ಬೆಂಗಳೂರು: ಲೆಕ್ಕ ಎಲ್ಲರಿಗೂ ಕೊಟ್ಟೇ ಕೊಡುತ್ತೇವೆ, ಲೆಕ್ಕ ಕೊಡದೇ ನಾವು ಎಲ್ಲೂ ಹೋಗುವುದಿಲ್ಲ. ಲೆಕ್ಕ ಕೊಡಿ ಎಂಬ ಅಭಿಯಾನ ಬಿಟ್ಟು, ಸರ್ಕಾರದ ಜೊತೆಗೆ ಕಾಂಗ್ರೆಸ್ ನಿಲ್ಲಲಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕೋವಿಡ್ -19 ಉಪಕರಣ ಖರೀದಿಯಲ್ಲಿ ಸುಮಾರು 2,000 ಕೋಟಿ ರೂ. ಹಗರಣವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದೆ. ಈ ಸಂಬಂಧ ಮೊನ್ನೆ ಸಂಪುಟ ಸಭೆಯಲ್ಲೂ ಚರ್ಚೆಯಾಗಿದೆ. ಈ ವೇಳೆ ಸಿಎಂ ಅವರೇ ಕೇವಲ 500-600 ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ಪರಿಕರಗಳನ್ನು ಖರೀದಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ. ಹೀಗಿದ್ದಾಗ 2,000 ಕೋಟಿ ರೂ.ಹಗರಣ ಎಲ್ಲಿಂದ ಬಂತು?. ಇದು ಸುಳ್ಳು ಆರೋಪ ಎಂದರು.
ಕೊರೊನಾ ಜಾಸ್ತಿಯಾಗಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಅನ್ನು ಕೊರೊನಾ ಕಾಂಗ್ರೆಸ್ ಅಂತ ಕರೆಯುವುದು ಸೂಕ್ತ. ರಾಜ್ಯದಲ್ಲಿ ಈ ತಬ್ಲಿಘಿಗಳಿಂದ ಕೊರೊನಾ ಜಾಸ್ತಿ ಆಗಿರುವುದು. ತಬ್ಲಿಘಿಗಳಿಗೆ ಕಾಂಗ್ರೆಸ್ ಪ್ರೋತ್ಸಾಹ ಮಾಡಿತ್ತು. ಕಾಂಗ್ರೆಸ್ನವರ ಕುಮ್ಮಕ್ಕಿನಿಂದಲೇ ಕೊರೊನಾ ಈ ಮಟ್ಟದಲ್ಲಿ ಜಾಸ್ತಿ ಆಗಲು ಕಾರಣವಾಗಿದೆ ಎಂದು ಪಾಟೀಲ್ ಹೇಳಿದರು.