ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ.. ಬೆಂಗಳೂರು: ಬಿಜೆಪಿ ವಿರುದ್ಧ ಕಾಂಗ್ರೆಸ್ ಚಾರ್ಜ್ ಶೀಟ್ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾಂಗ್ರೆಸ್ನ ಚಾರ್ಜ್ ಶೀಟ್ ಅವರ ಕಂಟೆಂಟ್ ನೋಡಿದರೆ ಗೊತ್ತಾಗುತ್ತದೆ. ಇದರಲ್ಲಿ ಯಾವುದೇ ಆಧಾರ ಇಲ್ಲ ಎಂದು ತಿರುಗೇಟು ನೀಡಿದರು. ವಿಧಾನಸೌಧ ಪಶ್ಚಿಮದ್ವಾರದ ಬಳಿ ಇಂದು ಮಾಜಿ ಪ್ರಧಾನಮಂತ್ರಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯ ತಿಥಿಯ ಅಂಗವಾಗಿ ಅವರ ಪ್ರತಿಮೆಯ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮಗಳ ಜತೆ ಮಾತನಾಡಿದರು.
ನಾವು ಅವರ ಮೇಲೆ ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ದೆವು. ಅದಕ್ಕೆ ಇನ್ನೂ ಉತ್ತರ ಕೊಟ್ಟಿಲ್ಲ. ಮೊದಲು ಅವರ (ಕಾಂಗ್ರೆಸ್) ಕಾಲದ ಕರ್ಮಕಾಂಡಗಳ ಬಗ್ಗೆ ಉತ್ತರ ಕೊಡಬೇಕು. ಮುಂದಿನ ದಿನಗಳಲ್ಲಿ ನೋಡಿ ಇನ್ನಷ್ಟು ಚಾರ್ಜ್ ಶೀಟ್ ಬರುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ ಮೆಟ್ರೋ ದುರಂತ..ಮೆಟ್ರೋ ಪಿಲ್ಲರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಿ ನಿನ್ನೆ ಮರಣೋತ್ತರ ಪರೀಕ್ಷೆ, ಯಥಾಸ್ಥಿತಿಗೆ ತರುವ ಕಾರ್ಯಗಳಾಗಿದ್ದು, ಇಂದು ಪ್ರಕರಣ ಸಂಬಂಧಿಸಿದಂತೆ ಹೆಸರುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರದ್ದು ಮೇರು ವ್ಯಕ್ತಿತ್ವ.. ಇದಕ್ಕೂ ಮುನ್ನ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಪುಣ್ಯ ಸ್ಮರಣೆ ಹಿನ್ನೆಲೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೇರು ವ್ಯಕ್ತಿತ್ವ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ ಎಂದರು.
ದುರಂತ ಸಾವು:ದೇಶ ಕಂಡ ಅತ್ಯಂತ ಪ್ರಭಾವಶಾಲಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 57 ನೇ ಪುಣ್ಯ ತಿಥಿ ಆಚರಣೆ ಮಾಡಲಾಗುತ್ತಿದೆ. ಅವರ ಸಾವು ಒಂದು ದುರಂತ. ಅವರು ಪಾಕಿಸ್ತಾನದ ಮೇಲೆ ಗೆದ್ದ ಯುದ್ಧದ ಶಾಂತಿಯ ಸಲುವಾಗಿ ರಷ್ಯಾದ ತಾಷ್ಕೆಂಟ್ ಗೆ ತೆರಳಿದಾಗ ಅವರ ಸಾವಿಗೀಡಾದರು. ಅವರ ಸಾವಿನ ಬಗ್ಗೆ ಸಾಕಷ್ಟು ಸಂಶಯಗಳು ವ್ಯಕ್ತವಾಗಿವೆ. ಆದರೆ ವಿದೇಶಕ್ಕೆ ದೇಶದ ಕೆಲಸಕ್ಕಾಗಿ, ಶಾಂತಿಗಾಗಿ ತೆರಳಿದ ಸಂದರ್ಭದಲ್ಲಿ ಮರಣ ಹೊಂದಿದ್ದು, ಭಾರತಕ್ಕೆ ದೊಡ್ಡ ಆಘಾತವುಂಟು ಮಾಡಿತ್ತು ಎಂದು ಸ್ಮರಿಸಿದರು.
ಇದನ್ನೂ ಓದಿ:ಜ.16 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ 'ನಾ ನಾಯಕಿ' ಸಮಾವೇಶ: ಪ್ರಿಯಾಂಕ ಗಾಂಧಿ ಆಗಮನ
ನ್ಯಾಯ ನಿಷ್ಠುರ ಆಡಳಿತ.. ಅತ್ಯಂತ ಬಡ ಕುಟುಂಬದಿಂದ ಬಂದು, ಸರಳವಾಗಿ ಬದುಕು ನಡೆಸಿದವರು ಲಾಲ್ ಬಹದ್ದೂರ್ ಶಾಸ್ತ್ರಿಯವರು. ಬಡತನದ ಬಗ್ಗೆ ಎಂದೂ ಕೀಳರಿಮೆ ಹೊಂದಿರಲಿಲ್ಲ. ಶ್ರೀಮಂತರಾಗಬೇಕೆಂಬ ಹಂಬಲವೂ ಇರಲಿಲ್ಲ. ನ್ಯಾಯನಿಷ್ಠುರರಾಗಿ, ಸತ್ಯದಿಂದ ಆಡಳಿತ ಮಾಡಿ, ನಮ್ಮೆಲ್ಲರಿಗೂ ಆದರ್ಶಪ್ರಾಯರು. ಅವರಿ ಇನ್ನೂ ಹೆಚ್ಚಿನ ಕಾಲ ಬದುಕಬೇಕಿತ್ತು. ಈ ದೇಶವನ್ನು ಆಳಿ, ಒಳ್ಳೆಯ ಸತ್ಸಂಪ್ರದಾಯವನ್ನು ಹಾಕಿಕೊಡುತ್ತಿದ್ದರು ಎನ್ನುವ ವಿಶ್ವಾಸವಿತ್ತು. ಅವರ ಜೀವನ ಇಂದಿಗೂ ಆದರ್ಶ ಪ್ರೇರಣೆ ನೀಡುವಂಥದ್ದು. ಅವರನ್ನು ಸ್ಮರಿಸುವ ಮೂಲಕ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಬೇಕು. ಜೈ ಜವಾನ್, ಜೈ ಕಿಸಾನ್, ಅವರ ಅತ್ಯಂತ ಮಹತ್ವದ ಕೊಡುಗೆ. ಒಂದು ದೇಶದ ಸುರಕ್ಷತೆ, ಅಭಿವೃದ್ಧಿ, ಸ್ವಾವಲಂಬನೆ ಮತ್ತು ಸ್ವಾಭಿಮಾನ ಎಲ್ಲವೂ ಅವರು ನೀಡಿದ ಘೋಷ ವಾಕ್ಯದಲ್ಲಿದೆ. ಇಂದಿಗೂ ಈ ಘೋಷ ವಾಕ್ಯ ದೇಶದ ಅಭಿವೃದ್ಧಿಗೆ ಅಗತ್ಯ ಎಂದರು. ಈ ವೇಳೆ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ:ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ಆಡಳಿತ ವಿರುದ್ಧ ದನಿ ಎತ್ತಲು ನಾಳೆಯಿಂದ ಪ್ರಜಾಧ್ವನಿ ಬಸ್ ಯಾತ್ರೆ: ಡಿಕೆ ಶಿವಕುಮಾರ್