ಕರ್ನಾಟಕ

karnataka

By

Published : Aug 8, 2021, 2:39 AM IST

ETV Bharat / state

ರಾಜ್ಯದ ರೈತರ ಮಕ್ಕಳ ಶಿಷ್ಯವೇತನ ಯೋಜನೆ ರೂಪುರೇಷೆ, ಷರತ್ತುಗಳು ಹೀಗಿವೆ

10ನೇ ತರಗತಿ ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ, ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶ ಪಡೆದಿರುವ ರೈತರ ಮಕ್ಕಳಿಗೆ ಶಿಷ್ಯವೇತನ ಯೋಜನೆ ಅನ್ವಯವಾಗಲಿದೆ.

conditions-of-farmers-children-scholarship-scheme
ರಾಜ್ಯದಲ್ಲಿ ರೈತ ಮಕ್ಕಳ ಶಿಷ್ಯವೇತನ ಯೋಜನೆ ಜಾರಿ

ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಮೊದಲ ದಿನ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ರೈತರ ಮಕ್ಕಳಿಗೆ ಶಿಷ್ಯವೇತನ ನೀಡುವ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಲಾಗಿದೆ. ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಯೋಜನೆಯನ್ನು ಜಾರಿಗೆ ತರಲು ಯೋಜನೆಯ ರೂಪುರೇಷೆ ರಚಿಸಿ, ಆದೇಶಿಸಿದೆ.

10ನೇ ತರಗತಿ ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ, ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶ ಪಡೆದಿರುವ ರೈತರ ಮಕ್ಕಳಿಗೆ ಇದು ಅನ್ವಯವಾಗಲಿದೆ. ಅವರ ಬ್ಯಾಂಕ್‌ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ 2021-22ನೇ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ ಶಿಷ್ಯವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯವೇತನ ರೂಪದಲ್ಲಿ ಪಾವತಿಸಲಾಗುತ್ತದೆ. ಈ ಸಂಬಂಧ 1,000 ಕೋಟಿ ರೂ. ಹೆಚ್ಚುವರಿ ವೆಚ್ಚದಲ್ಲಿ ಒಂದು ಹೊಸ ಶಿಷ್ಯ ವೇತನ (Scholarship) ಯೋಜನೆ ಜಾರಿಗೆ ತರಲಾಗುತ್ತಿದೆ.

ಯಾರಿಗೆ ಎಷ್ಟು ಶಿಷ್ಯವೇತನ?:

  • ಪಿಯುಸಿ / ಐಟಿಐ/ಡಿಪ್ಲೋಮಾ ಅರಸುವ ಹುಡುಗರಿಗೆ 2,500 ರೂ., ಹುಡುಗಿ/ಅನ್ಯ ಲಿಂಗದವರಿಗೆ 3,000 ರೂ. ಶಿಷ್ಯವೇತನ ನೀಡಲಾಗುತ್ತದೆ.
  • ಬಿ.ಎ/ಬಿ.ಎಸ್.ಸಿ. ಬಿ.ಕಾಂ ಮಾಡುವ ಹುಡುಗರಿಗೆ 5,000 ರೂ., ಹುಡುಗಿಯರಿಗೆ 5,500 ರೂ. ನೀಡಲಾಗುತ್ತದೆ.
  • ಎಲ್.ಎಲ್.ಬಿ/ ಪ್ಯಾರ ಮೆಡಿಕಲ್, ಬಿ-ಫಾರ್ಮ್, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ ಮಾಡುವ ಹುಡುಗರಿಗೆ 7,500 ರೂ. ಮತ್ತು ಹುಡುಗಿಯರಿಗೆ 8,000 ರೂ. ನೀಡಲಾಗುತ್ತದೆ.
  • ಎಂ.ಬಿ.ಬಿ.ಎಸ್, ಬಿ.ಇ/ ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ 10,000 ರೂ. ಮತ್ತು ವಿದ್ಯಾರ್ಥಿನಿಯರಿಗೆ 11,000 ರೂ. ಶಿಷ್ಯವೇತನ ನೀಡಲಾಗುತ್ತದೆ.

ಶಿಷ್ಯವೇತನಕ್ಕೆ ಅರ್ಹತೆ ಏನು?:

  • ರೈತ ಎಂದರೆ ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ ಮಾಡುವಂತಹ/ಕೃಷಿ ಮಾಡುವಂತಹ ಜಮೀನನ್ನು ತನ್ನ ಹೆಸರಿನಲ್ಲಿ ಹೊಂದಿರುವಂತಹ ವ್ಯಕ್ತಿಯಾಗಿರಬೇಕು.
  • ಮಕ್ಕಳು, ಎಂದರೆ ಕಾನೂನಿನ ಪ್ರಕಾರ ದತ್ತು ಪಡೆದಿರುವ ಮಕ್ಕಳು ಸೇರಿದಂತೆ ಪೋಷಕ/ಪೋಷಕರ ಜೈವಿಕ ಸಂತತಿ. ಒಂದು ಪಕ್ಷ ಯಾವುದೇ ಮಕ್ಕಳಿಗೆ ಪೋಷಕ/ಪೋಷಕರು ಇಲ್ಲದೆ ಇದ್ದ ಸಂದರ್ಭದಲ್ಲಿ ಉಳುಮೆ ಮಾಡುವಂತಹ/ಕೃಷಿ ಮಾಡುವಂತಹ ಜಮೀನನ್ನು ಅವರು ಹೊಂದಿರಬೇಕು.

ಶಿಷ್ಯವೇತನದ ಷರತ್ತುಗಳೇನು?:

  • ರೈತರ ಮಕ್ಕಳು ಕರ್ನಾಟಕ ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ಶಿಷ್ಯ ವೇತನಕ್ಕೆ ಮಾತ್ರ ಅರ್ಹರಾಗುತ್ತಾರೆ. ಆದರೆ, ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ಶ್ರೇಣಿ ಇತ್ಯಾದಿಗಳ ಆಧಾರದ ಮೇಲೆ ಪಡೆಯುವ ಶಿಷ್ಯವೇತನ/ಪ್ರಶಸ್ತಿ (award)/ಪ್ರತಿಫಲ (reward) - ಇವುಗಳನ್ನು ರೈತರ ಮಕ್ಕಳು ಪಡೆದಿದ್ದರೂ, ಈ ಶಿಷ್ಯವೇತನ ಪಡೆಯಲು ಅರ್ಹರಾಗಿರುತ್ತಾರೆ.
  • ರೈತರ ಮಕ್ಕಳ ತಂದೆ-ತಾಯಿ ಇಬ್ಬರೂ ಕೃಷಿ ಜಮೀನಿನ ಒಡೆಯರಾಗಿದ್ದರೆ, ಈ ಯೋಜನೆಯಲ್ಲಿ ಒಂದು ಶಿಷ್ಯವೇತನಕ್ಕೆ ಮಾತ್ರ ರೈತರ ಮಕ್ಕಳು ಅರ್ಹರಾಗಿರುತ್ತಾರೆ.
  • ಈ ಶಿಷ್ಯ ವೇತನವು ಶಿಕ್ಷಣದ ಯಾವುದೇ ಕೋರ್ಸಿನ ಸೆಮಿಸ್ಟರ್/ಶೈಕ್ಷಣಿಕ ವರ್ಷಗಳಿಗೆ ಮಿತಿಯಾಗಿರತಕ್ಕದ್ದು, ಕೋರ್ಸ್‌ನ ಸಮಿಸ್ಟರ್‌ನಲ್ಲಿ/ಶೈಕ್ಷಣಿಕ ವರ್ಷದಲ್ಲಿ ಅನುತ್ತೀರ್ಣ ಹೊಂದಿ ಮತ್ತೆ ಆ ಸೆಮಿಸ್ಟರ್ /ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸದ ಪುನರಾವರ್ತನೆಯಾದರೆ ಶಿಷ್ಯವೇತನ ಪಡೆಯಲು ಅರ್ಹರಾಗಿರುವುದಿಲ್ಲ.
  • ಈ ಶಿಷ್ಯವೇತನವನ್ನು ಯಾವುದಾದರೂ ಒಂದು ವಿಧದ ಕೋರ್ಸ್‌ಗೆ ನೀಡಲಾಗುವುದು. ಉದಾಹರಣೆಗೆ, X ಎಂಬ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ನಂತರ Y ಎಂಬ ಸ್ನಾತಕೋತ್ತರ ಕೋರ್ಸ್‌ಗೆ ವಿದ್ಯಾರ್ಥಿಯು ಪ್ರವೇಶ ಪಡೆದಲ್ಲಿ ಆ ಕೋರ್ಸ್​ಗೆ ಶಿಷ್ಯವೇತನ ಪಡೆಯಲು ಅರ್ಹವಾಗುವುದಿಲ್ಲ. ಇದನ್ನೂ ಓದಿ:ಎಲ್ಲರೂ ನಮ್ಮವರೇ, ಖಾತೆ ಅಸಮಾಧಾನ ಎಲ್ಲವೂ ಸರಿಹೋಗಲಿದೆ: ಸಿಎಂ

ABOUT THE AUTHOR

...view details