ಕರ್ನಾಟಕ

karnataka

ETV Bharat / state

2ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ತಡೆ.. ಸಿ ಎಂ ಇಬ್ರಾಹಿಂ ಹೇಳಿದ್ದೇನು? - ಬೆಂಗಳೂರು

2ಬಿ ಮೀಸಲಾತಿ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಬಿಜೆಪಿ ಸರ್ಕಾರದ ವಿರುದ್ಧ ವ್ಯಂಗ್ಯವಾಗಿ ಮಾತನಾಡಿದ್ದಾರೆ.

jds
ಪ್ರಚಾರ ಸಮಿತಿ ಸದಸ್ಯರ ಸಭೆ

By

Published : Apr 25, 2023, 5:07 PM IST

ಬೆಂಗಳೂರು : 2ಬಿ ಮೀಸಲಾತಿ ರದ್ದು ಮಾಡಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದರೆ ಸಾಲದು, ಆದೇಶವನ್ನೇ ರದ್ದು ಮಾಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿದ್ದ ಪ್ರಚಾರ ಸಮಿತಿ ಸದಸ್ಯರ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಘೋಷಣೆ ಅಷ್ಟೇ ಮಾಡಿರೋದು ಅಂತ ಸರ್ಕಾರದ ವಕೀಲರೇ ಹೇಳಿದ್ದಾರೆ ಎಂದರು.

ಬಸವರಾಜ ಬೊಮ್ಮಾಯಿ ಅನುಭವಸ್ಥ ಅಲ್ಲ. ನಾನು ಅಧ್ಯಕ್ಷನಾಗಿದ್ದಾಗ, ಅವರು ಜನರಲ್ ಸೆಕ್ರೆಟರಿಯಾಗಿದ್ದರು. ಪಾಪ ಅವನ ಕೈಯಲ್ಲಿ ಬಿಜೆಪಿಯವರು ಮಾಡಿಸಿದ್ದಾರೆ. ದೇವೇಗೌಡರು ಧರ್ಮದ ಆಧಾರದಲ್ಲಿ ಮೀಸಲಾತಿ ಕೊಟ್ಟಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಡಿ ಕೊಟ್ಟಿದ್ದಾರೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಅಂತ ಸಂವಿಧಾನದಲ್ಲಿ ಹೇಳಿದ್ದಾರೆ. ಹಿಂದುಳಿದ ವರ್ಗದ ಸಮಿತಿಯ ವರದಿ ತಗೊಂಡು ದೇವೇಗೌಡರು ಮೀಸಲಾತಿ ಕೊಟ್ಟಿದ್ದರು. ಇಂದು ಬಿಜೆಪಿ ಆತುರವಾಗಿ ಮಾಡಿದೆ. ಸುಪ್ರೀಂಕೋರ್ಟ್ ಸರಿಯಾದ ದಾರಿ ತೋರಿಸಿದೆ. ಮೇ 10 ರ ನಂತರ ಇದು ಇರೋದೇ ಇಲ್ಲ ಎಂದು ಇಬ್ರಾಹಿಂ ಹೇಳಿದರು.

ಮೀಸಲಾತಿ ವಿಚಾರದಲ್ಲಿ ಇದೊಂದು ಅಸ್ವಾಭಾವಿಕೆ ಜನನವಾಗಿತ್ತು. ಈಗ ಅಸ್ವಾಭಾವಿಕ ಸಾವು ಆಗಿದೆ ಅಷ್ಟೇ. ನಾವು ಬಸವಣ್ಣ ಅವರ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆಯುಳ್ಳವರು. ಹಿಂದುಳಿದ ಸಮಾಜ ನಮ್ಮದು. ನ್ಯಾಯಾಲಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ವಿಚಾರದಲ್ಲಿ ಬಿಜೆಪಿಗೆ ಯಾವತ್ತೋ ಹಿನ್ನಡೆ ಆಗಿದೆ. ಹೈಕಮಾಂಡ್ ಯಾತ್ರೆ ಮಾಡುವ ಮೂಲಕ ಮತ ಕೇಳುತ್ತಿದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷರು ಟೀಕಿಸಿದರು.

ಪಂಚಮಸಾಲಿ, ಒಕ್ಕಲಿಗರಿಗೆ ಮೀಸಲಾತಿ ಮೋಸ ಮಾಡುವ ಹುನ್ನಾರವನ್ನು ಬಿಜೆಪಿ ಕೇಶವಕೃಪಾದಲ್ಲಿ ಕುಳಿಕೊಂಡು ಮಾಡಿತ್ತು. ಸುಪ್ರೀಂಕೋರ್ಟ್ ಅದಕ್ಕೆ ಮಾರ್ಗ ತೋರಿಸಿದೆ ಎಂದು ಹೇಳಿದರು. ಅಂಬೇಡ್ಕರ್, ಬಸವಣ್ಣ, ಕುವೆಂಪುರವರ ಸಿದ್ಧಾಂತದ ಮೇಲೆ ನಂಬಿಕೆಯಿರುವ ಪಕ್ಷ ಜೆಡಿಎಸ್ ಜಾತಿ ಸೀಮಿತ ಪಕ್ಷವಲ್ಲ. ಜೆಡಿಎಸ್ ಜನತೆಯ ಕಲ್ಯಾಣದ ಪಕ್ಷ ಎಂದರು.

ವಿಶ್ವದಲ್ಲಿ ಯಾವೊಬ್ಬ ಪ್ರಧಾನಿ ಕೂಡ ರೋಡ್ ಶೋ ಮಾಡಿ ಮತ ಕೇಳಿಲ್ಲ. ಮೋದಿ ಅವರಿಗೆ ಆ ಪರಿಸ್ಥಿತಿ ಬಂದಿದೆ ಎಂದು ಇಬ್ರಾಹಿಂ ವ್ಯಂಗ್ಯವಾಡಿದರು. ಸಂಸದ ತೇಜಸ್ವಿ ಸೂರ್ಯ ಪಂಚರ್ ಹಾಕೋರು ಅಂತ ಹೇಳಿದ್ದರು. ಆದರೆ ಇವತ್ತು ಅವರೇ ಬಡವರು ಅಂತ ಹೇಳ್ತಾರೆ. ನ್ಯಾಯಾಂಗದಿಂದ ಭಾರತ ಉಳಿದಿದೆ.‌ ಸುಪ್ರೀಂಕೋರ್ಟ್ ಅಂಬೇಡ್ಕರ್​ ಅವರ ಸಂವಿಧಾನವನ್ನು ಉಳಿಸುತ್ತದೆ ಎಂಬ ನಂಬಿಕೆಯಿದೆ ಎಂದರು.

ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಅವರಿಗೆ ಧರ್ಮ ಏನು ಅನ್ನೋದೆ ಗೊತ್ತಿಲ್ಲ. ರಾಜಸ್ಥಾನ, ಚತ್ತಿಸಘಡದಲ್ಲಿ ಯಾಕೆ ಈ ರೀತಿ ಮೀಸಲಾತಿ ಮಾಡಲಿಲ್ಲ ಎಂದು ಪ್ರಶ್ನಿಸಿದ ಸಿ ಎಂ ಇಬ್ರಾಹಿಂ ಅವರು, ಮೀಸಲಾತಿ ಕೊಟ್ಟಿರೋದು ಜೆಡಿಎಸ್ ಸರ್ಕಾರ ಒಂದೇ ಎಂದು ಸಮರ್ಥಿಸಿಕೊಂಡರು. ಬಿಜೆಪಿ ಒಂದಲ್ಲ ಅನೇಕ ಮಸೂದೆಗಳಲ್ಲಿ ಈ ರೀತಿಯ ಹುಡುಗಾಟವನ್ನು ಮಾಡಿದೆ. ಬಿಜೆಪಿಯವರಿಗೆ ಗುರಿಯೂ ಇಲ್ಲ. ಗುರುವು ಇಲ್ಲ. ಮುಂದಿನ ದೆಸೆಯ ಬಗ್ಗೆ ಅರಿವಿಲ್ಲ ಎಂದು ಅವರು ಟೀಕಿಸಿದರು.

ಇದನ್ನೂ ಓದಿ:ಬಿಎಸ್​​​ವೈ ಭೇಟಿ ಮಾಡಿದ ಬಿ ಎಲ್ ಸಂತೋಷ್: ಶೆಟ್ಟರ್​​​ಗೆ ಸಿದ್ದವಾಯ್ತಾ ಖೆಡ್ಡಾ..?

ABOUT THE AUTHOR

...view details