನಡೆದ ಪ್ರಸಂಗ ಇಂದು ವಿಧಾನಸಭೆಯಲ್ಲಿ ನಡೆಯಿತು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರ ನಾಯಕರು ನಿಯಮ 69ರ ಅಡಿ ಪ್ರಸ್ತಾಪ ಮಾಡಿದ್ದ ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಮತ್ತು ಆರೋಗ್ಯ ಸಂಬಂಧಿಸಿದ ವೈದ್ಯಕೀಯ ಉಪಕರಣ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಸ್ತಾಪಕ್ಕೆ ಸರ್ಕಾರದ ಪರವಾಗಿ ಸಚಿವ ಸುಧಾಕರ್ ಉತ್ತರ ನೀಡುತ್ತಿದ್ದ ವೇಳೆ ಪದೇ ಪದೆ ಕಾಂಗ್ರೆಸ್ ಮತ್ತು ಆಡಳಿತ ಪಕ್ಷದ ಶಾಸಕರ ನಡುವೆ ಮಾತಿನ ವಾಗ್ವಾದ ನಡೆಯಿತು. ಇದು ಗದ್ದಲಕ್ಕೂ ಕಾರಣವಾಯಿತು.
ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅಂಕಿ - ಅಂಶಗಳ ಸಮೇತ ಉತ್ತರ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಯಾಗಿ ಮಾತನಾಡಲು ಮುಂದಾದ ಕಾರಣ ಆಡಳಿತ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಮಾ.28ರಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಸುತ್ತಮುತ್ತಲಿನ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರು ರಾಜ್ಯಕ್ಕೆ ಮರಳಲು ಅವಕಾಶ ಮಾಡಿಕೊಡಬೇಕು. ರೋಗ ಹರಡದಂತೆ ಅವರನ್ನು ಗಡಿಯಲ್ಲೇ ಕ್ವಾರಂಟೈನ್ ಮಾಡಬೇಕೆಂದು ಪತ್ರದಲ್ಲಿ ಕೋರಲಾಗಿತ್ತು. ಸರ್ವಪಕ್ಷಗಳ ಸಭೆಯಲ್ಲೂ ನಮ್ಮ ಪಕ್ಷ ಪ್ರಸ್ತಾಪ ಮಾಡಿತ್ತು. ಆದರೆ, ಲಾಕ್ಡೌನ್ ಸಡಿಲ ಮಾಡಿದ ಸಂದರ್ಭದಲ್ಲಿ ಕಲಬುರಗಿಗೆ ಎರಡು ಲಕ್ಷ ಮಂದಿ ಬಂದರು. ಇದರಿಂದ ಕೋವಿಡ್ ಹರಡುವಿಕೆ ಹೆಚ್ಚಾಯಿತು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಲಾಕ್ಡೌನ್ ಸಂದರ್ಭದಲ್ಲಿ ಜೀವ ಉಳಿಸುವ ಕೆಲಸವನ್ನು ಸರ್ಕಾರ ಮಾಡಿತ್ತು. ಜನ ಜೀವನ ಸಹಜ ಸ್ಥಿತಿಗೆ ಮರಳಲಿ ಎಂಬ ಕಾರಣಕ್ಕೆ ಲಾಕ್ಡೌನ್ ಸಡಿಲಮಾಡಲಾಯಿತು. ಜೂನ್ವರೆಗೆ ಕೇವಲ 15 ಸಾವಿರ ಕೋವಿಡ್ ಪ್ರಕರಣಗಳಿದ್ದವು. ಆನಂತರ ಹೆಚ್ಚಾಯಿತು ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು.
ಉತ್ತರ ಕೊಡುವಾಗ ಪದೇ ಪದೆ ಆಕ್ಷೇಪವನ್ನು ಕಾಂಗ್ರೆಸ್ ಸದಸ್ಯರು ಮಾಡಿದರು. ಸ್ಪೀಕರ್ ಆಗಾಗ ಮಧ್ಯ ಪ್ರವೇಶಿಸಿ, ಈ ರೀತಿ ಮಾತನಾಡಿದರೆ ಸದನಕ್ಕೆ ಗೌರವ ಬರುವುದಿಲ್ಲ. ಉತ್ತರ ನೀಡಲು ಸಹಕರಿಸಿ ಎಂದು ಹೇಳಿದಾಗ ಪರಿಸ್ಥಿತಿ ಹತೋಟಿಗೆ ಬರುತಿತ್ತು.