ಕರ್ನಾಟಕ

karnataka

ETV Bharat / state

ನ್ಯಾಯಾಧೀಶರನ್ನೇ ಆರೋಪಿಯನ್ನಾಗಿಸಿ ಪ್ರಕರಣ ದಾಖಲು: ಆದೇಶ ಕಾಯ್ದಿರಿಸಿದ ಹೈಕೋರ್ಟ್ - High Court reserved judgment

ಬಳ್ಳಾರಿ ನಿವಾಸಿ ಸಿ.ಎಂ. ಮಂಜುನಾಥ್ ಎಂಬವರನ್ನು ಸಿವಿಲ್ ನ್ಯಾಯಾಧೀಶ ವಿಜಯ್ ಕುಮಾರ್ ಅವರು ಪ್ರಕರಣವೊಂದರ ಸಂಬಂಧ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ವಿಚಾರವಾಗಿ ಮಂಜುನಾಥ್, 2019ರ ಮೇ 25ರಂದು ಸಿವಿಲ್ ನ್ಯಾಯಾಧೀಶರ ವಿರುದ್ಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ದೂರು ನೀಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್​ ಆದೇಶ ಕಾಯ್ದಿರಿಸಿದೆ.

Case Registered against judge, High Court reserved judgment
ಹೈಕೋರ್ಟ್

By

Published : Sep 18, 2020, 4:35 PM IST

ಬೆಂಗಳೂರು: ಬಳ್ಳಾರಿಯ ಜೆಎಂಎಫ್​ಸಿ ನ್ಯಾಯಾಧೀಶ ಎಸ್.ಜೆ ವಿಜಯ್ ಕುಮಾರ್ ಅವರನ್ನು ಆರೋಪಿಯಾಗಿಸಿ ಪ್ರಕರಣ ದಾಖಲಿಸಿದ್ದ ವಿಚಾರವಾಗಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದು, ಆದೇಶ ಕಾಯ್ದಿರಿಸಿದೆ.

ನ್ಯಾಯಾಧೀಶರನ್ನು ಆರೋಪಿಯಾಗಿಸಿ ಪ್ರಕರಣ ದಾಖಲಿಸಿರುವುದು ಸರಿಯಾದ ಕ್ರಮವಲ್ಲ ಎಂಬ ನಿಟ್ಟಿನಲ್ಲಿ ಹೈಕೋರ್ಟ್ ದಾಖಲಿಸಿಕೊಂಡಿದ್ದ ಕ್ರಿಮಿನಲ್ ಮನವಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ದೂರುದಾರ ಸಿಎಂ ಮಂಜುನಾಥ್ ಪರ ವಾದಿಸಿದ ವಕೀಲರು, ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರೂ ಅದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ ಅಥವಾ ನ್ಯಾಯಾಂಗ ವ್ಯವಸ್ಥೆ ಪರವಾಗಿಯೂ ಅಲ್ಲ. ಬದಲಿಗೆ ಓರ್ವ ನ್ಯಾಯಾಧೀಶರ ಪರವಾಗಿ ಪ್ರಕರಣ ದಾಖಲಿಸಿಕೊಂಡಿರುವುದು ಸರಿ ಎನ್ನಿಸುವುದಿಲ್ಲ. ವಿಚಾರಣಾ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವ ಅರ್ಜಿದಾರರು ನ್ಯಾಯಾಧೀಶರ ವಿರುದ್ಧ ಯಾವುದೇ ದ್ವೇಷ ಹೊಂದಿಲ್ಲ. ಸದುದ್ದೇಶದಿಂದ ಹಾಗೂ ಹೋರಾಟ ಮನೋಭಾವದಿಂದ ದೂರು ದಾಖಲಿಸಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನ್ಯಾಯಾಧೀಶರ ವಿರುದ್ಧ ದೂರು ನೀಡಿದಾಗ ನಾವು ಕಾನೂನಾತ್ಮಕ ಪರಿಹಾರ ಪಡೆದುಕೊಳ್ಳಬಹುದು ಎಂದಿದ್ದೆವು. ಹಾಗೆಂದು ನ್ಯಾಯಾಧೀಶರ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಅರ್ಥೈಸಿಕೊಂಡಿರುವುದು ಸರಿಯೇ ಎಂದು ಪ್ರಶ್ನಿಸಿತು. ಬಳಿಕ, ಅರ್ಜಿದಾರರ ವಾದ ದಾಖಲಿಸಿಕೊಂಡ ಪೀಠ, ಆದೇಶ ಕಾಯ್ದಿರಿಸಿರುವುದಾಗಿ ತಿಳಿಸಿತು.

ಪ್ರಕರಣದ ಹಿನ್ನೆಲೆ:

ಬಳ್ಳಾರಿ ನಿವಾಸಿ ಸಿ.ಎಂ. ಮಂಜುನಾಥ್ ಎಂಬವರನ್ನು ಸಿವಿಲ್ ನ್ಯಾಯಾಧೀಶ ವಿಜಯ್ ಕುಮಾರ್ ಅವರು ಪ್ರಕರಣವೊಂದರ ಸಂಬಂಧ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ವಿಚಾರವಾಗಿ ಮಂಜುನಾಥ್, 2019ರ ಮೇ 25ರಂದು ಸಿವಿಲ್ ನ್ಯಾಯಾಧೀಶರ ವಿರುದ್ಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ದೂರು ನೀಡಿದ್ದರು. ಇದಕ್ಕೆ 2019ರ ಜೂ.13ರಂದು ಉತ್ತರಿಸಿದ್ದ ಮುಖ್ಯ ನ್ಯಾಯಮೂರ್ತಿಗಳ‌ ಕಾರ್ಯದರ್ಶಿ, ನ್ಯಾಯಾಂಗ ಪರಿಧಿಯಲ್ಲಿಯೇ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದ್ದರು.

ಇದನ್ನೇ ತಪ್ಪಾಗಿ ಅರ್ಥೈಸಿಕೊಂಡಿದ್ದ ಮಂಜುನಾಥ್, ನ್ಯಾಯಾಧೀಶರ ವಿರುದ್ಧವೇ ಐಪಿಸಿ ಸೆಕ್ಷನ್ 166, 120(ಎ) 211, 219, 499 ಅಡಿ ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ದೂರಿನ ಮೇರೆಗೆ ಹಗರಿಬೊಮ್ಮನಹಳ್ಳಿ ನ್ಯಾಯಾಲಯ ವಿಚಾರಣೆಗೆ ಸಿದ್ಧವಾಗಿತ್ತು. ಈ ವಿಚಾರ ಸಿಜೆ ಗಮನಕ್ಕೆ ಬಂದ ಬಳಿಕ ಮಂಜುನಾಥ್ ಪ್ರಕರಣಕ್ಕೆ ಪ್ರತಿಯಾಗಿ ಸಿಆರ್​​​ಪಿಸಿ 482 ಅಡಿ ಸ್ವಯಂಪ್ರೇರಿತ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿತ್ತು.

ABOUT THE AUTHOR

...view details