ಬೆಂಗಳೂರು: ಸರ್ಕಾರದ ಆಡಳಿತ ಹಾಗೂ ನಾಗರಿಕರ ನಡುವೆ ಅಂತರವಿದ್ದು, ಇವರೆಡರ ನಡುವೆ ಸೇತುವೆ ರಚನೆಯಾಗಿ ಒಂದುಗೂಡಿದಾಗ ಮಾತ್ರ ಜನಸಾಮಾನ್ಯರ ಸಮಸ್ಯೆಗಳು ಬಗೆಹರಿಯುತ್ತವೆ. ಹೀಗಾಗಿ ಆಡಳಿತದಲ್ಲಿ ನಾಗರಿಕರ ಪಾತ್ರ ಹೆಚ್ಚಾಗಬೇಕಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ನಗರದ ಅಪಾರ್ಟ್ಮೆಂಟ್ ಫೆಡರೇಶನ್ದಿಂದ ನಡೆದ ಸಿಟಿಜನ್ ಮ್ಯಾಟರ್ಸ್ 'ಆಲ್ ಪಾರ್ಟಿ ಟೌನ್ಹಾಲ್' ಜಾಗೃತಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಭಿವೃದ್ಧಿ ಕಾರ್ಯಸೂಚಿಯ ರಾಜಕೀಯ ಮುಖಂಡರು ಮತ್ತು ಸಾರ್ವಜನಿಕರ ನಡುವೆ ಚರ್ಚೆಯಲ್ಲಿ ಮಾತನಾಡಿದ ಅವರು, 15 ವರ್ಷಗಳ ಹಿಂದೆ ಸ್ಮಾರ್ಟ್ ವೋಟ್ ಎಂಬ ಸಂಘಟನೆ ಕಟ್ಟಿಕೊಂಡು ಇಂತಹದ್ದೇ ಚರ್ಚೆಗಳನ್ನು ನಡೆಸುತ್ತಿದ್ದೆವು. ಬೇರೆ ಬೇರೆ ವಿಷಯಗಳ ಆಧಾರದಲ್ಲಿ ವೋಟ್ ಬ್ಯಾಂಕ್ ಸೃಷ್ಟಿಯಾಗುತ್ತದೆ.
ಆದರೆ ಜನರ ನಿಜವಾದ ಸಮಸ್ಯೆಗಳ ಬಗ್ಗೆ ಮಾತ್ರ ಚುನಾವಣೆಯಲ್ಲಿ ಚರ್ಚೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಅಂತಹ ಪ್ರಯತ್ನ ಮಾಡಿದ್ದೆವು. ಅಪಾರ್ಟ್ಮೆಂಟ್ ನಿವಾಸಿಗಳು ಕೇವಲ ಮತದಾರರು ಅಷ್ಟೇ ಅಲ್ಲ, ಅನೇಕ ಮತದಾರರ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಇರುವ ಪ್ರಭಾವಿಗಳು ಕೂಡ ಆಗಿದ್ದಾರೆ ಎಂದು ಹೇಳಿದರು.
ರಾಜಕೀಯ ಸ್ವಚ್ಛಗೊಳಿಸಲು ಎಲ್ಲರೂ ಮುಂದಾಗಬೇಕು:ಇಂದಿನ ರಾಜಕಾರಣದಲ್ಲಿ ಜಾತಿವ್ಯವಸ್ಥೆ ,ಭ್ರಷ್ಟಾಚಾರ, ಗೆಲುವಿಗಾಗಿ ದುಂದುವೆಚ್ಚು ಮಾಡುವುದು,ವಿವಿಧ ಹಗರಣಗಳಲ್ಲಿ ಜನಪ್ರತಿನಿಧಿಗಳು ಭಾಗಿಯಾಗುತ್ತಿರುವುದು. ಹೀಗಾಗಿ ರಾಜಕೀಯ ವ್ಯವಸ್ಥೆ ತೀರಾ ಹದಗೆಟ್ಟಿದೆ.ತಮ್ಮೊಂದಿಗೆ ಕೆಲಸ ಮಾಡುವ ನೆರೆಹೊರೆಯವರು, ಅಪಾರ್ಟ್ಮೆಂಟ್ ಭದ್ರತಾ ಸಿಬ್ಬಂದಿ, ಕೆಲಸಗಾರರು, ಚಾಲಕರು ಸೇರಿದಂತೆ ಎಲ್ಲರ ಜೊತೆ ಚರ್ಚಿಸುವ ಅವಕಾಶವಿದೆ. ಅವರು ಇದನ್ನು ಸದುಪಯೋಗ ಪಡಿಸಿಕೊಂಡು ರಾಜಕೀಯವನ್ನು ಸ್ವಚ್ಛಗೊಳಿಸಲು ಮುಂದಾಗಬೇಕು ಎಂದು ಹೇಳಿದರು.