ಕರ್ನಾಟಕ

karnataka

ETV Bharat / state

ಕರಾವಳಿ ತೀರ ಸವೆತ ಸಮಸ್ಯೆ: ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮೊರೆ ಹೋಗುವಂತೆ ಹೈಕೋರ್ಟ್ ನಿರ್ದೇಶನ - ಕರಾವಳಿ ತೀರ ಪ್ರದೇಶ ಸವಕಳಿ

ಕರಾವಳಿ ತೀರದ ಸವಕಳಿ ತಡೆಗೆ ಕೇರಳದಲ್ಲಿ ಬಳಸುತ್ತಿರುವ ಸೀ ವೇಲ್​ ಬ್ರೇಕರ್​​ ವಿಧಾನವನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​ ಇತ್ಯರ್ಥಪಡಿಸಿದೆ.

ಹೈಕೋರ್ಟ್
ಹೈಕೋರ್ಟ್

By

Published : Aug 17, 2023, 10:57 PM IST

ಬೆಂಗಳೂರು : ಕರಾವಳಿ ತೀರದ ಸವಕಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮೊರೆ ಹೋಗುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇಂದು ಇತ್ಯರ್ಥಪಡಿಸಿತು.

ಕರಾವಳಿ ತೀರದ ಸವಕಳಿ ತಡೆಗೆ ಕೇರಳದಲ್ಲಿ ಬಳಸುತ್ತಿರುವ ಸಮುದ್ರ ಅಲೆ ತಡೆ (ಸೀ ವೇವ್ ಬ್ರೇಕರ್)ವಿಧಾನವನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅಬ್ದುಲ್ ಖಾದರ್ ಜಿಲಾನಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾ.ಎಂ.ಜಿ.ಎಸ್.ಕಮಲ್ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಉಲ್ಲಾಳದಬೆಟ್ಟಪ್ಪಾಡಿ ಗ್ರಾಮ ಸೇರಿದಂತೆ ರಾಜ್ಯದ ಕರಾವಳಿ ಗ್ರಾಮಗಳಲ್ಲಿ ವಾಸಿಸುವ ಮೀನುಗಾರರು ಕರಾವಳಿ ಸವೆತದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದಾಗಿ ಅವರ ಜೀವನ ಮತ್ತು ಜೀವನೋಪಾಯ ಎರಡೂ ಸಂಕಷ್ಟದಲ್ಲಿವೆ. ಇಷ್ಟು ಮಾತ್ರವಲ್ಲದೆ ಪರಿಸರದ ಮೇಲೂ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಪ್ರತಿ ವರ್ಷ ಬಂಡೆಗಳು ಮತ್ತು ಟೆಟ್ರಾಪಾಡ್​ಗಳನ್ನು ತಂದು ಹಾಕಿ, ಬೃಹತ್ ಮೊತ್ತವನ್ನು ವಿನಿಯೋಗಿಸುತ್ತಿದ್ದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಕೇರಳ ಮಾದರಿಯಲ್ಲಿ ಸಮುದ್ರ ಅಲೆ ತಡೆ (ಸೀ ವೇವ್ ಬ್ರೇಕರ್)ವಿಧಾನವನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದರು.

ಅರ್ಜಿದಾರರ ಪರ ವಕೀಲರ ಅವರ ವಾದ ಆಲಿಸಿದ ಪೀಠ, ಅರ್ಜಿದಾರರು ಹೇಳಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎನ್‌ಜಿಟಿ ಸೂಕ್ತ ಸಕ್ಷಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿತು. ಅರ್ಜಿದಾರರು ಪ್ರಸ್ತಾಪಿಸುತ್ತಿರುವಂತಹ ಸಮಸ್ಯೆಗಳ ಪರಿಹಾರಕ್ಕಾಗಿಯೇ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರಚಿಸಲಾಗಿದೆ. ಆದ್ದರಿಂದ, ಅರ್ಜಿದಾರರು ಈ ಸಮಸ್ಯೆ ಪರಿಹಾರಕ್ಕೆ ಎನ್​ಜಿಟಿ ಸಂಪರ್ಕಿಸಬಹುದು ಎಂದು ನಿರ್ದೇಶನ ನೀಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥ ಪಡಿಸಿತು.

ಕರಾವಳಿ ತೀರ ಪ್ರದೇಶ ಸವಕಳಿ ತಡೆಯಲು ಕೇರಳ ರಾಜ್ಯದಲ್ಲಿ ಸಮುದ್ರ ಅಲೆ ತಡೆ (ಸೀ ವೇವ್ ಬ್ರೇಕರ್) ವಿಧಾನದಂತಹ ತಂತ್ರಜ್ಞಾನ ಆಧಾರಿತ ಆಧುನಿಕ ವಿಧಾನವನ್ನು ಅನುಸರಿಸಲಾಗುತ್ತಿದೆ. ಕೇರಳ ಮಾದರಿ ಪರಿಸರ ಸ್ನೇಹಿ ಹಾಗೂ ಕಡಿಮೆ ವೆಚ್ಚದಿಂದ ಕೂಡಿದೆ. ಹಾಗಾಗಿ ಅದೇ ಮಾದರಿಯಲ್ಲಿ ರಾಜ್ಯದ ಕರಾವಳಿಯಲ್ಲಿಯೂ ಸಮುದ್ರ ಅಲೆ ತಡೆ ವಿಧಾನ ಅಳವಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎನ್ನುವ ಮುಖ್ಯ ಮನವಿ ಹಾಗು ಅರ್ಜಿ ಇತ್ಯರ್ಥವಾಗುವ ತನಕ ಬಂಡೆಗಳು ಮತ್ತು ಟೆಟ್ರಾಪಾಡ್‌ಗಳನ್ನು ಹಾಕುವುದಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರಾದ ಉಳ್ಳಾಲದ ಮೇಲಂಗಡಿ ನಿವಾಸಿ ಅಬ್ದುಲ್ ಖಾದರ್ ಜಿಲಾನಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮಧ್ಯಂತರ ಮನವಿಯನ್ನು ಮಾಡಿಕೊಂಡಿದ್ದರು.

ಇದನ್ನೂ ಓದಿ:ಅನಧಿಕೃತ ಕಟ್ಟಡಗಳ ತೆರವಿಗೆ 3 ವಾರಗಳಲ್ಲಿ ಕ್ರಿಯಾ ಯೋಜನೆ ಸಲ್ಲಿಸಿ: ಸರ್ಕಾರಕ್ಕೆ ಸೂಚನೆ

ABOUT THE AUTHOR

...view details