ಕರ್ನಾಟಕ

karnataka

ಏರೋಸ್ಪೇಸ್-ಡಿಫೆನ್ಸ್ ವಲಯದ ಸಮಗ್ರ ಅಭಿವೃದ್ಧಿಗೆ ಒತ್ತು: ಸಚಿವ ಎಂ.ಬಿ.ಪಾಟೀಲ್

By ETV Bharat Karnataka Team

Published : Jan 11, 2024, 8:26 AM IST

ಏರೋಸ್ಪೇಸ್ ಮತ್ತು ಡಿಫೆನ್ಸ್ ವಲಯದ ಸಮಗ್ರ ಅಭಿವೃದ್ಧಿಗಾಗಿ ಉದ್ಯಮಿಗಳ ಜೊತೆ ಸಚಿವ ಎಂ.ಬಿ.ಪಾಟೀಲ್ ಸಭೆ ನಡೆಸಿದರು.

MB Patil
ಸಚಿವ ಎಂ ಬಿ ಪಾಟೀಲ್

ಬೆಂಗಳೂರು: ವೈಮಾಂತರಿಕ್ಷ ಮತ್ತು ರಕ್ಷಣಾ ಔದ್ಯಮಿಕ ವಲಯದ ಲಾಭದಾಯಕ ಬೆಳವಣಿಗೆಗೆ ಕೈಗೊಳ್ಳಬೇಕಾಗಿರುವ ಉಪಕ್ರಮಗಳ ಕುರಿತು ರಾಜ್ಯ ಸರ್ಕಾರ ರಚಿಸಿರುವ ಏರೋಸ್ಪೇಸ್ ಮತ್ತು ಡಿಫೆನ್ಸ್ ವಿಷನ್ ಗ್ರೂಪ್ ಚೊಚ್ಚಲ ಸಭೆಯು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಖನಿಜ ಭವನದಲ್ಲಿ ನಡೆದ ಸಭೆಯಲ್ಲಿ ಈ ವಲಯದ ಉದ್ಯಮಿಗಳೊಂದಿಗೆ ಸಚಿವರು ಸುದೀರ್ಘವಾಗಿ ಸಮಾಲೋಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, "ವೈಮಾಂತರಿಕ್ಷ ಮತ್ತು ರಕ್ಷಣಾ ವಲಯಕ್ಕೆ ವಿದೇಶಿ ಬಂಡವಾಳ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರಬೇಕು. ಇದಕ್ಕಿಂತ ಮುಖ್ಯವಾಗಿ ತಯಾರಿಕೆ, ದುರಸ್ತಿ ಮತ್ತು ಓವರ್-ಹಾಲ್ (ಓಎಂಆರ್) ಸ್ಥಳೀಯವಾಗಿಯೇ ನಡೆಯುವಂತೆ ಆಗಬೇಕು. ಸದ್ಯಕ್ಕೆ ಈ ಪೈಕಿ ಶೇ.70ರಷ್ಟು ಕೆಲಸ ಹೊರದೇಶಗಳಲ್ಲೇ ನಡೆಯುತ್ತಿದೆ. ನಮ್ಮಲ್ಲಿ ಇದು ದುಬಾರಿ ವೆಚ್ಚದ ಬಾಬತ್ತಾಗಿರುವುದೇ ಇದಕ್ಕೆ ಕಾರಣ. ಈ ಸಮಸ್ಯೆ ನಿವಾರಿಸಲು ಆದ್ಯತೆ ಕೊಡಬೇಕಾಗಿದೆ" ಎಂದರು.

"ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಕೆಐಎಡಿಬಿ ವತಿಯಿಂದ ನಿರ್ಮಿಸಿರುವ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕಿಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲ. ಇಲ್ಲಿ ಪೊಲೀಸ್ ಔಟ್-ಪೋಸ್ಟ್ ಆರಂಭಿಸುವ ಜೊತೆಗೆ ಈ ಪ್ರದೇಶದಲ್ಲಿ ಒಳ್ಳೆಯ ಶಾಲೆಗಳು, ಹೋಟೆಲುಗಳು ಮತ್ತು ವಸತಿ ಸೌಲಭ್ಯಗಳು ಹೆಚ್ಚಾಗಿ ಬರುವಂತೆ ಗಮನ ಹರಿಸಬೇಕಾಗಿದೆ. ಬಂಡವಾಳ ಆಕರ್ಷಣೆಗೆ ಇದು ಅತ್ಯಗತ್ಯವಾಗಿದೆ" ಎಂದು ಅವರು ಪ್ರತಿಪಾದಿಸಿದರು.

"ಅಲ್ಲದೆ, ವೈಮಾಂತರಿಕ್ಷ ಕಂಪನಿಗಳಲ್ಲಿ ಕೆಲಸ ಮಾಡುವ ಡಿಪ್ಲೊಮಾ ಮತ್ತು ಐಟಿಐ ಪದವೀಧರರಿಗೆ ಕಾರ್ಮಿಕ ಇಲಾಖೆಯ ವತಿಯಿಂದ ಸೂಕ್ತ ವಸತಿ ಸೌಲಭ್ಯ (ಡಾರ್ಮೆಟರಿ) ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಕೆಐಎಡಿಬಿ ಇದಕ್ಕೆ ಜಾಗ ಒದಗಿಸಿಕೊಡಲು ತಕ್ಷಣವೇ ಪತ್ರ ವ್ಯವಹಾರ ನಡೆಸುವಂತೆ ಸಂಬಂಧಿಸಿದ ಇಲಾಖೆ/ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು" ಎಂದು ಅವರು ನುಡಿದರು.

"ಸಿಂಗಪುರದಲ್ಲಿ ಜಗತ್ತಿನ ಅತ್ಯುತ್ತಮ ಇಂಡಸ್ಟ್ರಿಯಲ್ ಪಾರ್ಕುಗಳಿವೆ. ಆ ತರಹ ನಮ್ಮಲ್ಲೂ ಆಗಬೇಕು. ಇನ್ನು 10-15 ವರ್ಷಗಳಲ್ಲಿ ದೇಶಕ್ಕೆ ಇನ್ನೂ 1,000 ನಾಗರಿಕ ವಿಮಾನಗಳು ಸೇರ್ಪಡೆಯಾಗಲಿವೆ. ಇಲ್ಲಿ ಬಹುದೊಡ್ಡ ಅವಕಾಶವಿದ್ದು, ರಾಜ್ಯವು ಇದನ್ನು ಸದುಪಯೋಗ ಮಾಡಿಕೊಳ್ಳಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಉದ್ಯಮಿಗಳು ಹೂಡಿಕೆ ಮಾಡುವ ಜತೆಗೆ ಏನೇನಾಗಬೇಕು ಎಂಬ ಬಗ್ಗೆ ಸಲಹೆ ನೀಡಬೇಕು. ಜೊತೆಗೆ, ಕೇಂದ್ರ ಸರ್ಕಾರದಿಂದ ಆಗಬೇಕಾದ ಕೆಲಸಗಳತ್ತಲೂ ಗಮನ ಹರಿಸಿ, ತ್ವರಿತ ಕ್ರಮ ಕೈಗೊಳ್ಳಲಾಗುವುದು" ಎಂದು ಸಚಿವರು ಕೋರಿದರು. ಸಚಿವರ ಮಾತಿಗೆ ಉದ್ಯಮಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಏರ್ ಬಸ್ ಇಂಡಿಯಾದ ನಿರ್ದೇಶಕ ಕೃತ್ತಿವಾಸನ್ ಮುಖರ್ಜಿ, ಆರ್.ಟಿ.ಎಕ್ಸ್ ಕಾಲಿನ್ಸ್ ಏರೋಸ್ಪೇಸ್ ಕಂಪನಿಯ ಮುಖ್ಯಸ್ಥ ಸಮಿತ್ ರಾಯ್, ಡೈನಮಿಕ್ ಟೆಕ್ನಾಲಜೀಸ್ ಲಿಮಿಟೆಡ್ ಸಿಇಒ ಉದ್ಯಂತ್ ಮಲ್ಹೋತ್ರ, ಬೋಯಿಂಗ್ ಇಂಡಿಯಾ ಹಿರಿಯ ನಿರ್ದೇಶಕ ಅಶ್ವನಿ ಭಾರ್ಗವ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೆಚ್ಎಎಲ್ ನಿರ್ದೇಶಕ ಜಯದೇವ್ ಮತ್ತು ಸೆಂಟಮ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮುಖ್ಯಸ್ಥ ಅಪ್ಪಾರಾವ್ ವೆಂಕಟ ವಲ್ಲಾವರಪು ಆನ್ಲೈನ್ ಮೂಲಕ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

ಇದನ್ನೂ ಓದಿ: ಆರ್ಥಿಕ ಸ್ವಾವಲಂಬನೆ: ಮಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಸೊಸೈಟಿ ಸ್ಥಾಪನೆ

ABOUT THE AUTHOR

...view details