ಕರ್ನಾಟಕ

karnataka

By

Published : May 12, 2021, 11:27 AM IST

Updated : May 12, 2021, 11:37 AM IST

ETV Bharat / state

ಕೋವಿಡ್​​ ಆರ್ಭಟಕ್ಕೆ ಬೆಂಗಳೂರು ತತ್ತರ: ಅಂತ್ಯಕ್ರಿಯೆಗಾಗಿ ಚಿತಾಗಾರಗಳ ಮುಂದೆ ಕ್ಯೂ!

ಕೋವಿಡ್ ವಿದ್ಯುತ್ ಚಿತಾಗಾರಗಳು ಹಾಗೂ ತಾತ್ಕಾಲಿಕ ಚಿತಾಗಾರಗಳ ಮೇಲೆ ಒತ್ತಡ ಹೆಚ್ಚಿದೆ. ಮತ್ತೆ ಆಂಬುಲೆನ್ಸ್​​ಗಳಲ್ಲಿ ಕ್ಯೂ ನಿಂತು, ರಾತ್ರಿ-ಹಗಲು ಕಾದು ಮೃತದೇಹಗಳ ಅಂತ್ಯಕ್ರಿಯೆ ಮಾಡಲಾಗ್ತಿದೆ.

bangalore  Crematorium
ಚಿತಾಗಾರ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೋವಿಡ್​ ಆರ್ಭಟ ಮುಂದುವರೆದಿದೆ. ಸಾವು-ನೋವು ಹೆಚ್ಚಾಗಿ ಆತಂಕ ಮನೆ ಮಾಡಿದೆ. ಕಳೆದ ಒಂದೆರಡು ದಿನದಲ್ಲಿ ಹೊಸ ಸೋಂಕು ಪ್ರಕರಣ ಇಳಿಕೆಯಾಗಿದ್ದರೂ ಕೂಡ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಕೇವಲ ಒಂದೆರಡು ದಿನಗಳ ಅಂತರದಲ್ಲಿ ಸೋಂಕು ಪ್ರಕರಣಗಳ ಪ್ರಮಾಣ ತೀರಾ ವ್ಯತ್ಯಯ ಆಗುತ್ತಿದೆ.

ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ 300ಕ್ಕೂ ಮೇಲ್ಪಟ್ಟು ಕೋವಿಡ್‌ ಸೋಂಕಿತರು ಮೃತಪಡುತ್ತಿದ್ದಾರೆ. ಮೇ 7ರಂದು 346 ಮಂದಿ ( ಹೆಲ್ತ್​ ಬುಲೆಟಿನ್​ ಮಾಹಿತಿ) ಮೃತಪಟ್ಟಿದ್ದರು. ಇದರಿಂದ ಕೋವಿಡ್ ವಿದ್ಯುತ್ ಚಿತಾಗಾರಗಳು ಹಾಗೂ ತಾತ್ಕಾಲಿಕ ಚಿತಾಗಾರಗಳ ಮೇಲೆ ಒತ್ತಡ ಹೆಚ್ಚಿದೆ. ಮತ್ತೆ ಆಂಬುಲೆನ್ಸ್​​ಗಳಲ್ಲಿ ಕ್ಯೂ ನಿಂತು, ರಾತ್ರಿ-ಹಗಲು ಕಾದು ಮೃತದೇಹಗಳ ಅಂತ್ಯಕ್ರಿಯೆ ಮಾಡಲಾಗ್ತಿದೆ.

ಚಿತಾಗಾರಗಳ ಮುಂದೆ ಮೃತದೇಹಗಳ ಕ್ಯೂ!

ಕೆಂಗೇರಿಯಲ್ಲಿ 25ರಿಂದ 30 ಶವ, ಮೇಡಿ ಅಗ್ರಹಾರದಲ್ಲಿ 40ರಿಂದ 50 ಶವ, ಚಾಮರಾಜಪೇಟೆ ಟಿ.ಆರ್.ಮಿಲ್ ಸ್ಮಶಾನದಲ್ಲಿ 35 ಶವಗಳ ಅಂತ್ಯ ಸಂಸ್ಕಾರ ಮಾಡಲಾಗ್ತಿದೆ. ಸುಮನಹಳ್ಳಿ ಹಾಗೂ ವಿಲ್ಸನ್ ಗಾರ್ಡನ್, ಬನಶಂಕರಿ ವಿದ್ಯುತ್ ಚಿತಾಗಾರಗಳು ರಿಪೇರಿಯಾಗುತ್ತಿರುವ ಹಿನ್ನೆಲೆ ಸದ್ಯ ಏಳು ಚಿತಾಗಾರಗಳಲ್ಲಿ ಮಾತ್ರ ಅಂತ್ಯಕ್ರಿಯೆಗೆ ಅವಕಾಶ ಇದ್ದು, ಮೇಡಿ ಅಗ್ರಹಾರ, ಕೂಡ್ಲು, ಪಣತ್ತೂರು, ಕೆಂಗೇರಿ, ಸುಮನಹಳ್ಳಿ, ಪೀಣ್ಯ, ಬನಶಂಕರಿ ವಿದ್ಯುತ್ ಚಿತಾಗಾರಗಳಲ್ಲಿ ರಾತ್ರಿಯಿಡೀ ಕಾಯಬೇಕಾದ ಪರಿಸ್ಥಿತಿ ಇದೆ.

ಸುಮನಹಳ್ಳಿ ಹಾಗೂ ವಿಲ್ಸನ್ ಗಾರ್ಡನ್​ನ ಎರಡು ಮಷಿನ್​​ಗಳಲ್ಲಿ ದಿನಕ್ಕೆ 48 ಮೃತದೇಹಗಳನ್ನು ಸುಡಲಾಗುತ್ತಿದೆ. ಇನ್ನು ನಗರದ ಹೊರ ಭಾಗದಲ್ಲಿರುವ ವಿದ್ಯುತ್ ಚಿತಾಗಾರಕ್ಕೂ ಒತ್ತಡ ಹೆಚ್ಚಾದ ಹಿನ್ನೆಲೆ ದಿನವಿಡೀ ಹೊಗೆಯ ವಾತಾವರಣವಿದ್ದು, ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾತ್ಕಾಲಿಕವಾಗಿ ನಿರ್ಮಾಣವಾಗಿರುವ ಗಿಡ್ಡೇನಹಳ್ಳಿ ಹಾಗೂ ತಾವರೆಕೆರೆ ಚಿತಗಾರದಲ್ಲಿ 120ಕ್ಕೂ ಹೆಚ್ಚು ಕೋವಿಡ್ ಸೋಂಕಿತರ ಶವಗಳ ಅಂತ್ಯ ಸಂಸ್ಕಾರ ನಡೆಯುತ್ತಿದೆ. ಗಿಡ್ಡೇನಹಳ್ಳಿಯಲ್ಲಿ 50, ತಾವರೇಕೆರೆಯಲ್ಲಿ 70 ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸುತ್ತಿದ್ರೂ ಆಂಬುಲೆನ್ಸ್​​ಗಳು ಕ್ಯೂ ನಿಂತು ಕಾಯಬೇಕಾದ ಪರಿಸ್ಥಿತಿ ಇದೆ.

ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಜನರು ಕಟ್ಟಿಗೆಯ ಅಂತ್ಯ ಸಂಸ್ಕಾರಕ್ಕೇ ಹೆಚ್ಚು ಪ್ರಾಶಸ್ತ್ಯ ಕೊಡ್ತಾರೆ. ಕಟ್ಟಿಗೆಯ ಅಂತ್ಯ ಸಂಸ್ಕಾರದಿಂದ ಹೆಣ ಸುಡಲು ಬೇಗ ಸಾಧ್ಯವಾಗುತ್ತದೆ. ಅಲ್ಲದೆ ಧಾರ್ಮಿಕ ನಂಬಿಕೆ ಪ್ರಕಾರ ಕುಟುಂಬಸ್ಥರು ಚಿತೆಗೆ ಬೆಂಕಿ ಇಡಬಹುದು ಎಂದು ಹೆಚ್ಚಿನ ಜನರು ಬೇಡಿಕೆ ಇಡುತ್ತಿದ್ದಾರೆ ಎಂದರು.

ಕ್ಯೂ ನಿಲ್ಲುವುದನ್ನು ತಪ್ಪಿಸಿ, ಚಿತಾಗಾರಗಳನ್ನು ಬುಕ್ಕಿಂಗ್​ ಮಾಡಿ ಹೋಗಲು ಕೇಂದ್ರೀಕೃತ ವ್ಯವಸ್ಥೆ ಜಾರಿ ಮಾಡಿದ ಮೂರೇ ದಿನದಲ್ಲಿ ಕೇಂದ್ರ ಕಚೇರಿಗೆ ಆ‌ನ್​ಲೈನ್ ಒತ್ತಡ ಹೆಚ್ಚಿದ ಕಾರಣ ವ್ಯವಸ್ಥೆ ವಿಫಲವಾಗಿತ್ತು. ಮತ್ತೆ ಮೊದಲಿನ ರೀತಿಯಲ್ಲೇ ವಲಯವಾರು ನಿರ್ವಹಣೆಗೆ ಜವಾಬ್ದಾರಿ ನೀಡಲಾಗಿದೆ.

ಅಂತ್ಯಕ್ರಿಯೆಗೆ ಕ್ಯೂ ನಿಲ್ಲುತ್ತಿರುವ ಕಾರಣ ಒಂದೆರಡು ದಿನ ಕಾಯಬೇಕಾದ ಹಿನ್ನೆಲೆ ಮೃತದೇಹ ಕೆಡದಂತೆ ಸಂರಕ್ಷಿಸಿಡಲು ಚಿತಾಗಾರಗಳಲ್ಲಿ ಫ್ರೀಜರ್ ಬಳಸಲಾಗ್ತಿದೆ. ಮೇಡಿ ಅಗ್ರಹಾರದಲ್ಲಿ 8, ಕೂಡ್ಲುವಿನಲ್ಲಿ 10 ಫ್ರೀಜರ್ ಒದಗಿಸಲಾಗಿದೆ.

ಲಾಕ್‌ಡೌನ್‌ ವೇಳೆ ಜನ, ವಾಹನ ಸಂಚಾರ ಸ್ತಬ್ಧ: ಹುಬ್ಬಳ್ಳಿಯಲ್ಲಿ ಕಾಮಗಾರಿಗಳಿಗೆ ವೇಗ

ಇನ್ನುಳಿದಂತೆ ಕ್ರಿಶ್ಚಿಯನ್​, ಮುಸ್ಲಿಂ ಸಮುದಾಯದ ಕೋವಿಡ್ ಮೃತದೇಹಗಳನ್ನು ಮಣ್ಣು ಮಾಡಲು, ಅವರದ್ದೇ ನಿಗದಿತ ರುದ್ರಭೂಮಿಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಮಂಗಳಮುಖಿಯವರ ಕೋವಿಡ್ ಮೃತದೇಹವನ್ನೂ ಕೂಡ ಮುಸ್ಲಿಂ ಸಮುದಾಯದವರು ಅಂತ್ಯಕ್ರಿಯೆ ಮಾಡ್ತಾರೆ. ಮಾರ್ಗಸೂಚಿಯಂತೆ ಕೋವಿಡ್ ಮೃತದೇಹ ಮಣ್ಣು ಮಾಡಲಾಗ್ತಿದೆ. ಇನ್ನು ಕೆಲವರು ಊರುಗಳಿಗೆ ಮೃತದೇಹ ತೆಗೆದುಕೊಂಡು ಹೋಗುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮೇ 7ರಂದು ನಡೆದ ಅಂತ್ಯಕ್ರಿಯೆಗಳ ವಿವರ ಹೀಗಿದೆ: ಒಟ್ಟು 355 ಕೋವಿಡ್ ಶವ ಹಾಗೂ ನಾನ್ ಕೋವಿಡ್ ಶವ 74 ಸೇರಿ ಒಟ್ಟು 429 ಶವಗಳ ಅಂತ್ಯಕ್ರಿಯೆ (ಚಿತಾಗಾರಗಳಲ್ಲಿ ದಾಖಲಾದ ಅಂಕಿ-ಅಂಶ) ನಡೆಸಲಾಗಿದೆ.

ಕೋವಿಡ್ ವರದಿ

ಅಂಕಿ- ಅಂಶ:

ಸ್ಮಶಾನಗಳು ಮತ್ತು ಮೃತದೇಹಗಳು (ಕೋವಿಡ್):

1) ಪೀಣ್ಯ- 21

2) ಕೆಂಗೇರಿ- 28

3) ಸುಮನಹಳ್ಳಿ- 0

4) ಪಣತ್ತೂರು- 25

5) ಮೇಡಿ ಅಗ್ರಹಾರ- 25

6) ಹೆಬ್ಬಾಳ ಕೆಂಪಾಪುರ- 08

7) ಬನಶಂಕರಿ- 23

8) ಕೂಡ್ಲು- 24

9) ವಿಲ್ಸನ್ ಗಾರ್ಡನ್- 0

10) ಮೈಸೂರು ರೋಡ್- 17

11) ಹರಿಶ್ಚಂದ್ರ ಘಾಟ್- 12

12) ಕಲ್ಲಹಳ್ಳಿ- 1

ತೆರೆದ ಪ್ರದೇಶದಲ್ಲಿರುವ ತಾತ್ಕಾಲಿಕ ಚಿತಾಗಾರಗಳು

13) ಟಿ.ಆರ್ ಮಿಲ್ - 37

14) ತಾವರೆಕೆರೆ - 84

15) ಗಿಡ್ಡೆನಹಳ್ಳಿ - 50

ಇದೀಗ ಲಾಕ್​ಡೌನ್​ ಜಾರಿಯಲ್ಲಿದೆ. ಇನ್ನಾದರೂ ಸೋಂಕು ಹರಡೋದು ನಿಂತು, ಪರಿಸ್ಥಿತಿ ನಿಯಂತ್ರಣಕ್ಕೆ ಬರಬೇಕಿದೆ.

Last Updated : May 12, 2021, 11:37 AM IST

ABOUT THE AUTHOR

...view details