ಕರ್ನಾಟಕ

karnataka

ETV Bharat / state

ನಾಯಕತ್ವ ಬದಲಾವಣೆ ಗೊಂದಲದ ಮಧ್ಯೆ ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ: ಶಿವಮೊಗ್ಗಕ್ಕೆ ಬಂಪರ್​ - ಸಂಪುಟ ಸಭೆಯಲ್ಲಿ ಶಿವಮೊಗ್ಗಕ್ಕೆ ಹೆಚ್ಚಿನ ಆದ್ಯತೆ

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಸಿದ್ದರು. ಈ ವೇಳೆ ತಮ್ಮ ತವರು ಜಿಲ್ಲೆ ಶಿವಮೊಗ್ಗಕ್ಕೆ ಹೆಚ್ಚಿನ ಅನುದಾನವನ್ನು ಘೋಷಣೆ ಮಾಡಲಾಗಿದೆ.

cabinet meeting
ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ

By

Published : Jul 22, 2021, 7:30 PM IST

ಬೆಂಗಳೂರು: ನಾಯಕತ್ವ ಬದಲಾವಣೆಯ ಗೊಂದಲದ ಮಧ್ಯೆ ಇಂದು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಈ ಸಂಪುಟ ಸಭೆಯಲ್ಲಿ ಶಿವಮೊಗ್ಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಶಿವಮೊಗ್ಗ ಮಂಡಿಕೊಪ್ಪದಲ್ಲಿ 9.3 ಎಕರೆ ಬಿ ಖರಾಬ್ ಭೂಮಿಯನ್ನು ಗೋ ರಕ್ಷಾ ನ್ಯಾಯ ಸ‌‌ಮಿತಿಗೆ ಮಂಜೂರಾತಿ ಮಾಡಲಾಗಿದೆ. ಉಳಿದಂತೆ ಶಿವಮೊಗ್ಗದಲ್ಲಿ ಆಯುಷ್ ವಿವಿ ನಿರ್ಮಾಣ ಸಂಬಂಧ ವಿಧೇಯಕಕ್ಕೆ ಅನುನೋದನೆ, ಅದೇ ರೀತಿ ಫೆರಿಪರೆಲ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ನಿರ್ಮಿಸಲು 50 ಕೋಟಿ ರೂ.ಗೆ, ಭದ್ರಾವತಿಯ ಅಟಲ್ ಬಡಾವಣೆಯ ಅಕ್ರಮ ಸಕ್ರಮ ಮಾಡಲು ಸಂಪುಟ ಸಭೆ ತೀರ್ಮಾನಿಸಿದೆ.

ಗ್ರಾಮೀಣ ಪ್ರದೇಶದಲ್ಲಿ 4 ಲಕ್ಷ ಮನೆ, ನಗರ ಪ್ರದೇಶದಲ್ಲಿ 1 ಲಕ್ಷ ಮನೆ ನಿರ್ಮಾಣಕ್ಕೆ ಸಂಪುಟ ಅಸ್ತು ಎಂದಿದೆ. ಎರಡು ವರ್ಷಗಳಲ್ಲಿ ಮನೆ ಕಟ್ಟಲು ತೀರ್ಮಾನಿಸಲಾಗಿದೆ. ಬೆಂಗಳೂರಲ್ಲಿ 1 ಲಕ್ಷ ಬಹುಮಹಡಿ ಕಟ್ಟಡ ನಿರ್ಮಾಣ ಯೋಜನೆಯಡಿ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ 500 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ.

ಸಂಪುಟ ತೀರ್ಮಾನಗಳೇನು?:

ಹೆಕ್ಸಾಗೊನ್ ಮ್ಯಾನ್ಯೂಫ್ಯಾಕ್ಚರಿಂಗ್ ಇಂಟೆಲಿಜನ್ಸ್ ಇಂಡಿಯಾ ಕಂಪನಿ ರಾಜ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿನ ಕ್ಯಾಂಪಸ್‌ಗಳಲ್ಲಿ ಅತ್ಯಾಧುನಿಕ ಕೃಷಿ ತಂತ್ರಜ್ಞಾನದ ಆವಿಷ್ಕಾರ ಹಾಗೂ ಅಭಿವೃದ್ಧಿ ಕೇಂದ್ರಗಳನ್ನು 770 ಕೋಟಿ ರೂ. ಅಂದಾಜು ಮೊತ್ತದಲ್ಲಿ 3 ವರ್ಷಗಳ ಅವಧಿಗೆ ಸ್ಥಾಪಿಸಲು ಅನುಮೋದನೆ ನೀಡಲಾಗಿದ್ದು, ಹೆಕ್ಸಾಗೊನ್ ಸಂಸ್ಥೆ 85 ಕೋಟಿ ರೂ. ಭರಿಸಲಿದೆ.‌ ಉಳಿದ ವೆಚ್ಚ ರಾಜ್ಯ ಸರ್ಕಾರ ಭರಿಸಲಿದೆ. ರಾಜ್ಯದಲ್ಲಿ ಏಳು ಕೇಂದ್ರಗಳು ನಿರ್ಮಾಣವಾಗಲಿವೆ.

  • ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ- ನೂತನ ಯೋಜನೆ 75 ಕೋಟಿ ರೂ. ಅಂದಾಜಿನಲ್ಲಿ ಮುಂದಿನ 5 ವರ್ಷಗಳಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ
  • ಕೇಂದ್ರ ಸರ್ಕಾರದ ನಾಗರೀಕ ಹುದ್ದೆಗಳು ಮತ್ತು ಸೇವೆಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿ/ ವಿದ್ಯಾರ್ಥಿಗಳಿಗೆ 'ಆದಾಯ ಮತ್ತು ಸ್ವತ್ತು ಪ್ರಮಾಣ ಪತ್ರ' ಒದಗಿಸುವ ಕುರಿತು ಪರಿಷ್ಕೃತ ಆದೇಶ ಹೊರಡಿಸಲು ತೀರ್ಮಾನ
  • ಕರ್ನಾಟಕ ರಾಜ್ಯ ನಾಗರೀಕ ಸೇವಾ (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೌಕರರ ವರ್ಗಾವಣೆ ನಿಯಂತ್ರಣ) ನಿಯಮಗಳು- 2021 ಅನುಮೋದನೆ.
  • ಕಂದಾಯ ಇಲಾಖೆಯಲ್ಲಿನ ತಹಶೀಲ್ದಾರ್ ಹುದ್ದೆಗಳಿಗೆ ಇತರೆ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸದಿರಲು ತೀರ್ಮಾನ
  • ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅದರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲು ಅನುಮೋದನೆ
  • ಮಂಡ್ಯ ನಗರದ ಆರ್.ಪಿ. ರಸ್ತೆಯ ಗುರುಭವನದ ಪಕ್ಕ ಇರುವ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ 5.00x16.40 ಮೀಟರ್ ಮತ್ತು ಎಸಿಸಿ ಶೀಟು 7.85x12.00 ಮೀಟರ್ ವಿಸ್ತೀರ್ಣದ ಕಟ್ಟಡಗಳನ್ನು ಈಗಾಗಲೇ ಕರ್ನಾಟಕ ಸಂಘ ಸಾಹಿತ್ಯ ಸಾಂಸ್ಕೃತಿಕ ಚಟುಟಿಕೆಗಳಿಗೆ ಉಪಯೋಗಿಸುತ್ತಿದ್ದು, ಸಂಘದ ಕೋರಿಕೆ ಮೇರೆಗೆ ಸದರಿ ಜಾಗವನ್ನು ವಾರ್ಷಿಕವಾಗಿ ಒಟ್ಟು 10,000 ರೂ.ರಂತೆ ಗುತ್ತಿಗೆದರ ನಿಗದಿಪಡಿಸಿ, 30 ವರ್ಷಗಳ ಕಾಲಾವಧಿಗೆ ಮಂಡ್ಯ ಕರ್ನಾಟಕ ಸಂಘಕ್ಕೆ ಗುತ್ತಿಗೆ ನೀಡಲು ಅನುಮೋದನೆ
  • ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ವಿತ್ತೀಯ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ 2021ಗೆ ಅನುಮೋದನೆ. ಯೋಜನೆಗಳ ಆಡಿಟ್ ನ್ನು ರಾಜ್ಯ ಲೆಕ್ಕಪತ್ರ ಇಲಾಖೆ ಮಾಡಬೇಕು. ನಿಗಾವಣೆ ಮಾಡುವ ಜವಾಬ್ದಾರಿ
  • ವಸತಿ ಇಲಾಖೆ ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದ ದುರ್ಬಲ ವರ್ಗಗಳ ವಸತಿ ರಹಿತರಿಗಾಗಿ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ 6 ಲಕ್ಷ ಮನೆಗಳ ಮಂಜೂರು
  • ಪಿ.ಎಂ.ಎ.ವೈ. (ನಗರ) ಎಹೆಚ್​ಪಿ ಘಟಕದಡಿ ರಾಜ್ಯದ ವಿವಿಧ ನಗರಗಳಲ್ಲಿ ಅನುಮೋದನೆಗೊಂಡಿರುವ ಮನೆಗಳಿಗೆ ರೂ. 500 ಕೋಟಿಗಳ ಮೊತ್ತದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ತೀರ್ಮಾನ
  • ಚಿತ್ರದುರ್ಗದ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯಲ್ಲಿ ಕುಡಿಯುವ ನೀರಿನ ಸಲುವಾಗಿ ವೇದಾವತಿ ನದಿಯಿಂದ ಧರ್ಮಪುರ ಹಾಗೂ ಸುತ್ತಮುತ್ತಲಿನ ಕರೆಗಳ ನೀರು ತುಂದಿಸುವ ಕಾಮಗಾರಿಯ 90 ಕೋಟಿ ರೂ. ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
  • ಕರ್ನಾಟಕ ಮುದ್ರಾಂಕ (ತಿದ್ದುಪಡಿ) ವಿಧೇಯಕ 2021ಗೆ ಅನುಮೋದನೆ
  • ನಗರಾಭಿವೃದ್ಧಿ ಇಲಾಖೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಗಬ್ಬೂರು ಹಾಗೂ ಅಯೋಧ್ಯ ಗ್ರಾಮಗಳಲ್ಲಿನ ವಿವಿಧ ಸರ್ವೆ ನಂ.ಗಳಲ್ಲಿ ಒಟ್ಟು 7 ಎಕರೆ ಜಾಗವನ್ನು 200 ಟನ್ ಸಾಮರ್ಥ್ಯದ WTE ಘಟಕವನ್ನು ಸ್ಥಾಪಿಸಲು NTPC ವಿದ್ಯುತ್ ವ್ಯಾಪಾರ್ ನಿಗಮ್ ಲಿಮಿಟೆಡ್ (NVVN)ಗೆ 30 ವರ್ಷಗಳ ಅವಧಿಗೆ ಉಚಿತವಾಗಿ ಲೀಸ್ ಆಧಾರದ ಮೇಲೆ ಗುತ್ತಿಗೆ ನೀಡಲು ಅಸ್ತು
  • ಬೆಂಗಳೂರು ಜಲಮಂಡಳಿಯ ಕೋರಮಂಗಲ ಹಾಗೂ ಚಲ್ಲಘಟ್ಟ ಕಣಿವೆಯಲ್ಲಿರುವ ಪ್ರಸ್ತುತ 248 ದಶಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿಗದಿಪಡಿಸಿರುವ ಮಾನದಂಡಗಳಿಗೆ ಸರಿಹೊಂದುವಂತೆ ಉನ್ನತೀಕರಿಸುವ ಕಾಮಗಾರಿಯ ಅಂದಾಜು ವೆಚ್ಚ ರೂ. 718 ಕೋಟಿಗಳ ವಿಸ್ತ್ರತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ
  • ಕೊಪ್ಪಳ ಜಿಲ್ಲೆಯ ಹಿರೇಹಳ್ಳ ಯೋಜನೆಯ 507 ಕೋಟಿ ರೂ. ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ, ಜೂ.17ರಂದು ಆದೇಶ ಹೊರಡಿಸಲಾಗಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ

ನಾಯಕತ್ವ ಬದಲಾವಣೆ ಬಗ್ಗೆ ಕ್ಯಾನಿನೆಟ್​ನಲ್ಲಿ ವಿಷಯ ಪ್ರಸ್ತಾಪಿಸದ ಸಿಎಂ!

ನಾಯಕತ್ವ ಬದಲಾವಣೆ ಸಂಬಂಧ ಸಿಎಂ‌ ಯಡಿಯೂರಪ್ಪ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಸಭೆಯ ಅಜೆಂಡಾ ಬಿಟ್ಟು ಯಾವುದೇ ವಿಷಯವನ್ನು ಸಿಎಂ ಯಡಿಯೂರಪ್ಪ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿಲ್ಲ. ನಾಯಕತ್ವ ಬದಲಾವಣೆ ಸಂಬಂಧ ಯಾವುದೇ ವಿಚಾರವನ್ನು ಸಚಿವರೂ ಪ್ರಸ್ತಾಪಿಸಿಲ್ಲ. ಕೇವಲ ಯೋಜನೆ ಅನುಮೋದನೆ ಸಂಬಂಧ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details