ಕರ್ನಾಟಕ

karnataka

ಸಚಿವಾಕಾಂಕ್ಷಿಗಳ ಒತ್ತಡ ನಿವಾರಣೆಗೆ ನಿಗಮ ಮಂಡಳಿಯಲ್ಲಿ ಕಾಯಕಲ್ಪ; ಫಲ ಕೊಡುತ್ತಾ ಸಿಎಂ ಕಾರ್ಯತಂತ್ರ?!

By

Published : Nov 25, 2020, 3:40 AM IST

ಮಂಗಳವಾರ ಸಂಜೆಯ ನಂತರ ಒಂದರ ನಂತರ ಒಂದರಂತೆ ನಿಗಮಗಳಿಗೆ ಆದೇಶ ಹೊರಬಿದ್ದಿದೆ. ಅಂತಿಮವಾಗಿ ಒಟ್ಟು 33 ನಿಗಮ‌ ಮಂಡಳಿ, 2 ಆಯೋಗ, 2 ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ನೇಮಕದಲ್ಲಿ 24 ಶಾಸಕರು ಇರುವುದು ಪ್ರಮುಖವಾದರೆ, ಉಳಿದಂತೆ ಹೆಚ್ಚಿನವರು ಇತ್ತೀಚಿನ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ ನಾಯಕರು ಆಗಿದ್ದಾರೆ.

ಬಿಎಸ್​ ಯಡಿಯೂರಪ್ಪ
ಬಿಎಸ್​ ಯಡಿಯೂರಪ್ಪ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹೆಚ್ಚುವ ಶಾಸಕರ ಒತ್ತಡ ನಿವಾರಣೆಗೆ ಮುಂದಾಗಿರುವ ಸಿಎಂ ಬಿಎಸ್ ಯಡಿಯೂರಪ್ಪ ಸಚಿವಾಕಾಂಕ್ಷಿಗಳು ಸೇರಿದಂತೆ 24 ಶಾಸಕರಿಗೆ ನಿಗಮ-ಮಂಡಳಿ ಹಾಗೂ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಕಲ್ಪಿಸಿ ಸಮಾಧಾನಪಡಿಸುವ ಯತ್ನ ಮಾಡಿದ್ದಾರೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನ ಕೊಂಡು ಬಿಜೆಪಿ ಸರ್ಕಾರ ರಚನೆಯಾಗುವುದು ಪ್ರಮುಖ ಪಾತ್ರವಹಿಸಿದ್ದ 17 ಶಾಸಕರಲ್ಲಿ 16 ಮಂದಿ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದು ಇವರಲ್ಲಿ ಹೆಚ್ಚಿನವರು ಗೆದ್ದು ಮಂತ್ರಿಗಳಾಗಿದ್ದಾರೆ. ಆದರೆ ಚುನಾವಣೆಯಲ್ಲಿ ಸೋತ ಎಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ವಿಧಾನಸಭೆಯಲ್ಲಿ ಸ್ಪರ್ಧಿಸದೆ ಬೇರೊಬ್ಬ ಅಭ್ಯರ್ಥಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದ ಆರ್ ಶಂಕರ್ ಸದ್ಯ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಇವರಿಗೆ ಸಚಿವ ಸ್ಥಾನ ನೀಡಲೇಬೇಕಾದ ಅನಿವಾರ್ಯತೆ ಸರ್ಕಾರಕ್ಕಿದೆ. ಆದರೆ ಇವರ ಹೊರತಾಗಿಯೂ ಹಲವು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಸಚಿವ ಸ್ಥಾನಕ್ಕಾಗಿ ತೀವ್ರ ಪಟ್ಟು ಹಿಡಿದು ಕುಳಿತಿದ್ದು ಇವರನ್ನು ಸಮಾಧಾನಪಡಿಸುವ ದೃಷ್ಟಿಯಿಂದ ಸಚಿವ ಸಂಪುಟ ವಿಸ್ತರಣೆಗೆ ಮುನ್ನವೇ ಸಿಎಂ ಬಿಎಸ್ ಯಡಿಯೂರಪ್ಪ ಪ್ರಮುಖ ಹಾಗೂ ಆಯಕಟ್ಟಿನ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸಿ ನೇಮಕ ಮಾಡಿದ್ದಾರೆ.

ಭರ್ಜರಿ ನೇಮಕ
ಮಂಗಳವಾರ ಸಂಜೆಯ ನಂತರ ಒಂದರ ನಂತರ ಒಂದರಂತೆ ನಿಗಮಗಳಿಗೆ ಆದೇಶ ಹೊರಬಿದ್ದಿದೆ. ಅಂತಿಮವಾಗಿ ಒಟ್ಟು 33 ನಿಗಮ‌ ಮಂಡಳಿ, 2 ಆಯೋಗ, 2 ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ನೇಮಕದಲ್ಲಿ 24 ಶಾಸಕರು ಇರುವುದು ಪ್ರಮುಖವಾದರೆ, ಉಳಿದಂತೆ ಹೆಚ್ಚಿನವರು ಇತ್ತೀಚಿನ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ ನಾಯಕರು ಆಗಿದ್ದಾರೆ.

ನಿಗಮ-ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕವಾದವರಲ್ಲಿ ಪ್ರಮುಖವಾಗಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ, ಸೋಲಾಪುರ ಶಾಸಕ ನರಸಿಂಹನಾಯಕ (ರಾಜುಗೌಡ), ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ, ಮುದ್ದೇಬಿಹಾಳ ಶಾಸಕ ಎಸ್ ಪಾಟೀಲ್ ನಡಹಳ್ಳಿ, ಸಾಗರ ಶಾಸಕ ಹಾಲಪ್ಪ, ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ದೇವದುರ್ಗ ಶಾಸಕ ಶಿವನಗೌಡ ನಾಯಕ್, ರೋಣ ಶಾಸಕ ಕಳಕಪ್ಪ ಬಂಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ತೇರದಾಳ ಶಾಸಕ ಸಿದ್ದು ಸವದಿ, ಹಾಸನ ಶಾಸಕ ಪ್ರೀತಮ್ ಗೌಡ, ಯಲಹಂಕ ಶಾಸಕ ಹೆಚ್ ವಿಶ್ವನಾಥ್, ದುರ್ಯೋಧನ ಐಹೊಳೆ ಮತ್ತಿತರ ಪ್ರಮುಖ ಶಾಸಕರು ಸೇರಿದ್ದಾರೆ.

ಒಟ್ಟಾರೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಉಂಟಾಗಬಹುದಾದ ಅಸಮಾಧಾನ ಶಮನಕ್ಕೆ ಬಿಎಎಸ್​ವೈ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ತೀವ್ರ ಸಚಿವಾಕಾಂಕ್ಷಿಗಳು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುತ್ತಾರೆ ಅಥವಾ ಹುದ್ದೆ ಅಲಂಕರಿಸಲು ನಿರಾಕರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details