ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ (ನವೆಂಬರ್ 14 ರಿಂದ 17) ಪ್ರಮುಖ ಆಕರ್ಷಣೆಯಾಗಿರುವ ಪಟಾಕಿಯ ಮಾರಾಟ ಯಾವ ರೀತಿ ಇರಬೇಕು ಎಂದು ಮಾರ್ಗಸೂಚಿ ಪ್ರಕಟಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ದೀಪಾವಳಿ ಹಬ್ಬ: ಕೋವಿಡ್ ಮಾರ್ಗಸೂಚಿ ಹೊರಡಿಸಿದ ಮುಖ್ಯ ಕಾರ್ಯದರ್ಶಿ - ಮೈದಾನ ಅಥವಾ ಬಯಲು ಪ್ರದೇಶದಲ್ಲಿ ಪಟಾಕಿ ಮಳಿಗೆ ತೆರೆಯಲು ಅನುಮತಿ
ನವೆಂಬರ್ 1 ರಿಂದ ನವೆಂಬರ್ 17 ರವರೆಗೆ ಮಾತ್ರ ಪಟಾಕಿ ಮಾರಾಟ ಮಳಿಗೆಯನ್ನು ತಾತ್ಕಾಲಿಕವಾಗಿ ತೆರೆಯಲು ಅವಕಾಶ ನೀಡಲಾಗಿದೆ. ಅಧಿಕೃತ ಪರವಾನಗಿಯನ್ನು ಪಡೆದ ಮಾರಾಟಗಾರರು ನಿಗದಿತ ಸ್ಥಳ ಮತ್ತು ಅನುಮತಿ ಪಡೆದಿರುವ ದಿನಗಳಲ್ಲಿ ಮಾತ್ರ ಪಟಾಕಿ ಮಾರಾಟ ಮಾಡಬಹುದಾಗಿದೆ.
![ದೀಪಾವಳಿ ಹಬ್ಬ: ಕೋವಿಡ್ ಮಾರ್ಗಸೂಚಿ ಹೊರಡಿಸಿದ ಮುಖ್ಯ ಕಾರ್ಯದರ್ಶಿ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ](https://etvbharatimages.akamaized.net/etvbharat/prod-images/768-512-9177243-245-9177243-1602691765575.jpg)
ನವೆಂಬರ್ 1 ರಿಂದ ನವೆಂಬರ್ 17 ರವರೆಗೆ ಮಾತ್ರ ಪಟಾಕಿ ಮಾರಾಟ ಮಳಿಗೆಯನ್ನು ತಾತ್ಕಾಲಿಕವಾಗಿ ತೆರೆಯಲು ಅವಕಾಶ ನೀಡಲಾಗಿದೆ. ಅಧಿಕೃತ ಪರವಾನಗಿಯನ್ನು ಪಡೆದ ಮಾರಾಟಗಾರರು ನಿಗದಿತ ಸ್ಥಳ ಮತ್ತು ಅನುಮತಿ ಪಡೆದಿರುವ ದಿನಗಳಲ್ಲಿ ಮಾತ್ರ ಮಾರಾಟದಲ್ಲಿ ತೊಡಗಬಹುದು. ಪರವಾನಗಿ ಪತ್ರವನ್ನು ಸಾರ್ವಜನಿಕರ ಕಣ್ಣಿಗೆ ಬೀಳುವಂತೆ ಪ್ರದರ್ಶಿಸಬೇಕು ಹಾಗೂ ಪರವಾನಗಿ ಪಡೆದುಕೊಂಡಿರುವವರು ಮಳಿಗೆಯಲ್ಲಿ ಕಡ್ಡಾಯವಾಗಿ ಇರಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.
ಸಾರ್ವಜನಿಕ ಪ್ರದೇಶಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶದಲ್ಲಿ ಪಟಾಕಿ ಮಳಿಗೆ ತೆರೆಯಲು ಅನುಮತಿ ನೀಡಬೇಕು. ಎರಡು ಮಳಿಗೆಗಳ ಮಧ್ಯೆ ಆರು ಮೀಟರ್ ಅಂತರವಿರಬೇಕು. ಪಟಾಕಿ ಅಂಗಡಿಗಳಲ್ಲಿ ಎರಡೂ ಕಡೆಯಿಂದ ಸರಾಗವಾಗಿ ಗಾಳಿ ಆಡುವಂತಿರಬೇಕು. ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು. ಮಾರಾಟ ಮಳಿಗೆಗಳ ಸುತ್ತಮುತ್ತ ದಿನನಿತ್ತ ಸ್ಯಾನಿಟೈಸೇಷನ್ ಮಾಡಬೇಕು, ಗ್ರಾಹಕರಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರಿನಿಂಗ್, ಆರು ಆಡಿಗಳ ಸಾಮಾಜಿಕ ಅಂತರ ಮತ್ತು ಮುಖಗವಸು ಬಳಕೆ ಕಡ್ಡಾಯವಾಗಿ ಇರಬೇಕು ಎಂದು ಮುಖ್ಯ ಕಾರ್ಯದರ್ಶಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.