ಕರ್ನಾಟಕ

karnataka

ETV Bharat / state

ಕನಕಪುರದಲ್ಲಿ ಹೀನಾಯವಾಗಿ ಸೋತವರು ಈಗ ವಿಪಕ್ಷ ನಾಯಕ: ಕಾಂಗ್ರೆಸ್ ಟೀಕೆ

ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರಂತಹ ನಾಯಕರೆದುರು ತರಗೆಲೆಯಂತಹ ವ್ಯಕ್ತಿಯನ್ನು ಬಿಜೆಪಿ ತಂದು ಕೂರಿಸಿದೆ. ಬಿಜೆಪಿ ನಾಯಕರ ಬರಗಾಲ ಎದುರಿಸುತ್ತಿರುವುದಕ್ಕೆ ಇದು ನಿದರ್ಶನ ಎಂದು ಕಾಂಗ್ರೆಸ್​ ಲೇವಡಿ ಮಾಡಿದೆ.

By ETV Bharat Karnataka Team

Published : Nov 18, 2023, 6:22 AM IST

Updated : Nov 18, 2023, 6:41 AM IST

congress
ಕಾಂಗ್ರೆಸ್

ಬೆಂಗಳೂರು:ಈವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬ ಮಾಡಿ ಕಾಂಗ್ರೆಸ್​ ಟೀಕೆ ಗುರಿಯಾಗಿದ್ದ ಬಿಜೆಪಿ ಕೊನೆಗೂ ಮಾಜಿ ಉಪಮುಖ್ಯಮಂತ್ರಿ ಆರ್​ ಅಶೋಕ್​ ಅವರಿಗೆ ವಿಪಕ್ಷ ನಾಯಕನಾಗಿ ಪ್ರಮುಖ ಜವಾಬ್ದಾರಿ ನೀಡಿದೆ. ಆದ್ರೆ ಕನಕಪುರದಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿರುವ ಬಿಜೆಪಿ ಅಭ್ಯರ್ಥಿ ಈಗ ವಿರೋಧ ಪಕ್ಷದ ನಾಯಕ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.

ವಿಪಕ್ಷ ನಾಯಕ ಸಂಬಂಧ ಸರಣಿ ಎಕ್ಸ್ ಪೋಸ್ಟ್ ಮಾಡಿರುವ ರಾಜ್ಯ ಕಾಂಗ್ರೆಸ್, ವಿರೋಧ ಪಕ್ಷದ ನಾಯಕನಾಗಲು ಬೇಕಿರುವ ಜ್ಞಾನ, ಅರ್ಹತೆ ಯಾವುದೂ ಇಲ್ಲದ ನಕಲಿ ಸಾಮ್ರಾಟನೇ ಕೊನೆಯದಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಪಕ್ಷವು ನಾಯಕರ ಬರಗಾಲ ಎದುರಿಸುತ್ತಿರುವುದಕ್ಕೆ ಇದು ನಿದರ್ಶನ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರಂತಹ ನಾಯಕರೆದುರು ತರಗೆಲೆಯಂತಹ ವ್ಯಕ್ತಿಯನ್ನು ಬಿಜೆಪಿ ತಂದು ಕೂರಿಸಿದೆ ಎಂದು ಲೇವಡಿ ಮಾಡಿದೆ.

ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದೇ ಬಿಜೆಪಿಯ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅರ್ಹತೆಯೇ?. ಈ ಆಯ್ಕೆ ಕುಮಾರಸ್ವಾಮಿಯವರ ನಿರ್ದೇಶನದ ಮೇರೆಗೆ ಆಗಿದ್ದೋ, ಜೆಡಿಎಸ್ ಶಾಸಕರ ಅಭಿಪ್ರಾಯದ ಆಧಾರದಲ್ಲಿ ಆಗಿದ್ದೋ, ಬಿಜೆಪಿ ಶಾಸಕರ ಅಭಿಪ್ರಾಯದಿಂದ ಆಗಿದ್ದೋ?. ರಾಜ್ಯಕ್ಕೆ ವಿರೋಧ ಪಕ್ಷದ ನಾಯಕನನ್ನು ಕೊಡಿ ಎಂದರೆ ವಿರೋಧ ಪಕ್ಷವನ್ನೇ ವಿರೋಧಿಸುವ ನಾಯಕರನ್ನು ನೀಡುತ್ತಿದೆ ಎಂದು ಕಾಂಗ್ರೆಸ್​ ಟೀಕಿಸಿದೆ.

ಚಹಾ ಕುಡಿಯಲು ಹೋದ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ವಾಪಸ್ ಬಂದರಾ?. ಬಿಜೆಪಿಯಲ್ಲಿ ಚಹಾ ಕುಡಿಯುವವರು ಯಾರು, ಹಾಲು ಕುಡಿಯುವವರು ಯಾರು, ಹಾಲಾಹಲ ಕುಡಿಯುವವರು ಯಾರು ಎಂಬುದು ಸ್ವತಃ ಬಿಜೆಪಿಗೇ ತಿಳಿದಂತಿಲ್ಲ. ಯಾವುದೇ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೂ ಕಿತ್ತಾಡದಷ್ಟು ಬಿಜೆಪಿಯ ಕಿತ್ತಾಟ ಜೋರಾಗಿದೆ. ಬಿಜೆಪಿ ನಾಯಕರು ಸೇರುವ ಜಾಗದಲ್ಲಿ ಕೋಲು, ದೊಣ್ಣೆ ಹಾಗೂ ಇತರೆ ಯಾವುದೇ ಆಯುಧವಾಗಿ ಬಳಸಬಹುದಾದ ವಸ್ತುಗಳನ್ನು ದೊರಕದಂತೆ ನೋಡಿಕೊಳ್ಳಬೇಕು. ಅಕಸ್ಮಾತ್ ಹೊಡೆದಾಡಿಕೊಂಡರೆ ಆಸ್ಪತ್ರೆಗಳಲ್ಲಿ ನೂಕುನುಗ್ಗಲಾಗುವ ಸಾಧ್ಯತೆ ಇರುತ್ತದೆ ಎಂದು ಕುಟುಕಿದೆ.

ಸಿಎಂ ಹುದ್ದೆಯನ್ನು ಬಿಜೆಪಿ 2,500 ಕೋಟಿಗೆ ಮಾರಾಟ ಮಾಡಿದ ಸತ್ಯವನ್ನು ಹೊರಗೆಡವಿದ್ದ ಯತ್ನಾಳ್ ಅವರನ್ನು ಖರೀದಿಸಲು ಯಾರೋ ಹೋಗಿದ್ದರಂತೆ. ಯತ್ನಾಳ್ ರ ಖರೀದಿಗೆ ಹೋದವರು ಯಾರು?. ಯಾವ ವ್ಯವಹಾರ ಕುದುರಿಸುವುದಕ್ಕೆ?. ಹೈಕಮಾಂಡ್ ಕಡೆಯ ಏಜೆಂಟರಾ?. ವಿಜಯೇಂದ್ರ ಕಡೆಯ ಏಜೆಂಟರಾ?. ವಿರೋಧ ಪಕ್ಷದ ನಾಯಕ ಹುದ್ದೆಯನ್ನು ಎಷ್ಟಕ್ಕೆ ಬಿಕರಿಗೆ ಇಟ್ಟಿದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂಓದಿ:ಆರ್​ ಅಶೋಕ್​ಗೆ ಪ್ರತಿಪಕ್ಷ ನಾಯಕನ ಪಟ್ಟ: ಪರಿಷತ್ ವಿಪಕ್ಷ ನಾಯಕನ ಆಯ್ಕೆ ಮುಂದೂಡಿಕೆ

Last Updated : Nov 18, 2023, 6:41 AM IST

ABOUT THE AUTHOR

...view details