ಬೆಂಗಳೂರು: ಮುಖ್ಯಮಂತ್ರಿ ಬದಲಾದರೂ ರಾಜ್ಯದ ಬಗೆಗಿನ ಕೇಂದ್ರ ಸರ್ಕಾರದ ಧೋರಣೆ ಬದಲಾಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ. ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
"ಲಸಿಕೆ ಕೊರತೆ ಎದುರಾಗಿ ಹಲವು ತಿಂಗಳುಗಳೇ ಕಳೆದಿವೆ, ದೆಹಲಿಗೆ ತೆರಳಿದ ಸಿಎಂ ಲಸಿಕೆಗಳ ಬದಲು ಕೇವಲ 'ಭರವಸೆ' ತುಂಬಿಕೊಂಡು ಬಂದಿದ್ದಾರೆ! ಸಿಎಂ ಬದಲಾದರೂ ರಾಜ್ಯದೆಡೆಗೆ ಕೇಂದ್ರದ ಮಲತಾಯಿ ಧೋರಣೆ ಮಾತ್ರ ಬದಲಾಗಿಲ್ಲ. ಲಸಿಕೆ ನೀಡಲಾಗದೆ ಜನರನ್ನು ಅಪಾಯಕ್ಕೆ ದೂಡುತ್ತಿರುವ ಈ ಅಸಾಮರ್ಥ್ಯಕ್ಕೆ ರಾಜ್ಯ ಬಿಜೆಪಿ ತಕ್ಕ ಬೆಲೆ ತೆರುವುದು ನಿಶ್ಚಿತ ಎಂದಿದೆ.
ಬಿಜೆಪಿ ನಾಯಕರ ವಿರುದ್ಧ ಲೇವಡಿ: ಮತ್ತೊಂದೆರಡು ಬಿಜೆಪಿ ನಾಯಕರ ವಿಚಾರ ಪ್ರಸ್ತಾಪಿಸಿರುವ ಕಾಂಗ್ರೆಸ್, ಬಿಜೆಪಿಯಲ್ಲಿ ಮತ್ತೊಂದು ಜೋಡಿ ಬಿಜೆಪಿ ವರ್ಸಸ್ ಬಿಜೆಪಿ ಕಾದಾಟಕ್ಕೆ ಇಳಿದಿದೆ. ಮಾಜಿ ಸಚಿವರಾದ ಆರ್ ಅಶೋಕ್ ಹಾಗೂ ವಿ.ಸೋಮಣ್ಣ ಕಿತ್ತಾಡಿದ್ದು, ಅಭಿವೃದ್ಧಿಗಾಗಿ ಅಲ್ಲ. ರಾಜ್ಯದ ಹಿತಕ್ಕಾಗಿ ಅಲ್ಲ, ಜನರ ಸಮಸ್ಯೆಗಳಿಗಲ್ಲ, ಬದಲಿಗೆ ಕುರ್ಚಿಗಾಗಿ. ಮನೆಯೊಂದು ಸಾವಿರ ಬಾಗಿಲಾಗಿರುವ ರಾಜ್ಯ ಬಿಜೆಪಿ ಪಕ್ಷದಿಂದ ಸ್ಥಿರ ಸರ್ಕಾರವೂ ಸಾಧ್ಯವಿಲ್ಲ, ರಾಜ್ಯದ ಅಭಿವೃದ್ಧಿಯೂ ಇಲ್ಲ ಎಂದಿದೆ.
ನಾನು ಹಿರಿಯ ಎನ್ನುತ್ತಾ ಸ್ಥಾನಮಾನಕ್ಕೆ ಅಂಗಲಾಚುತ್ತಿರುವ ಕೆ ಎಸ್ ಈಶ್ವರಪ್ಪನವರಿಗೆ ರಿಟೈರ್ಡ್ ಆಗುವ ಮುಂಚೆಯೇ ಬಿಜೆಪಿ ಬಲವಂತವಾಗಿ ವಿಆರ್ಎಸ್ ಕೊಡುತ್ತಿದೆ. ಬಿಜೆಪಿಗೆ ಈಶ್ವರಪ್ಪ ಈಗ ಬಳಸಿ ಬಿಸಾಡಿದ ಒಡೆದ ಮಡಕೆ! ಈಶ್ವರಪ್ಪನವರೇ, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡುವ ಮುಂಚೆ ನಿಮ್ಮ ಸ್ಥಾನ ಮತ್ತು ಮಾನ ಉಳಿಸಿಕೊಳ್ಳುವುದನ್ನ ನೋಡಿ! ಎಂದು ಲೇವಡಿ ಮಾಡಿದೆ.
ಗುಟ್ಟಿನ ನಿಧಿ :ದೇಶದಲ್ಲಿ ಕೊರೊನಾ ಅಪಾಯದಲ್ಲಿರುವ 10 ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ಕೇಂದ್ರವೇ ಹೇಳಿದೆ. ರಾಜ್ಯದಲ್ಲಿ ಕೊರೊನಾ 3ನೇ ಅಲೆ ಸದ್ಯದಲ್ಲೇ ಅಪ್ಪಳಿಸುವ ಎಚ್ಚರಿಕೆ ಇದ್ದರೂ ಸರ್ಕಾರದ ಯಾವುದೇ ಮುನ್ನೆಚ್ಚರಿಕೆ ಕ್ರಮಗಳೂ ಇಲ್ಲ, ಅಸಲಿಗೆ ಸರ್ಕಾರವೇ ಇಲ್ಲ! ತನ್ನ ರಾಜಕೀಯ ಹಿತಾಸಕ್ತಿಗಾಗಿ ರಾಜ್ಯವನ್ನು ಬಲಿ ಕೊಡುತ್ತಿದೆ ಬಿಜೆಪಿ ಸರ್ಕಾರ.
ಪಿಎಂ ಕೇರ್ಸ್ ನಿಧಿಯನ್ನು ಕೋವಿಡ್ ಚಿಕಿತ್ಸೆಗೆ, ಲಸಿಕೆ ನೀಡಲು, ಕೋವಿಡ್ ಸಂತ್ರಸ್ತರಿಗೆ ಪರಿಹಾರ ನೀಡಲು, ಆಕ್ಸಿಜನ್ ಹಂಚಿಕೆಗೆ ಯಾವುದಕ್ಕೂ ಬಳಸಲಿಲ್ಲ. ಮಹಿಳೆಯೊಬ್ಬರು ತನ್ನ ಪತಿಯ ಚಿಕಿತ್ಸೆಗೆ ಪಿಎಂ ಕೇರ್ಸ್ನಿಂದ ಹಣ ಕೊಡಿಸುವಂತೆ ಸುಪ್ರೀಂ ಮೆಟ್ಟಿಲೇರಿದ್ದಾರೆ. ಈಗಲಾದರೂ ತಮ್ಮ 'ಗುಟ್ಟಿನ ನಿಧಿ'ಯ ಬಂಡವಾಳ ಮೋದಿ ಬಿಚ್ಚಿಡುವರೇ!? ಎಂದು ಕೇಳಿದೆ.
ಇದನ್ನೂ ಓದಿ : ಶಾಲೆಗಳ ಆರಂಭ ಸದ್ಯಕ್ಕಿಲ್ಲ, ಶಾಲಾ ಸಂಘಟನೆಗಳ ಜತೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ : ಸಿಎಂ ಸ್ಪಷ್ಟನೆ