ಕರ್ನಾಟಕ

karnataka

ರಾಜ್ಯದಲ್ಲಿ ಮೊದಲ ಬಾರಿಗೆ ಸಿಸಿಟಿವಿ ಕಂಟ್ರೋಲ್ ರೂಮ್ ಸ್ಥಾಪನೆ

By

Published : Oct 20, 2022, 9:58 PM IST

ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಶಾಸಕ ಮುನಿರತ್ನ ಅವರ ಕೇತ್ರಾನುದಾನದಡಿ ಯಶವಂತಪುರ ಠಾಣೆಯಲ್ಲಿ ಸಿಸಿಟಿವಿ ನಿಯಂತ್ರಣ ಕೇಂದ್ರವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸ್ಥಳೀಯ ಶಾಸಕ ಹಾಗೂ ಸಂಸದ ಮುನಿರತ್ನ ಅವರು ಉದ್ಘಾಟಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಜನರಲ್ಲಿ ಅಪರಾಧ ತಡೆ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದಲ್ಲೇ ಮೊದಲ ಬಾರಿಗೆ 20 ಕೋಟಿ ರೂ ವೆಚ್ಚದಲ್ಲಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದ್ದು, ಇದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಶಾಸಕ ಮುನಿರತ್ನ ಅವರ ಕ್ಷೇತ್ರಾನುದಾನದಡಿ ಯಶವಂತಪುರ ಠಾಣೆಯಲ್ಲಿ ಸಿಸಿಟಿವಿ ನಿಯಂತ್ರಣ ಕೇಂದ್ರವನ್ನು ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ಸ್ಥಳೀಯ ಶಾಸಕ ಹಾಗೂ ಸಂಸದ ಮುನಿರತ್ನ ಉದ್ಘಾಟಿಸಿದರು. ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಅಪರಾಧ ತಡೆಗಟ್ಟಲು ಹಾಗೂ ಅರಿವು ಮೂಡಿಸಲು ನೂತನ ಕಂಟ್ರೋಲ್ ರೂಮ್ ಸಹಕಾರಿಯಾಗಲಿದೆ.

ನಿಯಂತ್ರಣ ಕೇಂದ್ರದಲ್ಲಿ ಠಾಣಾ ವ್ಯಾಪ್ತಿಯ ರೈಲು-ಬಸ್ ನಿಲ್ದಾಣಗಳು, ಧಾರ್ಮಿಕ ಕೇಂದ್ರಗಳು ಹಾಗೂ ಜನಸಂದಣಿ ಪ್ರದೇಶ ಸೇರಿದಂತೆ 24 ಆಯಕಟ್ಟಿನ ಜಾಗಗಳಲ್ಲಿ 63 ಕ್ಯಾಮರಾ ಅಳವಡಿಸಲಾಗಿದೆ. ಇದಕ್ಕೆ ಕೇಬಲ್​ಗಳನ್ನು ನೆಲದಡಿ ಹಾಕಲಾಗಿದೆ. ಕ್ಯಾಮರಾ ಅಳವಡಿಸಲಾದ ಜಾಗಗಳಲ್ಲಿ ಧ್ವನಿವರ್ಧಕ ಹಾಕಲಾಗಿದೆ. ಕೇಂದ್ರ ಕಚೇರಿಯಿಂದಲೇ ಪೊಲೀಸ್ ಸಿಬ್ಬಂದಿ ನಿರ್ದೇಶನ ನೀಡಿದರೆ ಎಲ್ಲಾ ಕಡೆಗಳಲ್ಲಿ ಏಕಕಾಲದಲ್ಲಿ ಬರಲಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿದರು

ವಿವಿಧ ಅಪರಾಧ ಕೃತ್ಯವೆಸಗಿ ಆರೋಪಿಗಳು ಪರಾರಿಯಾದರೆ ಅಥವಾ ಅನುಮಾನಾಸ್ಪದವಾಗಿ ವ್ಯಕ್ತಿ ಹಾಗೂ ವಸ್ತು ಕಂಡುಬಂದರೆ ಕೂಡಲೇ ಸಿಬ್ಬಂದಿ ನಿರ್ದೇಶನ ನೀಡಬಹುದಾಗಿದೆ. ಹಬ್ಬ-ಹರಿದಿನ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಅಪರಾಧ ನಡೆಯದ ಹಾಗೆಯೇ ಮುಂಜಾಗ್ರತ ಕ್ರಮಗಳ ಕುರಿತು ಅರಿವು ಮೂಡಿಸಲು ನೆರವಾಗಿದೆ. ಪ್ರಾಯೋಗಿಕವಾಗಿ ಯಶವಂತಪುರ ಠಾಣೆಯಲ್ಲಿ ಸಿಸಿಟಿವಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ಯಶಸ್ವಿಯಾದರೆ ಅಗತ್ಯನುಗುಣವಾಗಿ ನಗರದ ವಿವಿಧ ಠಾಣೆಗಳಲ್ಲಿ ನಿಯಂತ್ರಣ ಕಚೇರಿ ಸ್ಥಾಪನೆ ಮಾಡುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದರು.

ಸಹಶಿಕ್ಷಕರ ಅಕ್ರಮ ನೇಮಕ ಸಂಬಂಧ ಮಾತನಾಡಿದ ಸಚಿವರು, ಪ್ರಕರಣ ಸಂಬಂಧ 59 ಶಿಕ್ಷಕರನ್ನು ಬಂಧಿಸಲಾಗಿದೆ. ಕಾಂಗ್ರೆಸ್ ಕಾಲದಲ್ಲಿ ಅಕ್ರಮ ನಡೆದಿತ್ತು. ಅದನ್ನು ಮುಚ್ಚಿಡಲಾಗಿತ್ತು. ಇದಕ್ಕೆ ಸಾಕ್ಷ್ಯಾಧಾರ ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಬಂಧನವಾಗಲಿದ್ದಾರೆ. ಪಿಎಸ್ಐ ಕೇಸ್​ನಲ್ಲಿ ಐಪಿಎಸ್ ಅಧಿಕಾರಿ ಸೇರಿ 102 ಮಂದಿಯನ್ನ ಬಂಧಿಸಲಾಗಿದೆ. ವಸ್ತುಗಳ ಹಾಗೆ ಸರ್ಕಾರಿ ಉದ್ಯೋಗವನ್ನು ಹಣ ನೀಡಿ ಪಡೆಯುವುದು ಎಷ್ಟು ಸರಿ? ಕಷ್ಟಪಟ್ಟು ಓದಿದ ಅಭ್ಯರ್ಥಿಗಳು ಎಲ್ಲಿಗೆ ಹೋಗಬೇಕು ಎಂದು ಕಳವಳ ವ್ಯಕ್ತಪಡಿಸಿದರು.

ಕಾಂತಾರ ಸಿನಿಮಾ ಬಗ್ಗೆ ನಟ ಚೇತನ್ ಟ್ವೀಟ್​ಗೆ ಕುರಿತಂತೆ ಪ್ರತಿಕ್ರಿಯಿಸಿ, ಸಿನಿಮಾದ ಬಗ್ಗೆ ವಿಮರ್ಶೆ ಮಾಡಲಿ. ಅದು ಬಿಟ್ಟು ಧರ್ಮದ ಬಗ್ಗೆ ಮಾತನಾಡುವುದು ಸರಿಯಲ್ಲ. ಯಾರಿಗೂ ಶೋಭೆ ತರುವುದಿಲ್ಲ. ಚೇತನ್ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.

ಇದನ್ನೂ ಓದಿ: ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ.. ಪೊಲೀಸ್​ ಕಾನ್ಸ್​ಟೇಬಲ್​ ಹುದ್ದೆಗೆ ಅರ್ಜಿ ಆಹ್ವಾನ

ABOUT THE AUTHOR

...view details