ಕರ್ನಾಟಕ

karnataka

ಸಿದ್ದರಾಮಯ್ಯ ಆಡಳಿತಾವಧಿಯ ಹಗರಣಗಳ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದೇನೆ: ಎನ್.ಆರ್.ರಮೇಶ್

By

Published : Feb 3, 2023, 2:00 AM IST

Updated : Feb 3, 2023, 1:24 PM IST

ಇಂದಿರಾ ಕ್ಯಾಂಟೀನ್​, ಕೃಷಿ ಭಾಗ್ಯ ಯೋಜನೆಯಡಿ ನೂರಾರು ಕೋಟಿ ಲೂಟಿ ಮಾಡಲಾಗಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ದೂರು ಸಲ್ಲಿಸಿದರು.

NR Ramesh
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್

ಬೆಂಗಳೂರು: 2013-2018ರವರೆಗಿನ ಸಿದ್ಧರಾಮಯ್ಯ ಆಡಳಿತದ ಅವಧಿಯಲ್ಲಿ ನಡೆದಿರುವ 10 ಬೃಹತ್ ಹಗರಣಗಳಿಗೆ ಸಂಬಂಧಿಸಿದಂತೆ ಒಟ್ಟು 3,728 ಪುಟಗಳ ಸಂಪೂರ್ಣ ದಾಖಲೆ ಸಹಿತ 10 ಪ್ರತ್ಯೇಕ ದೂರುಗಳನ್ನು ಲೋಕಾಯುಕ್ತಕ್ಕೆ ನೀಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಹೇಳಿದರು. ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಇಂದು ಮಾಧ್ಯಮಗಳ ಮುಂದೆ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಕೃಷ್ಣ ಭೈರೇಗೌಡ, ಯು.ಟಿ. ಖಾದರ್, ಎಂ.ಬಿ. ಪಾಟೀಲ್‌, ಜಮೀರ್ ಅಹ್ಮದ್‌, ದಿನೇಶ್‌ ಗುಂಡೂರಾವ್, ಎಂ.ಕೃಷ್ಣಪ್ಪ ಹಾಗೂ ಶಾಸಕರಾದ ಎನ್.ಎ.ಹ್ಯಾರೀಸ್, ಮಾಜಿ ಶಾಸಕ ಪ್ರಿಯಾ ಕೃಷ್ಣ ಸೇರಿದಂತೆ ಹಲವು ಭ್ರಷ್ಟ ರಾಜಕಾರಣಿಗಳ ವಿರುದ್ಧ ದೂರು ನೀಡಲಾಗಿದೆ.

ಹಿರಿಯ ಅಧಿಕಾರಿಗಳಾದ ಪಾಂಡುರಂಗ ಬಿ.ನಾಯಕ್, ಜಿ.ಸತೀಶ್, ಅತುಲ್ ಕುಮಾರ್ ತಿವಾರಿ, ವಸ್ತ್ರದ್, ವಿ.ಶಂಕರ್, ಮನೋಜ್ ರಾಜನ್, ಪಿ.ಬೋರೇಗೌಡ, ಲೀಲಾ ಸಂಪಿಗೆ, ಚಲುವರಾಜು ಮತ್ತು ಕೃಷ್ಣಮೂರ್ತಿ ವಿರುದ್ಧ ದೂರುಗಳನ್ನು ಕೊಡಲಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ವಿರುದ್ಧವೂ ಸಹ ಸರ್ಕಾರದ ಭೂ ಕಬಳಿಕೆ ಹಿನ್ನೆಲೆ ಪ್ರಕರಣದ ದೂರು ದಾಖಲಿಸಲಾಗಿದೆ ಎಂದರು.

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎನ್ ಆರ್ ರಮೇಶ್ ಗಂಭೀರ ಆರೋಪ:2017-18 ಮತ್ತು 2018-19ರ 17 ತಿಂಗಳ ಅವಧಿಯಲ್ಲಿ 189 ಇಂದಿರಾ ಕ್ಯಾಂಟೀನ್​ಗಳಲ್ಲಿ ಪ್ರತೀ ತಿಂಗಳು ಸರಾಸರಿ 27,03,200 ಮಂದಿ ಬೆಳಗಿನ ಉಪಹಾರವನ್ನು, 24,11,800 ಮಂದಿ ಊಟವನ್ನು ಮತ್ತು 11,55,500 ಜನರು ರಾತ್ರಿಯ ಊಟವನ್ನು ಮಾಡುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಗಳನ್ನು ನೀಡಲಾಗಿದೆ. ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ 17 ತಿಂಗಳ ಅವಧಿಯಲ್ಲಿ 560 ಕೋಟಿ ರೂಪಾಯಿ ಹಣವನ್ನು ಕಬಳಿಸಲಾಗಿದೆ ಎಂದು ಆರೋಪಿಸಿದರು.

2015-16ರಿಂದ 2016-17ರವರೆಗಿನ ಎರಡು ವರ್ಷಗಳ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯ ಒಟ್ಟು 439 ಬಸ್ ತಂಗುದಾಣಗಳನ್ನು ತನ್ನ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುವ ಸಲುವಾಗಿ ಅಂದಿನ ಬಳಸಿಕೊಂಡಿದೆ. ಸಿದ್ದರಾಮಯ್ಯ ನೇತೃತ್ವದ ಅಂದಿನ ರಾಜ್ಯ ಸರ್ಕಾರವು ನಿಯಮಾನುಸಾರ ಪಾಲಿಕೆಗೆ ಪಾವತಿಸಬೇಕಿದ್ದ 68.15 ಕೋಟಿ ರೂ. ಜಾಹಿರಾತು ಶುಲ್ಕವನ್ನು ವಂಚಿಸಿದೆ. ಕೃಷಿ ಭಾಗ್ಯ ಯೋಜನೆಯಲ್ಲಿ 2014-15ರಿಂದ 2017-18ರ 4 ವರ್ಷಗಳ ಅವಧಿಯಲ್ಲಿ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಉಚಿತವಾಗಿ ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 2,15,130 ಕೃಷಿ ಹೊಂಡಗಳ ನಿರ್ಮಾಣ ಮತ್ತು ಅದಕ್ಕೆ ಸಂಬಂಧಿಸಿದಂತೆ ಪಾಲಿಥೀನ್ ಹೊದಿಕೆ, ಡೀಸಲ್ ಪಂಪ್ ಸೆಟ್​ಗಳ ಅಳವಡಿಕೆ, ಲಘು ನೀರಾವರಿ ಕಾರ್ಯ, ಕೃಷಿ ಹೊಂಡದ ಸುತ್ತಲೂ ನೆರಳು ಪರದೆಗಳ ನಿರ್ಮಾಣ ಕಾರ್ಯಗಳ ಅನುಷ್ಠಾನದ ಹೆಸರಿನಲ್ಲಿ 800 ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ ಎಂದು ಎನ್​ ಆರ್ ರಮೇಶ್ ದೂರಿದರು.

ಬಿಬಿಎಂಪಿ ವ್ಯಾಪ್ತಿಯ ಎಲ್ಲ 198 ವಾರ್ಡ್​​ಗಳ ವ್ಯಾಪ್ತಿಯಲ್ಲಿರುವ ಎಲ್ಲಾ ವಿಧದ ರಸ್ತೆಗಳಲ್ಲಿರುವ ಒಟ್ಟು 5,30,000 ಬೀದಿ ದೀಪಗಳನ್ನು ಬದಲಿಸಲು ಹಾಗೂ ಅಳವಡಿಸುವ ಯೋಜನೆಯ ಹೆಸರಿನಲ್ಲಿ, ಈ ಯೋಜನೆಗೆ ಸಂಬಂಧವೇ ಇಲ್ಲದ ಸಂಸ್ಥೆಗೆ ಗುತ್ತಿಗೆ ನೀಡುವ ಮೂಲಕ 1,600 ಕೋಟಿ ರೂ.ಗಳನ್ನು ಲೂಟಿ ಮಾಡಲಾಗಿದೆ ಎಂದು ದಾಖಲೆಗಳ ಸಮೇತ ಆರೋಪಿಸಿದರು.

2014-15 ಮತ್ತು 2015-16 ರ ಅವಧಿಯಲ್ಲಿ ಅನಾರೋಗ್ಯಪೀಡಿತ ಬಾಲಕ, ಬಾಲಕಿಯರು, ಮಹಿಳೆಯರು, ಪುರುಷರು, ಮಂಗಳಮುಖಿಯರನ್ನು ಪುನರ್ವಸತಿ ಕೇಂದ್ರಗಳಿಗೆ ಸೇರಿಸಿ, ಅವರಿಗೆ ಸೂಕ್ತ ಚಿಕಿತ್ಸೆ - ಔಷಧಿಗಳನ್ನು ಒದಗಿಸುವುದು. ತಜ್ಞ ವೈದ್ಯರುಗಳಿಂದ ಮಾನಸಿಕ ತಜ್ಞರಿಂದ ಚಿಕಿತ್ಸೆ ಮಾಡಿಸಿ ಅವರೆಲ್ಲರನ್ನು ಲೈಂಗಿಕ ಚಟುವಟಿಕೆಗಳಿಂದ ಸಾಧ್ಯವಿದ್ದಷ್ಟೂ ದೂರವಿಡುವ ಯೋಜನೆಯ ಹೆಸರಿನಲ್ಲಿ ನೂರಾರು ಕೋಟಿ ಮೊತ್ತದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿದರು.

ರಾಬರ್ಟ್ ವಾದ್ರಾ ಪಾಲುದಾರಿಕೆಯ ಸಂಸ್ಥೆಯು ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿ ಗಂಗೇನಹಳ್ಳಿ ಗ್ರಾಮದ ಸರ್ವೆ ನಂಬರ್ 01ರಿಂದ 99, ವರ್ತೂರು ಗ್ರಾಮದ ಸರ್ವೆ ನಂಬರ್ 07, 08, 09, 10, ವರ್ತೂರು ನರಸೀಪುರ ಗ್ರಾಮದ ಸರ್ವೆ ನಂಬರ್ 01 ರಿಂದ 35 ಮತ್ತು ಪೆದ್ದನಪಾಳ್ಯ ಗ್ರಾಮದ ಸರ್ವೆ ನಂಬರ್ 17, 18, 19, 20ರಲ್ಲಿರುವ ಸುಮಾರು 9,600 ಕೋಟಿ ರೂಪಾಯಿಗಳಿಗೂ ಹೆಚ್ಚು ಬೆಲೆಬಾಳುವ 1,100 ಎಕರೆ ಸರ್ಕಾರದ ಸ್ವತ್ತುಗಳನ್ನು ಕಬಳಿಸಲಾಗಿದೆ. ಬೆಂಗಳೂರಿನ ಬೃಹತ್ ಭೂ ಕಬಳಿಕೆ ಹಗರಣದ ಸಂಬಂಧ ದೂರು ನೀಡಲಾಗಿದೆ ಎಂದು ಎನ್.ಆರ್.ರಮೇಶ್ ತಿಳಿಸಿದರು.

ಇದನ್ನೂ ಓದಿ:ಸಿಡಿ ಪ್ರಕರಣ: ಸಿಬಿಐ ತನಿಖೆ ಕುರಿತು ಸಿಎಂ ಜೊತೆ ಚರ್ಚಿಸಿ ನಿರ್ಧಾರ- ಆರಗ ಜ್ಞಾನೇಂದ್ರ

Last Updated : Feb 3, 2023, 1:24 PM IST

ABOUT THE AUTHOR

...view details