ಬೆಂಗಳೂರು:ರಾಜ್ಯದಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ನಡೆಯುತ್ತಿರುವ ನಡುವೆ ಕರ್ನಾಟಕದಲ್ಲಿ ಏರ್ ಬಸ್ ಉತ್ಪಾದನಾ ಘಟಕವನ್ನು ಸ್ಥಾಪಿಸುವಂತೆ ಫ್ರೆಂಚ್ ಏರೊಸ್ಪೇಸ್ ಕಂಪನಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಹ್ವಾನಿಸಿದರು.
ಅರಮನೆ ಮೈದಾನದಲ್ಲಿ ಫ್ರೆಂಚ್–ಇಂಡೋ ಚೇಂಬರ್ ಆಫ್ ಕಾಮರ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಫ್ರೆಂಚ್ ಏರೊಸ್ಪೇಸ್ ಕಂಪನಿಗಳು ಕರ್ನಾಟಕದಲ್ಲಿವೆ. ಏರ್ ಬಸ್ನಂತಹ ಸಂಸ್ಥೆಗಳು ಬೆಂಗಳೂರಿನಲ್ಲಿ ಘಟಕ ಸ್ಥಾಪಿಸಿ, ವಿಸ್ತರಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕರ್ನಾಟಕ ಏರೊಸ್ಪೇಸ್ ವಲಯದಲ್ಲಿ ದೊಡ್ಡ ಮಟ್ಟದ ಉತ್ಪಾದನಾ ಘಟಕ ಹೊಂದಿದೆ. ವಿಮಾನದ ಭಾಗಗಳ ಉತ್ಪಾದನೆ ರಾಜ್ಯದಲ್ಲಾಗುತ್ತವೆ. ಮುಂದಿನ ದಿನಗಳಲ್ಲಿ ಕರ್ನಾಟಕ ಪೂರ್ಣ ಪ್ರಮಾಣದ ವಿಮಾನವನ್ನು ಉತ್ಪಾದಿಸುವ ಗುರಿ ಹೊಂದಿದೆ. ಈ ಕ್ಷೇತ್ರದಲ್ಲಿ ಪ್ರಸ್ತುತ ಏರ್ ಬಸ್ ಹಾಗೂ ಬೋಯಿಂಗ್ ಸಂಸ್ಥೆ ಇದೆ ಎಂದರು.
ನಾವು ಮಾರುಕಟ್ಟೆಗೆ ಹತ್ತಿರವಾಗಬೇಕು:ಫ್ರಾನ್ಸ್ ಮತ್ತು ಇಂಡಿಯಾ ನಡುವೆ ಬಹಳ ಹಳೆಯ ಸಂಬಂಧ ಇದೆ. ಪಾಂಡಿಚೇರಿಯಲ್ಲಿ ಈಗಲೂ ಫ್ರೆಂಚ್ ಭಾಷೆ ಜಾರಿಯಲ್ಲಿದೆ. ಇಲ್ಲಿರುವ ಅರವಿಂದೊ ಆಶ್ರಮಕ್ಕೆ ಫ್ರಾನ್ಸ್ ಪ್ರಜೆಗಳು ಆಗಮಿಸುತ್ತಾರೆ. ಜಾಗತೀಕರಣದ ಪರಿಣಾಮ ದೇಶಗಳು ಹೊಸ ಮಾರುಕಟ್ಟೆ ಹುಡುಕುತ್ತವೆ. ಅಂತಿಮವಾಗಿ ನಾವು ಮಾರುಕಟ್ಟೆಗೆ ಹತ್ತಿರವಾಗಬೇಕು ಎಂದು ಸಿಎಂ ಹೇಳಿದರು.
ಭಾರತ ಅತಿ ದೊಡ್ಡ ಉತ್ಪಾದನಾ ದೇಶ: ಭಾರತ ದೊಡ್ಡ ಪ್ರಮಾಣದ ಜನಸಂಖ್ಯೆ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ದೇಶ. ಜತೆಗೆ ಅತಿ ದೊಡ್ಡ ಉತ್ಪಾದನಾ ದೇಶ. ಅದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಅವಕಾಶವಿದೆ. ಜನರು ಇಲ್ಲಿ ಕೌಶಲ್ಯ, ತಂತ್ರಜ್ಞಾನ, ಮಾರುಕಟ್ಟೆ ಅವಕಾಶಗಳನ್ನು ಹುಡುಕಿಕೊಂಡು ಬರುತ್ತಾರೆ. ನಮ್ಮ ನಾಯಕರಾದ ನರೇಂದ್ರಮೋದಿಯವರ ನಾಯಕತ್ವದಡಿ ಎಲ್ಲ ರಂಗಗಳಲ್ಲಿಯೂ ಭಾರತ ಅಭಿವೃದ್ಧಿ ಹೊಂದುತ್ತಿದೆ. ಪಾಶ್ಚಿಮಾತ್ಯ ದೇಶಗಳು ಬೆಲೆ ಏರಿಕೆ ಮತ್ತು ಆರ್ಥಿಕ ಹಿಂಜರಿಕೆಯಿಂದ ಬಳಲುತ್ತಿವೆ. ಆದ್ದರಿಂದ ಇಂತಹ ದೇಶಗಳು ಬಲಿಷ್ಠ ಆರ್ಥಿಕತೆ ಹಾಗೂ ಬಲಿಷ್ಠ ಮಾರುಕಟ್ಟೆಯಿರುವ ದೇಶಗಳನ್ನು ಅರಸುತ್ತವೆ ಎಂದರು.