ಕರ್ನಾಟಕ

karnataka

By

Published : Aug 10, 2023, 6:52 AM IST

ETV Bharat / state

ಸತತ ಮೂರನೇ ದಿನ ಶಾಸಕರ ಜೊತೆ ಸಿಎಂ ಮ್ಯಾರಥಾನ್ ಸಭೆ: ಸಿದ್ದರಾಮಯ್ಯ ನೀಡುತ್ತಿರುವ ಭರವಸೆಯಾದರೂ ಏನು?

ಜಿಲ್ಲಾವಾರು ಶಾಸಕರು ಮತ್ತು ಸಚಿವರ ನಡುವೆ ಸಮನ್ವಯತೆ ಸಾಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸತತ ಮೂರನೇ ದಿನವೂ ಸಭೆ ನಡೆಸಿದರು.

cm-siddaramaiah-meeting-with-mlas-in-bengaluru
ಸತತ ಮೂರನೇ ದಿನ ಶಾಸಕರ ಜೊತೆ ಸಿಎಂ ಮ್ಯಾರಥಾನ್ ಸಭೆ

ಬೆಂಗಳೂರು:ಶಾಸಕರ ಅಸಮಾಧಾನ ಸ್ಫೋಟದ ಸುಳಿವು ಸಿಗುತ್ತಿದ್ದಂತೆ ಎಚ್ಷೆತ್ತುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸತತ ಮೂರನೇ ದಿನವೂ ಜಿಲ್ಲಾವಾರು ಶಾಸಕರು ಮತ್ತು ಸಚಿವರ ಸಭೆ ನಡೆಸಿ ಶಾಸಕರು ಹಾಗೂ ಸಚಿವರ ನಡುವೆ ಸಮನ್ವಯತೆ ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ಅನುದಾನ ಕೊರತೆಯ ಬಗ್ಗೆಯೂ ಮಾಹಿತಿ ನೀಡಿ ಮಿತಿಯೊಳಗೆ ಬೇಡಿಕೆ ತನ್ನಿ ಎನ್ನುವ ಸಲಹೆ ನೀಡಿದ್ದಾರೆ. ಈ ವರ್ಷ ಹೆಚ್ಚು ಅನುದಾನದ ನಿರೀಕ್ಷೆ ಇಟ್ಟುಕೊಳ್ಳದೇ, ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಗೆ ಆದ್ಯತೆ ನೀಡಬೇಕು ಎಂದು ಸಿಎಂ ಸೂಚಿಸಿದ್ದಾರೆ.

ಆ್ಯಂಬುಲೆನ್ಸ್​ಗೆ ಸಿಎಂ ಹಸಿರು ನಿಶಾನೆ

ಕೆಲ ಸಚಿವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ಶಾಸಕರು ಮುಖ್ಯಮಂತ್ರಿಗಳಿಗೆ ಬರೆದಿದ್ದರು ಎನ್ನಲಾದ ಪತ್ರ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಸಿ ಸಮಸ್ಯೆ ಸರಿಪಡಿಸುವ ಪ್ರಯತ್ನ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸತತ ಮೂರನೇ ದಿನ (ಬುಧವಾರ) ಜಿಲ್ಲಾವಾರು ಸ್ವಪಕ್ಷೀಯ ಶಾಸಕರ ಸರಣಿ ಸಭೆ ನಡೆಸಿದ್ದಾರೆ.

ಶಾಸಕರಿಗೆ ಸಿಎಂ ಸಲಹೆ:ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಅಪರಾಹ್ನದಿಂದ ಆರಂಭಗೊಂಡ ಸಭೆ ಸಂಜೆವರೆಗೂ ಸುದೀರ್ಘವಾಗಿ ನಡೆಯಿತು. ಕೊಡಗು, ಮಂಡ್ಯ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ಕಾಂಗ್ರೆಸ್ ಶಾಸಕರ ಸಭೆಯನ್ನು ಜಿಲ್ಲಾವಾರು ಪ್ರತ್ಯೇಕವಾಗಿ ನಡೆಸಿದರು. ಆಯಾ ಜಿಲ್ಲೆಗಳ ಶಾಸಕರ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳು, ಶಾಸಕರ ಜೊತೆ ಸಚಿವರ ಸ್ಪಂದನೆ, ತುರ್ತು ಬೇಡಿಕೆ, ಅನುದಾನ ಲಭ್ಯತೆ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಸಲಾಗಿದೆ. ಪ್ರಮುಖವಾಗಿ ಸಚಿವರ ವರ್ತನೆ ಸರಿಪಡಿಸುವ ಭರವಸೆಯನ್ನು ಶಾಸಕರಿಗೆ ಸಿಎಂ ಸಿದ್ದರಾಮಯ್ಯ ನೀಡಿದ್ದು, ಸಚಿವರಿಂದ ಸಕಾರಾತ್ಮಕ ಸ್ಪಂದನೆ ಸಿಗದಿದ್ದರೆ ತಮ್ಮ ಗಮನಕ್ಕೆ ತರುವಂತೆ ಸೂಚಿಸಿದ್ದಾರೆ.

ಈ ಬಾರಿ ಹೆಚ್ಚಿನ ಅನುದಾನ ನೀಡಲು ಕಷ್ಟಸಾಧ್ಯ, ತೀರಾ ಮುಖ್ಯ, ಅನಿವಾರ್ಯ ಎನ್ನುವ ಕಾಮಗಾರಿಗಳಾದಲ್ಲಿ ಮಾತ್ರ ಆದ್ಯತೆ ಅನುಸಾರ ಕೈಗೆತ್ತಿಕೊಳ್ಳಲಾಗುತ್ತದೆ. ಉಳಿದಂತೆ ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಯಾವುದಕ್ಕೂ ಅತಿಯಾದ ಆತುರ ಬೇಡ. ಕಾಲ ಕಾಲಕ್ಕೆ ಶಾಸಕರ ಕುಂದು ಕೊರತೆ ಆಲಿಸಿ ಸಮಸ್ಯೆಗಳ ಪರಿಹಾರ ಮಾಡುವುದಾಗಿ ಶಾಸಕರಿಗೆ ಸಿಎಂ ಅಭಯ ನೀಡಿದ್ದಾರೆ‌.

ಇದನ್ನೂ ಓದಿ:ಕೈ ಶಾಸಕರ ಅಸಮಾಧಾನ ತಗ್ಗಿಸಲು ಸಿಎಂ ಕಸರತ್ತು: ಮಂಗಳವಾರವೂ ಆರು ಜಿಲ್ಲೆ ಶಾಸಕರು, ಸಚಿವರ ಜೊತೆ ಸಭೆ

ಆ್ಯಂಬುಲೆನ್ಸ್ ಕೊಡುಗೆ:ಎಲೆಕ್ಟ್ರಾನಿಕ್ ಸಿಟಿಯ ಸೇಕ್ರೆಡ್ ಓಕ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಸುದೀಪ್ ಕುಮಾರ್ ಮತ್ತು ಡಾ. ಸೋಮಿ ಸೋಲೋಮನ್ ದಂಪತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಪೂರ್ವಕವಾಗಿ ಎರಡು ಉಚಿತ ಆ್ಯಂಬುಲೆನ್ಸ್​ಗಳನ್ನು ಕೊಡುಗೆ ನೀಡಿದರು. ಮುಖ್ಯಮಂತ್ರಿಗಳು ಆ್ಯಂಬುಲೆನ್ಸ್​ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಸಾರ್ವಜನಿಕರ ಉಚಿತ ಉಪಯೋಗಕ್ಕೆ ಚಾಲನೆ ನೀಡಿದರು. ವೈದ್ಯ ದಂಪತಿ ಹಾಗೂ ಯುವ ಕಾಂಗ್ರೆಸ್ ಮುಖಂಡರಾದ ಶಿವಮೊಗ್ಗದ ರಂಗನಾಥ್ ಮತ್ತು ಎಸ್.ಪಿ. ದಿನೇಶ್ ಅವರು ಈ ಸಂದರ್ಭದಲ್ಲಿ ಇದ್ದರು.

ABOUT THE AUTHOR

...view details