ಕರ್ನಾಟಕ

karnataka

ಅಪರಾಧ ಪ್ರಕರಣಗಳನ್ನು ನಿಯಂತ್ರಿಸದಿದ್ದರೆ ಎಸ್ಪಿಗಳೇ ಹೊಣೆ, ಶಿಸ್ತುಕ್ರಮ: ಸಿದ್ದರಾಮಯ್ಯ ಎಚ್ಚರಿಕೆ

By ETV Bharat Karnataka Team

Published : Sep 15, 2023, 8:54 PM IST

ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿನ ಅಕ್ರಮಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳದಿದ್ದರೆ ಎಸ್ಪಿ, ಡಿಸಿಪಿ‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಐಪಿಎಸ್ ಅಧಿಕಾರಿಗಳೊಂದಿಗೆ ಸಿಎಂ ಸಭೆ
ಐಪಿಎಸ್ ಅಧಿಕಾರಿಗಳೊಂದಿಗೆ ಸಿಎಂ ಸಭೆ

ಬೆಂಗಳೂರು: ರಾಜ್ಯದ ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮ ನಡೆಯುತ್ತಿದ್ದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಎಸ್ಪಿ ಅಥವಾ ಡಿಸಿಪಿ‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿಂದು ಐಪಿಎಸ್ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.‌ ಇದಕ್ಕೂ ಮೊದಲು ವಾಹನ ಕಳುವಾದರೆ ಆನ್ ಲೈನ್‌ನಲ್ಲಿ ದೂರು ನೀಡಲು ಇ-ಎಫ್ಐಆರ್ ಹಾಗೂ ದಂಡ ಪಾವತಿಸಲು ಇ-ಚಲನ್ ವ್ಯವಸ್ಥೆಗೆ ಚಾಲನೆ ನೀಡಿದರು.

ಸಭೆ ಬಳಿಕ‌ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಜೂಜು, ಬೆಟ್ಟಿಂಗ್ ದಂಧೆ ಹಾಗು‌ ಡ್ರಗ್ಸ್ ಚಟುವಟಿಕೆ ಸೇರಿದಂತೆ ಅಕ್ರಮಗಳು ಆಯಾ ಠಾಣಾ ವ್ಯಾಪ್ತಿಗಳ ಕೆಳ ಹಂತದ ಅಧಿಕಾರಿಗಳ ಗಮನಕ್ಕೆ ಬರದೇ ಯಾವುದು ನಡೆಯುವುದಿಲ್ಲ. ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರನ್ನು ಕೂಡಲೇ‌‌ ಮಟ್ಟಹಾಕಬೇಕು. ಸಾಮಾನ್ಯವಾಗಿ ಕೆಳಹಂತದ ಅಧಿಕಾರಿಗಳು ತಪ್ಪು ಮಾಡಿದರೆ‌‌ ಶಿಸ್ತು ಕ್ರಮ ಕೈಗೊಳ್ಳುವುದು ಒಂದು ಭಾಗ. ಆದರೆ ಇನ್ಮುಂದೆ ಸಂಘಟಿತ ಅಪರಾಧಗಳನ್ನು ನಿಯಂತ್ರಿಸದಿದ್ದರೆ ಎಸ್ಪಿ ಮಟ್ಟದ ಅಧಿಕಾರಿಗಳೇ ಹೊಣೆಗಾರರನ್ನಾಗಿಸಿ ಅವರ ವಿರುದ್ದ ಶಿಸ್ತುಕ್ರಮ‌ ಕೈಗೊಳ್ಳಲಾಗುವುದು ಎಂದರು.

ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಿ: ಠಾಣಾಧಿಕಾರಿಗಳ ಗಮನಕ್ಕೆ ಬರದಂತೆ ಯಾವ ಅಪರಾಧಗಳೂ, ಕರಾಳ ದಂಧೆಗಳೂ ನಡೆಯಲು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳು ಠಾಣೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುವುದು ಕಡ್ಡಾಯ. ಪೊಲೀಸರು ದರ್ಪ ಬಿಟ್ಟು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಠಾಣೆಗೆ ಬರುವ ಬಡವರು, ಜನಸಾಮಾನ್ಯರಿಗೆ ಪೊಲೀಸ್ ವ್ಯವಸ್ಥೆ ಬಗ್ಗೆ ಭರವಸೆ ಹುಟ್ಟುವ ರೀತಿಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ದೂರು ಬರುವವರೆಗೂ ಕಾಯಕೂಡದು‌‌.‌ ಕಾನೂನು ಸುವ್ಯವಸ್ಥೆಗೂ ರಾಜ್ಯದ ಅಭಿವೃದ್ಧಿಗೂ ನೇರ ಸಂಬಂಧವಿದೆ. ಹೀಗಾಗಿ ಎಲ್ ಅಂಡ್ ಓ ರಕ್ಷಣೆಗೆ ಆದ್ಯತೆ ಸೂಚಿಸಿದ್ದೇನೆ ಎಂದರು. ಬೆಂಗಳೂರು ನಗರ ವ್ಯವಸ್ಥೆ ಗಟ್ಟಿಗೊಳಿಸಲು ಹೊಸದಾಗಿ 2454 ಹುದ್ದೆಗಳನ್ನು ನೇಮಿಸಲು ಮುಂದಾಗಿದ್ದೇವೆ‌‌‌. ನಗರದಲ್ಲಿ 5 ಸಂಚಾರ ಹಾಗೂ 6 ಮಹಿಳಾ ಪೊಲೀಸ್ ಠಾಣೆ ತೆರಯಲು ನಿರ್ಧರಿಸಲಾಗಿದೆ‌. 2016-17ನೇ ಸಾಲಿನಲ್ಲಿ ಬಜೆಟ್​ನಲ್ಲಿ ಘೋಷಿಸಿದಂತೆ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪೂರ್ವ ವಿಭಾಗ ತರೆಯಲು 60 ಕೋಟಿ ವೆಚ್ಚವಾಗಲಿದ್ದು ಈ ಬಗ್ಗೆ ಆದೇಶ ಹೊರಡಿಸಲಾಗಿದೆ.

148 ವರ್ಷ ಹಳೆಯದಾದ ಈ ಹಿಂದೆ ಪೊಲೀಸ್ ಆಯುಕ್ತರ ಕಚೇರಿ ಬಳಸುತ್ತಿದ್ದ ಪಾರಂಪರಿಕ ಕಟ್ಟಡದ ನವೀಕರಣಕ್ಕಾಗಿ 3 ಕೋಟಿ ಅನುದಾನ ಒದಗಿಸಲಾಗಿದೆ. ಪೊಲೀಸ್ ವಾಹನ ಖರೀದಿಸಲು 100 ಕೋಟಿ ಮೀಸಲಿಟ್ಟಿದ್ದು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಮಂಜೂರು ಮಾಡಲಾಗುವುದು ಸಿಸಿಬಿ ಬಲವರ್ಧನೆಗೊಳಿಸಲು ಹೊಸದಾಗಿ 230 ಹೆಚ್ಚುವರಿ ಪೊಲೀಸರು ನೇಮಿಸಲು‌ ನಿರ್ಧರಿಸಲಾಗಿದೆ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ:ಪಿಒಪಿ ಗಣೇಶ ಮೂರ್ತಿ ನಿಷೇಧ: ಮಣ್ಣಿನ ಗಣಪತಿ ಪೂಜಿಸಿ, ಪರಿಸರ ಸಂರಕ್ಷಿಸುವಂತೆ ಸಚಿವ ಖಂಡ್ರೆ ಮನವಿ

ABOUT THE AUTHOR

...view details