ಕರ್ನಾಟಕ

karnataka

ಇಂಜಿನಿಯರಿಂಗ್‍ ಕೃಷಿ ನಿರ್ದೇಶನಾಲಯ ಸ್ಥಾಪನೆ: ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ - ಸಚಿವ ಬಿ ಸಿ ಪಾಟೀಲ್

By

Published : Feb 22, 2023, 2:47 PM IST

ಶೂನ್ಯವೇಳೆಯಲ್ಲಿ ರಾಜಕೀಯ ನಾಯಕರುಗಳು ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್​ ಉತ್ತರಿಸಿದರು.

Agriculture Minister B C Patil
ಕೃಷಿ ಸಚಿವ ಬಿ ಸಿ ಪಾಟೀಲ್​

ಬೆಂಗಳೂರು:ಇಂಜಿನಿಯರಿಂಗ್‍ ಕೃಷಿ ನಿರ್ದೇಶನಾಲಯ ಸ್ಥಾಪನೆ ಮಾಡುವ ಕುರಿತು ಬೆಂಗಳೂರು ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್‍ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಇಂದು ಶೂನ್ಯವೇಳೆಯಲ್ಲಿ ಸದಸ್ಯ ಶಿವರಾಜ ಪಾಟೀಲ್‍, ರಾಜ ವೆಂಕಟಪ್ಪ ನಾಯಕ್‍ ಹಾಗೂ ವೆಂಕಟರಾವ್‍ ನಾಡಗೌಡ ಮತ್ತಿತರರು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಬಿಟೆಕ್‍ ಪದವೀಧರ ವಿದ್ಯಾರ್ಥಿಗಳಿಗೆ ಕೃಷಿ ಇಲಾಖೆ ನೇಮಕಾತಿಯಲ್ಲಿ ಶೇ.15ರಷ್ಟು ಮೀಸಲಾತಿ ನೀಡಬೇಕೆಂದು ಹೋರಾಟ ನಡೆಸುತ್ತಿರುವ ಬಗ್ಗೆ ಸಚಿವರ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಸಚಿವ ಬಿ ಸಿ ಪಾಟೀಲ್‍ ಅವರು, ಕಳೆದ ವಾರ ಬೆಂಗಳೂರು ಮತ್ತು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಮತ್ತಿತರರು ಬೆಂಗಳೂರಿಗೆ ಆಗಮಿಸಿ ಸರ್ಕಾರದ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಬೇಡಿಕೆಯಂತೆ ಕೃಷಿ ಎಂಜಿನಿಯರಿಂಗ್​ ನಿರ್ದೇಶನಾಲಯ ಸ್ಥಾಪಿಸಲು ಮನವಿ ಮಾಡಿದ್ದಾರೆ. ಸಮಿತಿಯ ವರದಿ ಬಂದ ಬಳಿಕ ಸರ್ಕಾರ ಸಕಾರಾತ್ಮಕ ನಿರ್ಧಾರವನ್ನು ತೆಗೆದುಕೊಳ‍್ಳಲಿದೆ ಎಂದರು.

ಬಿಟೆಕ್‍ ವಿದ್ಯಾರ್ಥಿಗಳಿಗೆ ಕೃಷಿ ಇಲಾಖೆಯ ನೇಮಕಾತಿಯಲ್ಲಿ ಶೇ.2.3ರಷ್ಟು ಮೀಸಲಾತಿ ನೀಡಲಾಗುತ್ತಿದೆ. 1500 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೆ, ಕನಿಷ್ಠ 150 ಸಹಾಯಕ ಅಧಿಕಾರಿಗಳು ಹಾಗೂ ಅಷ್ಟೇ ಪ್ರಮಾಣದ ಕೃಷಿ ಅಧಿಕಾರಿಗಳು ನೇಮಕವಾಗುತ್ತಾರೆ. ಎಲ್ಲಿಯೂ ಅನ್ಯಾಯವಾಗದಂತೆ ಸರ್ಕಾರ ಕ್ರಮಕೈಗೊಳ್ಳಲಿದೆ. ಬಿಟೆಕ್‍ ವಿದ್ಯಾರ್ಥಿಗಳಿಗೆ ಐದು ಕೋರ್ಸ್​ ಸೇರಿಸಲಾಗಿದೆ. ಜೈವಿಕ ತಂತ್ರಜ್ಞಾನ, ಇಂಜಿನಿಯರಿಂಗ್‍, ಆಹಾರ ವಿಜ್ಞಾನ, ತಂತ್ರಜ್ಞಾನ ಸೇರಿದಂತೆ 5 ಕೋರ್ಸ್‍ಗಳಿದ್ದು, ಇಲ್ಲಿಯೂ ಅವರಿಗೆ ಮೀಸಲಾತಿ ಸಿಗಲಿದೆ. ಶೇ.15ರಷ್ಟು ಮೀಸಲಾತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಬೇಕು. ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಹಾಸ್ಟೆಲ್‍ನಿಂದ ಹೊರ ಹಾಕದಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಅನಧಿಕೃತ ಶೆಡ್ ತೆರವು: ಬೇಗೂರು ಒಳಕುಂಟೆ ಗ್ರಾಮದಲ್ಲಿ 2.6 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಲೇಔಟ್‍ನಲ್ಲಿ ಅನಧಿಕೃತವಾಗಿ ಹಾಕಿಕೊಂಡಿರುವ ಶೆಡ್‍ಗಳನ್ನು ಕೂಡಲೇ ತೆರವುಗೊಳಿಸುವಂತೆ ಬಿಡಿಎ ಆಯುಕ್ತರಿಗೆ ಸೂಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಜಿ.ಸೋಮಶೇಖರರೆಡ್ಡಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಈಗಾಗಲೇ ಬಿಡಿಎಯಿಂದ ನೋಟಿಸ್‍ ನೀಡಲಾಗಿದೆ. ಕೂಡಲೇ ತೆರವುಗೊಳಿಸುವಂತೆ ಆದೇಶಿಸುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಸೋಮಶೇಖರರೆಡ್ಡಿ ಮಾತನಾಡಿ, ಒಳಕುಂಟೆ ಗ್ರಾಮದಲ್ಲಿ 2.6 ಎಕರೆಯಲ್ಲಿ ಬಿಡಿಎ ಲೇಔಟ್‍ ನಿರ್ಮಿಸಿದ್ದು, ಅಲ್ಲಿನ ಕೆಲವು ನಿವೇಶನಗಳಲ್ಲಿ ಉಮಾಪತಿ ಶ್ರೀನಿವಾಸ್ ಎಂಬುವರು ಅನಧಿಕೃತವಾಗಿ ಕಾರ್​ ಶೆಡ್‍ಗಳನ್ನು ನಿರ್ಮಿಸಿಕೊಂಡಿದ್ದಾರೆ. ನಮ್ಮ ಜಿಲ್ಲೆಯವರಿಗೆ ನಿವೇಶನಗಳು ಹಂಚಿಕೆಯಾಗಿದ್ದರೂ ಅಲ್ಲಿಗೆ ಬರದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸೈನಿಕರಿಗೆ ನಿವೇಶನ ವಂಚನೆ: ಮಾಜಿ ಸೈನಿಕ ವಿಕ್ರಂ ದತ್ತ ಎಂಬುವರಿಗೆ ನಕಲಿ ದಾಖಲೆ ಸೃಷ್ಟಿಸಿ ನಿವೇಶನ ನೀಡುವುದಾಗಿ ವಂಚಿಸಲಾಗಿದೆ ಎಂದು ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ್ ವಿಧಾನಸಭೆಯಲ್ಲಿ ಆರೋಪಿಸಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಅಬ್ದುಲ್‍ ರಜಾಕ್‍ ಎಂಬುವರು ನಕಲಿ ದಾಖಲೆ ಸೃಷ್ಟಿಸಿ, ಸರ್ಕಾರಿ ಅಧಿಕಾರಿ ಸಹಿ ಇರುವ ದಾಖಲೆಗಳನ್ನು ನೀಡಿ 60-70 ಲಕ್ಷ ರೂ. ಪಡೆದು ಆದೇಶ ಪತ್ರ ನೀಡಿದ್ದಾರೆ. ಆದರೆ, ದಾಖಲೆಯಲ್ಲಿರುವಂತೆ ಯಾವುದೇ ನಿವೇಶನ ಲಭ‍್ಯವಿಲ್ಲ. ಅಬ್ದುಲ್‍ ರಜಾಕ್‍ ಎಂಬ ವ್ಯಕ್ತಿ ಪ್ರಧಾನಿ ಜತೆ ಪೋಟೋ ತೆಗೆಸಿಕೊಂಡಿದ್ದಾರೆ. ಜತೆಗೆ ಹಲವು ನಾಯಕರ ಜತೆ ಸಂಪರ್ಕದಲ್ಲಿದ್ದಾರೆ. ಇದು ಭ‍್ರಷ್ಟಾಚಾರಕ್ಕೆ ಉದಾಹರಣೆ ಆಗಿದೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಮಾಧುಸ್ವಾಮಿ, ಯಾರು ಯಾರ ಜೊತೆ ಪೋಟೋ ತೆಗೆಸಿಕೊಂಡಿರುವುದಕ್ಕೂ ನಮಗೂ ಸಂಬಂಧವಿಲ್ಲ. ಆತ ವಂಚನೆ ಮಾಡಿರುವ ಆರೋಪ ಕುರಿತು ಕಂದಾಯ ಸಚಿವರ ಗಮನಕ್ಕೆ ತಂದು ಉತ್ತರ ಕೊಡಿಸುವುದಾಗಿ ಹೇಳಿದರು.

ಇದನ್ನೂ ಓದಿ:ಸಿಂಧೂರಿ, ರೂಪಾ ಅಮಾನತಿಗೆ ವಿಶ್ವನಾಥ್ ಆಗ್ರಹ: ಬಿಗಿ ಕ್ರಮದ ಭರವಸೆ ನೀಡಿದ ಸರ್ಕಾರ

ABOUT THE AUTHOR

...view details