ಕರ್ನಾಟಕ

karnataka

By ETV Bharat Karnataka Team

Published : Jan 18, 2024, 9:15 PM IST

ETV Bharat / state

ಮೀಸಲಾತಿ ವಿಷಯದಲ್ಲಿ ಸಿದ್ದರಾಮಯ್ಯ ಸರ್ಕಾರದಿಂದ ನಿರಂತರ ಅನ್ಯಾಯ: ಗೋವಿಂದ ಕಾರಜೋಳ

ಮೀಸಲಾತಿ ವಿಷಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದಿಂದ ನಿರಂತರ ಅನ್ಯಾಯವಾಗಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಟೀಕಿಸಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ಬೆಂಗಳೂರು : ಮೀಸಲಾತಿ ವಿಷಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ನಿರಂತರ ಅನ್ಯಾಯ ಮಾಡಿದೆ. ಲೋಕಸಭಾ ಚುನಾವಣೆ ಹತ್ತಿರ ಬರುವ ಕಾರಣ ಕೇಂದ್ರಕ್ಕೆ ಆರ್ಟಿಕಲ್ 341 ಗೆ ತಿದ್ದುಪಡಿಗೆ ಶಿಫಾರಸು ಮಾಡುವಂತೆ ಕೇಳುವ ಮಾತನಾಡಿ, ಮತ್ತದೇ ಮೋಸವನ್ನು ಮುಂದುವರೆಸಿದೆ ಎಂದು ಇಂದಿನ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರವನ್ನು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾದಿಗರಿಗೆ ಅನ್ಯಾಯ ಆಗಿದೆ. ಗೆದ್ದ ಬಳಿಕ ಮೊದಲ ಸಂಪುಟದಲ್ಲೇ ಅನ್ಯಾಯ ಸರಿಪಡಿಸುವುದಾಗಿ ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಕೆ. ಹೆಚ್ ಮುನಿಯಪ್ಪ ಎಲ್ಲರೂ ಸೇರಿ ಚುನಾವಣೆ ವೇಳೆ ತಿಳಿಸಿದ್ದರು. ಸಾರಿ ಸಾರಿ ಡಂಗೂರ ಹೊಡೆದಿದ್ದರು. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯರ ಸರ್ಕಾರವು 8 ತಿಂಗಳಾದರೂ ಮೀಸಲಾತಿ ಬಗ್ಗೆ ಯಾವುದೇ ಶಬ್ದ ಮಾತನಾಡಿಲ್ಲ. ಲೋಕಸಭಾ ಚುನಾವಣೆ ಹತ್ತಿರ ಬರುವ ಕಾರಣ ಕೇಂದ್ರಕ್ಕೆ ಆರ್ಟಿಕಲ್ 341ಗೆ ತಿದ್ದುಪಡಿಗೆ ಶಿಫಾರಸು ಮಾಡುವಂತೆ ಕೇಳುವ ಮಾತನಾಡುತ್ತಿದೆ ಎಂದು ಟೀಕಿಸಿದರು.

ಆರ್ಟಿಕಲ್ 341ಕ್ಕೆ ತಿದ್ದುಪಡಿಗೆ ಅಗತ್ಯವೇ ಇಲ್ಲ. ಈಗಾಗಲೇ ಜಸ್ಟಿಸ್ ಅರುಣ್‍ಕುಮಾರ್ ಮಿಶ್ರಾ ಅವರು, ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ. ಒಳ ಮೀಸಲಾತಿ ಕೊಡಲು ಅಧಿಕಾರ ಇದೆ. ಹೆಚ್ಚುವರಿ ಸೇರಿಸಲು ಅಥವಾ ಇದ್ದಂತಹ ಜಾತಿಗಳನ್ನು ತೆಗೆಯಲು ಅವಕಾಶ ಇಲ್ಲ ಎಂದು ತೀರ್ಪು ನೀಡಿದ್ದಾರೆ. ಅಲ್ಲದೇ ಅವರು ಸುಪ್ರೀಂ ಕೋರ್ಟಿನ ವಿಸ್ತೃತ ನ್ಯಾಯಪೀಠಕ್ಕೆ ಕೊಡಲು ತಿಳಿಸಿದ್ದು, ಕೇಂದ್ರ ಸರ್ಕಾರವು ಈಗಾಗಲೇ ವಿಷಯವನ್ನು ವಿಸ್ತೃತ ನ್ಯಾಯಪೀಠದ ಮುಂದಿಟ್ಟಿದೆ. ದೇಶದ ಕಾನೂನಿಗೆ ಗೌರವ ಕೊಟ್ಟು, ಸುಪ್ರೀಂ ಕೋರ್ಟ್ ನ್ಯಾಯ ನೀಡುವ ಭರವಸೆ ನಮಗಿದೆ ಎಂದರು.

ಈ ಮೋಸದಾಟ ಬಿಡಿ : ಇವತ್ತು ಸಿದ್ದರಾಮಯ್ಯ ಮೋಸ ಮಾಡಿದ್ದಾರೆ. 2012ರಲ್ಲಿ ನಾವು ಪತ್ರ ಬರೆದಿದ್ದೆವು. ಇದೇ ಪತ್ರವನ್ನು ಮತ್ತೆ ಬರೆದು ಮೋಸ ಮಾಡುತ್ತಿದ್ದಾರೆ. ಇದಾದ ಬಳಿಕ 2020ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಮತ್ತೆ ಸುಳ್ಳು ಹೇಳಿ ಮೋಸ ಮಾಡುವ ಪ್ರಯತ್ನದಲ್ಲೇ ಸಿದ್ದರಾಮಯ್ಯ ಇದ್ದಾರೆ. ಚುನಾವಣೆ ಬಂದಾಗ ಗಿಮಿಕ್, ಮೋಸದಾಟವನ್ನು ಮಾಡುತ್ತಾರೆ ಎಂದು ಗೋವಿಂದ ಕಾರಜೋಳ ಅವರು ಟೀಕಿಸಿದರು.

ಈ ಮೋಸದಾಟ ಬಿಡಿ. ನಿಮಗೆ ನಿಜವಾದ ಇಚ್ಛಾಶಕ್ತಿ ಇದ್ದರೆ ನಾಳೆಯೇ ಒಂದು ಆದೇಶ ಮಾಡಿ. ಒಳಮೀಸಲಾತಿ ಜಾರಿಗೊಳಿಸಿ. ನಿಮ್ಮನ್ನು ಯಾರೂ ತಡೆಯಲು ಅಸಾಧ್ಯ. ಜಾತಿ - ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಮೋಸದಾಟ ಮಾಡುತ್ತಿದ್ದೀರಿ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಆಡಳಿತದಲ್ಲಿ ಎಸ್‍ಸಿ ಪಟ್ಟಿಯಲ್ಲಿ ಸೇರ್ಪಡೆ ಆಗುತ್ತ ಹೋಗಿ, 101 ಜಾತಿಗಳಾದವು. ಎಸ್‍ಟಿಯಲ್ಲಿ 56 ಜಾತಿಗಳಾದವು.

ಅದರ ಪರಿಣಾಮವಾಗಿ ಅಸ್ಪೃಶ್ಯರಿಗೆ ಮೀಸಲಾತಿ ಸೌಲಭ್ಯ ಸಿಗುತ್ತಿಲ್ಲ ಎಂದು 30 ವರ್ಷಗಳ ಹಿಂದೆ ರಾಜ್ಯದಲ್ಲಿ ಮತ್ತು ನೆರೆಯ ರಾಜ್ಯಗಳಲ್ಲಿ ಒಳ ಮೀಸಲಾತಿ ಹೋರಾಟ ಪ್ರಾರಂಭಗೊಂಡಿತು. ರಾಜ್ಯದಲ್ಲಿ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ 2004ರಲ್ಲಿ ಚುನಾವಣೆ ಬಂತು ಎಂಬ ಸಂದರ್ಭದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ನೇಮಿಸಿದರು. ಆ ಆಯೋಗಕ್ಕೆ ಸಿಬ್ಬಂದಿ, ಒಂದೇ ಒಂದು ರೂಪಾಯಿ ಅನುದಾನ ಕೊಡಲಿಲ್ಲ. ಅವರಿಗೆ ಆಯೋಗದ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದರು.

ನಾಲ್ಕೈದು ವರ್ಷಗಳ ಕಾಲ ನ್ಯಾ. ಸದಾಶಿವ ಅವರು ಒಳ ಮೀಸಲಾತಿ ಕೆಲಸ ಮಾಡದೇ ಉಳಿದರು. 2008ರಲ್ಲಿ ನಮ್ಮ ಸರ್ಕಾರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು. ಬಳಿಕ ನ್ಯಾ. ಸದಾಶಿವ ಅವರು ತಮ್ಮ ಆಯೋಗಕ್ಕೆ ರಾಜೀನಾಮೆ ಕೊಡುವ ಪ್ರಸ್ತಾಪವನ್ನು ನನ್ನ ಮುಂದೆ ಮತ್ತು ನಾರಾಯಣಸ್ವಾಮಿ ಅವರ ಎದುರು ಮುಂದಿಟ್ಟಿದ್ದರು. ಅನುದಾನ, ಸಿಬ್ಬಂದಿ ಇಲ್ಲದೇ ಕೆಲಸ ಮಾಡಲಾಗಿಲ್ಲ. ಯಾವ ಪುರುಷಾರ್ಥಕ್ಕೆ ನಾನಿರಲಿ ಎಂದು ಕೇಳಿದ್ದರು. ಎಷ್ಟು ಅನುದಾನ ಬೇಕೆಂದಾಗ 13.5 ಕೋಟಿ ಬೇಕು ಎಂದಿದ್ದರು. ನಾವಿಬ್ಬರು ಯಡಿಯೂರಪ್ಪ ಅವರಲ್ಲಿ ವಿಷಯ ತಿಳಿಸಿದೆವು. ಯಡಿಯೂರಪ್ಪ ಅವರು 12 ಕೋಟಿ ಮಂಜೂರು ಮಾಡಿ, ರಾಜೀನಾಮೆ ಕೊಡದಿರಲು ತಿಳಿಸಿದರು ಎಂದರು.

ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡಲಿಲ್ಲ: ಚುನಾವಣೆ ಹತ್ತಿರವೇ ಇರುವಾಗ, ಸರ್ಕಾರ ಅಲ್ಪಮತದಲ್ಲಿದ್ದ ಕಾಲದಲ್ಲಿ 2012ರಲ್ಲಿ ನ್ಯಾ. ಸದಾಶಿವ ಅವರು ವರದಿ ಕೊಟ್ಟರು. ಆದ್ದರಿಂದ ವರದಿಯನ್ನು ಏನೂ ಮಾಡಲು ಆಗಲಿಲ್ಲ ಎಂದು ವಿವರಿಸಿದರು. ಅದರ ಮಧ್ಯದಲ್ಲಿ ಕೇಂದ್ರ ಸರ್ಕಾರ ನಮಗೊಂದು ಪತ್ರ ಬರೆಯಿತು. ಒಳ ಮೀಸಲಾತಿ ಬಗ್ಗೆ ಅಭಿಪ್ರಾಯ ತಿಳಿಸಿ ಎಂದು ಕೇಳಿತ್ತು. ಆಗ ನಾರಾಯಣಸ್ವಾಮಿಯವರೇ ಸಮಾಜ ಕಲ್ಯಾಣ ಸಚಿವರಿದ್ದರು. ನಮ್ಮದೇ ಸರ್ಕಾರ ಇತ್ತು. ನಾನೂ ಸಚಿವ ಆಗಿದ್ದೆ. ಆರ್ಟಿಕಲ್ 341ಕ್ಕೆ ತಿದ್ದುಪಡಿ ಮಾಡಲು ವಿನಂತಿಸಿದ್ದೆವು. 2012ರ ಆರಂಭದಲ್ಲಿ ಇದಾಗಿತ್ತು. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದು, ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ಇವತ್ತಿನ ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡಲಿಲ್ಲ ಎಂದು ದೂರಿದರು.

2013 ರಲ್ಲಿ ಚುನಾವಣೆ ಬಂತು. ಆಗ ಕಾಂಗ್ರೆಸ್ಸಿನವರು ಮಾದಿಗ ಜನಾಂಗಕ್ಕೆ ನ್ಯಾಯ ದೊರಕಿಸುವ ಭರವಸೆ ನೀಡಿದ್ದರು. 5 ವರ್ಷ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಒಳ ಮೀಸಲಾತಿ ಬಗ್ಗೆ ಚಕಾರ ಎತ್ತಲಿಲ್ಲ. 2016ರಲ್ಲಿ ಹುಬ್ಬಳ್ಳಿಯಲ್ಲಿ ಒಳ ಮೀಸಲಾತಿ ಸಲುವಾಗಿ ಬೃಹತ್ ಸಮಾವೇಶ ನಡೆದಿತ್ತು. ಲಕ್ಷಾಂತರ ಜನರು ಸೇರಿದ್ದರು. ಸಮಾವೇಶಕ್ಕೆ ಬಂದ 9 ಜನ ಸತ್ತಿದ್ದರೂ ಸಿದ್ದರಾಮಯ್ಯ ಪರಿಹಾರ ಕೊಡಲಿಲ್ಲ ಎಂದು ಆಕ್ಷೇಪಿಸಿದರು.

2018 ರಲ್ಲಿ ಕಾಂಗ್ರೆಸ್ಸಿಗೆ ಸೋಲಾಯಿತು. ಮಾದಿಗರು ತಮ್ಮ ಪಕ್ಷಕ್ಕೆ ಮತ ಕೊಟ್ಟಿಲ್ಲವೆಂದು ಸಿದ್ದರಾಮಯ್ಯ ಹೇಳಿದ್ದಲ್ಲದೇ ದೆಹಲಿಗೂ ವರದಿ ಕೊಟ್ಟರು. ದೆಹಲಿ, ರಾಜ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ತಿಳಿಸಿದ್ದರು ಎಂದು ವಿವರಿಸಿದರು. 2018ರಲ್ಲಿ ಸಮ್ಮಿಶ್ರ ಸರ್ಕಾರ ಬಂದರೂ ಒಳ ಮೀಸಲಾತಿ ಬಗ್ಗೆ ಒಂದು ಶಬ್ದ ಮಾತಾಡಲಿಲ್ಲ. 2019ರಲ್ಲಿ ನಮ್ಮ ಸರ್ಕಾರ ಬಂತು. ಕೋವಿಡ್ ಸಂಕಷ್ಟದಲ್ಲಿ ಎರಡೂವರೆ ವರ್ಷ ಕಳೆಯಿತು. ನಂತರ ಬಸವರಾಜ ಬೊಮ್ಮಾಯಿಯವರ ಸರ್ಕಾರ ಬಂತು. ನಮಗೆ ಕೇಂದ್ರದಿಂದ ಒಂದು ಪತ್ರ ಬಂದಿತ್ತು. ಭೋವಿ, ಕೊರಮ, ಕೊರಚ ಸೇರಿ 4 ಜಾತಿಗಳನ್ನು ಎಸ್‍ಸಿ ಪಟ್ಟಿಯಿಂದ ತೆಗೆಯಲು ಅಭಿಪ್ರಾಯ ಕೇಳಿದ್ದರು. ಆಗ ನಾವು ಕ್ಯಾಬಿನೆಟ್‍ನಲ್ಲಿ ಚರ್ಚೆ ಮಾಡಿದೆವು. 101 ಜಾತಿಯಲ್ಲಿ ಯಾರನ್ನೂ ತೆಗೆಯದೇ ಎಲ್ಲ ಜಾತಿಗಳಿಗೆ ನ್ಯಾಯ ದೊರಕಿಸಲು ಕೇಂದ್ರಕ್ಕೆ ಪತ್ರ ಬರೆದೆವು ಎಂದು ತಿಳಿಸಿದರು.

ಬಳಿಕ ಕ್ಯಾಬಿನೆಟ್ ಉಪ ಸಮಿತಿಯಲ್ಲಿ ಮೀಸಲಾತಿ ಶೇ 15 ಅನ್ನು ಶೇ 17ಕ್ಕೆ ಹೆಚ್ಚಿಸಿದೆವು. ಮಾದಿಗ ಜನಾಂಗಕ್ಕೆ ಶೇ 6, ಛಲವಾದಿ ಜನಾಂಗಕ್ಕೆ 5.5, ಲಂಬಾಣಿ, ಭೋವಿ, ಕೊರಮ, ಕೊರಚ ಜನಾಂಗಕ್ಕೆ 4.5, ಎಸ್‍ಸಿ ಅಲೆಮಾರಿಗಳು, ಸಣ್ಣ ಸಮುದಾಯಗಳಿಗೆ ಶೇ 1 ನೀಡಲಾಗಿತ್ತು. ಇದರ ಶಿಫಾರಸು ಕೇಂದ್ರಕ್ಕೆ ಕಳುಹಿಸಲಾಗಿತ್ತು. ಚುನಾವಣೆ ಬಂದುದರಿಂದ ಅದನ್ನು ಅನುಷ್ಠಾನಕ್ಕೆ ತರಲು ಆಗಲಿಲ್ಲ ಎಂದು ಹೇಳಿದರು.

ಕೇಂದ್ರ ಸಚಿವ ನಾರಾಯಣ ಸ್ವಾಮಿ ಮಾತನಾಡಿ, ಒಳಮೀಸಲಾತಿ ಪದ ಪಂಜಾಬ್​ನಲ್ಲಿ ಶುರುವಾಗಿದ್ದು, ಪಂಜಾಬ್​ನಲ್ಲಿ 1975 ರಲ್ಲಿ ಶೇ 50ರಷ್ಟು ಮೀಸಲಾತಿ ನೀಡಲಾಗಿತ್ತು. ಸಿದ್ದರಾಮಯ್ಯ ಅವರ ಬಗ್ಗೆ ಅನುಕಂಪ ತೋರಿಸುವ ಅಗತ್ಯವಿಲ್ಲ. ಅವರು ದಿಕ್ಕು ತಪ್ಪಿಸುವಂತೆ ಮಾಡಿದ್ದಾರೆ. ನಿಮ್ಮ ಅಜ್ಞಾನದ ಬಗ್ಗೆ ವ್ಯಾಖ್ಯಾನ ಮಾಡಿಕೊಳ್ಳಿ. ಹರಿಯಾಣ, ತೆಲಂಗಾಣದಲ್ಲೂ ಒಳಮೀಸಲಾತಿ ಘೋಷಣೆ ಆಗಿದೆ. 5 ರಾಜ್ಯಗಳಲ್ಲಿ ಒಳಮೀಸಲಾತಿ ಬಗ್ಗೆ ಆಯೋಗ ರಚನೆಯಾಗಿತ್ತು. ಎಲ್ಲರೂ ಒಳಮೀಸಲಾತಿ ಅಗತ್ಯ ಇದೆ ಎಂದು ಹೇಳಿದ್ದೆವು.

ಆರ್ಟಿಕಲ್ 341 ತಿದ್ದುಪಡಿ ಇಲ್ಲ ಎಂದು ನ್ಯಾ. ಅರುಣ್ ಮಿಶ್ರಾ ಹೇಳಿದ್ದರು. ಎಲ್ಲ ರಾಜ್ಯಗಳೂ ಒಳಮೀಸಲಾತಿ ಕೊಡಬಹುದು ಎಂದು ಕೋರ್ಟ್ ಆದೇಶ ಮಾಡಿ ಮೂರು ವರ್ಷ ಆಗಿದೆ. ಆ ಆದೇಶವನ್ನು ಇವರು ಯಾರೂ ತೆಗೆದು ನೋಡಿಲ್ಲ. ಎಸ್ಟಿಗಳಿಗೆ ಆರ್ಟಿಕಲ್ 342 ಪ್ರಕಾರ ಒಳ ಮೀಸಲಾತಿ ಇದೆ. ಆದರೆ, ಅಸ್ಪೃಶ್ಯರಿಗೆ ಮೀಸಲಾತಿ ಕೊಡುವಾಗ ಚರ್ಚೆ ಮೇಲೆ‌ ಚರ್ಚೆ ನಡೆಸಿ 341 ತಿದ್ದುಪಡಿ ಆಗಬೇಕು ಎನ್ನುತ್ತಾರೆ. ಸಿದ್ದರಾಮಯ್ಯ ಅವರು ಚುನಾವಣೆಗು ಮುನ್ನ ನುಡಿದಂತೆ ನಡೆಯುತ್ತೇವೆ ಎನ್ನುತ್ತಾರೆ. ಸಾಮಾನ್ಯ ವ್ಯಕ್ತಿ ಚರ್ಚೆ ಮಾಡುವ ರೀತಿ ಕ್ಯಾಬಿನೆಟ್​ನಲ್ಲಿ ಒಳಮೀಸಲಾತಿ ವಿಚಾರ ಚರ್ಚೆ ಮಾಡ್ತಾರೆ. ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.

ಒಳಮೀಸಲಾತಿ ಬಗ್ಗೆ ಮಾತನಾಡಬೇಕು: ಮಾನವೀಯತೆ, ಸಾಮಾಜಿಕ ಕಳಕಳಿ ಇದ್ದರೆ ಇವತ್ತೇ ಮತ್ತೆ ಕ್ಯಾಬಿನೆಟ್ ಸೇರಿ ಒಳ ಮೀಸಲಾತಿ ಜಾರಿ ಮಾಡಿ. ಮೋದಿ ಒಳಮೀಸಲಾತಿ ಪರವಾಗಿ ಇದ್ದೇನೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದೇನೆ ಎನ್ನುವ ಮಾತು ಹಿಂದಕ್ಕೆ ಪಡೆಯಿರಿ. ಕಾಂಗ್ರೆಸ್​ನ ದಲಿತ ಶಾಸಕರು, ಸಚಿವರು ಒಳಮೀಸಲಾತಿ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದರು.

ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ದಾರಿ ತಪ್ಪಿಸುವುದರಲ್ಲಿ ನಿಪುಣರು. ಮೋಸ, ವಂಚನೆ ಮಾಡುವುದಕ್ಕೂ ಪ್ರಸಿದ್ಧಿ ಪಡೆದಿದ್ದಾರೆ. ಬೆಟ್ಟ ಅಗೆದು ಸಿದ್ದರಾಮಯ್ಯ ಇಲಿ ಅಲ್ಲ ಇರುವೆಯನ್ನೂ ಹಿಡಿದಿಲ್ಲ. ಒಳಮೀಸಲಾತಿ ಜಾರಿಗೆ ತರ್ತಿವಿ ಎಂದರು ತಂದಿಲ್ಲ. ಒಳಮೀಸಲಾತಿ ಬಗ್ಗೆ ಈ ಹಿಂದೆಯೆ ಕೇಂದ್ರಕ್ಕೆ ಶಿಫಾರಸು ಆಗಿದೆ. 341 ಕ್ಕೆ ತಿದ್ದುಪಡಿ ತರುವ ಅಗತ್ಯವೇ ಇಲ್ಲ. ರಾಜ್ಯ ಸರ್ಕಾರವೇ ಒಳಮೀಸಲಾತಿ ತರಬಹುದು. ಹೀಗಿದ್ದರೂ ಇದರಲ್ಲಿ‌ ಮೂಗು ತೂರಿಸುವ ಅಗತ್ಯವೇನಿತ್ತು.

101 ಜಾತಿಯಲ್ಲಿ ಯಾವುದನ್ನೂ ತೆಗೆಯಬಾರದು. ಸೇರಿಸಬಾರದು ಎಂದು ಕೇಂದ್ರಕ್ಕೆ ಬಿಜೆಪಿ ಸರ್ಕಾರ ಇದ್ದಾಗಲೇ ಶಿಫಾರಸು ಮಾಡಿತ್ತು. ಶೇ17ರಷ್ಟು ಮೀಸಲಾತಿ ಹೆಚ್ಚಿಸಿ ಬಿಜೆಪಿ‌ ಸರ್ಕಾರ ಜಾರಿ ಮಾಡಿದೆ. ಈಗ ಸಿದ್ದರಾಮಯ್ಯ ಅವರಿಗೆ ಬದ್ಧತೆ ಇದ್ದರೆ ತಕ್ಷಣ ಒಳಮೀಸಲಾತಿ ಜಾರಿ ಮಾಡಲಿ. ಮೊದಲು ಜಾರಿ ಮಾಡಿ, ಕೇಂದ್ರ‌ ಸರ್ಕಾರ ಏನ್ ಮಾಡುತ್ತೆ ಆಮೇಲೆ ನೋಡೋಣ ಎಂದರು‌. ದಲಿತರ ವಿರೋಧಿ ಸಿದ್ದರಾಮಯ್ಯ, ಪದೇ ಪದೆ ದಲಿತರಿಗೆ ಮೋಸ ಮಾಡಿದ್ದಾರೆ. ತಕ್ಷಣ ಒಳಮೀಸಲಾತಿ ಜಾರಿ ಮಾಡಿ, ಇದು ನಿಮಗೆ ನಮ್ಮ ಸವಾಲು ಎಂದರು.

ಇದನ್ನೂ ಓದಿ :ಸಿದ್ದರಾಮಯ್ಯ ಕಾಂಗ್ರೆಸ್​​ನ ಕೊನೇ ಸಿಎಂ ಅನ್ನೋದು ನಿಜವಾಗುತ್ತೆ: ಗೋವಿಂದ ಕಾರಜೋಳ

ABOUT THE AUTHOR

...view details