ಕರ್ನಾಟಕ

karnataka

By

Published : Oct 12, 2021, 10:46 PM IST

ETV Bharat / state

ದೇಶದ ಉಜ್ವಲ ಭವಿಷ್ಯಕ್ಕಾಗಿ ಎನ್ಇಪಿ ಜಾರಿ, ರಾಜ್ಯದ ತಾಂತ್ರಿಕ ಶಿಕ್ಷಣದಲ್ಲಿ ದೊಡ್ಡ ಪ್ರಮಾಣದ ಬದಲಾವಣೆ: ಸಿಎಂ

ಶಿಕ್ಷಣ ವ್ಯವಸ್ಥೆಯನ್ನು ದಿಢೀರ್​​ ಬದಲಿಸಲು ಸಾಧ್ಯವಿಲ್ಲ. ಎನ್ಇಪಿಯನ್ನು ಅನೇಕ ವರ್ಷಗಳ ಕಾಲದ ಸಂಶೋಧನೆ, ವಿಶ್ಲೇಷಣೆ, ಅಳವಡಿಸಿಕೊಳ್ಳಲು ಇರುವ ಸಾಧ್ಯತೆಗಳು ಎಲ್ಲವನ್ನೂ ಗಂಭೀರವಾಗಿ ನಡೆಸಿ, ಜಾರಿಗೆ ತರಲಾಗುತ್ತಿದೆ. ಇದೊಂದು ಅತ್ಯಂತ ಧೈರ್ಯದ ನಿರ್ಧಾರವಾಗಿದೆ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಲೋಚನೆ ಇದ್ದು, ಕರ್ನಾಟಕವು ಇದರ ಲಾಭ ಪಡೆದುಕೊಳ್ಳಲು ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

cm-basavaraj-bommai-nep-implement-program
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ದೇಶದ ಭವಿಷ್ಯ ಉಜ್ವಲವಾಗಿರಬೇಕೆಂಕು ಎಂದರೆ ಇಡೀ ಶಿಕ್ಷಣ ವ್ಯವಸ್ಥೆ ಆಮೂಲಾಗ್ರವಾಗಿ ಬದಲಾಗಬೇಕಾಗಿದೆ. ಹೀಗಾಗಿಯೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಇಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಎನ್ಇಪಿಯನ್ನು ಜಾರಿಗೆ ತರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಇದರ ಜೊತೆಯಲ್ಲೇ ಬಿ.ಇ. ಕಲಿಕೆಗೆ ರಾಜ್ಯವನ್ನು ಅತ್ಯುತ್ತಮ ತಾಣವನ್ನಾಗಿ ಬೆಳೆಸುವ ಉದ್ದೇಶದ 'ಡೆಸ್ಟಿನೇಷನ್ ಕರ್ನಾಟಕ' ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಾಲ್ಕು ವರ್ಷಗಳ ಬಿ.ಎಸ್ಸಿ (ಆನರ್ಸ್) ಪದವಿ ಮತ್ತು ಕನ್ನಡ ಮಾಧ್ಯಮದಲ್ಲೂ ಬಿ.ಇ. ಬೋಧನೆಗೆ ಹಸಿರು ನಿಶಾನೆ ತೋರಿಸಿದರು.

ದೇಶದ ಉಜ್ವಲ ಭವಿಷ್ಯಕ್ಕಾಗಿ ಎನ್ಇಪಿ ಜಾರಿ

ಶಿಕ್ಷಣ ವ್ಯವಸ್ಥೆ ದಿಢೀರ್​​ ಬದಲಿಸಲು ಸಾಧ್ಯವಿಲ್ಲ. ಎನ್ಇಪಿಯನ್ನು ಅನೇಕ ವರ್ಷಗಳ ಕಾಲದ ಸಂಶೋಧನೆ, ವಿಶ್ಲೇಷಣೆ, ಅಳವಡಿಸಿಕೊಳ್ಳಲು ಇರುವ ಸಾಧ್ಯತೆಗಳು ಎಲ್ಲವನ್ನೂ ಗಂಭೀರವಾಗಿ ನಡೆಸಿ, ಜಾರಿಗೆ ತರಲಾಗುತ್ತಿದೆ. ಇದೊಂದು ಅತ್ಯಂತ ಧೈರ್ಯದ ನಿರ್ಧಾರವಾಗಿದ್ದು, ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಮುಂದಾಲೋಚನೆ ಇದೆ. ಕರ್ನಾಟಕವು ಇದರ ಲಾಭ ಪಡೆದುಕೊಳ್ಳಲು ತೀರ್ಮಾನಿಸಿದೆ ಎಂದು ಸಿಎಂ ವಿವರಿಸಿದರು.

ಇಂದು ತಂತ್ರಜ್ಞಾನದಿಂದಾಗಿ ಸಾಂಪ್ರದಾಯಿಕ ತರಗತಿಗಳು ಮತ್ತು ಕೋರ್ಸುಗಳು ಅಪ್ರಸ್ತುತವಾಗಿವೆ. ಇಡೀ ಸಮಾಜವೇ ಇಂದು ತಂತ್ರಜ್ಞಾನವನ್ನು ಆಧರಿಸಿದೆ. ಈ ಪ್ರಚಂಡ ಬದಲಾವಣೆಗೆ ನಾವು ತೆರೆದುಕೊಂಡು, ಮುಂದಡಿ ಇಡದಿದ್ದರೆ ಶಾಶ್ವತವಾಗಿ ಕಳೆದು ಹೋಗುತ್ತೇವೆ. ಆದ್ದರಿಂದ ನಮ್ಮ ಶಾಲಾ ಕಾಲೇಜುಗಳು ಉಳಿದವರಿಗಿಂತ ಒಂದು ಹೆಜ್ಜೆ ಮುಂದಿರಬೇಕು ಎಂದು ಅವರು ಸಲಹೆ ನೀಡಿದರು.

ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಬೇಕಿದೆ

ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತಾಧ್ಯಯನದವರೆಗೂ ನಮ್ಮಲ್ಲಿ ಬದಲಾವಣೆ ಆಗಬೇಕಿದೆ. ಇದು ಸಾಧ್ಯವಾಗಬೇಕೆಂದರೆ, ಮೊದಲು ಶಿಕ್ಷಕರ ಮನಸ್ಥಿತಿ ಬದಲಾಗಬೇಕು. ಎನ್ಇಪಿ ಯಶಸ್ಸು ಕಾಣಬೇಕು ಎಂದರೆ ಇದು ಅತ್ಯಂತ ಮುಖ್ಯ. ಹೀಗಾದರೆ, ವಿದ್ಯಾರ್ಥಿಗಳ ಮನಸ್ಥಿತಿ ಬದಲಿಸುವುದು ಕಷ್ಟವಲ್ಲ ಎಂದು ಪ್ರತಿಪಾದಿಸಿದರು.

ಬಹುಶಿಸ್ತೀಯ ಮಾದರಿಯ ಕಲಿಕೆಯು ಇಂದಿನ ತುರ್ತು ಅಗತ್ಯವಾಗಿದೆ. ಏಕೆಂದರೆ, ಇಂಟರ್ನೆಟ್ ತಂತ್ರಜ್ಞಾನ ಜಗತ್ತಿನ ನಿಯಮಗಳನ್ನೇ ಬದಲಿಸಿದೆ. ಆದ್ದರಿಂದ ಸಂಶೋಧನೆ ಮತ್ತು ಅಭಿವೃದ್ಧಿಗೆ ನಾವು ಒತ್ತು ಕೊಡಬೇಕು. ಇದಕ್ಕೆ ರಾಜ್ಯ ಸರಕಾರದ ಸಂಪೂರ್ಣ ಒತ್ತಾಸೆ ಇದೆ ಎಂದು ಬೊಮ್ಮಾಯಿ ನುಡಿದರು.

ಶಿಕ್ಷಣ ಕ್ರಮದಲ್ಲಿ ಈವರೆಗೂ ಕೇವಲ ಶೇಕಡಾವಾರು ಅಂಕ ಗಳಿಕೆಗೆ ಗಮನ ಕೊಡಲಾಗುತ್ತಿತ್ತು. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಯ ಪರ್ಸೆಂಟೇಜ್ ಪದ್ಧತಿ ಹೋಗಿ 'ಪರ್ಸೆಂಟೈಲ್' ವಿಧಾನ ಜಾರಿಗೆ ಬಂದಿದೆ. ರಾಜ್ಯದಲ್ಲಿರುವ ಶಿಕ್ಷಣ ಸಂಸ್ಥೆಗಳು ಇದನ್ನು ಗಮನಿಸಿ, ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಚಾರಿತ್ರಿಕ ಹೆಜ್ಜೆ: ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಎನ್ಇಪಿಯನ್ನು ಜಾರಿಗೆ ತರುತ್ತಿರುವುದು ಚಾರಿತ್ರಿಕವಾದ ಹೆಜ್ಜೆಯಾಗಿದೆ. ತಾಂತ್ರಿಕ ಶಿಕ್ಷಣಕ್ಕೆ ರಾಜ್ಯದಲ್ಲಿ ಇದು ಹೊಸತನ ತರುವ ಜತೆಗೆ ಹೊಸದಿಕ್ಕನ್ನು ತೋರಿಸಲಿದೆ ಎಂದು ಸಿಎಂ ಸಂತಸ ವ್ಯಕ್ತಪಡಿಸಿದರು.

ಅಶ್ವತ್ಥನಾರಾಯಣ ಬಗ್ಗೆ ಸಿಎಂ ಮೆಚ್ಚುಗೆ ಮಾತು :ಇದೇ ವೇಳೆ, ಪ್ರಧಾನಿಯವರ ದೂರದೃಷ್ಟಿಯನ್ನು ಕೊಂಡಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಎನ್ಇಪಿಯನ್ನು ಪ್ರಸ್ತಾಪಿಸಿದ ಅವರು, ನಮ್ಮ ಸಚಿವರು ಅತ್ಯಂತ ಪ್ರಗತಿಪರ ದೃಷ್ಟಿಕೋನವನ್ನು ಹೊಂದಿದ್ದಾರೆ. ಈ ಖಾತೆಗೆ ಇಲ್ಲಿಯವರೆಗೂ ಇಂತಹ ಉತ್ಸಾಹದ ಮತ್ತು ಖಚಿತ ಮುನ್ನೋಟದ ಮಂತ್ರಿಯೊಬ್ಬರು ಬಂದಿರಲಿಲ್ಲ ಎಂದರು.

ಗುಣಮಟ್ಟದ ಶಿಕ್ಷಣಕ್ಕೆ ಒತ್ತು:ಇದೇ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿ, ಎನ್ಇಪಿ ಆಶಯಗಳಿಗೆ ಅನುಗುಣವಾಗಿ ಐಐಟಿ ಮತ್ತು ಐಐಎಸ್ಸಿ ಗುಣಮಟ್ಟದ ಬಿ.ಇ. ಮತ್ತು ನಾಲ್ಕು ವರ್ಷಗಳ ಬಿ.ಎಸ್ಸಿ (ಆನರ್ಸ್) ಪದವಿ ಪಠ್ಯಗಳನ್ನು ರೂಪಿಸಲಾಗಿದೆ ಎಂದರು.

ಈಗಾಗಲೇ 66 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬಿ.ಎಸ್ಸಿ(ಆನರ್ಸ್) ಆರಂಭಿಸಲು ಅನುಮತಿ ನೀಡಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ನೆನಪಿನಲ್ಲಿ ಒಟ್ಟು 75 ಕಾಲೇಜುಗಳಲ್ಲಿ ಈ ಪದವಿಯನ್ನು ಆರಂಭಿಸಲಾಗುವುದು. ಶಿಕ್ಷಣ ಸಂಸ್ಥೆಗಳಿಗೂ ಉದ್ಯಮಗಳಿಗೂ ನೇರವಾದ ಸಂಬಂಧವಿರಬೇಕು ಎನ್ನುವುದೇ ಎನ್ಇಪಿ ಆಶಯವಾಗಿದೆ ಎಂದು ಅವರು ಹೇಳಿದರು.

ತಾಂತ್ರಿಕ ಶಿಕ್ಷಣದಲ್ಲಿ ರಾಜ್ಯಕ್ಕೆ ದೊಡ್ಡ ಪರಂಪರೆ ಇದೆ. ಅದರಲ್ಲೂ ಬೆಂಗಳೂರು ನಗರವು ಇಡೀ ಜಗತ್ತಿನ ಗಮನ ಸೆಳೆದಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರವು ಉದ್ಯಮಸ್ನೇಹಿ ನೀತಿಗಳನ್ನೂ ಜಾರಿಗೆ ತರುತ್ತಿದೆ ಎಂದು ಸಚಿವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಬೆಳಗಾವಿ ವಿಟಿಯು ಉಪಕುಲಪತಿ ಕರಿಸಿದ್ಧಪ್ಪ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಬಾಷ್ ಕಂಪನಿಯ ಜನರಲ್ ಮ್ಯಾನೇಜರ್ ದತ್ತಾತ್ರಿ ಸಾಲಗಾಮೆ ಮುಂತಾದವರು ಉಪಸ್ಥಿತರಿದ್ದರು.

ABOUT THE AUTHOR

...view details