ಬೆಂಗಳೂರು:ವಿವಾಹದ ದಿನದಂದು ವರ ಧರಿಸಬೇಕಾಗಿದ್ದ ಬಟ್ಟೆ ಕಳೆದುಹೋಗಲು ಕಾರಣವಾಗಿದ್ದ ಪ್ರತಿಷ್ಠಿತ ಕೊರಿಯರ್ ಕಂಪನಿಗೆ ಗ್ರಾಹಕರ ನ್ಯಾಯಾಲಯ 25 ಸಾವಿರ ದಂಡ ವಿಧಿಸಿದೆ. ಅಲ್ಲದೇ, ಬಟ್ಟೆಯ ಮೊತ್ತದೊಂದಿಗೆ ಕೊರಿಯರ್ ಶುಲ್ಕ ಹಿಂದಿರುಗಿಸಲು ಸೂಚನೆ ನೀಡಿದೆ.
ತನ್ನ ಸ್ನೇಹಿತನ ಮದುವೆ ಬಟ್ಟೆ ಕಳೆದೋಗಲು ಕಾರಣವಾಗಿದ್ದ ಕೊರಿಯರ್ ಕಂಪನಿಯ ಕ್ರಮ ಪ್ರಶ್ನಿಸಿ ಬೆಂಗಳೂರಿನ ಮೈಸೂರು ರಸ್ತೆಯ ಪ್ರಮೋದ್ ಬಡಾವಣೆಯ ಎ.ಎಸ್.ಸಿದ್ದೇಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನಗರದ 2ನೇ ಹೆಚ್ಚುವರಿ ನ್ಯಾಯಾಧೀಶರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ದೂರಿನ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಶೋಭಾ ಅವರಿದ್ದ ತ್ರಿಸದಸ್ಯ ಪೀಠ, ಕೊರಿಯರ್ ಕಂಪನಿಯು ತನ್ನ ಸೇವೆ ನಿರ್ವಹಿಸುವಲ್ಲಿ ಸೇವಾ ನ್ಯೂನ್ಯತೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟು ದೂರುದಾರರಿಗೆ 25 ಸಾವಿರ ರೂಪಾಯಿ ಪರಿಹಾರ ಹಾಗೂ ವ್ಯಾಜ್ಯದ ವೆಚ್ಚವಾಗಿ 10 ಸಾವಿರ ರೂ.ಗಳನ್ನು ಪಾವತಿಸಬೇಕು ಎಂದು ಆದೇಶಿಸಿದೆ. ಅಲ್ಲದೆ, ಬಟ್ಟೆಯ ಮೊತ್ತವಾದ 11,495 ರೂ. ಹಾಗೂ ಕೊರಿಯರ್ ಶುಲ್ಕ 500 ರೂ.ಗಳನ್ನು ಹಿಂದಿರುಗಿಸಲು ನಿರ್ದೇಶಿಸಿದೆ.
ಕೊರಿಯರ್ ಕಂಪನಿ ಪರ ವಕೀಲರು ವಾದ ಮಂಡಿಸಿ, ದೂರುದಾರರು ಕಳುಹಿಸಿದ್ದ ಕೊರಿಯರ್ನಲ್ಲಿ 11 ಸಾವಿರ ಮೌಲ್ಯದ ಸೂಟ್ ಇರುವುದು, ಅದರ ಪ್ರಾಮುಖ್ಯತೆ ಬಗ್ಗೆ ಸಿಬ್ಬಂದಿಗೆ ಮಾಹಿತಿ ಇರಲಿಲ್ಲ. ಕೆಲ ಸಂದರ್ಭಗಳಲ್ಲಿ ಇಂತಹ ಘಟನೆಗಳಾಗುತ್ತವೆ. ಕಳೆದು ಹೋದ ವಸ್ತುವನ್ನು ಪತ್ತೆಹಚ್ಚಲು ಎಲ್ಲ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಹೆಚ್ಚು ಹಣ ಪಡೆಯುವ ದುರುದ್ದೇಶದಿಂದ ದೂರು ದಾಖಲಿಸಲಾಗಿದ್ದು, ಅದನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು. ಮನವಿ ತಿರಸ್ಕರಿಸಿದ ಪೀಠ ದಂಡ ವಿಧಿಸಿ ಆದೇಶಿಸಿದೆ.