ಬೆಂಗಳೂರು :ಸಾಂಕ್ರಾಮಿಕ ಕೊರೊನಾ ಸೋಂಕು ಯಾವೆಲ್ಲಾ ಘಟನೆಗಳಿಗೆ, ಪರಿಸ್ಥಿತಿಗೆ ಸಾಕ್ಷಿಯಾಯ್ತು ಅನ್ನೋದನ್ನ ನೋಡಿದ್ದೇವೆ. ಅದರಲ್ಲೂ ಶೈಕ್ಷಣಿಕ ಕ್ಷೇತ್ರಕ್ಕೆ ಕೊಟ್ಟ ಪೆಟ್ಟಿಗೆ ಸುಧಾರಿಸಿಕೊಳ್ಳಲು ಇನ್ನು ಸಮಯವೇ ಬೇಕು.
ಸರ್ಕಾರಿ-ಖಾಸಗಿ ಶಾಲೆಗಳೆಂಬ ತಾರತಮ್ಯವಿಲ್ಲದೇ ಮಕ್ಕಳ ನಿರಂತರ ಕಲಿಕೆಗೆ ಅಡ್ಡಗಾಲು ಹಾಕಿದೆ ಈ ಕೊರೊನಾ ಸೋಂಕು. ಅಷ್ಟೇ ಅಲ್ಲ, ಶಾಲಾ ಶುಲ್ಕದ ಜಟಾಪಟಿಯು ನಡೆಯುತ್ತಿದ್ದು, ಸದ್ಯ ಕೋರ್ಟ್ ಮೆಟ್ಟಲು ಏರಿದೆ.
ಅಂದಹಾಗೇ, ಕೋವಿಡ್ ಸಂಕಷ್ಟದಲ್ಲಿ ಸರ್ಕಾರಿ ಶಾಲಾ ಮಕ್ಕಳಷ್ಟೇ ಅಲ್ಲ, ಖಾಸಗಿ ಶಾಲಾ ಮಕ್ಕಳು ಕೂಡ ಸಂಕಷ್ಟದಲ್ಲಿದ್ದಾರೆ. ಇದನ್ನ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ನಿರಂತರ ಕಲಿಕೆಯನ್ನ ನಾವು ಕೊಡ್ತಿದ್ದೇವೆ. ಆದರೆ,ಮಕ್ಕಳು ಇದರಿಂದ ವಂಚಿತರಾಗುತ್ತಿದ್ದಾರೆ.
ಶಾಲೆಗೆ ಗೊತ್ತಿಲ್ಲದೇ ಪೋಷಕರು ಮಾಹಿತಿ ಕೊಡದೇ, ವಿದ್ಯಾರ್ಥಿಗಳು ಶಾಲೆ ತೊರೆದಿದ್ದಾರೋ, ಬೇರೆ ಶಾಲೆಗೆ ದಾಖಲಾಗಿದ್ದಾರೋ, ಬಾಲ ಕಾರ್ಮಿಕ ಪದ್ಧತಿಗೆ ಅಥವಾ ಬಾಲ್ಯವಿವಾಹಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ ಅಂತಾ ಕ್ಯಾಮ್ಸ್ನ ಕಾರ್ಯದರ್ಶಿ ಶಶಿಕುಮಾರ್ ಆತಂಕ ವ್ಯಕ್ತಪಡಿಸಿದರು.
ಕ್ಯಾಮ್ಸ್ ಅಡಿಯಲ್ಲಿ ನೋಂದಣಿಯಾಗಿರುವ ರಾಜ್ಯದ ವಿವಿಧ ಶಾಲೆಗಳ ಒಟ್ಟು 250 ಶಾಲೆಗಳಲ್ಲಿ ಸರ್ವೇ ನಡೆಸಿದ್ದು, ಇದರಲ್ಲಿ 60,094 ವಿದ್ಯಾರ್ಥಿಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. 250 ಶಾಲೆಗಳಲ್ಲಿ 1,85,933 ಜನ ವಿದ್ಯಾರ್ಥಿಗಳಿದ್ದು, ಇದರಲ್ಲಿ ಕೇವಲ 1,25,839 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 60,094 ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಇಲ್ಲದಿರುವುದು ಕಂಡು ಬಂದಿದೆ. ಇದು ಕೇವಲ ಸ್ಯಾಂಪಲ್ ಅಷ್ಟೇ, ಖಾಸಗಿ ಶಾಲೆಯಲ್ಲೂ ಲಕ್ಷಾಂತರ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯುಂಟಾಗಿದೆ.
ಪೋಷಕರ ನಂಬರ್ ಸ್ವಿಚ್ ಆಫ್- ಅಡ್ರೆಸ್ ಚೇಂಜ್ :ಸರ್ವೇ ನಡೆಸಲು ಮುಂದಾದ ಸಂದರ್ಭದಲ್ಲಿ ಶಾಲೆಯಿಂದ ದೂರ ಉಳಿದ ಮಕ್ಕಳ ಸಂಪರ್ಕದ ಕುರಿತು ಮಾಹಿತಿ ನೀಡಿದ ಶಶಿಕುಮಾರ್, ಬಹಳಷ್ಟು ಪೋಷಕರು ಶಾಲೆಯಿಂದ ಕರೆಗಳು ಬರುತ್ತವೆ ಅಂತಾನೇ ತಮ್ಮ ನಂಬರ್ ಸ್ವಿಚ್ ಆಫ್ ಮಾಡಿದ್ದಾರೆ. ಹಲವರು ನಂಬರ್ನೇ ಬದಲಾಯಿಸಿದ್ದಾರೆ.
ಇನ್ನೂ ಕೆಲವರು ಮನೆಯನ್ನೇ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಕೆಲ ಪೋಷಕರು ಮಕ್ಕಳ ಬಗ್ಗೆ ಯಾವ ಮಾಹಿತಿಯನ್ನೂ ಶಾಲೆಗೆ ಬಿಟ್ಟು ಕೊಟ್ಟಿಲ್ಲ. ಶಾಲೆಗೆ ದಾಖಲಾಗುವ ಸಂಬಂಧ ಹಾರಿಕೆಯ ಉತ್ತರಗಳನ್ನ ಕೊಡುತ್ತಿದ್ದಾರೆ. ಹೀಗಾಗಿ, ಆ ಮಕ್ಕಳು ಬೇರೆ ಶಾಲೆಗೆ ಸೇರಿದ್ರಾ ಇಲ್ವಾ ಎಂಬುದರ ಬಗ್ಗೆ ನಮ್ಗೆ ಯಾವುದೇ ಖಚಿತತೆ ಇಲ್ಲ.