ಬೆಂಗಳೂರು :ಹೊಂದಾಣಿಕೆ ರಾಜಕಾರಣದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮತ್ತು ಮೈಸೂರು -ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿರುವ ಕಾಂಗ್ರೆಸ್, ರಿಟೈರ್ಡ್ ಹರ್ಟ್ ಆಗಿರುವ ಸಿ ಟಿ ರವಿ ಈಗ ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಅವರ ಅರಣ್ಯ ರೋಧನಕ್ಕೆ ಪ್ರತಾಪ್ ಸಿಂಹ ದನಿ ಜೋಡಿಸಿದ್ದಾರೆ. ಇಬ್ಬರಿಗೂ ದಮ್ಮು ತಾಕತ್ತು ಇದ್ದರೆ ಅಡ್ಜಸ್ಟ್ಮೆಂಟ್ ಮಾಡಿಕೊಂಡ ತಮ್ಮ ಪಕ್ಷದ ನಾಯಕರ ಹೆಸರು ಹೇಳಿ ಆರೋಪಿಸಲಿ. ಅಂದಹಾಗೆ ಬಿಜೆಪಿಯೊಂದಿಗೆ ಅಡ್ಜಸ್ಟ್ ಮಾಡಿಕೊಂಡಿದ್ದ ಕುಮಾರಸ್ವಾಮಿ ತಲೆ ಸವರಿಕೊಂಡು ನಗುತ್ತಿದ್ದಾರಂತೆ ಅಲ್ಲವೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.
ಬಿಜೆಪಿಯಲ್ಲಿ ಸೋಲಿನ ಅವಲೋಕನ ಚೆನ್ನಾಗಿಯೇ ನಡೆಯುತ್ತಿದೆ! ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಬಿ ಎಸ್ ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡುತ್ತಿರುವ ಪ್ರತಾಪ್ ಸಿಂಹ ಹಾಗೂ ಸಿ ಟಿ ರವಿ ಅವರ ಹೇಳಿಕೆಗಳ ಹಿಂದಿರುವುದು ಮತ್ತದೇ ಪ್ರಹ್ಲಾದ್ ಜೋಶಿ, ಬಿ ಎಲ್ ಸಂತೋಷ್ ಜೋಡಿ. ಸೋಲಿನ ನಂತರ ನಾಪತ್ತೆಯಾಗಿರುವ ಈ ಜೋಡಿ ತೆರೆಯ ಹಿಂದೆ ನಿಂತು ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬಿಜೆಪಿಯಿಂದ ಉತ್ತರ ನಿರೀಕ್ಷಿಸಬಹುದೇ?: ಮತ್ತೊಂದು ಟ್ವೀಟ್ನಲ್ಲಿ ಸಂಸದ ರಮೇಶ್ ಜಿಗಜಿಣಗಿ ಹೇಳಿಕೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಹೊಸಬರಿಗೆ ಟಿಕೆಟ್ ನೀಡಿದವರನ್ನು ನೇಣಿಗೆ ಹಾಕಿ ಅಂದಿದ್ದಾರೆ ಬಿಜೆಪಿ ಸಂಸದ. ಈಗ ಯಾರನ್ನು ನೇಣಿಗೆ ಹಾಕುವಿರಿ ಬಿಜೆಪಿ ನಾಯಕರೆ? ಅಮಿತ್ ಶಾ ಅವರನ್ನೋ? ಬಿ ಎಲ್ ಸಂತೋಷರನ್ನೊ? ಪ್ರಹ್ಲಾದ್ ಜೋಶಿಯವರನ್ನೋ? ಮೋದಿಯವರನ್ನೋ? ಬೊಮ್ಮಾಯಿಯವರನ್ನೋ? ಹೊಣೆ ಯಾರು, ನೇಣುಗಂಬ ಯಾರಿಗೆ? ಸೋಲಿನ ನಾಯಕತ್ವ ವಹಿಸಿಕೊಳ್ಳುವವರು ಯಾರು? ಬಿಜೆಪಿಯಿಂದ ಉತ್ತರ ನಿರೀಕ್ಷಿಸಬಹುದೇ? ಎಂದು ಕೇಳಿದೆ.