ಕರ್ನಾಟಕ

karnataka

By

Published : Jun 29, 2022, 6:09 PM IST

ETV Bharat / state

ಡಿಕೆಶಿ, ಸಿದ್ದರಾಮಯ್ಯ ಕಾಂಗ್ರೆಸ್​​ ಸರ್ವನಾಶ ಮಾಡ್ತಾರೆ, ಪರಮೇಶ್ವರ್​ರನ್ನ ಸಿಎಂ ಮಾಡಿದ್ರೆ ಸೂಕ್ತ : ಲಕ್ಷ್ಮಿನಾರಾಯಣ್​​

ಆಗಸ್ಟ್‌ನಲ್ಲಿ ದಾವಣಗೆರೆಯಲ್ಲಿ ನಡೆಯುವ ಸಮಾವೇಶದಲ್ಲಿ ಸಾರ್ವಜನಿಕರಿಗೆ ಕೆಲವು ವಿಷಯ ಬಹಿರಂಗ ಪಡಿಸುವೆ ಎಂದು ಎಂ ಡಿ ಲಕ್ಷ್ಮಿನಾರಾಯಣ್ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಎಚ್ಚರಿಸಿದ್ದಾರೆ..

congress-leader-md-lakshminarayan-outrage-against-dk-shivakumar-and-siddaramaiah
ಡಿಕೆಶಿ, ಸಿದ್ದರಾಮಯ್ಯ ಕಾಂಗ್ರೆಸ್​​ ಸರ್ವನಾಶ ಮಾಡ್ತಾರೆ, ಪರಮೇಶ್ವರ್​ರನ್ನ ಸಿಎಂ ಮಾಡಿದ್ರೆ ಸೂಕ್ತ: ಲಕ್ಷ್ಮೀನಾರಾಯಣ್​​

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರನ್ನೂ ಬಿಟ್ಟು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ ಡಿ ಲಕ್ಷ್ಮಿನಾರಾಯಣ್ (ಅಣ್ಣಯ್ಯ) ಬಹಿರಂಗವಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರಿಂದ ಪಕ್ಷ ಹಾಳಾಗುತ್ತದೆ. ನಾನು ಬಿಜೆಪಿಯಲ್ಲೂ ನೋಡಿದ್ದೇನೆ. ಅಲ್ಲಿ ಸರಿ ಇಲ್ಲ ಅಂತಾ ಇಲ್ಲಿಗೆ ಬಂದವನು. ಆದರೆ, ಇವರಿಬ್ಬರೇ ಕಚ್ಚಾಡ್ತಾರೆ. ನಾನು ನೊಂದು ಹೇಳುತ್ತೇನೆ. ಕಾಂಗ್ರೆಸ್‌ ಈವರೆಗೆ ದಲಿತ ಸಿಎಂ ಮಾಡಿಲ್ಲ. ಈಗ ಈ ಇಬ್ಬರನ್ನು ಬಿಟ್ಟು ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕು. ಪರಮೇಶ್ವರ್ ದಲಿತ ಸಮುದಾಯದ ನಾಯಕ ಹಾಗೂ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರು ಎಂದು ಹೇಳಿದರು.

ನೇಪಥ್ಯಕ್ಕೆ ಸರಿಸುವ ಕೆಲಸ :ಸಿದ್ದರಾಮಯ್ಯ, ಡಿಕೆಶಿ ಪಕ್ಷವನ್ನು ಸರ್ವನಾಶ ಮಾಡುತ್ತಾರೆ. ಇಬ್ಬರನ್ನೂ‌ ಕರೆದು ಹೈಕಮಾಂಡ್ ಬುದ್ಧಿ ಹೇಳಬೇಕು. ಇಲ್ಲದೇ ಹೋದರೆ ಕಾರ್ಯಕರ್ತರು ನಿರಾಶರಾಗುತ್ತಾರೆ. ಪಕ್ಷ ರಾಜ್ಯದಲ್ಲಿ ಏನೂ ಇಲ್ಲದಂತಾಗುತ್ತದೆ. ಈಗಲಾದರೂ ಹೈಕಮಾಂಡ್ ಮಧ್ಯಪ್ರವೇಶ ಮಾಡಲಿ. ಹಿರಿಯ ನಾಯಕರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಪಕ್ಷ ಕಟ್ಟಿದವರನ್ನೇ ನೇಪಥ್ಯಕ್ಕೆ ಸರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್​ನಲ್ಲಿ ಎಲ್ಲೇ ಹೋದ್ರೂ ಎರಡು ಗುಂಪುಗಳು ಕಾಣುತ್ತವೆ. ನಾನು ಸುಮಾರು 70 ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದೇನೆ. ಅಲ್ಲಿ ಒಂದು ಬಣ ಸಿದ್ದರಾಮಯ್ಯನ ಪರವಿದೆ. ಇನ್ನೊಂದು ಬಣ ಡಿಕೆಶಿ ಪರವಾಗಿದೆ. ಒಂದು ಬಣ ಸಿದ್ದರಾಮಯ್ಯ ಸಿಎಂ ಮಾಡುತ್ತೇವೆ ಎನ್ನುತ್ತದೆ, ಇನ್ನೊಂದು ಬಣ ಡಿಕೆಶಿ ಸಿಎಂ ಮಾಡಬೇಕು ಅನ್ನುತ್ತೆ. ಈ ರೀತಿ ಬಣ ಸರಿಯಲ್ಲ. ಇದನ್ನು ಕಾರ್ಯಕರ್ತರು ಒಪ್ಪೋದಕ್ಕೆ ಸಿದ್ಧರಿಲ್ಲ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಲಕ್ಷ್ಮೀನಾರಾಯಣ್​​ ಬರೆದ ಪತ್ರ

ಸಿದ್ದರಾಮಯ್ಯ, ಡಿಕೆಶಿಗೆ ಬಹಿರಂಗ ಪತ್ರ :ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಬಹಿರಂಗ ಪತ್ರವನ್ನೂ ಬರೆದು ಎಂ.ಡಿ.ಲಕ್ಷ್ಮಿನಾರಾಯಣ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. 'ತಾವು ನನ್ನ ಹುಟ್ಟು ಹಬ್ಬಕ್ಕೆ ಆಗಮಿಸಿ ಸಿಹಿ ತಿನ್ನಿಸಿ ನಂತರ ತಮ್ಮ ಮನೆಗೆ ರಾತ್ರಿ ಬರುವಂತೆ ಹೆಬ್ಬಾಳ ಶಾಸಕರು ಕರೆದುಕೊಂಡು ಬಂದು, ತಾವು ಹಾಗೂ ಶಾಸಕರು ಹೇಳಿದ್ದೇನು?. ತುರುವೇಕೆರೆ ಕ್ಷೇತ್ರದಿಂದ ನೀನು ಸ್ಪರ್ಧೆ ಮಾಡಬೇಡ, ನಾನು ಕಾಂತರಾಜುಗೆ ಸೀಟು ಕೊಡುವೆ ಎಂದು ಮಾತು ಕೊಟ್ಟಿರುವ, ನಿನ್ನನ್ನು ಎಂಎಲ್​ಸಿ ಮಾಡುತ್ತೇನೆಂದು ಹೇಳಿದ ಮಾತು ಸುಳ್ಳೇನು' ಎಂದು ಪ್ರಶ್ನಿಸಿದ್ದಾರೆ.

ಮಾತು ತಪ್ಪಿದ ನಿಮಗೆ (ಸಿದ್ದರಾಮಯ್ಯ) ನಿಮ್ಮ ಆತ್ಮಸಾಕ್ಷಿ ಈಗ ಒಪ್ಪುತ್ತಿದೆಯೇ? ಹಲವಾರು ವರ್ಷಗಳಿಂದ ಮನೆ-ಮಠ ತೊರೆದು ರಾತ್ರಿ ಹಗಲೆನ್ನದೆ ಕಾಂಗ್ರೆಸ್ ಪಕ್ಷದ ಹಿಂದುಳದ ವರ್ಗಗಳ ಸಂಘಟನೆ ಮಾಡಿದ್ದು, ಈ ಘೋರ ಅನ್ಯಾಯ ಸಹಿಸಲು ಸಾಧ್ಯವೇ? ಎಂದೂ ಕೇಳಿದ್ಧಾರೆ. ಡಿ.ಕೆ.ಶಿವಕುಮಾರ್​​ಅವರೇ, ತುಮಕೂರು ಸಭೆ ಮುಗಿಸಿ ದಾಬಸ್​ಪೇಟೆ ಹತ್ತಿರ ಕಾಂತರಾಜು ಹಾಗೂ ಗುಬ್ಬಿ ಶ್ರೀನಿವಾಸ್ ಮತ್ತು ಮನೋಹರ್ ಜೊತೆಯಲ್ಲಿ ಮಧ್ಯಾಹ್ನ ಊಟ ಮಾಡುವಾಗ ತುರುವೇಕೆರೆಗೆ ಕಾಂತರಾಜು, ಗುಬ್ಬಿಗೆ ಶ್ರೀನಿವಾಸ್, ತಿಪಟೂರಿಗೆ ಷಡಾಕ್ಷರಿಯವರಿಗೆ ಸೀಟು ಕೊಡುವೆ. ನಿಮ್ಮ ಸಂಘಟನೆ ರಾಜ್ಯಾದ್ಯಂತ ತುಂಬಾ ಒಳ್ಳೆಯ ಮಾಹಿತಿ ಬರುತ್ತಿದೆ. ಆದ್ದರಿಂದ ತಮ್ಮನ್ನು ಎಂಎಲ್​ಸಿ ಮಾಡಿ ರಾಜ್ಯದಲ್ಲಿ ಉಳಸಿಕೊಳ್ಳುವೆ ಎಂದು ಹೇಳಿದ್ದು, ಮರೆತು ಹೋಯಿತೆ ಅಂತಾನೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ನಿಮ್ಮಿಬ್ಬರ ಮಧ್ಯೆ ಇಡೀ ದಿವಸ ನಡೆಸಿದ ಗುದ್ದಾಟವೇನು?. ಪಕ್ಷದ ಸಂಘಟನೆ ಬಗ್ಗೆ ಗುದ್ದಾಟ ಮಾಡಿ ಬರಿಗೈಯಲ್ಲಿ ವಾಪಸ್‌ ಬರಲು ಕಾರಣವೇನು?. ಹೈಕಮಾಂಡ್ ನೀವಿಬ್ಬರೂ ಕೊಟ್ಟ ಹೆಸರುಗಳನ್ನು ಸಾರಾ ಸಗಟಾಗಿ ತಿರಸ್ಕಾರ ಮಾಡಲು ಕಾರಣವೇನು?. ನಂತರ ತಾವೊಬ್ಬರೆ ದೆಹಲಿಗೆ 22ರ ರಾತ್ರಿ ಹೋಗಿ 23ರಂದು ಇಡೀ ದಿವಸ ಸುಮ್ಮನಿದ್ದು, ಸಂಜೆ ಯಾರ ಒತ್ತಡಕ್ಕೆ ಮಣಿದು ಹೆಸರು ಬದಲಾವಣೆ ಮಾಡಿ ದೆಹಲಿ ಏರ್​ಪೋರ್ಟ್​ನಿಂದ ನನಗೆ ದೂರವಾಣಿ ಮಾಡಿ ಹೇಳಿದ ಮಾತೇನು ಎಂದು ಪತ್ರದಲ್ಲಿ ಖಾರವಾಗಿ ಉಲ್ಲೇಖಿಸಿದ್ದಾರೆ.

ದಯವಿಟ್ಟು ನಾನು ಮುಕ್ತವಾಗಿ ವಿಷಯ ತಿಳಿಸಿರುವೆ. ಇನ್ನೂ ಬೇಕಾದಲ್ಲಿ ಆಗಸ್ಟ್‌ನಲ್ಲಿ ದಾವಣಗೆರೆಯಲ್ಲಿ ನಡೆಯುವ ಸಮಾವೇಶದಲ್ಲಿ ಸಾರ್ವಜನಿಕರಿಗೆ ಕೆಲವು ವಿಷಯ ಬಹಿರಂಗ ಪಡಿಸುವೆ. ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಈ ರೀತಿಯ ಕೆಟ್ಟ ನಡವಳಿಕೆಯ ಕಾಂಗ್ರೆಸ್‌ ಪಕ್ಷದ ನಾಯಕತ್ವ ಹಾಗೂ ನಿಮ್ಮಿಬ್ಬರ ಕುರ್ಚಿಯ ಕಚ್ಚಾಟದಿಂದ ಕಾರ್ಯಕರ್ತರು ಬಲಿಪಶುವಾಗಲಿದ್ದಾರೆ. ದೇವರು ನಿಮ್ಮನ್ನು ಚೆನ್ನಾಗಿಡಲೆಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಚರ್ಚೆ: ಮುಂಬರುವ ಚುನಾವಣೆಗಳ ಬಗ್ಗೆ ಕಾರ್ಯತಂತ್ರಕ್ಕೆ ಸೂಚನೆ

ABOUT THE AUTHOR

...view details