ಕರ್ನಾಟಕ

karnataka

ಮಸ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಭಾರಿ ಗೆಲುವು..​ ಪ್ರತಾಪ್​ಗೌಡಗೆ ಹೀನಾಯ ಸೋಲು

By

Published : May 2, 2021, 2:54 PM IST

Updated : May 2, 2021, 3:40 PM IST

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ಬಾರಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂಬ ಆಶಯದೊಂದಿಗೆ ಒಟ್ಟಾಗಿ ಪ್ರಚಾರ ನಡೆಸಿದ್ದರು. ಅದು ಈಗ ಫಲ ಕೊಟ್ಟಿದೆ.

Basanagouda Turvihala
ಬಸವನಗೌಡ ತುರವಿಹಾಳ

ಬೆಂಗಳೂರು: ಸತತ ಪ್ರಯತ್ನದ ಬಳಿಕ ಕೊನೆಗೂ ರಾಜ್ಯ ಕಾಂಗ್ರೆಸ್ ನಾಯಕರು ಗೆಲುವಿನ ರುಚಿ ಕಂಡಿದ್ದಾರೆ. ಮಸ್ಕಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್​ ಸಫಲವಾಗಿದೆ. ಕೈ ಅಭ್ಯರ್ಥಿ ಬಸವನಗೌಡ ತುರವಿಹಾಳ್​ 30,606 ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಗೆದ್ದರೆ ಸಚಿವರಾಗುವ ಎಲ್ಲಾ ಅವಕಾಶವಿದ್ದರೂ ಕ್ಷೇತ್ರದತ್ತ ಮುಖ ಮಾಡದ ಹಾಗೂ ಕೋವಿಡ್ ಆತಂಕದ ಸಂದರ್ಭದಲ್ಲಿ ಕ್ಷೇತ್ರದ ಜನತೆಯ ಜತೆ ಇರದ ಕಾರಣಕ್ಕೆ ಪ್ರತಾಪ್ ಗೌಡ ಪಾಟೀಲ್​​ ಆಡಳಿತ ಪಕ್ಷದ ಪರ ಅಭ್ಯರ್ಥಿಯಾಗಿ ನಿಂತಿದ್ದರೂ ಸೋತಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 213 ಮತಗಳ ಅಂತರದ ಸೋಲು ಅನುಭವಿಸಿದ್ದ, ನಂತರ ಸತತ ಜನರ ಸಂಪರ್ಕದಲ್ಲಿದ್ದ ಹಾಗೂ ಜನರಿಗಾಗಿ ಸಾಕಷ್ಟು ಕಾರ್ಯ ನಿರ್ವಹಿಸಿದ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾದ ಬಸವನಗೌಡ ತುರವಿಹಾಳ ಅವರಿಗೆ ಕ್ಷೇತ್ರದ ಮತದಾರರು ಗೆಲುವಿನ ಶ್ರೀರಕ್ಷೆ ನೀಡಿದ್ದಾರೆ.

ಕಾಂಗ್ರೆಸ್ ಸೇರುವುದಕ್ಕೆ ಮುನ್ನ ಸಹ ಮೂಡಾ ಅಧ್ಯಕ್ಷರಾಗಿ ಸಾಕಷ್ಟು ಉತ್ತಮ ಕಾರ್ಯನಿರ್ವಹಿಸಿದ್ದು ಬಸವನಗೌಡ ತುರವಿಹಾಳರ ಗೆಲುವಿಗೆ ಕಾರಣವಾಗಿದೆ. ಅದೇನೇ ಇರಲಿ, ಕಾಂಗ್ರೆಸ್ ಪಾಲಿಗೆ ಕ್ಷೇತ್ರ ಮರಳಿ ಧಕ್ಕಿರುವುದು ಅತ್ಯಂತ ಸಮಾಧಾನಕರ ಸಂಗತಿ.

ರಾಜ್ಯ ಕಾಂಗ್ರೆಸ್ ನಾಯಕರ ಪಾಲಿಗೆ ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಮೊದಲ ಗೆಲುವಿನ ನಗೆ ಬೀರಲು ಡಿ ಕೆ ಶಿವಕುಮಾರ್​​ಗೆ ಸಹಾಯಕವಾಗಿ ಗೆಲುವು ಲಭಿಸಿದೆ.

2019ರ ಡಿಸೆಂಬರ್ ತಿಂಗಳಲ್ಲಿ ನಡೆದ 15 ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದ್ದ ಕಾಂಗ್ರೆಸ್ ನಂತರ ನಡೆದ ಚುನಾವಣೆಯಲ್ಲಿ ಸೋಲು ಕಂಡಿತ್ತು. 2020ರ ಮಾರ್ಚ್ ತಿಂಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಘೋಷಿತರಾದ ಡಿ ಕೆ ಶಿವಕುಮಾರ್ ಅದೇ ವರ್ಷ ಜುಲೈ 2ರಲ್ಲಿ ಅಧಿಕೃತವಾಗಿ ಪದಗ್ರಹಣ ಮಾಡಿದ್ದರು.

ಅಲ್ಲಿಂದ ಈವರೆಗೂ ಅವರು ಗೆಲುವಿಗಾಗಿ ಸಾಕಷ್ಟು ಸಾಹಸ ನಡೆಸಿ ವಿಫಲರಾಗಿದ್ದರು. ಗೆಲುವಿಗಾಗಿ ನಡೆಸಿದ ಹಲವು ಪ್ರಯತ್ನಗಳು ಹಾಗೂ ಪ್ರಯೋಗಗಳು ಫಲ ಕೊಟ್ಟಿರಲಿಲ್ಲ. ಬಿಜೆಪಿಯಲ್ಲಿದ್ದು, ಜನಪರ ಕಾರ್ಯನಿರ್ವಹಿಸಿ ಕಾಂಗ್ರೆಸ್ ಸೇರ್ಪಡೆಯಾಗಿ ಚುನಾವಣೆ ಎದುರಿಸಿದ ಬಸವನಗೌಡ ತುರವಿಹಾಳ ಮೂಲಕ ಕಾಂಗ್ರೆಸ್​ಗೆ ಗೆಲುವು ಸಿಕ್ಕಿದೆ.

ಒಗ್ಗಟ್ಟಿಗೆ ಸಿಕ್ಕ ಫಲ :ಹಿಂದೆ ನಡೆದ ಉಪಚುನಾವಣೆಗಳ ಸಂದರ್ಭ ರಾಜ್ಯ ಕಾಂಗ್ರೆಸ್ ನಾಯಕರು ಒಂದಾಗಿ ಪ್ರಚಾರ ಕಾರ್ಯ ನಡೆಸಿರಲಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತ್ಯೇಕವಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮತದಾರರಲ್ಲಿ ಗೊಂದಲ ಮೂಡಿಸಿದ್ದರು. ಆದರೆ, ಈ ಬಾರಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂಬ ಆಶಯದೊಂದಿಗೆ ಒಟ್ಟಾಗಿ ಪ್ರಚಾರ ನಡೆಸಿದ್ದರು. ಅದು ಈಗ ಫಲ ಕೊಟ್ಟಿದೆ.

ಬಿಜೆಪಿ ನಾಯಕನಿಂದ ದಕ್ಕಿದ ಗೆಲುವು :ಚುನಾವಣೆ ಕಣಕ್ಕಿಳಿಯುವ ಮುನ್ನ ಬಿಜೆಪಿಯಲ್ಲಿದ್ದು ಸಾಕಷ್ಟು ಜನಪರ ಕಾರ್ಯ ನಿರ್ವಹಿಸಿದ್ದ ಬಸವನಗೌಡ ತುರವಿಹಾಳ ಕ್ಷೇತ್ರದಲ್ಲಿ ಒಬ್ಬ ನಾಯಕರಾಗಿ ಮಾಡಿದ ಕಾರ್ಯ ಹಾಗೂ ವೈಯಕ್ತಿಕ ವರ್ಚಸ್ಸು ಕಾಂಗ್ರೆಸ್ ಮೇಲುಗೈ ಸಾಧಿಸಲು ಸಹಕಾರಿಯಾಗಿದೆ. ಬಿಜೆಪಿ ನಾಯಕರಾಗಿ ಹಾಗೂ ಮೂಡಾ ಅಧ್ಯಕ್ಷರಾಗಿ ಇವರು ಮಾಡಿದ ಕೆಲಸಗಳು ಮತದಾರರ ಮನ ಗೆದ್ದಿತ್ತು.

ಇದರಿಂದ ಪಕ್ಷ ಬದಲಾಯಿಸಿದರೂ ಕೂಡ ಮತದಾರರ ನಿಷ್ಠೆ ಬದಲಾಗದ ಹಿನ್ನೆಲೆ, ಸಚಿವರಾಗುವ ಅವಕಾಶ ತಮ್ಮ ಕ್ಷೇತ್ರದ ನಾಯಕರಿಗೆ ಇದ್ದರೂ ಸಹ ಪ್ರತಾಪ್ ಗೌಡ ಅವರಿಗೆ ಕೈಕೊಟ್ಟು ಬಸವನಗೌಡ ತುರವಿಹಾಳರನ್ನು ಗೆಲ್ಲಿಸುವಲ್ಲಿ ಮತದಾರರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಮಸ್ಕಿ: 13ನೇ ಸುತ್ತಿನಲ್ಲೂ ಕಾಂಗ್ರೆಸ್‌ನ ತುರವಿಹಾಳಗೆ ಮುನ್ನಡೆ

ಉತ್ತಮ ಕಾರ್ಯ ನಿರ್ವಹಣೆಯ ಮುಂದೆ ಬೇರೆ ಯಾವ ಪ್ರಭಾವವು ಕಾರ್ಯ ನಿರ್ವಹಿಸುವುದಿಲ್ಲ ಎನ್ನುವುದು ಮಸ್ಕಿ ಉಪಚುನಾವಣೆ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ವೈಯಕ್ತಿಕ ವರ್ಚಸ್ಸಿನ ಜತೆ ಕಾಂಗ್ರೆಸ್ ನಾಯಕರ ಒಮ್ಮತದ ಸಹಕಾರ ಬಸವನಗೌಡ ತುರವಿಹಾಳರ ಗೆಲುವಿನ ಶ್ರೀರಕ್ಷೆಯಾಗಿ ಬದಲಾಗಿದೆ.

ಯಾರಿಗೆ ಎಷ್ಟು ಮತ?

ಬಸನಗೌಡ ತುರವಿಹಾಳ (ಕಾಂಗ್ರೆಸ್​) ಪಡೆದ ಮತ - 86,337

ಪ್ರತಾಪ್​ಗೌಡ ಪಾಟೀಲ್​ (ಬಿಜೆಪಿ) ಪಡೆದ ಮತ - 55,731

30,606 ಮತಗಳಿಂದ ಕಾಂಗ್ರೆಸ್​ ಗೆಲುವು

Last Updated : May 2, 2021, 3:40 PM IST

ABOUT THE AUTHOR

...view details