ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮೃತದೇಹದ ಅಂತಿಮ ದರ್ಶನ ಹಾಗು ಅಂತಿಮ ವಿಧಿ ವಿಧಾನಗಳು ಅತ್ಯಂತ ಶಾಂತಿಯುತವಾಗಿ ನೆರವೇರಿವೆ. ಇದಕ್ಕೆ ಕಾರಣರಾದ ಪೊಲೀಸ್, ಬಿಬಿಎಂಪಿ ಹಾಗು ಇತರೆ ಇಲಾಖೆ ಅಧಿಕಾರಿಗಳು, ಅತ್ಯಂತ ಶಾಂತರೀತಿಯಲ್ಲಿ ವರ್ತಿಸಿದ ಪುನೀತ್ ಅಭಿಮಾನಿಗಳು ಹಾಗು ಸಾರ್ವಜನಿಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧನ್ಯವಾದ ಅರ್ಪಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಪುನೀತ್ ರಾಜ್ಕುಮಾರ್ ನಿಧನದ ನಂತರ ಕಳೆದ ಮೂರು ದಿನಗಳಿಂದ ಮೃತದೇಹದ ಸಾರ್ವಜನಿಕ ದರ್ಶನಕ್ಕೆ ಸಕಲ ವ್ಯವಸ್ಥೆ ಬಗ್ಗೆ ಪೊಲೀಸರು, ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿದ್ದಾರೆ. ಈ ವೇಳೆ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದು, ಪೊಲೀಸರ ಶ್ರಮ ಮತ್ತು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.