ಕರ್ನಾಟಕ

karnataka

By

Published : Mar 25, 2020, 8:42 PM IST

ETV Bharat / state

ಕೊರೊನಾ ಬುಲೆಟಿನ್ ಬಿಡುಗಡೆ: ಶಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ!

ಇಂದು ಕೂಡ ಆರೋಗ್ಯ ಇಲಾಖೆ ಕೊರೊನಾ ಬುಲೆಟಿನ್ ಬಿಡುಗಡೆ ಮಾಡಿದೆ. ಕಲಬುರಗಿಯಲ್ಲಿ ಮೃತಪಟ್ಟ ವ್ಯಕ್ತಿ ಸೇರಿದಂತೆ 51 ವರದಿಗಳು ಕೊರೊನಾ ಪಾಸಿಟಿವ್ ಬಂದಿದ್ದು, ಅದರಲ್ಲಿ ಮೂವರು ಗುಣಮುಖರಾಗಿದ್ದಾರೆ. ಮೃತ ವ್ಯಕ್ತಿ ಹೊರತುಪಡಿಸಿ ಉಳಿದ 47 ಸೋಂಕಿತರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ.

ಕೊರೊನಾ ಬುಲೆಟಿನ್
ಕೊರೊನಾ ಬುಲೆಟಿನ್

ಬೆಂಗಳೂರು:ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಜೊತೆಗೆ ಕೊರೊನಾ ಶಂಕಿತರ ಸಂಖ್ಯೆಯಲ್ಲಿಯೂ ಭಾರಿ ಹೆಚ್ಚಳ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗುವ ಆತಂಕ ಸೃಷ್ಟಿಸಿದೆ.

ಎಂದಿನಂತೆ ಇಂದು ಕೂಡ ಆರೋಗ್ಯ ಇಲಾಖೆ ಕೊರೊನಾ ಬುಲೆಟಿನ್ ಬಿಡುಗಡೆ ಮಾಡಿದೆ. ಕಲಬುರಗಿಯಲ್ಲಿ ಮೃತಪಟ್ಟ ವ್ಯಕ್ತಿ ಸೇರಿದಂತೆ 51 ವರದಿಗಳು ಕೊರೊನಾ ಪಾಸಿಟಿವ್ ಬಂದಿದ್ದು, ಅದರಲ್ಲಿ ಮೂವರು ಗುಣಮುಖರಾಗಿದ್ದಾರೆ. ಮೃತ ವ್ಯಕ್ತಿಯನ್ನು ಹೊರತುಪಡಿಸಿ ಉಳಿದ 47 ಸೋಂಕಿತರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ.

ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಕೊರೊನಾ ಬುಲೆಟಿನ್ ಪಟ್ಟಿ

ಇಂದಿನ ಬುಲೆಟಿನ್​ನಲ್ಲಿರುವ ಅಂಕಿ ಅಂಶಗಳು ಸಾಕಷ್ಟು ಆತಂಕಕ್ಕೆ ಕಾರಣವಾಗಿವೆ. ಶಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೂ ನೆಗೆಟಿವ್ ವರದಿಗಳ ಸಂಖ್ಯೆಯಲ್ಲಿಯೂ‌ ಹೆಚ್ಚಳ ಕಂಡುಬಂದಿರುವುದು ಕೊಂಚ ನೆಮ್ಮದಿ ತರಿಸಿದೆ. ಕೊರೊನಾ ಶಂಕೆ ಹಿನ್ನೆಲೆ ಇಂದು ಹೊಸದಾಗಿ‌ 840 ಜನರನ್ನು ಅವಲೋಕನೆಗಾಗಿ ಪಟ್ಟಿ ಮಾಡಿದ್ದು, ಈವರೆಗೆ ಅವಲೋಕನೆಗೆ ಒಳಪಟ್ಟವರ ಸಂಖ್ಯೆ 13,246ಕ್ಕೆ ತಲುಪಿದೆ.

ಆಸ್ಪತ್ರೆಗಳಲ್ಲಿ ಐಸೋಲೇಷನ್​ನಲ್ಲಿ ಇಂದು‌ 54 ಜನರನ್ನು ಇರಿಸಿದ್ದು, ಇಲ್ಲಿಯವರೆಗೆ 214 ಜನರನ್ನು ಐಸೋಲೇಷನ್ ನಲ್ಲಿ ಇರಿಸಿದಂತಾಗಿದೆ. ಇಂದು 278ಜನರ ಮಾದರಿ ಸಂಗ್ರಹಿಸಿದ್ದು, ಈವರೆಗೆ 2,438 ಮಾದರಿ ಸಂಗ್ರಹ ಮಾಡಿದಂತಾಗಿದೆ. ಇಂದು 175 ವರದಿಗಳು ಕೊರೊನಾ ನೆಗೆಟಿವ್ ಸೇರಿ, ಈವರೆಗೆ 2,245 ವರದಿಗಳು ನೆಗೆಟಿವ್ ಬಂದಿವೆ.

ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಲ್ಪಟ್ಟವರ ವಿವರ:

ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 6, ಬೆಂಗಳೂರಿನ ಇತರೆ ಆಸ್ಪತ್ರೆಯಲ್ಲಿ 32, ದಕ್ಷಿಣ ಕನ್ನಡದಲ್ಲಿ 30, ಬಳ್ಳಾರಿ 3, ಕಲಬುರಗಿ 15, ಕೊಡಗು 5, ಉಡುಪಿಯಲ್ಲಿ 54, ಬೀದರ್ 3, ಗದಗ 17, ಉತ್ತರ ಕನ್ನಡ 9, ಧಾರವಾಡ 4, ಹಾಸನ 3, ಚಾಮರಾಜನಗರ 2, ಚಿತ್ರದುರ್ಗ 2, ದಾವಣಗೆರೆ 5, ಮೈಸೂರು 6, ರಾಯಚೂರು 1, ಶಿವಮೊಗ್ಗ 8, ಮಂಡ್ಯ 1, ತುಮಕೂರು 3, ಚಿಕ್ಕಮಗಳೂರು 2, ಚಿಕ್ಕಬಳ್ಳಾಪುರ 3 ಸೇರಿ ಒಟ್ಟು 224 ಜನರನ್ನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು 26 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. 54 ಜನರನ್ನು ಹೊಸದಾಗಿ ದಾಖಲಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ. ಈವರೆಗೆ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ, ಬಂದರುಗಳಲ್ಲಿ ಒಟ್ಟು‌ 1,28,000 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು‌, ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗಾಗಿ ಯಾವುದೇ ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಇಲಾಖೆಗೆ ಸಹಕಾರ ನೀಡಿ ಎಂದು ಮನವಿ ಮಾಡಲಾಗಿದೆ.

ABOUT THE AUTHOR

...view details