ಕರ್ನಾಟಕ

karnataka

By

Published : Dec 23, 2019, 3:42 PM IST

ETV Bharat / state

ಪ್ರತಿಭಟನೆಗಳಿಗೆ ಕಾಂಗ್ರೆಸ್​​​ ಕುಮ್ಮಕ್ಕು ಕೊಟ್ಟಿಲ್ಲ: ದಿನೇಶ್​​ ಗುಂಡೂರಾವ್​​​

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸಾರ್ವಜನಿಕರೇ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗಳಿಗೆ ಕಾಂಗ್ರೆಸ್ ಯಾವುದೇ ರೀತಿಯಲ್ಲಿ ಕುಮ್ಮಕ್ಕು ಕೊಟ್ಟಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.

Dinesh Gundurao pressmeet
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆಂಗಳೂರು: ಎನ್ಆರ್​ಸಿ ಮತ್ತು ಸಿಎಎ ವಿರುದ್ಧ ಸಾರ್ವಜನಿಕರೇ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಪ್ರತಿಭಟನೆಗಳಿಗೆ ಕುಮ್ಮಕ್ಕು ಕೊಡ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ

ಗಾಂಧಿನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಮಾಡ್ತಿರೋದು ದೇಶಕ್ಕೆ ಒಳ್ಳೆಯದಲ್ಲ. ಬಿಜೆಪಿ ಅನಾವಶ್ಯಕವಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದೆ. ಅವರ ಉದ್ದೇಶವೇ ಹಿಂದು ವರ್ಸಸ್ ಮುಸ್ಲಿಂ ವಾತಾವರಣ ನಿರ್ಮಿಸಬೇಕು ಎಂಬುದು. ಆ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ಬಿಜೆಪಿ ವರ್ಸಸ್ ಕಾಂಗ್ರೆಸ್ ರೀತಿ ಬಿಂಬಿಸಲು ಹೊರಟಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಮೇಲೆ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಪ್ರಧಾನಿ ಒಂದು ಮಾತು ಹೇಳ್ತಾರೆ. ಗೃಹ ಸಚಿವ ಅಮಿತ್ ಶಾ ಅವರು ಒಂದು ಮಾತು ಹೇಳ್ತಾರೆ. ಹೀಗಿರುವಾಗ ಪ್ರಹ್ಲಾದ್ ಜೋಶಿ ಅವರು ಹೇಳೋದನ್ನ ನಾವು ಹೇಗೆ ನಂಬೋದು. ದೇಶದ ಅರ್ಥವ್ಯವಸ್ಥೆ ಹದಗೆಟ್ಟಿದೆ. ಈ ಬಗ್ಗೆ ಬಿಜೆಪಿಗರು ಚರ್ಚೆ ನಡೆಸಲು ಸಿದ್ಧರಿಲ್ಲ. ಹೀಗಾಗಿಯೇ ಬಿಜೆಪಿ ಮಹಾರಾಷ್ಟ್ರ ಕಳೆದುಕೊಂಡಿದೆ. ಈಗ ಜಾರ್ಖಂಡ್​​ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಲಕ್ಷಣಗಳಿವೆ ಎಂದರು.

ಪ್ರಧಾನಿ ದಾರಿ ತಪ್ಪಿಸಿದ್ದಾರೆ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಘರ್ಷಣೆ ವಿಚಾರ ಮಾತನಾಡಿದ ಅವರು, ಪ್ರಧಾನಿಯವರ ನಿನ್ನೆಯ ಹೇಳಿಕೆ ಜನರನ್ನ ದಾರಿ ತಪ್ಪಿಸುವಂತಿದೆ. ಹಲವು ಕಡೆ ಡಿಟೆಕ್ಷನ್​ ಸೆಂಟರ್ ತೆರೆಯಲಾಗಿದೆ. ಇದರ ಬಗ್ಗೆ ಅವರು ಎಲ್ಲೂ ಬಾಯ್ಬಿಡ್ತಿಲ್ಲ. ಪ್ರತಿಭಟನೆಗೆ ಕಾಂಗ್ರೆಸ್ ಕಾರಣ ಅಂತ ಆರೋಪಿಸ್ತಾರೆ. ನಾವು ಎಲ್ಲೂ ಬಹಿರಂಗವಾಗಿ ಪ್ರತಿಭಟನೆ ಮಾಡಿಲ್ಲ. ದೇಶದಲ್ಲಿ ನೂರೆಂಟು ಸಮಸ್ಯೆಗಳಿವೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಇಂತಹ ಸಂದರ್ಭದಲ್ಲಿ ಇದೆಲ್ಲವೂ ಬೇಕಿತ್ತಾ ಎಂದು ದಿನೇಶ್​ ಗುಂಡೂರಾವ್​ ಪ್ರಶ್ನಿಸಿದರು.

ಸ್ಟ್ಯಾಂಡಿಂಗ್ ಕಮಿಟಿಗೆ ನೀಡಬೇಕಿತ್ತು:ಪೌರತ್ವ ತಿದ್ದುಪಡಿ ಕಾಯ್ದೆ ತರುವ ಮುನ್ನ ಸ್ಟ್ಯಾಂಡಿಂಗ್ ಕಮಿಟಿಗೆ ನೀಡಬೇಕಿತ್ತು. ಬಹುಮತವಿದೆ ಅಂತ ಏಕಾಏಕಿ ಬಿಲ್ ತಂದಿದ್ದಾರೆ. ಮಂಗಳೂರಲ್ಲಿ ಅನಾವಶ್ಯಕವಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಇವರು ಎಷ್ಟೇ ಪ್ರಯತ್ನ ಮಾಡಿದ್ರೂ ಎನ್ಆರ್​ಸಿ ಸಾಧ್ಯವಿಲ್ಲ. ಪ್ರಧಾನಿ, ಶಾ ಹಠ ಬಿಟ್ಟು ಇದನ್ನ ಕೈಬಿಡಬೇಕು ಎಂದು ಒತ್ತಾಯಿಸಿದರು.

ಜೋಶಿಗೆ ಟಾಂಗ್:ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಟಾಂಗ್ ನೀಡಿದ ಗುಂಡೂರಾವ್, ಜೋಶಿಯವರು ಸಿಎಎ ಮತ್ತು ಎನ್ಆರ್​ಸಿ ಬಗ್ಗೆ ಮೊದಲು ಸ್ಪಷ್ಟಪಡಿಸಲಿ. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಪ್ರಧಾನಿ ನಿನ್ನೆಯೂ ಹಠವನ್ನ ಬಿಟ್ಟಿಲ್ಲ. ಇದು ದೇಶವನ್ನ ವಿಭಜಿಸುವ ಸಂಚು ಎಂದು ಕೇಂದ್ರ ಸರ್ಕಾರದ ವಿರುದ್ಧ ದಿನೇಶ್​ ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ನೀವು ನೆಲ ಕಚ್ಚುತ್ತೀರ. ಲೋಕಪಾಲ್ ಮಸೂದೆ ತರುವಾಗ ನಾವು ಎಲ್ಲರ ಅಭಿಪ್ರಾಯ ಆಲಿಸಿದ್ದೆವು. ನೀವು ಯಾರ ಅಭಿಪ್ರಾಯವನ್ನೂ ಪಡೆಯದೆ ಜಾರಿ ಮಾಡ್ತಿದ್ದೀರ. ಭೂತಾನ್, ಮ್ಯಾನ್ಮಾರ್, ಶ್ರೀಲಂಕಾ ಯಾಕೆ ಸೇರಿಸಿಲ್ಲ. ಕೇವಲ ಪಾಕ್, ಬಾಂಗ್ಲಾ ಯಾಕೆ ಸೇರಿಸಿದ್ದು? ಇಲ್ಲಿಯೇ ಇವರ ಬೂಟಾಟಿಕೆ ಅರ್ಥವಾಗ್ತಿಲ್ಲವೇ ಎಂದು ಟೀಕಿಸಿದರು.

ಸಮರ್ಥರ ನೇಮಕ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ವಿಚಾರ ಕುರಿತು ಮಾತನಾಡಿ, ನಾವು ಸುಮ್ಮನೇ ರಾಜೀನಾಮೆ ಕೊಟ್ಟಿಲ್ಲ. ಎಲ್ಲವನ್ನೂ ತಿಳಿದುಕೊಂಡೇ ರಾಜೀನಾಮೆ ಕೊಟ್ಟಿದ್ದೇವೆ. ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ. ರಿಸೈನ್ ಮಾಡಿದ ಮೇಲೆ ಮುಗಿತು. ಬೇರೆಯವರಿಗೆ ಸಪೋರ್ಟ್ ಮಾಡೋಕೆ ನಾವು ರೆಡಿ. ಸಮರ್ಥರನ್ನ ಅಧ್ಯಕ್ಷ ಸ್ಥಾನಕ್ಕೆ ನೇಮಿಸ್ತಾರೆ ಎಂದು ವಿವರಿಸಿದರು.

ABOUT THE AUTHOR

...view details