ಬೆಂಗಳೂರು:ರಾಜ್ಯದಲ್ಲಿ ಉತ್ಪಾದನೆ ಆಗುವ ವೈದ್ಯಕೀಯ ಆಮ್ಲಜನಕವನ್ನು ರಾಜ್ಯದಲ್ಲೇ ಬಳಕೆ ಮಾಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ಅಧಿಕೃತ ಆದೇಶ ಸದ್ಯದಲ್ಲೇ ಹೊರ ಬೀಳಲಿದೆ ಎಂದು ರಾಜ್ಯದ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಉಸ್ತುವಾರಿ ಹೊತ್ತಿರುವ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೇಂದ್ರ ಸಚಿವರುಗಳಾದ ಪಿಯೂಶ್ ಗೋಯೆಲ್, ಪ್ರಹ್ಲಾದ್ ಜೋಶಿ ಹಾಗೂ ಡಿ.ವಿ.ಸದಾನಂದಗೌಡ ಅವರೊಂದಿಗೆ ಹಲವಾರು ಹಂತದಲ್ಲಿ ಮಾತುಕತೆ ನಡೆಸಿದ್ದೆವು. ಅಲ್ಲದೆ, ಹಲವಾರು ಪತ್ರಗಳನ್ನು ಬರೆಯಲಾಗಿತ್ತು. ಈ ಮಾತುಕತೆ ಮತ್ತು ಸಮಾಲೋಚನೆಗೆ ಫಲ ಸಿಕ್ಕಿದೆ. ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಕೇಂದ್ರ ತಾತ್ವಿಕ ಒಪ್ಪಿಗೆ ನೀಡಿದೆ. ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಡಿಸಲಿದೆ ಎಂದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಹಳಷ್ಟು ನೆರವು ದೊರಕುತ್ತಿದೆ. ಕೇಂದ್ರ ಸರ್ಕಾರ ಬಹರೈನ್ ಮತ್ತು ಕುವೈತ್ನಿಂದ 180 ಮೆಟ್ರಿಕ್ ಟನ್ ಆಮ್ಲಜನಕವನ್ನು ರಾಜ್ಯಕ್ಕೆ ನೀಡಿದೆ. ಅಲ್ಲದೆ, ರೈಲು ಮೂಲಕ ಮೇ 11ರಂದು ಜಮ್ಶೇಡ್ಪುರದಿಂದ 120 ಮೆಟ್ರಿಕ್ ಟನ್, ಮೇ 15ರಂದು ಕಳಿಂಗಾನಗರದಿಂದ 180 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜು ಆಗಿದೆ. ಅಲ್ಲದೆ, ಮುಂದಿನ ಒಂದು ವಾರದಲ್ಲಿ ಸುಮಾರು 320 ದ್ರವೀಕೃತ ಆಮ್ಲಜನಕ ರವಾನೆ ಆಗುವ ನಿರೀಕ್ಷೆ ಇದೆ. 200 ಸಿಲಿಂಡರ್ಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಬೆಂಗಳೂರು ನಗರದ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತ ಸಭೆ
ರಾಜ್ಯದಿಂದ ತೆಲಂಗಾಣಕ್ಕೆ 145 ಮೆಟ್ರಿಕ್ ಟನ್, ಆಂಧ್ರ ಪ್ರದೇಶಕ್ಕೆ 63 ಮೆಟ್ರಿಕ್ ಟನ್ ಮತ್ತು ಮಹರಾಷ್ಟ್ರಕ್ಕೆ 40 ಮೆಟ್ರಿಕ್ ಟನ್ಗಳಷ್ಟು ರವಾನೆ ಮಾಡಲಾಗುತ್ತಿದೆ. ಇದನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಅಧಿಕೃತ ಆದೇಶ ಹೊರಬಿದ್ದ ನಂತರ ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ಹಂಚಿಕೆ ಆಗಿರುವ ಆಮ್ಲಜನಕ ಸಾಗಾಣಿಕೆಯಲ್ಲಿ ಆಗುತ್ತಿರುವ ವಿಳಂಬ ತಪ್ಪುತ್ತದೆ ಎಂದು ಹೇಳಿದರು.