ಕರ್ನಾಟಕ

karnataka

By

Published : Sep 29, 2021, 8:57 PM IST

ETV Bharat / state

ಸಿಎಂ ಬೊಮ್ಮಾಯಿ ಕಲ್ಪನೆಯ ಕರ್ನಾಟಕ ಹೇಗಿರಲಿದೆ ಗೊತ್ತೇ?

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ 40ನೇ ವರ್ಷಾಚರಣೆ ಅಂಗವಾಗಿ ನೂತನ ಲಾಂಛನ ಬಿಡುಗಡೆ ಮಾಡಿ ಕ್ಲಬ್ ಹೌಸ್ ಗೆ ಚಾಲನೆ ನೀಡಿ ಸಿಎಂ ಮಾತನಾಡಿದರು.

cm-basavaraja-bommai
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು:ಕರ್ನಾಟಕ ಸಂಪದ್ಭರಿತ, ಸುರಕ್ಷಿತ, ವಿಫುಲ ಅವಕಾಶ ಇರುವ ಸುಂದರ ನಾಡು. ಇದು ಎಲ್ಲರನ್ನು ಆಕರ್ಷಿಸುವ ಸುಂದರ ಬೀಡಾಗಬೇಕು. ಕನ್ನಡಕ್ಕೆ, ಕನ್ನಡಿಗರಿಗೆ ಅಗ್ರಸ್ಥಾನ ಸಿಗಬೇಕು. ರಾಜ್ಯಕ್ಕೆ ಅಗ್ರಸ್ಥಾನ ಸಿಗಬೇಕು ಎನ್ನುವುದೇ ನನ್ನ ಕನಸು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನಸಿನ ಕರ್ನಾಟಕದ ಬಗ್ಗೆ ಮನದಾಳದ ಮಾತುಗಳನ್ನು ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ

ಕನ್ನಡ ಎಂದರೆ ಎಲ್ಲರಲ್ಲಿ ತಾನು ಒಂದಾಗುವ ಸಂಸ್ಕೃತಿ

ದೇಶದ ಎಲ್ಲ ರಾಜ್ಯಗಳಲ್ಲಿ ಕರ್ನಾಟಕ ತನ್ನದೇ ಆದ ವೈಶಿಷ್ಟ್ಯದಿಂದ ಕೂಡಿದೆ. ರಾಜ್ಯದ ನೆಲ, ಜಲ, ಜನ, ಆಹಾರ ಧಾನ್ಯ, ವಿವಿಧ ಸಂಸ್ಕೃತಿ, ಭಾಷಾ ವಿಭಿನ್ನತೆ ಇದೆ. ಏಕೀಕರಣದ ನಂತರದ ಕರ್ನಾಟಕದಲ್ಲಿ ಅಭಿವೃದ್ಧಿ ಸಾಧನೆ, ಸವಾಲು ಎಲ್ಲವೂ ನಮ್ಮ ಅನುಭವಕ್ಕೆ ಬಂದಿವೆ. ಕನ್ನಡ ನಾಡಿನಲ್ಲಿ ಹುಟ್ಟಿದ್ದಕ್ಕೆ ನಾವೆಲ್ಲಾ ಬಹಳ ಅದೃಷ್ಟವಂತರು. ಇಲ್ಲಿ ಬದುಕಿ ಬಾಳಿ ನಮ್ಮ ಮುಂದಿನ ಜನಾಂಗ ಕಟ್ಟುವ ಕೆಲಸಕ್ಕೆ ಕನ್ನಡ ನಾಡಿನ ವಾತಾವರಣಕ್ಕಿಂತ ಬೇರೆ ರಾಜ್ಯದಲ್ಲಿ ವಾತಾವರಣ ಇಲ್ಲ. ಕನ್ನಡ ಸಂಸ್ಕೃತಿ ಎಂದರೆ ಎಲ್ಲರಲ್ಲಿ ತಾನು ಒಂದಾಗುವ ಸಂಸ್ಕೃತಿ. ಹೃದಯ ವೈಶಾಲ್ಯ ಇರುವ ಕನ್ನಡಿಗರ ಮನ, ಎಲ್ಲರನ್ನೂ ಪ್ರೀತಿಸುವ ಗುಣ, ಸಹನೆ, ಕನ್ನಡ ನಾಡಿನಲ್ಲಿ ಪ್ರೀತಿ ಹಬ್ಬಿದಂತೆ ಬೇರೆಲ್ಲೂ ಹಬ್ಬಿಲ್ಲ. ಹಿರಿಯರು, ಗುರುಗಳು, ಜ್ಞಾನಿಗಳು, ಪೂಜ್ಯರ ಬಗ್ಗೆ ಗೌರವ ಅದ್ವಿತೀಯವಾಗಿದೆ ಎಂದು ನಾಡು ನುಡಿ ಸಂಸ್ಕೃತಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಕೃಷಿಕನ ಉತ್ಪಾದನೆ ದ್ವಿಗುಣ ಆಗಬೇಕು

ಕನ್ನಡದ ನನ್ನ ಕಲ್ಪನೆ ಬಗ್ಗೆ ಹೇಳುವುದಾದರೆ, ಕರ್ನಾಟಕದಲ್ಲಿ 10 ಕೃಷಿ ವಲಯ ಇವೆ. ಬೇರೆ ಯಾವ ರಾಜ್ಯದಲ್ಲೂ ಇಂತಹ ಸೌಲಭ್ಯ ಇಲ್ಲ. ನಮ್ಮದು ಆಗ್ರೋ ಕ್ಲೈಮ್ಯಾಟ್ ಜೋನ್ ರಾಜ್ಯ. ಇಲ್ಲಿ ವಿವಿಧ ಬೆಳೆ ಬೆಳೆಯಬಹುದು. ತೋಟಗಾರಿಕೆ ಬೆಳೆ ಪರಿಪೂರ್ಣ ಮತ್ತು ವೈಜ್ಞಾನಿಕವಾಗಿ ಆಗಬೇಕು. 10 ಕೃಷಿ ವಲಯಗಳನ್ನು ವೈಜ್ಞಾನಿಕವಾಗಿ ಬೆಳೆಸಿ ಕೃಷಿ ಉತ್ಪನ್ನ ದ್ವಿಗುಣ, ಕೃಷಿಕನ ಉತ್ಪಾದನೆ ದ್ವಿಗುಣ ಆಗಬೇಕು. ಅದೇ ರೀತಿ ಜಲ ಶಕ್ತಿ ವಿಷಯದಲ್ಲಿ ಬೀದರ್-ಕೊಳ್ಳೆಗಾಲದವರೆಗೆ ಹಲವಾರು ನದಿಗಳಿವೆ. ಹೆಚ್ಚು ಪ್ರದೇಶವನ್ನು ನದಿ ಆಕ್ರಮಿಸಿದೆ.

ಹೀಗಾಗಿ, ನೈಸರ್ಗಿಕವಾಗಿರುವ ಈ ಸಂಪತ್ತನ್ನು ಸಮರ್ಪಕವಾಗಿ ಬಳಕೆ ಮಾಡಬೇಕಾಗಿದೆ. ಆಲಮಟ್ಟಿ ಎತ್ತರದಿಂದ ಇಡೀ ಉತ್ತರ ಕರ್ನಾಟಕದ ಆರ್ಥಿಕತೆ ಬದಲು ಮಾಡಲಿದೆ. ಇಂತಹ ಬದಲಾವಣೆ ಆಗಬೇಕು. ತುಂಗಭದ್ರಾ ನದಿ ತೀರದಿಂದ ಕೃಷ್ಣಾ ತೀರದವರೆಗೆ 7-8 ಲಕ್ಷ ಎಕರೆ ನದಿ ತೀರದಲ್ಲಿ ಹನಿ ನೀರಾವರಿ ಮಾಡಲು ಅವಕಾಶವಿದೆ. ಅಲ್ಪ ನೀರಿನಲ್ಲಿ ದೊಡ್ಡ ಬೆಳೆ ಬೆಳೆಯಬಹುದಾಗಿದೆ. ಈ ನೀರಿನ ಹರಿವಿನ ಉಪಯೋಗ ಪಡೆದು ಬೆಳೆ ಬೆಳೆಯುವ 100 ಆಹಾರ ಸಂಸ್ಕರಣ ಘಟಕಗಳನ್ನು ಮಾಡಬೇಕು. ಇದರಿಂದ ನೈಸರ್ಗಿಕ‌ ಸ್ನೇಹಿ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

ಸಂಪೂರ್ಣ ನೀರಿನ ಬಳಕೆ

ಮಧ್ಯ ಕರ್ನಾಟಕದಲ್ಲಿ ನೀರಿನ‌ ಕೊರತೆ ಇದೆ. ಹಾಗಾಗಿ, ಭದ್ರಾ ಮೇಲ್ದಂಡೆ ಜಾರಿಗೊಳಿಸಿದ್ದು. ಇದು ರಾಷ್ಟ್ರೀಯ ಯೋಜನೆಯಾಗುತ್ತಿದೆ. ಎರಡು ಮೂರು ವರ್ಷದಲ್ಲಿ ಸಂಪೂರ್ಣ ನೀರಿನ ಬಳಕೆಯಾಗಲಿದೆ. ಎತ್ತಿನಹೊಳೆಗೆ ವೇಗ ಕೊಡುವ ಪ್ರಯತ್ನ ಮಾಡಲಿದ್ದೇವೆ. ಒಂದು ಜಿಲ್ಲೆ ಪ್ರಗತಿ ಆಗದೆ ಇದ್ದರೂ ರಾಜ್ಯದ ಸಮಗ್ರ ಪ್ರಗತಿ ಎನ್ನಲು ಸಾಧ್ಯವಿಲ್ಲ. ಹಾಗಾಗಿ, ಇದಕ್ಕೆಲ್ಲಾ ವೇಗ ಕೊಡಲಿದ್ದೇವೆ ಎಂದು ತಿಳಿಸಿದರು.

ಕಾವೇರಿ ಜಲಾನಯನ ಯೋಜನೆಗಳು ಪೂರ್ಣಗೊಳಿಸುವ ಕೆಲಸ

ಬೆಂಗಳೂರು ಬೆಳೆದಿದೆ. ಆದರೆ, ಯೋಜನಾ ಬದ್ದವಾಗಿಲ್ಲ. ಯೋಜನಾಬದ್ದವಾಗಿ ಅಭಿವೃದ್ಧಿ ಮಾಡಬೇಕು. ದೊಡ್ಡ ಪ್ರಮಾಣದ ಹೂಡಿಕೆ ಅಗತ್ಯ. ಇದಕ್ಕೆ ಮಹತ್ವ ನೀಡಿ ಅಭಿವೃದ್ಧಿ ಮಾಡುವ ಕಲ್ಪನೆ ನಮ್ಮದಿದೆ. ಬೆಂಗಳೂರು ಸುತ್ತಮುತ್ತ ಔದ್ಯೋಗಿಕರಣ ಆಗುತ್ತಿದೆ. ಇದನ್ನು ಬಿಟ್ಟು ಸ್ವಲ್ಪ ಮುಂದೆಯೂ ಔದ್ಯೋಗಿಕರಣ ಆಗಬೇಕಿದೆ. ಕಾವೇರಿ ಜಲಾನಯನ ಯೋಜನೆಗಳು ಪೂರ್ಣಗೊಳಿಸುವ ಕೆಲಸ ಆಗಬೇಕಾಗಿದೆ. ಮೈಸೂರು, ಹಾಸನ ಕೈಗಾರಿಕಾ ವಲಯ ಆಗುವಂತೆ ಅಭಿವೃದ್ಧಿ ಮಾಡಲು ಅವಕಾಶವಿದೆ. ಅದನ್ನೆಲ್ಲಾ ಮಾಡುವ ಚಿಂತನೆ ಇದೆ ಎಂದರು.

ಹೊಸ ಆರ್ & ಡಿ ಪಾಲಿಸಿ ಮಾಡಲು ಚಿಂತನೆ

180ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಬೆಂಗಳೂರಿನಲ್ಲಿವೆ. ಐಟಿ-ಬಿಟಿ, ಫಾರ್ಮಾ, ಕೆಮಿಕಲ್, ಫುಡ್ ಇಂಡಸ್ಟ್ರಿ ಯಲ್ಲಿ ಆರ್ ಅಂಡ್ ಡಿ ಇವೆ. ಹಾಗಾಗಿ, ರಾಜ್ಯದಲ್ಲಿ ಹೊಸ ಆರ್ ಅಂಡ್ ಡಿ ಪಾಲಿಸಿ ಮಾಡಲು ಚಿಂತನೆ ಮಾಡಲಾಗಿದೆ. ಅದಕ್ಕಾಗಿ ಕಾರ್ಯಪಡೆ ರಚನೆ ಮಾಡಲಾಗಿದೆ. ಹೊಸ ಆರ್ ಅಂಡ್ ಡಿ ಕಲ್ಚರ್ ತರಬೇಕು ಎನ್ನುವ ಚಿಂತನೆ ಇದೆ.

ಕರಾವಳಿ, ಪ್ರವಾಸೋದ್ಯಮ ಅಭಿವೃದ್ಧಿ

ಅದೇ ರೀತಿ ಆಟೋಮೊಬೈಲ್ ಕಂಪನಿ ಬೆಂಗಳೂರು ಬಿಟ್ಟು ಹೊರಗಡೆ ಬೆಳೆಸಬೇಕಿದೆ. ಈಗ ವಾಯು ಸಂಪರ್ಕ ಉತ್ತಮವಾಗಿದೆ. ಹಲವು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳಿವೆ. ಕರಾವಳಿ ಮಾರ್ಗದ ಪೂರ್ಣಪ್ರಮಾಣದ ಉಪಯೋಗ ಮಾಡಿಲ್ಲ. ಕರಾವಳಿ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕಿದೆ. ಬಂದರು ಅಭಿವೃದ್ಧಿ ಆಗಬೇಕಿದೆ. ಬಹಳ ದೊಡ್ಡ ಪ್ರಮಾಣದ ಬದಲಾವಣೆ ತರಬೇಕಿದೆ. ಆ ಕೆಲಸ ಮಾಡಲಿದ್ದೇವೆ. ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ಅತಿ ಹೆಚ್ಚು ಉದ್ಯೋಗ ಈ ವಲಯದಲ್ಲಿ ಆಗಲಿದೆ ಎಂದರು.

ಹಳ್ಳಿಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಬೇಕು

ಹಳ್ಳಿಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಬೇಕು. ಗಣಿತ, ವಿಜ್ಞಾನ ಕಲಿಸಬೇಕು. ಉನ್ನತ ಶಿಕ್ಷಣದಲ್ಲಿ ಪ್ರಯೋಗ ಮಾಡಿ ಕಲಿಯುವ ವಿಧಾನ ಹೇಳಿಕೊಡಬೇಕಿದೆ. ಟೆಕ್ನಿಕಲ್ ಎಜುಕೇಷನ್ ಅನ್ನು ಹೈಸ್ಕೂಲ್ ನಲ್ಲಿ ಮರಳಿ ತರಬೇಕು. ಆರೋಗ್ಯ ಕ್ಷೇತ್ರದ ಸುಧಾರಣೆ ಆಗಬೇಕು. ಕ್ಯಾನ್ಸರ್ ಗೆ ಎಲ್ಲ ವ್ಯವಸ್ಥೆ ಜಿಲ್ಲಾಸ್ಪತ್ರೆಗಳಲ್ಲಿ ಆಗಬೇಕು ಎನ್ನುವುದು ನನ್ನ ಕನಸು ಎಂದು ತಿಳಿಸಿದರು.

ತಲಾವಾರು ಆದಾಯ ಹೆಚ್ಚಾದಲ್ಲಿ ರಾಜ್ಯದ ಆದಾಯ ಹೆಚ್ಚಲಿದೆ

ಜಿಎಸ್​ಟಿ, ತಲಾವಾರು ಆದಾಯದ ಕೊಡುಗೆಯಲ್ಲಿ ಶೇ. 30 ರಷ್ಟು ಜನರು ಮಾತ್ರ ಭಾಗಿಯಾಗಿದ್ದು, ಬಾಕಿ 70 ರಷ್ಟು ಭಾಗಿಯಾಗುತ್ತಿಲ್ಲ. ದುಡಿಯುವ ವರ್ಗಕ್ಕೆ ಇನ್ನಷ್ಟು ಅವಕಾಶ ಕೊಡಬೇಕು. ಹೆಣ್ಣುಮಕ್ಕಳಿಗೆ ಅವಕಾಶ ನೀಡಬೇಕು. ತಲಾವಾರು ಆದಾಯ ಹೆಚ್ಚಾದಲ್ಲಿ ರಾಜ್ಯದ ಆದಾಯ ಹೆಚ್ಚಲಿದೆ. ರಾಜ್ಯ, ವ್ಯಕ್ತಿ ಅಭಿವೃದ್ಧಿ ಆಗಲು ಸಾಧ್ಯ. ಇದು ನನ್ನ ಕಲ್ಪನೆ. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುವ ಕಾರ್ಯಕ್ರಮ ಮಾಡಿದ್ದೇವೆ. ಬರುವ ದಿನಗಳಲ್ಲಿ ರೈತರ ಮಕ್ಕಳಿಗೆ ವಿಶೇಷ ಯೋಜನೆ ರೂಪಿಸಲಿದ್ದೇನೆ. ವಿದ್ಯಾವಂತರಿಗೆ ಕೆಲಸ ಇಲ್ಲದಿದ್ದರೆ ನಿರುದ್ಯೋಗ ಸಂಖ್ಯೆ ಹೆಚ್ಚಾಗಲಿದೆ. ಹೊಸ ಪರಿಕಲ್ಪನೆ ಉದ್ಯೋಗ ಕೇಂದ್ರಿತ ಪಾಲಿಸಿ ಮಾಡಬೇಕು ಅಂದುಕೊಂಡಿದ್ದೇನೆ. ಈಗ ಇನ್ವೆಸ್ಟ್​ಮೆಂಟ್​ ಕೇಂದ್ರಿತ ಪಾಲಿಸಿ ಇದೆ. ಅದನ್ನು ಬದಲಿಸಿ ಉದ್ಯೋಗ ಸೃಷ್ಟಿ ಯೋಜನೆ ರೂಪಿಸುವ ಚಿಂತನೆ ಮಾಡುತ್ತಿದ್ದೇನೆ ಎಂದರು.

ನಮ್ಮ ರಾಜ್ಯ ಆರ್ಥಿಕ, ಶೈಕ್ಷಣಿಕ,‌ ಆರೋಗ್ಯಕರವಾಗಿ ಬೆಳೆಯಬೇಕು. ಜನ ಉದ್ಯೋಗವಂತರಾಗಬೇಕು. ನೆಲದ ಸಂಸ್ಕೃತಿ, ಭಾಷೆ, ಸಾಹಿತ್ಯ, ಸಂಗೀತ ಶ್ರೀಮಂತವಾಗಬೇಕಿದೆ. ನಮ್ಮಲ್ಲಿನ ಸಂಗೀತ ಬೇರೆಲ್ಲಿಯೂ ಇಲ್ಲ. ಹಳೆಗನ್ನಡ, ಹೊಸಗನ್ನಡ ಇದೆ. ಹಲವಾರು ಸಾಹಿತ್ಯ ಪ್ರಕಾರ, ನೃತ್ಯವಿದೆ. ಹಲವಾರು ಸಂಸ್ಕೃತಿಗಳ ಕಲೆಗಳ ಬೀಡಾಗಿದೆ. ಹಳೆಯ ಗತವೈಭವವನ್ನು ಮತ್ತೆ ತರಬೇಕು ಎನ್ನುವುದು ನನ್ನ ಕನಸು. ದೀರ್ಘವಾದಿ ಬದಲು ಅಲ್ಪಾವದಿ ಫಲಿತಾಂಶದ ಕೆಲಸಕ್ಕೆ ಆಧ್ಯತೆ ನೀಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ:ಇನ್ಮುಂದೆ ಎಲ್ಲ ಶುಲ್ಕ ಕೆಇಎಯಲ್ಲೇ ಪಾವತಿ: ಸಚಿವ ಅಶ್ವತ್ಥ್​​ ನಾರಾಯಣ

ABOUT THE AUTHOR

...view details