ಬೆಂಗಳೂರು: "ರಾಜೀವ್ ಗಾಂಧಿ ವಸತಿ ನಿಗಮದಿಂದ ರಾಜ್ಯದೆಲ್ಲೆಡೆ ಬಡ ಕುಟುಂಬಗಳಿಗಾಗಿ ಪ್ರಧಾನ ಮಂತ್ರಿ ಆವಾಸ್ (ನಗರ) ಯೋಜನೆಯಡಿ ನಿರ್ಮಿಸಲಾಗುತ್ತಿರುವ 52,189 ಮನೆಗಳ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ, ಅಗತ್ಯವಾದ ಅನುದಾನ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ" ಎಂದು ವಸತಿ ಸಚಿವ ಜಮೀರ್ ಅಹ್ಮದ್ ತಿಳಿಸಿದರು.
"ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ವಸತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ 52,189 ಮನೆಗಳ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ವಂತಿಗೆ 2,013 ಕೋಟಿ ರೂ. ಪಾವತಿ ಆಗಿಲ್ಲ. ಹೀಗಾಗಿ ಕಾಮಗಾರಿ ಪೂರ್ಣ ಗೊಳಿಸಲು 2,168 ಕೋಟಿ ರೂ. ಅಗತ್ಯ ಇರುವ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿ, ಅವರು ಹಂತ ಹಂತವಾಗಿ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ಕುರಿತು ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ" ಎಂದರು.
"2013ರಿಂದ ಇದುವರೆಗೆ 52,189 ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಫಲಾನುಭವಿಗಳ ವಂತಿಗೆ 2,013 ಕೋಟಿ ರೂ. ಬರಬೇಕಿದ್ದು, 134 ಕೋಟಿ ರೂ. ಮಾತ್ರ ಪಾವತಿ ಆಗಿದೆ. ಫಲಾನುಭವಿಗಳು ಬಡವರಾಗಿದ್ದು, 4 ಲಕ್ಷ ಪಾವತಿ ಕಷ್ಟ ಆಗಿದೆ. ಬ್ಯಾಂಕ್ ಗಳಿಂದಲೂ ಸಾಲ ಸಿಗುತ್ತಿಲ್ಲ. ಕೊಳೆಗೇರಿ ಅಭಿವೃದ್ಧಿ ಮಂಡಳಿ ಯೋಜನೆಯಡಿ ಕೈಗೊಂಡಂತೆ ಫಲಾನುಭವಿಗಳು ಒಂದು ಲಕ್ಷ ರೂ. ಪಾವತಿಸಿ ಉಳಿದ ಹಣ ಸರ್ಕಾರ ಭರಿಸಿದರೆ ಮಾತ್ರ ಯೋಜನೆ ಪೂರ್ಣಗೊಂಡು ಬಡವರಿಗೆ ಮನೆ ನೀಡಲು ಸಾಧ್ಯ ವಾಗುತ್ತದೆ ಎಂದು ಮನವರಿಕೆ ಮಾಡಿಕೊಡಲಾಗಿ ಸಂಪುಟದ ಮುಂದೆ ಪ್ರಸ್ತಾವನೆ ತರುವಂತೆ ಸೂಚಿಸಿದ್ದಾರೆ" ಎಂದು ಹೇಳಿದರು.