ಕರ್ನಾಟಕ

karnataka

By

Published : Jul 13, 2023, 6:01 PM IST

Updated : Jul 14, 2023, 6:25 AM IST

ETV Bharat / state

ಲೋನ್ ಆ್ಯಪ್​ಗಳಲ್ಲಿ ಸಾಲ ತೆಗೆದುಕೊಳ್ಳುವ ಮುನ್ನ ಎಚ್ಚರ: ಸಾಲದ ಜೊತೆ ಕಿರುಕುಳ ನೀಡ್ತಾರೆ

ಅಧಿಕೃತವಾಗಿ ನಡೆಸುವ ಹಣಕಾಸು ಸಂಸ್ಥೆಗಳಿಂದಲೇ ಸಾರ್ವಜನಿಕರು ಸಾಲ ಪಡೆಯುವತ್ತ ಗಮನಹರಿಸಬೇಕೆಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್ ಡಿ ಶರಣಪ್ಪ ಅವರು ತಿಳಿಸಿದ್ದಾರೆ.

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್ ಡಿ ಶರಣಪ್ಪ
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್ ಡಿ ಶರಣಪ್ಪ

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್ ಡಿ ಶರಣಪ್ಪ

ಬೆಂಗಳೂರು :ಯುವ ಜನತೆಯನ್ನ ಗುರಿಯಾಗಿಸಿಕೊಂಡು ಗ್ರಾಹಕರನ್ನ ಸೆಳೆದು ಅವರನ್ನು ಸಾಲದ ಖೆಡ್ಡಾಕ್ಕೆ ಬೀಳಿಸುತ್ತಿರುವ ಚೀನಿ ಆ್ಯಪ್​, ಅವರಿಗೆ ಕಿರುಕುಳವನ್ನೂ ಕೂಡಾ ನೀಡುತ್ತಿವೆ. ಇಂತಹವುಗಳನ್ನು ಸೇರಿ, ಸ್ಥಳೀಯ ಲೋನ್ ಆ್ಯಪ್ ಕಂಪನಿಗಳ ವಿರುದ್ಧ ಸಮರ ಸಾರಿರುವ ಸಿಸಿಬಿಯು ಈ ವರ್ಷದಲ್ಲಿ ನೂರಾರು ಪ್ರಕರಣ ದಾಖಲಿಸಿಕೊಂಡು 87 ಕೋಟಿ ರೂ. ವಶಕ್ಕೆ ಪಡೆದುಕೊಂಡಿದೆ.

ಲೋನ್ ಆ್ಯಪ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ನಗರದಲ್ಲಿ ಮಾನಕ್ಕೆ ಹೆದರಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಆ್ಯಪ್ ಕಂಪನಿಗಳು ನೀಡುತ್ತಿರುವ ಕಿರುಕುಳಕ್ಕೆ ಕೈಗನ್ನಡಿಯಾಗಿದೆ.

ಪ್ರಸ್ತಕ ವರ್ಷದಲ್ಲಿ ನಗರದ ಎಲ್ಲ ಸೆನ್ ಪೊಲೀಸ್ ಠಾಣೆಗಳಲ್ಲಿ ನೂರಾರು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸಿಸಿಬಿ 22 ಪ್ರಕರಣ ದಾಖಲಿಸಿಕೊಂಡು ಲೋನ್ ಆ್ಯಪ್ ಕಂಪನಿಗಳ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 87 ಕೋಟಿ ರೂ ಹಣವನ್ನು ವಶಕ್ಕೆ ಪಡೆದುಕೊಂಡಿದೆ.

15 ಕಂಪನಿಗಳ ವಿರುದ್ಧ ಎಫ್​ಐಆರ್ ದಾಖಲು: ಈಸಿ ಮನಿ ಲೋನ್ ಆ್ಯಪ್, ಸ್ಯಾಲರಿ ಪ್ಲೀಸ್, ಈಸಿ ಲೋನ್, ಕ್ಯಾಸ್ ಮೀ, ಗೇಟ್ ರೂಪಿ, ಮ್ಯಾಜಿಕ್ ಲೋನ್ ಸೇರಿದಂತೆ ಹಲವು ಕಂಪನಿಗಳ ವಿರುದ್ಧ ನಗರದ ಸೈಬರ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಇತ್ತೀಚೆಗೆ ನಗರ ಪೂರ್ವ ವಿಭಾಗದ ಸೆನ್ ಠಾಣೆಯಲ್ಲಿ ವ್ಯಕ್ತಿಯೋರ್ವ ನೀಡಿದ ದೂರಿನ ಮೇರೆಗೆ 15 ಕಂಪನಿಗಳ ವಿರುದ್ಧ ಎಫ್​ಐಆರ್ ದಾಖಲಿಸಿಕೊಳ್ಳಲಾಗಿತ್ತು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್ ಡಿ ಶರಣಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ:ಲೋನ್ ಆ್ಯಪ್ ವಂಚನೆಗೆ ಪಾಕ್, ಚೀನಾ ಸರ್ವರ್ ಬಳಕೆ: ಐವರ ಬಂಧನ

ಕೇಂದ್ರ ಸರ್ಕಾರವು ಈಗಾಗಲೇ ಪ್ಲೇ ಸ್ಟೋರ್​ನಲ್ಲಿ ಚೀನಾ ಮೂಲದ 350 ಲೋನ್ ಆ್ಯಪ್​ಗಳನ್ನ ತೆಗೆಸಿದೆ. ಈ ನಡುವೆಯೂ ವಿವಿಧ ತಂತ್ರಾಂಶ ನೆರವಿನಿಂದ ಆ್ಯಪ್​ಗಳ ಮುಖಾಂತರ ಅಮಾಯಕರಿಗೆ ಸಾಲ ಆಮಿಷವೊಡ್ಡಿ ಅವರಿಂದ ಆಧಾರ್ ಹಾಗೂ ಪಾನ್ ಕಾರ್ಡ್​ಗಳು, ಭಾವಚಿತ್ರ ಸೇರಿದಂತೆ ಇನ್ನಿತರ ಅಗತ್ಯ ದಾಖಲಾತಿ ಸಂಗ್ರಹಿಸಿ, ಲೋನ್ ಪಾವತಿಸದಿದ್ದರೆ ಇನ್ನೊಂದು ಲೋನ್ ಆ್ಯಪ್​ ಪರಿಚಯಿಸಿ ಅಲ್ಲಿಂದಲೂ ಸಾಲ ನೀಡುವ ಕಂಪನಿಗಳು ಕೆಲಸ ಮಾಡುತ್ತಿವೆ.

ಬೆದರಿಕೆ ತಂತ್ರ ಹೂಡಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ: ಕ್ರಮೇಣ ಸಾಲ ಪಡೆದ ವ್ಯಕ್ತಿಯ ಭಾವಚಿತ್ರವನ್ನ ಮಾರ್ಪಿಂಗ್​ ಮಾಡಿ ಅಶ್ಲೀಲ ಚಿತ್ರಗಳಾಗಿ ಮಾರ್ಪಡಿಸಿ ಕುಟುಂಬ ಹಾಗೂ ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಸಿ ಕಿರುಕುಳ ನೀಡುತ್ತಿರುವುದು ಹೆಚ್ಚಾಗಿದೆ. ಹೀಗಾಗಿ ಸಾರ್ವಜನಿಕರು ಅಧಿಕೃತವಾಗಿ ನಡೆಸುವ ಹಣಕಾಸು ಸಂಸ್ಥೆಗಳಿಂದಲೇ ಸಾಲ ತೆಗೆದುಕೊಳ್ಳುವುದರ ಬಗ್ಗೆ ಗಮನಹರಿಸಬೇಕು. ಅಲ್ಲದೆ, ಮಾರ್ಪಿಂಗ್ ಮಾಡಿದ ಚಿತ್ರವನ್ನ ಹಿಡಿದು ಬೆದರಿಕೆ ತಂತ್ರ ಹೂಡಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಶರಣಪ್ಪ ಮನವಿ ಮಾಡಿದರು.

ಇದನ್ನೂ ಓದಿ:Bengaluru crime: ಲೋನ್ ಆ್ಯಪ್ ಕಂಪನಿಗಳಿಂದ ಕಿರುಕುಳ.. ಟಾಪರ್ ಆಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

Last Updated : Jul 14, 2023, 6:25 AM IST

ABOUT THE AUTHOR

...view details