ಕರ್ನಾಟಕ

karnataka

By

Published : Mar 19, 2023, 7:38 AM IST

ETV Bharat / state

ಚುನಾವಣಾ ಆಯೋಗದ ಭರ್ಜರಿ ಬೇಟೆ: ₹9.29 ಕೋಟಿ ಮೌಲ್ಯದ ನಗದು, ವಸ್ತುಗಳ ಜಪ್ತಿ

ಚುನಾವಣೆಗೂ ಮೊದಲೇ ರಾಜ್ಯದಲ್ಲಿ ಕುರುಡು ಕಾಂಚಾಣ ಶುರುವಾಗಿದ್ದು, ಚುನಾವಣಾ ಆಯೋಗ ಭರ್ಜರಿ ಕಾರ್ಯಾಚರಣೆ ನಡೆಸುತ್ತಿದೆ.

ಚುನಾವಣಾ ಆಯೋಗ ಭರ್ಜರಿ ಬೇಟೆ
ಚುನಾವಣಾ ಆಯೋಗ ಭರ್ಜರಿ ಬೇಟೆ

ಬೆಂಗಳೂರು: ಚುನಾವಣೆಗೆ ಇನ್ನೇನು ದಿನಾಂಕ ನಿಗದಿಯಾಗಬೇಕಾಗಿದೆ. ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ರಾಜಕೀಯ ಪಕ್ಷಗಳು ಮತದಾರರಿಗೆ ಆಮಿಷ ಒಡ್ಡಲು ಪ್ರಾರಂಭಿಸಿವೆ. ಇತ್ತ ಚುನಾವಣಾ ಆಯೋಗ ಈಗಿನಿಂದಲೇ ಆಮಿಷಗಳಿಗೆ ಕಡಿವಾಣ ಹಾಕಲು ಕಣಕ್ಕಿಳಿದಿದೆ.

ರಾಜ್ಯದಲ್ಲಿ ಚುನಾವಣಾ ಕಾವು ದಿನೇ ದಿನೆ ಏರುತ್ತಿದೆ. ಚುನಾವಣಾ ಪಕ್ಷಗಳು ತಮ್ಮ ಮತದಾರರನ್ನು ಓಲೈಸಲು ನಾನಾ ಕಸರತ್ತು ಆರಂಭಿಸಿವೆ‌. ಶೀಘ್ರದಲ್ಲೇ ಚುನಾವಣಾ ದಿನಾಂಕ ಕೂಡ ಘೋಷಣೆಯಾಗಲಿದ್ದು, ಅದರ ಜೊತೆಗೆ ನೀತಿ ಸಂಹಿತೆಯೂ ಜಾರಿಗೆ ಬರಲಿದೆ. ಇದಕ್ಕೂ ಮೊದಲೇ ರಾಜಕೀಯ ಪಕ್ಷಗಳು ಪೈಪೋಟಿ ಮೇಲೆ ಮತದಾರರಿಗೆ ಹಣ, ಹೆಂಡ, ಸೀರೆ ಸೇರಿ ನಾನಾ ಆಮಿಷಗಳನ್ನು ಒಡ್ಡಲು ಶುರು ಮಾಡಿವೆ.‌ ಅದರ ಗಾಂಭೀರ್ಯತೆ ಅರಿತ ಚುನಾವಣಾ ಆಯೋಗ ಆಮಿಷಗಳಿಗೆ ಕಡಿವಾಣ ಹಾಕಲು ಕಾರ್ಯಾಚರಣೆ ಆರಂಭಿಸಿದೆ. ಆಯೋಗ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿ ಬರೋಬ್ಬರಿ 9.29 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.

ಆಯೋಗ ಜಪ್ತಿ ಮಾಡಿರುವುದೆಷ್ಟು?:ಚುನಾವಣಾ ಆಯೋಗ ಈವರೆಗೂ ಸುಮಾರು 1.21 ಕೋಟಿ ರೂಪಾಯಿ ನಗದು ವಶಕ್ಕೆ ಪಡೆದುಕೊಂಡಿದೆ. ಮತದಾರರಿಗೆ ಹಂಚಲು ಸಾಗಾಟ ಮಾಡುತ್ತಿದ್ದ ಸುಮಾರು 2.66 ಕೋಟಿ ಮೌಲ್ಯದ, 59,265 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ.

ಇನ್ನು 1.88 ಕೋಟಿ ಮೌಲ್ಯದ 577 ಕೆ.ಜಿ. ವಿವಿಧ ಮಾದಕ ವಸ್ತುಗಳು, ಮತದಾರರಿಗೆ ಹಂಚಲು ಉದ್ದೇಶಿಸಿದ್ದ ಚಿನ್ನ, ಬೆಳ್ಳಿ ಸೇರಿದಂತೆ ಇತರ ಮೌಲ್ಯಯುತ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪೈಕಿ 1.87 ಕೋಟಿ ಮೌಲ್ಯದ 5.32 ಚಿನ್ನ ಹಾಗೂ 80 ಲಕ್ಷ ಮೊತ್ತದ 15 ಕೆ.ಜಿ. ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ.

ಇನ್ನು ಸುಮಾರು 20,114 ಸೀರೆ, ಕುಕ್ಕರ್, ಲ್ಯಾಪ್‌ಟಾಪ್ ಸೇರಿದಂತೆ ಇತರ ಆಮಿಷ ವಸ್ತುಗಳನ್ನು ವಶಕ್ಕೆ ‌ಪಡೆಯಲಾಗಿದ್ದು, ಬರೋಬ್ಬರಿ 1.58 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆ ಮೂಲಕ ಈವರೆಗೆ ಒಟ್ಟು ರಾಜ್ಯಾದ್ಯಂತ ಸುಮಾರು 9.29 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ವಿಧಾನಸಭೆ ಚುನಾವಣಾ ಸಿದ್ಧತೆ:ರಾಜ್ಯ ವಿಧಾನಸಭಾ ಅವಧಿಯು ಮೇ 24ಕ್ಕೆ ಅಂತ್ಯವಾಗಲಿದೆ. ರಾಜ್ಯದಲ್ಲಿ ಒಟ್ಟು ಜನಸಂಖ್ಯೆ 6.1 ಕೋಟಿ ಇದೆ. ಇದರಲ್ಲಿ ಮಹಿಳೆಯರು 3.01 ಕೋಟಿ ಹಾಗೂ ಪುರುಷರು 3.01 ಕೋಟಿ ಇದ್ದಾರೆ. ಈ ಪೈಕಿ ಒಟ್ಟಾರೆ 5.21 ಕೋಟಿ ಮತದಾರರು ಇದ್ದು, 2.62 ಕೋಟಿ ಪುರುಷ ಮತದಾರರು, 2.59 ಕೋಟಿ ಮಹಿಳೆಯರು ಮತ ಹಕ್ಕು ಹೊಂದಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಈಚೆಗಷ್ಟೇ ಮಾಹಿತಿ ನೀಡಿದ್ದರು.

ರಾಜ್ಯ ವಿಧಾನಸಭಾ ಚುನಾವಣಾ ಸಿದ್ಧತೆಯ ಕುರಿತು ತಿಳಿಸಿದ್ದ ರಾಜೀವ್ ಕುಮಾರ್, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 36 ಪರಿಶಿಷ್ಟ ಜಾತಿ ಮತ್ತು 15 ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಿದ್ದು, ಸಾಮಾನ್ಯ 173 ಕ್ಷೇತ್ರಗಳು ಇದೆ. ಈ ಬಾರಿ 9.17 ಲಕ್ಷ ಹೊಸ ಮತದಾರರು ಇದ್ದು, 1.25 ಲಕ್ಷ 17 ವರ್ಷಕ್ಕೂ ಮೇಲ್ಪಟ್ಟ ಯುವಕರು ಮುಂಚಿತವಾಗಿ ಮತದಾನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಮೊದಲ ಬಾರಿಗೆ 80 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಹಾಗೂ ವಿಶೇಷ ಚೇತನರಿಗೆ ಮೊದಲ ಬಾರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದರು.

ಇದನ್ನೂ ಓದಿ:ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ: ಆರ್​ ಅಶೋಕ್

ABOUT THE AUTHOR

...view details