ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಸದಸ್ಯರ ಧರಣಿ, ಗದ್ದಲ: ಒಂದು ರಾಷ್ಟ್ರ, ಒಂದು ಚುನಾವಣೆ ವಿಷಯ ಪ್ರಸ್ತಾಪಿಸಿದ ಸ್ಪೀಕರ್ - session

ಒಂದು ರಾಷ್ಟ್ರ, ಒಂದು ಚುನಾವಣೆ ವಿಷಯ ಕುರಿತಾಗಿ ಪರ - ವಿರೋಧ ಚರ್ಚೆಗಳು, ಗದ್ದಲ, ಆರೋಪ ಪ್ರತ್ಯಾರೋಪ, ಧರಣಿ ನಡೆದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.

congress leaders outrage against speaker at session
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಧರಣಿ, ಗದ್ದಲ: ಒಂದು ರಾಷ್ಟ್ರ, ಒಂದು ಚುನಾವಣೆ ವಿಷಯ ಪ್ರಸ್ತಾಪಿಸಿದ ಸ್ಪೀಕರ್

By

Published : Mar 4, 2021, 1:37 PM IST

ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನ ಇಂದಿನಿಂದ ವಿದ್ಯುಕ್ತವಾಗಿ ಆರಂಭವಾಯಿತು. ಒಂದು ರಾಷ್ಟ್ರ, ಒಂದು ಚುನಾವಣೆ ವಿಷಯ ಕುರಿತಾಗಿ ಪರ - ವಿರೋಧ ಚರ್ಚೆಗಳು, ಗದ್ದಲ, ಆರೋಪ ಪ್ರತ್ಯಾರೋಪ, ಧರಣಿ ನಡೆದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.

ಸದನದಲ್ಲಿ ಕಾಂಗ್ರೆಸ್ ಸದಸ್ಯರ ಧರಣಿ, ಗದ್ದಲ

ಆಡಳಿತ ಪಕ್ಷದವರು ಒಂದು ರಾಷ್ಟ್ರ, ಒಂದು ಚುನಾವಣೆ ವಿಷಯಕ್ಕೆ ಬೆಂಬಲ ಸೂಚಿಸಿದರೆ, ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ಕಲಾಪವನ್ನು ವಂದೇ ಮಾತರಂ ಮೂಲಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೈಗೆತ್ತಿಗೊಂಡರು. ಆಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನೀವು ಯಾವ ನಿಯಮಗಳ ಅಡಿ ಚರ್ಚೆಗೆ ಕೈಗೆತ್ತಿಗೊಂಡಿದ್ದೀರಿ? ಇದಕ್ಕೆ ಸದನದ ನಿಯಮಗಳಲ್ಲಿ ಅವಕಾಶ ಇದೆಯೇ ? ಎಂದು ಪ್ರಶ್ನಿಸಿದರು.

ಹಿರಿಯ ಸದಸ್ಯ ಹೆಚ್.ಕೆ. ಪಾಟೀಲ್ ಮಾತನಾಡಿ ಕ್ರಿಯಾಲೋಪ (ಪಾಯಿಂಟ್ ಆಪ್ ಆರ್ಡರ್) ವಿಚಾರ ಎತ್ತಿದರು. ಇದರ ಮೇಲೆ ಚರ್ಚೆಗೆ ಅವಕಾಶ ಕೊಡಿ ಎಂದರು.

ಕ್ರಿಯಾಲೋಪ ಬರುವುದಿಲ್ಲ ಎಂದ ಸ್ಪೀಕರ್, ಭಾಷಣದ ಪ್ರತಿ ಓದಲು ಆರಂಭಿಸಿದರು. ಇದರಿಂದ ಅಸಮಾಧಾನಗೊಂಡ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಭಾಷಣದ ಉದ್ದಕ್ಕೂ ಕಾಂಗ್ರೆಸ್ ಸದಸ್ಯರು ಸ್ಪೀಕರ್ ವಿರುದ್ಧ ಘೋಷಣೆ ಕೂಗಿದರು.

ಓದಿ:ಚರ್ಚೆ ವೇಳೆ ಸದನದಲ್ಲಿ ಭಾರಿ ಗಲಾಟೆ... ಶಾಸಕ ಸಂಗಮೇಶ್​ ವಿರುದ್ಧ ಸ್ಪೀಕರ್​ ಗರಂ

ಹೆಚ್.ಕೆ. ಪಾಟೀಲ್ ಅವರು ಕ್ರಿಯಾಲೋಪ ಎತ್ತಿದ್ದಾರೆ. ಅವರಿಗೆ ಮಾತನಾಡಲು ಅವಕಾಶ ಕೊಡಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಸ್ಪೀಕರ್ ಅವಕಾಶ ನೀಡಲಿಲ್ಲ. ಆಗ ಕಾಂಗ್ರೆಸ್ ಸದಸ್ಯರು ಪೇಪರ್ ಹರಿದು ಘೋಷಣೆ ಕೂಗುವುದನ್ನು ಮುಂದುವರೆಸಿದರು. ಗದ್ದಲದ ನಡುವೆಯೇ ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಸ್ಪೀಕರ್ ಭಾಷಣದ ಪ್ರತಿ ಓದಿ ಮುಗಿಸಿದರು.

ಶರ್ಟ್ ಬಿಚ್ಚಿದ ಶಾಸಕ :ಇದೇ ವೇಳೆ ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ. ಸಂಗಮೇಶ್ ಅವರು ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಶಾಸಕರಿಗೆ ಅವಕಾಶ ಇಲ್ಲ ಎಂದು ಕೂಗಿದರು.

ಗರಂ ಆದ ಸ್ಪೀಕರ್ : ಈ ವರ್ತನೆಗೆ ಗರಂ ಆದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸದನದಲ್ಲಿ ಗೌರವದಿಂದ ನಡೆದುಕೊಳ್ಳಿ, ಇದು ರಸ್ತೆಯಲ್ಲ. ಅಶಿಸ್ತನ್ನು ಸಹಿಸುವುದಿಲ್ಲ, ನಿಮ್ಮನ್ನು ಹೊರಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆಗ ಡಿ.ಕೆ. ಶಿವಕುಮಾರ್ ಅವರು, ಸಂಗಮೇಶ್ ಅವರಿಗೆ ಶರ್ಟ್ ಹಾಕಿಸಿದ ಘಟನೆ ನಡೆಯಿತು.

ABOUT THE AUTHOR

...view details