ಕರ್ನಾಟಕ

karnataka

ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಕ್ರಿಯ: ಈ ಬಾರಿ ಸಿಎಂ ಸಿದ್ದರಾಮಯ್ಯ ವಾಟ್ಸಪ್ ಚಾನಲ್ ಮೊರೆ

By ETV Bharat Karnataka Team

Published : Nov 5, 2023, 8:08 PM IST

ಸಿಎಂ ಸಿದ್ದರಾಮಯ್ಯ ಅವರು ಜನ ಸಂಪರ್ಕಕ್ಕಾಗಿ ವಾಟ್ಸಪ್ ಚಾನಲ್ ಮೊರೆ ಹೋಗಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಈಗೇನಿದ್ದರೂ ಡಿಜಿಟಲ್ ಯುಗ. ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರತಿನಿಧಿಗಳು ಜನಸಂಪರ್ಕ ಹೊಂದಿರುತ್ತಾರೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಜೊತೆ ಸಕ್ರಿಯವಾಗಿ ಸಂಪರ್ಕದಲ್ಲಿರುತ್ತಾರೆ. ಈ ಹಿಂದೆ ಸಿಎಂ ಆಗಿದ್ದಾಗಲೂ ಸಿದ್ದರಾಮಯ್ಯನವರು ಡಿಜಿಟಿಲ್ ಪ್ಲಾಟ್ ಫಾರ್ಮ್ ಮೂಲಕ ರಾಜ್ಯದ ಜನರ ಜೊತೆ ಸಂಪರ್ಕದಲ್ಲಿರಲು ಮುಂದಾಗಿದ್ದರು. ಅವರ ಹಿಂದಿನ ಅವಧಿಯಲ್ಲಿ ತಮ್ಮದೇ ಸಿಎಂ ಸಿದ್ದರಾಮಯ್ಯ ಆ್ಯಪ್​ ಅನ್ನು ಆರಂಭಿಸಿದ್ದರು. ಆದರೆ ಚಾಲನೆ ನೀಡಿದ ಆರು ತಿಂಗಳಲ್ಲೇ ಆ ಆ್ಯಪ್ ಕಣ್ಮರೆಯಾಯಿತು. ತಮ್ಮ ಪ್ರಸಕ್ತ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳ ಹೊಸತನಗಳನ್ನು ಅಳವಡಿಸಿಕೊಂಡು ಜನಸಂಪರ್ಕದಲ್ಲಿರಲು ಯತ್ನಿಸುತ್ತಿದ್ದಾರೆ. ಈ ಬಾರಿ ಆ್ಯಪ್ ಬದಲಿಗೆ ವಾಟ್ಸಪ್ ಚಾನೆಲ್ ಮೊರೆ ಹೋಗಿದ್ದಾರೆ.

ಇದೀಗ ರಾಜಕಾರಣಿಗಳು ಡಿಜಿಟಲ್ ವೇದಿಕೆಗಳ ಮೂಲಕ ಜನರ ಜೊತೆ ಸಂಪರ್ಕದಲ್ಲಿರುತ್ತಾರೆ. ಅದರಲ್ಲೂ ರಾಜ್ಯದ ಜನಪ್ರತಿನಿಧಿಗಳು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ. ಸಿಎಂ ಆದಿಯಾಗಿ ಸಚಿವರುಗಳು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಸದ್ಯ ಸಿಎಂ ಸಿದ್ದರಾಮಯ್ಯ ಜನ ಸಂಪರ್ಕಕ್ಕೆ ನೆಚ್ಚಿಕೊಂಡಿರುವುದು ಸಾಮಾಜಿಕ ಜಾಲತಾಣಗಳನ್ನು. ಈ ಮುಂಚೆ 2013-2018 ರವರೆಗೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಅವರು ಸಿಎಂ ಸಿದ್ದರಾಮಯ್ಯ ಆ್ಯಪ್​ ಅನ್ನು ಆರಂಭಿಸಿದ್ದರು. ಅಕ್ಟೋಬರ್ 2017ರಲ್ಲಿ ಸಿಎಂ ಸಿದ್ದರಾಮಯ್ಯ ಆ್ಯಪ್​ಗೆ ಚಾಲನೆ ನೀಡಿದ್ದರು. ಆ ಮೂಲಕ ಜನರ ಜೊತೆ ನೇರ ಸಂಪರ್ಕಕ್ಕೆ ನಿರ್ಧರಿಸಿದ್ದರು. ಈ ಆ್ಯಪ್ ಮೂಲಕ ಜನರ ಅಹವಾಲು, ದೂರು, ಸಲಹೆ ನೀಡಬಹುದಾಗಿತ್ತು. ಜೊತೆಗೆ ಸರ್ಕಾರದ ಸಾಧನೆ, ನೀತಿಗಳು, ಕಾರ್ಯಕ್ರಮ, ಅನುಷ್ಠಾನ ಸೇರಿದಂತೆ ಮುಖ್ಯಮಂತ್ರಿಗಳ ಭಾಷಣ, ಸಂದರ್ಶನ, ಪ್ರವಾಸ ಕಾರ್ಯಕ್ರಮಗಳ ಮಾಹಿತಿ ಎಲ್ಲವೂ ನಿಮ್ಮ ಬೆರಳ ತುದಿಯಲ್ಲಿಯೇ ಲಭ್ಯವಾಗುತ್ತಿತ್ತು.

ಏನಿದು ಸಿಎಂ ಸಿದ್ದರಾಮಯ್ಯ ಆ್ಯಪ್? : ಹಿಂದಿನ ತಮ್ಮ ಅಧಿಕಾರಾವಧಿಯ ಕೊನೆಯಲ್ಲಿ ಸಿಎಂ ಸಿದ್ದರಾಮಯ್ಯ ಆ್ಯಪ್ ಆರಂಭಿಸಿದ್ದರು. ಅಕ್ಟೋಬರ್ 2017ರಲ್ಲಿ ಆ್ಯಪ್​ಗೆ ಚಾಲನೆ ನೀಡಿದ್ದರು. ಪಿಎಂ ಮೋದಿ ಆ್ಯಪ್ ರೀತಿಯಲ್ಲೇ ಸಿಎಂ ಸಿದ್ದರಾಮಯ್ಯ ಆ್ಯಪ್​ಗೆ ಚಾಲನೆ ನೀಡಲಾಗಿತ್ತು. ಅಂದಿನ ತಮ್ಮ ಸರ್ಕಾರದ ಸಾಧನೆ, ಜನಪ್ರಿಯ ಕಾರ್ಯಕ್ರಮಗಳು, ನೀತಿ, ಯೋಜನೆಗಳು, ಅನುಷ್ಠಾನಗಳ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಇನ್ನು ತಮ್ಮ ಭಾಷಣ, ಸಂದರ್ಶನ, ಸಂದೇಶ, ಅಭಿಪ್ರಾಯಗಳನ್ನು ಜನರ ಜೊತೆ ನೇರವಾಗಿ ಹಂಚುತ್ತಿದ್ದರು. ಈ ಆ್ಯಪ್ ಅನ್ನು ಸರ್ಕಾರದ ಇ-ಆಡಳಿತ ಇಲಾಖೆ ನಿರ್ವಹಿಸುತ್ತಿತ್ತು.

ಸಿಎಂ ಸಿದ್ಧರಾಮಯ್ಯ ಆ್ಯಪ್ ಲಾಂಚ್ ಆದ ನಾಲ್ಕೈದು ತಿಂಗಳಲ್ಲೇ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಆ್ಯಪ್ ಅನ್ನು ಡೌನ್​ಲೋಡ್ ಮಾಡಿದ್ದರು. ಆ್ಯಪ್ ಮೂಲಕ ಸುಮಾರು 4 ಸಾವಿರಕ್ಕೂ ಅಧಿಕ ಸಲಹೆಗಳು ಬಂದಿದ್ದವು ಎಂದು ಅಂದು ಇದ್ದ ಅವರ ಮಾಧ್ಯಮ ತಂಡದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಅಲ್ಪಾವಧಿಯಲ್ಲೇ ಸಿಎಂ ಸಿದ್ದರಾಮಯ್ಯ ಆ್ಯಪ್ ಗೆ ಉತ್ತಮ ಸ್ಪಂದನೆ ಸಿಕ್ಕಿತ್ತು. ಆ್ಯಪ್ ಅನ್ನು ಸಿಎಂ ಸಿದ್ದರಾಮಯ್ಯ ಸಕ್ರಿಯವಾಗಿ ಬಳಸುತ್ತಿದ್ದರು. ಆ ಮೂಲಕ ಜನರ ಜೊತೆ ನೇರ ಸಂಪರ್ಕ ಸಾಧಿಸುತ್ತಿದ್ದರು.

ಆ್ಯಪ್ ಆರಂಭವಾದ ಆರು ತಿಂಗಳಲ್ಲೇ ಸ್ಥಗಿತ: ಆದರೆ ಆ್ಯಪ್ ಆರಂಭಿಸಿದ ಆರು ತಿಂಗಳೊಳಗೆ ಸಿಎಂ ಸಿದ್ದರಾಮಯ್ಯ ಆ್ಯಪ್ ಗೂಗಲ್ ಪ್ಲೇ ಸ್ಟೋರ್​ನಿಂದ ಕಣ್ಮರೆಯಾಗಿತ್ತು. 2018 ಮಾರ್ಚ್ ತಿಂಗಳಲ್ಲಿ ಆ್ಯಪ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಆ ವೇಳೆ ದತ್ತಾಂಶ ಕಳವು ಆರೋಪ ದೊಡ್ಡ ಸದ್ದು ಮಾಡಿತ್ತು. ಆರೋಪ ಕೇಳಿ ಬಂದ ಹಿನ್ನೆಲೆ ಕೇಂದ್ರದಲ್ಲಿ ಕಾಂಗ್ರೆಸ್ ತನ್ನ ಅಧಿಕೃತ ಆ್ಯಪ್​ ಅನ್ನು ಡಿಲೀಟ್ ಮಾಡಿತ್ತು. ಮಾರ್ಚ್ 26, 2018ಕ್ಕೆ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್​ನಿಂದ ತೆರವು ಮಾಡಿತ್ತು. ಇದಾದ ಮರುದಿನವೇ ಸಿಎಂ ಸಿದ್ದರಾಮಯ್ಯ ಆ್ಯಪ್ ಕೂಡ ಕಣ್ಮರೆಯಾಗಿತ್ತು. ಅಲ್ಲಿಗೆ ಸಿಎಂ ಸಿದ್ದರಾಮಯ್ಯ ಆ್ಯಪ್ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ದತ್ತಾಂಶ ಕಳವು ಆರೋಪ ಕೇಳಿ ಬಂದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಆ್ಯಪ್ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು.

ಆದರೆ, ಆ ಆರೋಪವನ್ನು ಅಂದು ಸಿಎಂ ಸಿದ್ದರಾಮಯ್ಯ ತಳ್ಳಿ ಹಾಕಿದ್ದರು. ವಿಧಾನಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಕಾರಣದಿಂದ ಆ್ಯಪ್ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಸಿಎಂ ಆ್ಯಪ್ ನಲ್ಲಿ ನನ್ನ ಹಲವು ಫೋಟೋ, ವಿಡಿಯೋಗಳಿದ್ದವು. ಅವುಗಳನ್ನು ಒಂದೊಂದಾಗಿ ಅಳಿಸುವುದು ಅಸಾಧ್ಯವಾಗಿದ್ದು, ನೀತಿ ಸಂಹಿತೆ ಪಾಲಿಸುವ ನಿಟ್ಟಿನಲ್ಲಿ ಆ್ಯಪ್ ಅನ್ನು ಅಮಾನತುಗೊಳಿಸಲು ಇ-ಆಡಳಿತ ಇಲಾಖೆಗೆ ಸೂಚಿಸಿದ್ದೆ. ಚುನಾವಣೆ ಬಳಿಕ ಪುನಾರಂಭಿಸಲಾಗುವುದು ಎಂದು ತಿಳಿಸಿದ್ದರು. ಆದರೆ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತ ಕಾರಣ ಅಧಿಕಾರ ಕಳೆದುಕೊಂಡಿತ್ತು. ಹೀಗಾಗಿ ಸಿಎಂ ಆ್ಯಪ್ ಅಲ್ಲಿಗೆ ಕೊನೆಗೊಂಡಿತ್ತು.

ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಕ್ರಿಯ: ಈ ಬಾರಿ ಸಿಎಂ ಸಿದ್ದರಾಮಯ್ಯ ವಾಟ್ಸಪ್ ಚಾನಲ್ ಮೊರೆ

ಈ ಬಾರಿ ಆ್ಯಪ್ ಬದಲು ವಾಟ್ಸಪ್ ಚಾನಲ್ ಮೊರೆ: ಇದೀಗ ಮತ್ತೆ ಸಿದ್ದರಾಮಯ್ಯ ಸಿಎಂ ಗದ್ದುಗೆ ಏರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ತಮ್ಮ ಅಭಿಪ್ರಾಯ, ಭಾಷಣ, ಸಂದೇಶಗಳನ್ನು ದಿನನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಮೂಲಕ ನೇರ ಜನಸಂಪರ್ಕದಲ್ಲಿದ್ದಾರೆ. ಆದರೆ ಈ ಬಾರಿ ಸಿಎಂ ಸಿದ್ದರಾಮಯ್ಯ ಆ್ಯಪ್ ಬದಲು ವಾಟ್ಸಪ್ ಚಾನಲ್ ಮೊರೆ ಹೋಗಿದ್ದಾರೆ. ಜನರೊಟ್ಟಿಗೆ ಸಂಪರ್ಕವನ್ನು ಮತ್ತಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಈ ಬಾರಿ ತಮ್ಮ ಅಧಿಕೃತ ವಾಟ್ಸಪ್‌ ಚಾನಲ್‌ ಆರಂಭಿಸಿದ್ದಾರೆ. ಸೆ. 12, 2023ರಂದು ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ ವಾಟ್ಸಪ್ ಚಾನಲ್ ಆರಂಭಿಸಿದ್ದಾರೆ. 3,08,000 ಫಾಲೋವರ್ಸ್ ಇದ್ದಾರೆ. ಅದರ ಜೊತೆಗೆ ಅಕ್ಟೋಬರ್ 10ರಂದು ಸಿದ್ದರಾಮಯ್ಯ ಹೆಸರಿನ ವೈಯಕ್ತಿಕ ವಾಟ್ಸಪ್ ಚಾನಲ್ ಕೂಡ ಆರಂಭಿಸಿದ್ದಾರೆ. ವೈಯಕ್ತಿಕ ವಾಟ್ಸಪ್ ಚಾನಲ್​ಗೆ 22 ಸಾವಿರ ಫಾಲೋವರ್ಸ್ ಇದ್ದಾರೆ.

ಈ ವಾಟ್ಸಪ್ ಚಾನಲ್​ನಲ್ಲಿ ನಿರಂತರವಾಗಿ ಜನ ಸಂಪರ್ಕ ಹೊಂದಿದ್ದಾರೆ. ಈ ಚಾನಲ್‌ನಲ್ಲಿ ಸಿಎಂ ದೈನಂದಿನ ಚಟುವಟಿಕೆ, ತೆಗೆದುಕೊಂಡ ಮಹತ್ವದ ನಿರ್ಧಾರಗಳು, ಸಭೆಗಳ ಪ್ರಮುಖ ಅಂಶಗಳು, ಹೊಸ ಯೋಜನೆ ಮಾಹಿತಿ, ಆರೋಪ ಅಥವಾ ಪ್ರಚಲಿತ ಘಟನೆಗಳಿಗೆ ಪ್ರತಿಕ್ರಿಯೆಗಳು ಸೇರಿದಂತೆ ಸಾಕಷ್ಟು ಮಾಹಿತಿಯನ್ನು ನೇರವಾಗಿ ಹಂಚುತ್ತಿದ್ದಾರೆ. ಇನ್ನು ಚಾನಲ್‌ಗಳಲ್ಲಿ ಬಂದ ಸಂದೇಶಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಸಾರ್ವಜನಿಕರು ಇಮೋಜಿ ಬಳಸಿ ನೀಡುವ ಅವಕಾಶ ಇದೆ. ಜನರಿಗೆ ಬೆರಳ ತುದಿಯಲ್ಲಿ ಸರ್ಕಾರದ ದೈನಂದಿನ ಆಗುಹೋಗುಗಳ ಮಾಹಿತಿ ಒದಗಿಸಿ, ಆಡಳಿತವನ್ನು ಮತ್ತಷ್ಟು ಪಾರದರ್ಶಕವಾಗಿಸಲು ಈ ವಾಟ್ಸಪ್‌ ಚಾನಲ್‌ ಆರಂಭಿಸಲಾಗಿದೆ ಎಂಬುದು ಸಿಎಂ ಮಾಧ್ಯಮ ತಂಡದ ಸಿಬ್ಬಂದಿಯ ಅಭಿಮತವಾಗಿದೆ.

ಫೇಸ್​ಬುಕ್, X ನಲ್ಲೂ ಸಕ್ರಿಯ : ಇತ್ತ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್ ಹಾಗೂ X ನಲ್ಲೂ ಸಕ್ರಿಯವಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಯ ಅಧಿಕೃತ ಫೇಸ್​ಬುಕ್ ಹಾಗೂ ಎಕ್ಸ್ ಖಾತೆ ಮೂಲಕ ಸಿಎಂ ಸಿದ್ದರಾಮಯ್ಯ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ ಎಂಬ ಅಧಿಕೃತ ಫೇಸ್ ಬುಕ್ ಖಾತೆಗೆ ಸುಮಾರು 10 ಲಕ್ಷ ಫಾಲೋವರ್ಸ್ ಇದ್ದಾರೆ. ಇನ್ನು ಸಿದ್ದರಾಮಯ್ಯರ ವೈಯಕ್ತಿಕ ಫೇಸ್ ಬುಕ್ ಖಾತೆಯಲ್ಲಿ 4.47 ಲಕ್ಷ ಫಾಲೋವರ್ಸ್ ಇದ್ದಾರೆ.

ಅದೇ ರೀತಿ ಸಿಎಂ ಆಫ್ ಕರ್ನಾಟಕ ಅಧಿಕೃತ X ಖಾತೆಯಲ್ಲಿ ಸುಮಾರು 10.50 ಲಕ್ಷ ಫಾಲೋವರ್ಸ್ ಇದ್ದಾರೆ. ಇನ್ನು ತಮ್ಮ ವೈಯಕ್ತಿಕ ಎಕ್ಸ್ ಖಾತೆಗೆ ಸುಮಾರು 9.82 ಸಾವಿರ ಫಾಲೋವರ್ಸ್​ ಇದ್ದಾರೆ. ಈ ಎರಡೂ ಸಾಮಾಜಿಕ ಜಾಲತಾಣಗಳ ತಮ್ಮ ಖಾತೆಗಳಲ್ಲಿ ಸಿಎಂ ಸಿದ್ದರಾಮಯ್ಯ ನಿರಂತರ ಜನಸಂಪರ್ಕ ಹೊಂದಿದ್ದು, ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ :ಜನ ಸಂಪರ್ಕಕ್ಕಾಗಿ Chief Minister of Karnataka ಎಂಬ ವಾಟ್ಸ್‌ಆ್ಯಪ್ ಚಾನಲ್ ಆರಂಭಿಸಿದ ಸಿಎಂ!

ABOUT THE AUTHOR

...view details