ಕರ್ನಾಟಕ

karnataka

By

Published : Jan 5, 2023, 7:11 AM IST

ETV Bharat / state

ವಿದೇಶಿ ವಸ್ತುಗಳನ್ನು ಖರೀದಿಸಿ ನಮ್ಮ ಸಂಸ್ಕೃತಿ ಮರೆಯುತ್ತಿದ್ದೇವೆ: ಸಿಎಂ ಬೊಮ್ಮಾಯಿ

ಸ್ವದೇಶಿ ಜಾಗರಣ ಮಂಚ್​ ವತಿಯಿಂದ ಆಯೋಜಿಸಿದ್ದ ಸ್ವದೇಶಿ ಮೇಳದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದರು.

Swadeshi Mela
ಸ್ವದೇಶಿ ಜಾಗರಣ ಮಂಚ್​ ವತಿಯಿಂದ ಸ್ವದೇಶಿ ಮೇಳ

ಬೆಂಗಳೂರು: 'ವಿದೇಶಿ ವ್ಯಾಮೋಹದಲ್ಲಿ ಅಲ್ಲಿನ ವಸ್ತುಗಳನ್ನು ಖರೀದಿಸಿ ನಾವು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಯಾವ ದೇಶಕ್ಕೆ ಸಂಸ್ಕೃತಿ ಇರುತ್ತದೆಯೋ ಆ ದೇಶಕ್ಕೆ ಭವಿಷ್ಯವಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ದಾಸರಹಳ್ಳಿಯ ಎಂಇಐ ಲೇಔಟ್‍ನ ಆಟದ ಮೈದಾನದಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಆಯೋಜಿಸಲಾಗಿದ್ದ ಸ್ವದೇಶಿ ಮೇಳದಲ್ಲಿ ಸಿಎಂ ಭಾಗವಹಿಸಿದ್ದರು.

'ನಾವೆಲ್ಲರೂ ಅಭಿಮಾನ ಪಡುವ ಸಂಸ್ಥೆ ಸ್ವದೇಶಿ ಜಾಗರಣ ಮಂಚ್. ಜಗತ್ತಿನಲ್ಲಿ ಏನೇ ನಡೆದರೂ ಆ ಒಂದು ಸಂಸ್ಥೆ ಮಾತ್ರ ಸ್ವದೇಶಿ ಮಂತ್ರ ಜಪಿಸುತ್ತದೆ. ಕಳೆದ ಬಾರಿ ಜಯನಗರದಲ್ಲಿ‌ ಇದೇ ರೀತಿಯ ಮೇಳ ಮಾಡಿದ್ದರು. ಈ ಬಾರಿ ದಾಸರಹಳ್ಳಿಯಲ್ಲಿ ಮಾಡಲಾಗುತ್ತಿದೆ. ಜನರಿಗೆ ಸ್ವದೇಶಿ ಉತ್ಪನ್ನಗಳ ಬಗ್ಗೆ ಜಾಗೃತಿಯನ್ನು ಈ ಸಂಸ್ಥೆ ಮೂಡಿಸುತ್ತಿದೆ' ಎಂದು ಸಿಎಂ ಹೇಳಿದರು.

'ವಿದೇಶಿ ವ್ಯಾಮೋಹದಲ್ಲಿ ವಿದೇಶಿ ವಸ್ತುಗಳನ್ನು ಖರೀದಿಸಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ನಮ್ಮ ಹಿರಿಯರು ಬೀಸುವ ಕಲ್ಲು ಬೀಸುತ್ತ ತಮ್ಮ ತವರುಮನೆ ನೆನೆಯುತ್ತ ಹಾಡು ಹೇಳುತ್ತಿದ್ದರು‌. ಹಾಡು ಕೇಳಿದರೆ ಕಣ್ಣಲ್ಲಿ ನೀರು ಬರುತ್ತಿತ್ತು. ಆ ಸಮಯದಲ್ಲಿ ಒಣಕೆ ಇತ್ತು. ಅದು ಈಗಿಲ್ಲ. ಎತ್ತುಗಳು ಇದ್ದವು. ರೈತ ಅವುಗಳನ್ನು ಹೂಡುತ್ತ ಹಾಡುಗಳನ್ನು ಹೇಳುತ್ತಿದ್ದ. ಯಾವ ದೇಶಕ್ಕೆ ಅಂತಹ ಸಂಸ್ಕೃತಿ ಇರುತ್ತದೆಯೋ ಆ ದೇಶಕ್ಕೆ ಭವಿಷ್ಯವಿದೆ. ಆಧುನಿಕ ಕಾಲದಲ್ಲಿ ನಮ್ಮ ದೇಶದ ವಸ್ತುಗಳನ್ನು ಉತ್ಪಾದನೆ ಮಾಡಿ, ಜನರಿಗೆ ತಲುಪಿಸುವ ಕೆಲಸವನ್ನು ಸ್ವದೇಶಿ ಜಾಗರಣ ಮಂಚ್ ಮಾಡುತ್ತಿದೆ. ಅವರಿಗೆ ಅಭಿನಂದನೆಗಳು' ಎಂದು ಸಂಸ್ಥೆಯನ್ನು ಪ್ರಶಂಸಿಸಿದರು.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಹೇಳಿಕೆ.. ಪ್ರತಿಪಕ್ಷ ನಾಯಕನ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

'1990 ರಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಬಂದ ಮೇಲೆ ನಾವು ಅಂತಃಕರಣ ಮರೆತಿದ್ದೇವೆ. ಸ್ವದೇಶಿ ಜಾಗರಣ ಮಂಚ್ ಅಂತಃಕರಣವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ನಾವು ಸುಮಾರು 70-80 ವರ್ಷಗಳಿಂದ ಬಳಸಲಾಗುತ್ತಿರುವ ಟೂತ್ ಪೇಸ್ಟ್ ಕೂಡ ವಿದೇಶದ್ದು. ಈಗ ಪತಂಜಲಿ ಬರುತ್ತಿದ್ದು, ಈ ಸಮಯದಲ್ಲಿ ಯಾವುದು ಅಸಾಧ್ಯವಲ್ಲ' ಎಂದರು.

ಪ್ರಧಾನಿಯವರ ಶ್ರಮದಿಂದ ಸ್ವದೇಶಿ ಉತ್ಪಾದನೆ ಹೆಚ್ಚಳ: 'ಪ್ರಧಾನಿ ನರೇಂದ್ರ ಮೋದಿಯವರ ಶ್ರಮದಿಂದ ಸ್ವದೇಶಿ ಜಾಗೃತಿ ಉತ್ಪಾದನೆ ಹೆಚ್ಚುತ್ತಿದೆ. ಅದಕ್ಕೆ ಉದಾಹರಣೆಯಂತೆ ಯುನಿಲಿವರ್ ಕಂಪನಿಗೆ ನಿರ್ಮಾಪೌಡರ್ ಕೌಂಟರ್ ಆಗಿ ಬೆಳೆಯಿತು. ಅತಿ ಹೆಚ್ಚು ಗಾರ್ಮೆಂಟ್ ಉತ್ಪನ್ನವನ್ನು ಚೀನಾಗಿಂತ ಹೆಚ್ಚು ಭಾರತವೇ ರಫ್ತು ಮಾಡುತ್ತಿದೆ. ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಅದಕ್ಕೆಂದೇ ಜಾರಿಗೆ ತಂದಿದೆ. ಪ್ರಧಾನಿ ಮೋದಿಯವರು ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯ ಮಾಡುವ ಯೋಜನೆಯನ್ನೂ ಜಾರಿ ಮಾಡಿದ್ದಾರೆ. ಒಂದು ವರ್ಷದಲ್ಲಿ ಒಂದೂವರೆ ಲಕ್ಷ ಜನರಿಗೆ ಸೌಲಭ್ಯ ನೀಡಲಾಗಿದೆ' ಎಂದು ಮಾಹಿತಿ ನೀಡಿದರು.

ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚಾಗಲಿ: 'ಜನರು ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚು ಮಾಡಬೇಕು‌. ಕೇವಲ ಮೇಳದಲ್ಲಿ ಖರೀದಿ ಮಾಡುವುದಲ್ಲದೇ, ದಿನನಿತ್ಯ ಅವುಗಳನ್ನೇ ಖರೀದಿಸಿ ಬಳಸಬೇಕು. ಮಹಿಳೆಯರಿಗೆ ಸ್ತ್ರೀ ಶಕ್ತಿ ಯೋಜನೆ, ಯುವಕರಿಗೆ ಸ್ವಾಮಿ ವಿವೇಕಾನಂದ ಯೋಜನೆಯ ಮೂಲಕ ಐದು ಲಕ್ಷದ ವರೆಗೆ ಸಾಲ ನೀಡಲಾಗುತ್ತಿದೆ. ವೃತ್ತಿ ಆಧಾರಿತ ಕೆಲಸ ಮಾಡುವವರಿಗೆ ಕಾಯಕ ಯೋಜನೆಯಿದ್ದು ಎಲ್ಲ ಸಮುದಾಯಗಳಿಗೆ ಸಹಾಯ ಮಾಡಲಾಗುತ್ತಿದೆ. ಮೊದಲು ದುಡ್ಡೇ ದೊಡ್ಡಪ್ಪ ಅನ್ನೋ ಮಾತಿತ್ತು. ಆದರೆ ಈಗ ದುಡಿಮೆಯೇ ದೊಡ್ಡಪ್ಪ ಆಗಿದೆ. ನಮ್ಮ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಎಲ್ಲರೂ ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡೋಣ' ಎಂದು ಬೊಮ್ಮಾಯಿ ಕರೆ ನೀಡಿದರು.

ಇದನ್ನೂ ಓದಿ:ಕೀಳು ಸಂಸ್ಕೃತಿ ಕಾಂಗ್ರೆಸ್ ರಕ್ತದಲ್ಲೇ ಇದೆ: ಸಿದ್ದರಾಮಯ್ಯ ವಿರುದ್ಧ ಅರುಣ್ ಸಿಂಗ್ ವಾಗ್ದಾಳಿ

ABOUT THE AUTHOR

...view details