ಕರ್ನಾಟಕ

karnataka

ETV Bharat / state

ರಾಜಕಾರಣಿಗಳಿಗೂ, ಮಾಧ್ಯಮದವರಿಗೂ ಬಿಡಿಸಲಾರದ ನಂಟು: ಸಿಎಂ ಬೊಮ್ಮಾಯಿ - Press Club of Bangalore

ಸರ್ಕಾರ ಮತ್ತು ಮಾಧ್ಯಮಗಳದ್ದು ಅವಿನಾಭಾವ ಸಂಬಂಧ. ಸರ್ಕಾರದ ವಿಚಾರಗಳು ಜನರಿಗೆ ಮಾಧ್ಯಮಗಳ ಮೂಲಕವೇ ತಲುಪಲು ಸಾಧ್ಯ. ಬೆಳಗಿನ ಚಹಾದೊಂದಿಗೆ ಮಾಧ್ಯಮಗಳ ಸುದ್ದಿ ಬೇಕೇಬೇಕು. ರಾಜಕೀಯ ಸುದ್ದಿಗಳಿಲ್ಲದೇ ಮಾಧ್ಯಮಗಳಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

cm-bommai-says-politicians-and-media-have-an-unbreakable-bond
ರಾಜಕಾರಣಿಗಳು, ಮಾಧ್ಯಮದವರಿಗೆ ಬಿಡಿಸಲಾರದ ನಂಟು: ಸಿಎಂ ಬೊಮ್ಮಾಯಿ ಅಭಿಮತ

By

Published : Jul 1, 2022, 10:02 PM IST

ಬೆಂಗಳೂರು: ಕನ್ನಡ ನಾಡಿಗೆ ಹೇಗೆ ಉತ್ತಮ ಭವಿಷ್ಯವಿದೆಯೋ ಕನ್ನಡದ ಪತ್ರಿಕೋದ್ಯಮಕ್ಕೂ ಉತ್ತಮ ಭವಿಷ್ಯವಿದೆ. ಕನ್ನಡ ಭಾಷೆ, ಸಾಹಿತ್ಯಕ್ಕೆ ಕನ್ನಡ ಪತ್ರಿಕೋದ್ಯಮದ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್‍ಕ್ಲಬ್​ನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಇತಿಹಾಸದ ಒಂದು ಭಾಗವಾಗಬೇಕು ಅಥವಾ ಇತಿಹಾಸವನ್ನು ಸೃಷ್ಟಿ ಮಾಡಬೇಕು. ಈ ಕೆಲಸವನ್ನು ಒಂದಾಗಿ ಮಾಡೋಣ. ನಾವು ಬೇರೆಯಲ್ಲ ಎಂದರು.

ಹೊಸ ಓದುಗರು, ಹೊಸ ವೀಕ್ಷಕರು ಮಾಧ್ಯಮಗಳಿಗೆ ಇದ್ದೇ ಇರುತ್ತಾರೆ. ನಾಡಿನ ಭವಿಷ್ಯದೊಂದಿಗೆ ಪತ್ರಿಕೋದ್ಯಮದ ಭವಿಷ್ಯ ಹಾಸುಹೊಕ್ಕಾಗಿದೆ. ಕನ್ನಡ ನಾಡಿನ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲರೂ ಕೆಲಸ ಮಾಡುವುದೇ ಸಮಸ್ಯೆಗಳಿಗೆ ಪರಿಹಾರ. ನಮ್ಮ ಪಾತ್ರಗಳನ್ನು ಎಷ್ಟು ಜವಾಬ್ದಾರಿಯಿಂದ, ಸುಸಂಸ್ಕೃತವಾಗಿ ಮಾಡುತ್ತೇವೆ ಎನ್ನುವುದು ಮುಖ್ಯ ಎಂದರು.

ರಾಜಕಾರಣಿಗಳು-ಮಾಧ್ಯಮದವರ ನಂಟು ಆರೋಗ್ಯಕರವಾಗಿರಬೇಕು:ರಾಜಕಾರಣಿಗಳು ಮಾಧ್ಯಮದವರಿಗೆ ಅನಿವಾರ್ಯ. ರಾಜಕೀಯದ ಸುದ್ದಿ ಇಲ್ಲದೆ ಪತ್ರಿಕೆಗಳು ಬರುವುದಿಲ್ಲ. ರಾಜಕಾರಣಿಗಳು ಹಾಗೂ ಮಾಧ್ಯಮದವರಿಗೆ ಬಿಡಿಸಲಾರದ ನಂಟಿದೆ. ಅದು ಆರೋಗ್ಯಕರವಾಗಿದ್ದಷ್ಟೂ ಒಳ್ಳೆಯದು. ಟೀಕೆ-ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಯಾರು ಟೀಕೆಗಳನ್ನು ಸ್ವೀಕರಿಸುವುದಿಲ್ಲವೋ ಅವರು ಯಶಸ್ವಿ ರಾಜಕಾರಣಿಯಾಗಲು ಸಾಧ್ಯವಿಲ್ಲ. ಟೀಕೆಗಳಿಂದ ನಮ್ಮ ತಪ್ಪುಗಳನ್ನು ತಿಳಿದುಕೊಳ್ಳಲು ಹಾಗೂ ಅದರಿಂದ ಸುಧಾರಿಸಲು ಸಾಧ್ಯ. ಹೊಗಳಿಕೆಯಿಂದ ಅದು ಸಾಧ್ಯವಾಗುವುದಿಲ್ಲ ಎಂದು ಸಿಎಂ ಹೇಳಿದರು.

ಸುದ್ದಿಯನ್ನು ಯಾವ ರೀತಿ ಕೊಡುತ್ತೇವೆ ಎನ್ನುವುದರ ಮೇಲೆ ಮಾಧ್ಯಮಗಳು ಕೆಲಸ ಮಾಡುತ್ತವೆ. ನಮ್ಮ ಭಾಷೆಯ ಮೇಲೆ ನಮಗೆ ಹಿಡಿತವಿಲ್ಲದಿದ್ದರೆ, ಅವರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಟೀಕೆಯನ್ನು ಸುಂದರವಾಗಿ ಮಾಡಬಹುದು. ಕೂಗಾಡಿದರೆ, ಕೆಟ್ಟ ಶಬ್ಧಗಳನ್ನು ಬಳಕೆ ಮಾಡಿದರೆ ಮಾತ್ರ ಟೀಕೆ ಎಂಬ ಭಾವನೆ ಮೂಡಿದೆ. ಟೀಕೆಯನ್ನು ಮೊನಚಾಗಿ, ಪರಿಣಾಮಕಾರಿಯಾಗಿ ಒಳ್ಳೆಯ ಮಾತುಗಳಿಂದ ಮಾಡಬಹುದು. ಅವೆಲ್ಲ ನಮ್ಮ ಹಿರಿಯ ರಾಜಕಾರಣಿಗಳು ಮತ್ತು ಹಿರಿಯ ಪತ್ರಕರ್ತರಿಂದ ಕಲಿಯಬೇಕಾಗಿದೆ ಎಂದೂ ಅಭಿಪ್ರಾಯಪಟ್ಟರು.

ತಂತ್ರಜ್ಞಾನದಿಂದ ಪತ್ರಿಕೋದ್ಯಮದ ಅಭಿವೃದ್ಧಿ: ಆಧುನಿಕ ತಂತ್ರಜ್ಞಾನದಿಂದ ಪತ್ರಿಕೋದ್ಯಮದಲ್ಲಿ ಬಹಳಷ್ಟು ಬದಲಾವಣೆಯನ್ನು ಕಂಡಿದೆ. ನಾನು 4-5 ಮುಖ್ಯಮಂತ್ರಿಗಳ ಹತ್ತಿರ ಕೆಲಸ ಮಾಡಿದ್ದೇನೆ. ಈ ಹಿಂದೆ ಬೆಳಗ್ಗೆ ಗುಪ್ತಚರ ವಿಭಾಗದವರು ಹೇಳುವ ಮಾಹಿತಿ ಕೇಳಬೇಕಿತ್ತು. ಆದರೆ ಈಗ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಎಲ್ಲ ಬಲುಬೇಗ ಮಾಹಿತಿಗಳು ದೊರೆಯುತ್ತಿವೆ. ತ್ವರಿತವಾಗಿ ಸಿಗುವ ಇಂತಹ ಮಾಹಿತಿಗಳಿಂದ ಆಡಳಿತ ನಡೆಸಲು ಸಹಾಯವಾಗುತ್ತದೆ. ಯಾವುದಾದರೂ ತುರ್ತು ಪರಿಸ್ಥಿತಿಯಲ್ಲಿ ಕ್ಷಿಪ್ರ ಕ್ರಮಗಳನ್ನು ತೆಗೆದುಕೊಳ್ಳಬೇಕಾದರೆ ಮೊದಲು ಅಲ್ಲಿನ ಮಾಹಿತಿ, ವರದಿ ನಮಗೆ ಸಿಗಬೇಕು. ಈ ನಿಟ್ಟಿನಲ್ಲಿ ಪತ್ರಿಕೋದ್ಯಮದಲ್ಲಿ ತಂತ್ರಜ್ಞಾನ ಒಳ್ಳೆಯದನ್ನೇ ಮಾಡಿದೆ ಎಂದರು.

ಇದನ್ನೂ ಓದಿ:ಅಧ್ಯಯನದ ಹೆಸರಿನಲ್ಲಿ ಶಾಸಕರ ಲಡಾಖ್​-ಲೇಹ್​ ಟ್ರಿಪ್ ಹೇಗಿದೆ ನೋಡಿ...

ABOUT THE AUTHOR

...view details